ಸೆಂಚುರಿಯನ್: ಜಗತ್ತಿನಾದ್ಯಂತ ಭೀತಿ ಹುಟ್ಟಿಸಿರುವ ಓಮಿಕ್ರಾನ್ ಕೊರೋನಾ ರೂಪಾಂತರ ಭೀತಿ ನಡುವೆಯೇ ದಕ್ಷಿಣ ಆಫ್ರಿಕಾ ಪ್ರವಾಸ ಆರಂಭಿಸಿರುವ ಭಾರತ ಇಂದು ಮೊದಲ ಟೆಸ್ಟ್ ಪಂದ್ಯವನ್ನಾಡುತ್ತಿದ್ದು, ಟಾಸ್ ಗೆದ್ದ ನಾಯಕ ವಿರಾಟ್ ಕೊಹ್ಲಿ ಮೊದಲ ಬ್ಯಾಟಿಂಗ್ ಆಯ್ಕೆ ಮಾಡಿಕೊಂದ್ದಾರೆ.
ಆಫ್ರಿಕಾದ ಸೆಂಚುರಿಯನ್ ಕ್ರೀಡಾಂಗಣದಲ್ಲಿ ಆರಂಭವಾಗಿರುವ ಆತಿಥೇಯ ದಕ್ಷಿಣ ಆಫ್ರಿಕಾ ವಿರುದ್ಧದ ಫ್ರೀಡಂ ಟ್ರೋಫಿ ಟೆಸ್ಟ್ ಸರಣಿಯ 'ಬಾಕ್ಸಿಂಗ್ ಡೇ' ಪಂದ್ಯದಲ್ಲಿ ಟಾಸ್ ಗೆದ್ದಿರುವ ಭಾರತ ತಂಡ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. ಭಾರತಕ್ಕೆ ಬ್ಯಾಟಿಂಗ್ ಶಕ್ತಿ ತುಂಬಿದರೆ ಆಫ್ರಿಕಾ ಬತ್ತಳಿಕೆಯಲ್ಲಿ ಪ್ರಬಲ ಬೌಲರ್ ಗಳಿದ್ದಾರೆ.
ಭಾರತದ ಪರ ಕೆ.ಎಲ್. ರಾಹುಲ್ ಮತ್ತು ಮಯಾಂಕ್ ಅಗರ್ವಾಲ್ ಜೋಡಿ ಇನಿಂಗ್ಸ್ ಆರಂಭಿಸಿದ್ದು, ಅನುಭವಿಗಳಾದ ಚೇತೇಶ್ವರ್ ಪೂಜಾರ, ನಾಯಕ ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ ಮತ್ತು ವಿಕೆಟ್ ಕೀಪರ್ ರಿಷಭ್ ಪಂತ್ ಮಧ್ಯಮ ಕ್ರಮಾಂಕದ ಬ್ಯಾಟಿಂಗ್ಗೆ ಬಲ ತುಂಬಲಿದ್ದಾರೆ. ಇನ್ನು ಭಾರತ ತಂಡದಲ್ಲಿ ಐವರು ಬೌಲರ್ಗಳು ಆಡಲಿದ್ದು, ಜಸ್ಪ್ರೀತ್ ಬೂಮ್ರಾ, ಮೊಹಮ್ಮದ್ ಶಮಿ, ಆಲ್ರೌಂಡರ್ ಶಾರ್ದೂಲ್ ಠಾಕೂರ್, ಸ್ಪಿನ್ನರ್ ಆರ್.ಅಶ್ವಿನ್ ಅವರೊಂದಿಗೆ, ವೇಗಿ ಮೊಹಮ್ಮದ್ ಸಿರಾಜ್ ಬೌಲಿಂಗ್ ವಿಭಾಗದ ಸಾಮರ್ಥ್ಯ ಹೆಚ್ಚಿಸಿದ್ದಾರೆ.
