ಶೋಯೆಬ್ ಅಖ್ತರ್
ಶೋಯೆಬ್ ಅಖ್ತರ್

ಶೋಯೆಬ್ ಅಖ್ತರ್ ವಿರುದ್ಧ ಪಿಟಿವಿ ಮಾನನಷ್ಟ ಮೊಕದ್ದಮೆ: 100 ಮಿಲಿಯನ್ ರೂ. ಪರಿಹಾರಕ್ಕೆ ಪಟ್ಟು!

ಪಾಕಿಸ್ತಾನದ ಮಾಜಿ ವೇಗದ ಬೌಲರ್ ಶೋಯೆಬ್ ಅಖ್ತರ್ ಹಾಗೂ ಅಲ್ಲಿನ ಟಿವಿ ಚಾನೆಲ್ ಮಧ್ಯೆ ಜಟಾಪಟಿ ತೀವ್ರಗೊಂಡಿದ್ದು, ಅಖ್ತರ್ ವಿರುದ್ಧ ಪಿಟಿವಿ ಮಾನನಷ್ಟ ಮೊಕದ್ದಮೆ ಹೂಡಿ 100 ಮಿಲಿಯನ್ ರೂ. ಪರಿಹಾರಕ್ಕೆ ಪಟ್ಟು ಹಿಡಿದಿದೆ.
Published on

ಇಸ್ಲಾಮಾಬಾದ್: ಪಾಕಿಸ್ತಾನದ ಮಾಜಿ ವೇಗದ ಬೌಲರ್ ಶೋಯೆಬ್ ಅಖ್ತರ್ ಹಾಗೂ ಅಲ್ಲಿನ ಟಿವಿ ಚಾನೆಲ್ ಮಧ್ಯೆ ಜಟಾಪಟಿ ತೀವ್ರಗೊಂಡಿದ್ದು, ಅಖ್ತರ್ ವಿರುದ್ಧ ಪಿಟಿವಿ ಮಾನನಷ್ಟ ಮೊಕದ್ದಮೆ ಹೂಡಿ 100 ಮಿಲಿಯನ್ ರೂ. ಪರಿಹಾರಕ್ಕೆ ಪಟ್ಟು ಹಿಡಿದಿದೆ.

ಪಾಕಿಸ್ತಾನದ ಸರ್ಕಾರಿ ಟಿವಿ ಚಾನೆಲ್ ಆಗಿರುವ ಪಿಟಿವಿ ಜೊತೆ ಶೋಯೆಬ್ ಅಖ್ತರ್ ಒಪ್ಪಂದ ಮಾಡಿಕೊಂಡಿದ್ದರು. ಆದರೆ, ಟಿವಿ ನಿರೂಪಕನೊಂದಿಗೆ ನೇರ ಪ್ರಸಾರದ ಕಾರ್ಯಕ್ರಮದಲ್ಲಿ ಜಗಳ ಮಾಡಿಕೊಂಡು ರಾಜೀನಾಮೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಪಾಕಿಸ್ತಾನಿ ಚಾನೆಲ್ ಹಾಗೂ ಶೋಯೆಬ್ ಅಖ್ತರ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲಾಗುವುದು ಅಂತಾ ಬೆದರಿಕೆ ಹಾಕಿದೆ. ಅಲ್ಲದೆ, ನೋಟಿಸ್ ವೊಂದನ್ನು ಜಾರಿ ಮಾಡಲಾಗಿದ್ದು, ನೂರು ಮಿಲಿಯನ್ ರೂಪಾಯಿ ಪಾವತಿ ಮಾಡುವಂತೆ ಆದೇಶ ಮಾಡಿದೆ.

ಟಿ-20 ವಿಶ್ವಕಪ್ ನಲ್ಲಿ ಭಾರತದ ವಿರುದ್ಧ ಪಾಕಿಸ್ತಾನ ಪಂದ್ಯ ಗೆದ್ದ ನಂತರ ಪಿಟಿವಿ ಕಾರ್ಯಕ್ರಮದಲ್ಲಿ ಶೋಯೆಬ್ ಅಖ್ತರ್ ಭಾಗಿಯಾಗಿದ್ದರು. ಅಕ್ಟೋಬರ್ 26ರಂದ ಈ ಅತಿದೊಡ್ಡ ಟಿವಿ ಶೋನಲ್ಲಿ ವಿವಿಯನ್‌ ರಿಚರ್ಡ್ಸ್, ಡೇವಿಡ್ ಗೋವರ್ ಅವರಂಥ ದಿಗ್ಗಜರು ಹಾಜರಿದ್ದರು. ಈ ವೇಳೆ ಪಿಟಿವಿ ಸ್ಪೋರ್ಟ್ಸ್ ನ ಆ್ಯಂಕರ್ ನೌಮಾನ್ ನಿಯಾಜ್ ಅವರೊಂದಿಗೆ ವಿವಾದ ಮಾಡಿಕೊಂಡು ಮುಖಭಂಗ ಅನುಭವಿಸಿದ್ದರು. ಅಲ್ಲದೆ ಲೈವ್ ಶೋನಲ್ಲಿ ರಾಜೀನಾಮೆ ಘೋಷಣೆ ಮಾಡಿದ್ದರು.

