ಮುಂಬೈ: ಭಾರತ 1983ರಲ್ಲಿ ತನ್ನ ಚೊಚ್ಚಲ ಐಸಿಸಿ ಕ್ರಿಕೆಟ್ ವಿಶ್ವಕಪ್ ಟೂರ್ನಿ ಗೆದ್ದು ಜೂನ್ 25ಕ್ಕೆ ಬರೋಬ್ಬರಿ 37 ವರ್ಷಗಳು ತುಂಬಿದೆ. ಈ ವಿಶೇಷ ಸಂದರ್ಭದಲ್ಲಿ ಮಾತಿಗಿಳಿದಿರುವ ಭಾರತ ತಂಡದ ಮಾಜಿ ನಾಯಕ ಸುನಿಲ್ ಗವಾಸ್ಕರ್, ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿನ ಸರ್ವಶ್ರೇಷ್ಠ ಮ್ಯಾಚ್ ವಿನ್ನರ್ ಯಾರೆಂದು ಹೆಸರಿಸಿದ್ದಾರೆ.
ನನ್ನ ಪ್ರಕಾರ ಕಪಿಲ್ ದೇವ್ ಭಾರತೀಯ ಕ್ರಿಕೆಟ್ ಇತಿಹಾಸದ ಗ್ರೇಟೆಸ್ಟ್ ಮ್ಯಾಚ್ ವಿನ್ನರ್. ಅದು ಏಕೆಂದರೆ ಅವರು ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರ ಮೂಲಕವೂ ತಂಡಕ್ಕೆ ಪಂದ್ಯಗಳನ್ನು ಗೆದ್ದುಕೊಡುತ್ತಿದ್ದರು ಎಂದು ಸುನಿಲ್ ಗವಾಸ್ಕರ್ ಖಾಸಗಿ ವೆಬ್ಸೈಟ್ ಒಂದಕ್ಕೆ ನೀಡಿರುವ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.
1978ರಲ್ಲಿ ಚೆನ್ನೈನ ಎಂ.ಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ವಿಲ್ಸ್ ಟ್ರೋಫಿ ಪಂದ್ಯದಲ್ಲಿ ನಾನು ಮೊದಲ ಬಾರಿ ಕಪಿಲ್ ಜೊತೆಗೆ ಆಡಿದ್ದೆ. ಆಸ್ಟ್ರೇಲಿಯಾ ಪ್ರವಾಸದಿಂದ ಆಗಷ್ಟೇ ಹಿಂದಿರುಗಿದ್ದೆವು. ಅಂದು ಕಪಿಲ್ ಮತ್ತು ಪ್ರತಿಭಾನ್ವಿತ ಆಲ್ರೌಂಡರ್ ರಾಜೇಂದ್ರ ಜಡೇಜಾ ಮುಂಬೈ ವಿರುದ್ಧ ಬೌಲಿಂಗ್ ಮಾಡುತ್ತಿದ್ದರು," ಎಂದು ಗವಾಸ್ಕರ್ ತಮ್ಮ ನೆನಪಿನಾಳ ಕೆದಕಿದ್ದಾರೆ.
ಅಂದು ಕಪಿಲ್ ಅದ್ಭುತವಾಗಿ ಬೌಲಿಂಗ್ ಮಾಡುತ್ತಿದ್ದರಾದರೂ ಸ್ಟಂಪ್ಸ್ಗೆ ಬಹಳ ದೂರದಿಂದ ಚೆಂಡನ್ನು ಎಸೆಯುತ್ತಿದ್ದರು. ಆಗ ಅವರ ಬಳಿ ತೆರಳಿ ಸ್ಟಂಪ್ಸ್ಗೆ ಹತ್ತಿರದಲ್ಲಿ ಬೌಲ್ ಮಾಡುವಂತೆ ಕೇಳಿದ್ದ. ಅವರ ತಂಡದ ಆಟಗಾರರು ನಾನು ಕಪಿಲ್ ಅವರನ್ನು ಸ್ಲೆಡ್ಜ್ ಮಾಡುತ್ತಿದ್ದೇನೆ ಅಂದುಕೊಂಡಿದ್ದರು. ಇದಕ್ಕೆ ಕಪಿಲ್ ನನ್ನ ಪರವಾಗಿ ಮಾತನಾಡಿ ಅಂಥದ್ದೇನೂ ಇಲ್ಲವೆಂದು ಸ್ಪಷ್ಟ ಪಡಿಸಿದ್ದರು. ಬಳಿಕ ನನ್ನ ಸಲಹೆಯಂತೇ ಬೌಲಿಂಗ್ ಮಾಡಿ ಮುಂಬೈ ಬ್ಯಾಟ್ಸ್ಮನ್ಗಳಿಗೆ ಕಂಟಕವಾದರು," ಎಂದು ಗವಾಸ್ಕರ್ ಹೇಳಿದ್ದಾರೆ.
Advertisement