ಧೋನಿ ಏಕದಿನ ಕ್ರಿಕೆಟ್ ಗೆ ಶೀಘ್ರ ಗುಡ್ ಬೈ: ರವಿ ಶಾಸ್ತ್ರಿ
ನವದೆಹಲಿ: ಟೀಮ್ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರು ಮುಂಬರುವ ಐಪಿಎಲ್ ನಲ್ಲಿ ಭರ್ಜರಿ ಪ್ರದರ್ಶನ ನೀಡಿ, ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ-20 ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯಬಲ್ಲ ಕ್ಷಮತೆ ಹೊಂದಿದ್ದಾರೆ ಎಂದು ತಂಡದ ಮುಖ್ಯ ಕೋಚ್ ರವಿ ಶಾಸ್ತ್ರಿ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
“ಧೋನಿ ಏಕದಿನ ಕ್ರಿಕೆಟ್ ಗೆ ಶೀಘ್ರದಲ್ಲಿ ಗುಡ್ ಬೈ ಹೇಳಬಹುದು. ಬಳಿಕ, ಟಿ-20 ಕ್ರಿಕೆಟ್ ಆಡಬಲ್ಲರು. ಧೋನಿ ಅವರು ಟೆಸ್ಟ್ ಕ್ರಿಕೆಟ್ ಗೆ ಮೊದಲೇ ವಿದಾಯ ಹೇಳಿದ್ದರು. ಧೋನಿ ಅವರ ಟಿ-20 ಕ್ರಿಕೆಟ್ ಬದುಕು ಇನ್ನು ಹಸಿರಾಗಿದೆ” ಎಂದು ಶಾಸ್ತ್ರಿ ತಿಳಿಸಿದ್ದಾರೆ. ಕೋಚ್ ಅವರ ಈ ಮಾತಿನ ಅರ್ಥ ಆಸೀಸ್ ನಲ್ಲಿ ನಡೆಯಲಿರುವ ಟಿ-20 ವಿಶ್ವಕಪ್ ನಲ್ಲಿ ಆಡುವ ಸಾಧ್ಯತೆ ಇದೆ ಎಂದು ಕಾಣುತ್ತಿದೆ.
ಧೋನಿ ಅವರು ತಂಡದ ಮೇಲೆ ಒತ್ತಡ ಹೇರಲಾರರು. ಒಂದು ವೇಳೆ ಮಾಹಿ ಅವರು ಆಟ ಆಡಲಾರೆ ಎಂದು ನಿರ್ಧರಿಸಿದ್ದರೆ, ಟೆಸ್ಟ್ ಕ್ರಿಕೆಟ್ ನಂತೆ ಹಿಂದೆ ಸರಿಯುತ್ತಾರೆ ಎಂಬ ನಂಬಿಕೆ ನಮ್ಮದು. ಐಪಿಎಲ್ ನಲ್ಲಿ ಅವರು ಉತ್ತಮ ಪ್ರದರ್ಶನ ನೀಡಿದ್ದೇ ಆದಲ್ಲಿ, ಚುಟುಕು ಕ್ರಿಕೆಟ್ ನಲ್ಲಿ ಭಾರತವನ್ನು ಪ್ರತಿನಿಧಿಸಬಲ್ಲರು” ಎಂದಿದ್ದಾರೆ.
ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ-20 ವಿಶ್ವಕಪ್ ನಲ್ಲಿ ಮಾಹಿ ತಂಡ ಸೇರುತ್ತಾರೆ ಎಂಬ ಸುಳಿವನ್ನು ರವಿ ಶಾಸ್ತ್ರಿ ನೀಡಿದ್ದಾರೆ. ಇನ್ನು ಧೋನಿ ಇಂಗ್ಲೆಂಡ್ ನಲ್ಲಿ ನಡೆದಿದ್ದ ವಿಶ್ವಕಪ್ ನಲ್ಲಿ ಸೆಮಿಫೈನಲ್ ಬಳಿಕ ಅಂತಾರಾಷ್ಟ್ರೀಯ ಪಂದ್ಯವನ್ನು ಆಡಿಲ್ಲ.
ಈ ಮೊದಲು ಟೀಮ್ ಇಂಡಿಯಾದ ಮಾಜಿ ಕೋಚ್ ಅನಿಲ್ ಕುಂಬ್ಳೆ ಸಹ ಐಪಿಎಲ್ ನಲ್ಲಿ ಧೋನಿ ಹೇಗೆ ಆಡುತ್ತಾರೆ ಎಂಬುದರ ಮೇಲೆ ಅವರ ಭವಿಷ್ಯ ನಿಂತಿದೆ ಎಂದಿದ್ದರು.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