ಇದೀಗ ಪಾಕಿಸ್ತಾನ ಟೆಲಿವಿಷನ್ ಕಾರ್ಪೊರೇಷನ್ (PTVC) ದಿಗ್ಗಜ ಆಟಗಾರ ಶೋಯೆಬ್ ಅಖ್ತರ್ ವಿರುದ್ಧ ಮಾನನಷ್ಟ ನೋಟಿಸ್ ಜಾರಿ ಮಾಡಿದ್ದಾರೆ. ಈ ನೋಟಿಸ್‌ನಲ್ಲಿ ಟಿವಿ ಚಾನೆಲ್ ಗೆ ಆಗಿರುವ ಆರ್ಥಿಕ ನಷ್ಟ ಭರಿಸುವಂತೆ ಶೋಯೆಬ್ ಅಖ್ತರ್‌ಗೆ 3 ತಿಂಗಳ ಸಂಬಳಕ್ಕೆ ಸಮಾನವಾದ 33,33,000 ರೂ. ಜೊತೆಗೆ 100 ಮಿಲಿಯನ್ ರೂಪಾಯಿಗಳನ್ನು ಪಾವತಿ ಮಾಡುವಂತೆ ಕೇಳಿದೆ.

ಟಿ20 ವಿಶ್ವಕಪ್ ಪ್ರಸಾರದ ವೇಳೆ ಶೋಯೆಬ್ ಅಖ್ತರ್ ಪಿಟಿವಿ ಮ್ಯಾನೇಜ್‌ಮೆಂಟ್‌ಗೆ ಮಾಹಿತಿ ನೀಡದೆ ದುಬೈ ತೊರೆದಿದ್ದರು. ಇದಲ್ಲದೆ, ಭಾರತೀಯ ಕ್ರಿಕೆಟಿಗ ಹರ್ಭಜನ್ ಸಿಂಗ್ ಅವರೊಂದಿಗೆ ಭಾರತದ ಟಿವಿ ಚಾನೆಲೊಂದರಲ್ಲಿ ಶೋಯೆಬ್ ಅಖ್ತರ್ ಭಾಗಿಯಾಗಿದ್ದರು. ಇದು ಪಾಕಿಸ್ತಾನದ ಟಿವಿ ಚಾನೆಲ್ ಗೆ ಭಾರಿ ನಷ್ಟವನ್ನುಂಟು ಮಾಡಿದೆ.

ನಾನು ಫೈಟರ್, ನ್ಯಾಯಲಯದಲ್ಲಿ ಹೋರಾಡುತ್ತೇನೆ: ಅಖ್ತರ್
ಈ ನೋಟಿಸ್ ಕುರಿತು ಟ್ವಿಟರ್‌ನಲ್ಲಿ ಪ್ರತಿಕ್ರಿಯಿಸಿರುವ ಅಖ್ತರ್, 'ನಾನು ಸಂಪೂರ್ಣ ನಿರಾಶೆಗೊಂಡಿದ್ದೇನೆ. ನಾನು ಪಿಟಿವಿಯಲ್ಲಿ ಕೆಲಸ ಮಾಡುತ್ತಿದ್ದಾಗ ನನ್ನ ಗೌರವ ಮತ್ತು ಖ್ಯಾತಿಯನ್ನು ಟಿವಿ ಚಾನೆಲ್ ಸಿಬ್ಬಂದಿ ರಕ್ಷಣೆ ಮಾಡಲಿಲ್ಲ. ಇದಕ್ಕೆ ಪ್ರತಿಯಾಗಿ ನನ್ನ ವಿರುದ್ಧವೇ ರಿಕವರಿ ನೋಟಿಸ್ ಜಾರಿ ಮಾಡಿದ್ದಾರೆ. ನಾನು ಹೋರಾಟಗಾರನಾಗಿದ್ದು, ಈ ಕಾನೂನು ಹೋರಾಟವನ್ನು ಕೈಬಿಡಲ್ಲ. ನಾನು ಫೈಟರ್... ನನ್ನ ಪರ ವಕೀಲರಾದ ಅಬುಜಾರ್ ಸಲ್ಮಾನ್ ಖಾನ್ ಅವರು ಮಾನನಷ್ಟ ಮೊಕದ್ದಮೆ ನೋಟಿಸ್ ವಿರುದ್ಧದ ಕಾನೂನು ಹೋರಾಟ ಮುಂದುವರಿಸುತ್ತಾರೆ" ಅಂತಾ ವೇಗಿ ಶೋಯೆಬ್ ಅಖ್ತರ್ ತಿಳಿಸಿದ್ದಾರೆ.
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com