ಆಕ್ಲೆಂಡ್: ಇಲ್ಲಿನ ಈಡನ್ ಪಾರ್ಕ್ ಅಂಗಳದಲ್ಲಿ ನ್ಯೂಜಿಲೆಂಡ್ ಎರಡು ವಿರುದ್ಧ ಏಳು ವಿಕೆಟ್ ಗಳ ಗೆಲುವು ಸಾಧಿಸಿದ ಬಳಿಕ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ತಂಡದ ಬೌಲಿಂಗ್ ವಿಭಾಗವನ್ನು ಶ್ಲಾಘಿಸಿದರು. ಐದು ಪಂದ್ಯಗಳ ಟಿ-20 ಸರಣಿಯಲ್ಲಿ ಕೊಹ್ಲಿ ಪಡೆ 2-0 ಮುನ್ನಡೆ ಪಡೆಯಿತು.
ಎರಡನೇ ಟಿ-20 ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ್ದ ನ್ಯೂಜಿಲೆಂಡ್ ತಂಡವನ್ನು ಭಾರತದ ಬೌಲರ್ ಗಳು 133 ರನ್ ಗಳಿಗೆ ನಿಯಂತ್ರಿಸಿತ್ತು. ಬಳಿಕ ಭಾರತ ಸುಲಭವಾಗಿ ಗುರಿ ಮುಟ್ಟಿತ್ತು.
ಪಂದ್ಯದ ಬಳಿಕ ಮಾತನಾಡಿದ ಕೊಹ್ಲಿ ಬೌಲರ್ ಗಳು ತಮ್ಮ ಜವಾಬ್ದಾರಿಯನ್ನು ಚಾಚು ತಪ್ಪದೆ ಪಾಲಿಸಿದ್ದರಿಂದ ಪಂದ್ಯದ ಮೇಲೆ ಹಿಡಿತ ಸಾಧಿಸಲು ಸಾಧ್ಯವಾಯಿತು. ಇಂದು ಲೈನ್ ಮತ್ತು ಲೆಂಗ್ತ್ ಉತ್ತಮವಾಗಿತ್ತು. ಒಂದು ಸೈಡ್ ವಿಕೆಟ್ ನಲ್ಲಿ ಹೇಗೆ ಬೌಲಿಂಗ್ ನಿರ್ವಹಿಸಬೇಕೆಂಬುದು ತಿಳಿದಿದೆ. ಇದು ಭವಿಷ್ಯಕ್ಕೆ ತಂಡಕ್ಕೆ ನೆರವಾಗಲಿದೆ ಎಂದು ಹೇಳಿದರು.
ನನಗೆ ಅನಿಸಿದಂತೆ ಈ ಪಿಚ್ ನಲ್ಲಿ ಮೊದಲ ಇನಿಂಗ್ಸ್ ನಲ್ಲಿ 160 ರನ್ ಗಳಿಸಬಹುದಿತ್ತು. ಆದರೆ, ಇದಕ್ಕೆ ನಮ್ಮ ಬೌಲರ್ ಗಳು ಅವಕಾಶ ಮಾಡಿಕೊಡಲಿಲ್ಲ ಎಂದರು.
ಗುರಿ ಹಿಂಬಾಲಿಸಿದ ಭಾರತ ಆರಂಭದಲ್ಲಿ ಎರಡು ವಿಕೆಟ್ ಕಳೆದುಕೊಂಡಿತ್ತು. ಆದರೆ, ಮೂರನೇ ವಿಕೆಟ್ ಗೆ ರಾಹುಲ್ ಹಾಗೂ ಶ್ರೇಯಸ್ ಅಯ್ಯರ್ ಜೋಡಿಯು 86 ರನ್ ಗಳಿಸುವ ಮೂಲಕ ಕಿವೀಸ್ ಗೆಲುವಿನ ಕನಸನ್ನು ನುಚ್ಚು ನೂರು ಮಾಡಿತು. ಅಲ್ಲದೆ, ಭಾರತದ ಆರಂಭಿಕ ಸಂಕಷ್ಟದಿಂದ ಪಾರು ಮಾಡಿತ್ತು. ಆದರೂ, ಬೌಲಿಂಗ್ ಹಾಗೂ ಫೀಲ್ಡಿಂಗ್ ಬಗ್ಗೆ ಕೊಹ್ಲಿ ವಿಶೇಷ ಶ್ಲಾಘನೆ ವ್ಯಕ್ತಪಡಿಸಿದರು.
ನ್ಯೂಜಿಲೆಂಡ್ ಬ್ಯಾಟ್ಸ್ ಮನ್ ಗಳು ಹೇಗೆ ಬ್ಯಾಟಿಂಗ್ ಮಾಡುತ್ತಿದ್ದಾರೆ. ಪಿಚ್ ಹೇಗೆ ವರ್ತಿಸುತ್ತಿದೆ, ಇದಕ್ಕೆ ತಕ್ಕಂತೆ ನಾವು ಬೌಲಿಂಗ್ ಹಾಗೂ ಫೀಲ್ಡಿಂಗ್ ಹೇಗೆ ಮಾಡಬೇಕು ಎಂಬುದನ್ನು ಅರ್ಥ ಮಾಡಿಕೊಂಡೆವು. ನಾಯನಾಗಿ ಕೆಲ ಬದಲಾವಣೆಗಳನ್ನು ಮಾಡಿಕೊಂಡೆ. ರವೀಂದ್ರ ಜಡೇಜಾ ಮತ್ತೊಮ್ಮೆ ಆಸರೆಯಾದರು. ಚಾಹಲ್, ಬುಮ್ರಾ ಕೂಡ ಉತ್ತಮ ಬೌಲಿಂಗ್ ಮಾಡಿದರು. ಫೀಲ್ಡಿಂಗ್ ಕೂಡ ನಮಗೆ ನೆರವಾಯಿತು. ಒಟ್ಟಾರೆ. ತಂಡದ ಸಂಘಟಿತ ಪ್ರದರ್ಶನ ಪಂದ್ಯದ ಗೆಲುವಿಗೆ ಕಾರಣವಾಯಿತು ಎಂದು ವಿರಾಟ್ ಕೊಹ್ಲಿ ತಿಳಿಸಿದರು.
Advertisement