ನಾಳೆ 4ನೇ ಟಿ20 ಪಂದ್ಯ: ಕಿವೀಸ್ ನೆಲದಲ್ಲಿ ವೈಟ್ ವಾಶ್ ಸಾಧಿಸುತ್ತಾ ಟೀಂ ಇಂಡಿಯಾ

ಸೂಪರ್ ಓವರ್‌ನಲ್ಲಿ ರೋಚಕ ಜಯ ಸಾಧಿಸಿ ದ್ವೀಪ ರಾಷ್ಟ್ರದಲ್ಲಿ ಐತಿಹಾಸಿಕ ಟಿ-20 ಸರಣಿ ಗೆದ್ದು ಬೀಗುತ್ತಿರುವ ವಿರಾಟ್ ಕೊಹ್ಲಿ ನಾಯಕತ್ವದ ಭಾರತ ತಂಡ, ನಾಳೆ ನ್ಯೂಜಿಲೆಂಡ್ ವಿರುದ್ಧ ನಾಲ್ಕನೇ ಪಂದ್ಯದಲ್ಲಿ ಸೆಣಸಲು ಸಜ್ಜಾಗಿದೆ.
ಟೀಂ ಇಂಡಿಯಾ
ಟೀಂ ಇಂಡಿಯಾ

ವೆಲ್ಲಿಂಗ್ಟನ್: ಸೂಪರ್ ಓವರ್‌ನಲ್ಲಿ ರೋಚಕ ಜಯ ಸಾಧಿಸಿ ದ್ವೀಪ ರಾಷ್ಟ್ರದಲ್ಲಿ ಐತಿಹಾಸಿಕ ಟಿ-20 ಸರಣಿ ಗೆದ್ದು ಬೀಗುತ್ತಿರುವ ವಿರಾಟ್ ಕೊಹ್ಲಿ ನಾಯಕತ್ವದ ಭಾರತ ತಂಡ, ನಾಳೆ ನ್ಯೂಜಿಲೆಂಡ್ ವಿರುದ್ಧ ನಾಲ್ಕನೇ ಪಂದ್ಯದಲ್ಲಿ ಸೆಣಸಲು ಸಜ್ಜಾಗಿದೆ. ಸರಣಿಯನ್ನು 4-0 ಮುನ್ನಡೆಗೆ ವಿಸ್ತರಿಸಲು ಪ್ರವಾಸಿಗರು ಹಾತೊರೆಯುತ್ತಿದ್ದರೆ, ಆತಿಥೇಯರು ಪಂದ್ಯ ಗೆದ್ದು ಸರಣಿ ಸೋಲಿನ ಅಂತರವನ್ನು ಕಡಿಮೆ ಮಾಡಿಕೊಳ್ಳುವ ಯೋಜನೆ ಹಾಕಿಕೊಂಡಿದೆ.

ಸೆಡಾನ್ ಪಾರ್ಕ್ ಅಂಗಳದಲ್ಲಿ  ಬುಧವಾರದ ಮೂರನೇ ಪಂದ್ಯದಲ್ಲಿ  ಸೂಪರ್ ಓವರ್‌ನಲ್ಲಿ ನ್ಯೂಜಿಲೆಂಡ್ ನೀಡಿದ್ದ 18 ರನ್ ಗುರಿ ಹಿಂಬಾಲಿಸಿದ ಭಾರತಕ್ಕೆ ಹಿಟ್‌ಮ್ಯಾಾನ್ ಖ್ಯಾತಿಯ ರೋಹಿತ್ ಶರ್ಮಾ ಅವರು ಎರಡು ಸಿಕ್ಸರ್ ಸಹಿತ 15 ರನ್ ಗಳಿಸಿ ತಂಡಕ್ಕೆ ರೋಚಕ ಗೆಲುವು ತಂದುಕೊಡುವಲ್ಲಿ ಮಹತ್ತರ ಪಾತ್ರವಹಿಸಿದ್ದರು. ಆ ಮೂಲಕ ಭಾರತ 3-0 ಅಂತರದಲ್ಲಿ ಇನ್ನೂ ಎರಡು ಪಂದ್ಯಗಳು ಬಾಕಿ ಇರುವಾಗಲೇ ಸರಣಿಯನ್ನು ವಶಪಡಿಸಿಕೊಂಡಿತು.

ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್ ಅವರು 95 ರನ್ ಗಳಿಸಿದ್ದಲ್ಲದೆ ಸೂಪರ್ ಓವರ್‌ನಲ್ಲಿ 11 ರನ್ ಸಿಡಿಸಿದ್ದರು. ಈ ರನ್ ರೋಹಿತ್ ಹಾಗೂ ರಾಹುಲ್(5 ರನ್)ಗೆ ಸಾಕಾಗಲಿಲ್ಲ. ಕೊನೆಯ ಓವರ್‌ನಲ್ಲಿ ನ್ಯೂಜಿಲೆಂಡ್‌ಗೆ 10 ರನ್ ಅಗತ್ಯವಿದ್ದಾಗ ಬೌಲಿಂಗ್ ಮಾಡಿದ್ದ ಮೊದಹಮ್ಮದ್ ಶಮಿ ಮೊದಲನೇ ಎಸೆತ ಸಿಕ್ಸರ್ ಹೊಡೆಸಿಕೊಂಡರು. ನಂತರ, ಕೇನ್ ವಿಲಿಯಮ್ಸನ್ ಹಾಗೂ ರಾಸ್ ಟೇಲರ್ ವಿಕೆಟ್ ಪಡೆಯುವ ಮೂಲಕ ಪಂದ್ಯವನ್ನು ಸೂಪರ್ ಓವರ್‌ನತ್ತ ತಿರುಗಿಸಿದರು.

ರೋಹಿತ್ ಶರ್ಮಾ ಅವರು ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಭಾರತ ನಿಗದಿತ 20 ಓವರ್ ಗಳಲ್ಲಿ 5 ವಿಕೆಟ್ ಕಳೆದುಕೊಂಡು 179 ರನ್ ದಾಖಲಿಸಿತು. ಆದರೆ, ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್ ಒಬ್ಬರೇ ಏಕಾಂಗಿ ಹೋರಾಟ ನಡೆಸಿ ಇನ್ನೇನು ತಂಡವನ್ನು ಗೆಲುವಿನ ಸಮೀಪ ತಂದಿದ್ದರು. ಆದರೆ, ಕೊನೆಯ ಓವರ್‌ನಲ್ಲಿ  ಕೂದಲೆಳೆಯ ಅಂತರದಲ್ಲಿ ಟೈಗೆ ಸಿಲುಕಿದರು. ಪಂದ್ಯದಲ್ಲಿ ಎಲ್ಲರ ಗಮನ ಜಸ್ಪ್ರಿತ್ ಬುಮ್ರಾ ಅವರ ಮೇಲಿತ್ತು. ಆದರೆ, ಮೊಹಮ್ಮದ್ ಶಮಿ ಪಂದ್ಯದ ಗೆಲುವಿನಲ್ಲಿ ಮಹತ್ತರ ಪಾತ್ರ ವಹಿಸುವ ಮೂಲಕ ಪಂದ್ಯದ ಬಳಿಕ ರೋಹಿತ್ ಶರ್ಮಾ ಅವರ ಶ್ಲಾಘನೆಗೆ ಭಾಜನರಾದರು.

ಇದೇ ವರ್ಷ ಆಸ್ಟ್ರೇಲಿಯಾದಲ್ಲಿ ನಡೆಯುವ ಐಸಿಸಿ ಟಿ-20 ವಿಶ್ವಕಪ್ ನಿಮಿತ್ತಾಾ ತಂಡ ಉತ್ತಮ ಹಾದಿಯಲ್ಲಿ ಸಾಗುತ್ತಿದೆ. ಅಲ್ಲದೇ, ನಾಯಕ ವಿರಾಟ್ ಕೊಹ್ಲಿ ಹಾಗೂ ಕೋಚ್ ರವಿಶಾಸ್ತ್ರಿ ಅವರು ಭಾರತ ಕ್ಷೇತ್ರ ರಕ್ಷಣೆ ಕಡೆ ಇನ್ನಷ್ಟು ಗಮನ ಹರಿಸಬೇಕು. ಹ್ಯಾಮಿಲ್ಟನ್‌ನಲ್ಲಿ ನ್ಯೂಜಿಲೆಂಡ್ ಗಿಂತ ಭಾರತ ಫೀಲ್ಡಿಂಗ್  ಕೆಳಮಟ್ಟದಾಗಿತ್ತು ಎಂದು ಉಪನಾಯಕ ರೋಹಿತ್ ಶರ್ಮಾ ಪಂದ್ಯದ ಬಳಿಕ ಅಭಿಪ್ರಾಯಪಟ್ಟಿದ್ದರು. ರವೀಂದ್ರ ಜಡೇಜಾ ಹಾಗೂ ಯಜ್ವೇಂದ್ರ ಚಾಹಲ್ ಅವರು ಕಳೆದ ಪಂದ್ಯದ ಪ್ರದರ್ಶನವನ್ನೇ ಮುಂದುವರಿಸಲಿದ್ದಾರೆ. ಆದರೆ, ದುಬಾರಿಯಾಗಿದ್ದ ಜಸ್ಪ್ರಿತ್ ಬುಮ್ರಾ ಅವರು ನಾಳಿನ ಪಂದ್ಯದಲ್ಲಿ ಸುಧಾರಣೆಯಾಗುವತ್ತ ಗಮನ ಹರಿಸುವ ಅಗತ್ಯವಿದೆ.