ಇನ್ನು ಈ ಹಿಂದೆ ಸೆಂಚುರಿಯನ್ನಲ್ಲಿ ಆಡಿರುವ ಎರಡೂ ಪಂದ್ಯಗಳಲ್ಲಿ ಆತಿಥೇಯ ದಕ್ಷಿಣ ಆಫ್ರಿಕಾ ಪಡೆಯೇ ಗೆಲುವಿನ ನಗೆ ಬೀರಿದೆ. ಹೀಗಾಗಿ ಇಂದಿನ ಪಂದ್ಯದಲ್ಲಿ ಆ ತಂಡದ ಆತ್ಮ ವಿಶ್ವಾಸ ಹೆಚ್ಚಿದೆ.
ಕೊಹ್ಸಿಗೆ ಮಹತ್ವದ ಪಂದ್ಯ
ಇನ್ನು ಏಕದಿನ ಮತ್ತು ಟಿ20 ತಂಡಗಳ ನಾಯಕತ್ವದಿಂದ ಕೆಳಗಿಳಿದ ಬಳಿಕ ಟೆಸ್ಟ್ ತಂಡ ಮುನ್ನಡೆಸುತ್ತಿರುವ ವಿರಾಟ್ ಕೊಹ್ಲಿ ಪಾಲಿಗೆ ಇದು ಸವಾಲಿನ ಸರಣಿಯಾಗಿದ್ದು, ಹರಿಣಗಳ ನಾಡಿಗೆ 1992ರಲ್ಲಿ ಮೊದಲ ಬಾರಿಗೆ ಪ್ರವಾಸ ಕೈಗೊಂಡಾಗಿನಿಂದ ಇಲ್ಲಿಯವರೆಗೆ ಭಾರತ ಒಮ್ಮೆಯೂ ಟೆಸ್ಟ್ ಸರಣಿ ಗೆದ್ದಿಲ್ಲ. ಕಳೆದೆರಡು ವರ್ಷಗಳಿಂದ ಕೊಹ್ಲಿ ಬ್ಯಾಟ್ನಿಂದಲೂ ಒಂದೇ ಒಂದು ಶತಕ ಸಿಡಿದಿಲ್ಲ. ಹೀಗಾಗಿ, ತಂಡವನ್ನು ಗೆಲುವಿನ ಹಾದಿಯಲ್ಲಿ ಮುನ್ನಡೆಸುವ ಜೊತೆಗೆ ಬ್ಯಾಟಿಂಗ್ನಲ್ಲಿಯೂ ಲಯಕ್ಕೆ ಮರುಳುವ ಒತ್ತಡ ಅವರ ಮೇಲಿದೆ.
ತಂಡಗಳು ಇಂತಿವೆ
ಭಾರತ: ಕೆ.ಎಲ್. ರಾಹುಲ್, ಮಯಂಕ್ ಅಗರವಾಲ್, ಚೇತೇಶ್ವರ್ ಪೂಜಾರ, ವಿರಾಟ್ ಕೊಹ್ಲಿ (ನಾಯಕ), ಅಜಿಂಕ್ಯ ರಹಾನೆ, ರಿಷಭ್ ಪಂತ್, ಆರ್.ಅಶ್ವಿನ್, ಶಾರ್ದೂಲ್ ಠಾಕೂರ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಜಸ್ಪ್ರೀತ್ ಬೂಮ್ರಾ
ದಕ್ಷಿಣ ಆಫ್ರಿಕಾ: ಡೀನ್ ಎಲ್ಗರ್ (ನಾಯಕ), ಕೀಗನ್ ಪೀಟರ್ಸನ್, ರಸ್ಸಿ ವ್ಯಾನ್ ಡರ್ ಡಸ್ಸೇನ್, ತೆಂಬಾ ಬವುಮಾ, ಕ್ವಿಂಟನ್ ಡಿಕಾಕ್, ಎಡನ್ ಮಾರ್ಕರಮ್, ವಿಯಾನ್ ಮುಲ್ಡೆರ್, ಮಾರ್ಕೊ ಜಾನ್ಸನ್, ಕೇಶವ್ ಮಹರಾಜ್, ಕಗಿಸೊ ರಬಾಡ, ಲುಂಗಿ ಗಿಡಿ
Advertisement