ಸತತ ವೈಫಲ್ಯ ಅನುಭವಿಸುತ್ತಿರುವ ಶಿವಂ ದುಬೆ ಅವರು ನಾಳಿನ ಪಂದ್ಯದಲ್ಲಿ ಆಡುವ ಬಗ್ಗೆ ಅನುಮಾನವಿದೆ. ಈ ಬಗ್ಗೆ ನಾಯಕ ಹಾಗೂ ಕೋಚ್ ತೀರ್ಮಾನ ತೆಗೆದುಕೊಳ್ಳಲಿದ್ದಾರೆ. ಕಳೆದ ಮೂರು ಪಂದ್ಯಗಳಲ್ಲಿ ಅವಕಾಶ ಸಿಗದವರು ಇನ್ನುಳಿದ ಎರಡು ಪಂದ್ಯಗಳಲ್ಲಿ ಅವಕಾಶ ಪಡೆಯಬಹುದು ಎಂದು ಕೊಹ್ಲಿ ಹೇಳಿದ್ದರು. ಮತ್ತೊಂದೆಡೆ  ಒಂದು ಹಂತದಲ್ಲಿ ಗೆಲುವಿನ ಹಾದಿಯಲ್ಲಿ ನ್ಯೂಜಿಲೆಂಡ್ ಅಂತಿಮವಾಗಿ ಸೋಲು ಅನುಭವಿಸಿದ ರೀತಿ ಆತಿಥೇಯರಿಗೆ ಭಾರಿ ಆಘಾತ ಉಂಟುಮಾಡಿದೆ. ಕಾಲಿನ್ ಗ್ರ್ಯಾಂಡ್ಹೋಮ್  ಸೇರಿದಂತೆ ಇನ್ನುಳಿದ ಬ್ಯಟರ್ ಗಳು ಲಯಕ್ಕೆ ಮರಳುವುದು ಅಗತ್ಯವಿದೆ. ಆ ಮೂಲಕ ಕೊನೆಯ ಎರಡು ಪಂದ್ಯಗಳಲ್ಲಿ ಗೆದ್ದು ತವರು ಅಭಿಮಾನಿಗಳ ಎದುರು ಗೌರವ ಉಳಿಸಿಕೊಳ್ಳುವ ಹಾದಿಯಲ್ಲಿದೆ. 

ಬ್ಲೈರ್ ಟಿಕ್ನರ್ ಸ್ಥಾನದಲ್ಲಿ ಕಣಕ್ಕೆ ಇಳಿದಿದ್ದ ಸ್ಕಾಟ್ ಕಗ್ಲೇಜಿನ್ ಬೌಲಿಂಗ್‌ನಲ್ಲಿ ಎಲ್ಲರ ಗಮನ ಸೆಳೆದಿದ್ದರು. ಮುಂಬರುವ ಟಿ-20 ವಿಶ್ವಕಪ್ ನಿಮಿತ್ತ ತಂಡ ಇನ್ನಷ್ಟು ಸುಧಾರಣೆ ಕಂಡುಕೊಳ್ಳಬೇಕು ಎಂದು ವಿಲಿಯಮ್ಸನ್ ಹೇಳಿದ್ದರು.

ಸಂಭಾವ್ಯ ಆಟಗಾರರು 
ಭಾರತ: ರೋಹಿತ್ ಶರ್ಮಾ, ಕೆ.ಎಲ್ ರಾಹುಲ್, ವಿರಾಟ್ ಕೊಹ್ಲಿ (ನಾಯಕ), ಶ್ರೇಯಸ್ ಅಯ್ಯರ್, ಮನೀಷ್ ಪಾಂಡೆ, ಶಿವಂದುಬೆ/ಸಂಜು ಸ್ಯಾಮ್ಸನ್, ರವೀಂದ್ರ ಜಡೇಜಾ, ಯಜ್ವೇಂದ್ರ ಚಾಹಲ್, ಮೊಹಮ್ಮದ್ ಶಮಿ, ಶಾರ್ದೂಲ್ ಠಾಕೂರ್, ಜಸ್ಪ್ರಿತ್ ಬುಮ್ರಾ.

ನ್ಯೂಜಿಲೆಂಡ್: ಮಾರ್ಟಿನ್ ಗುಪ್ಟಿಲ್, ಕಾಲಿನ್ ಮನ್ರೊ, ಕೇನ್ ವಿಲಿಯಮ್ಸನ್(ನಾಯಕ), ರಾಸ್ ಟೇಲರ್, ಕಾಲಿನ್ ಡಿ ಗ್ರ್ಯಾಂಡ್ಹೋಮ್ , ಟಿಮ್ ಸೀಫರ್ಟ್, ಡೆರ್ಲಿ ಮಿಚೆಲ್, ಮಿಚೆಲ್ ಸ್ಯಾಂಟ್ನರ್ , ಇಶ್ ಸೋಧಿ, ಹಮೀಶ್ ಬೆನೆಟ್, ಟಿಮ್ ಸೌಥ್.

ಸಮಯ: ನಾಳೆ ಮಧ್ಯಾಹ್ನ 12:30
ಸ್ಥಳ: ಸ್ಕೈ ಕ್ರೀಡಾಂಗಣ, ವೆಲ್ಲಿಂಗ್ಟನ್

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com