ಮುಂಬೈ: ಟಿ20 ವಿಶ್ವಕಪ್ ಟೂರ್ನಿಗೆ ತಯಾರಿ ನಡೆಸುತ್ತಿರುವ ಭಾರತ ತಂಡಕ್ಕೆ ಬಹು ದೊಡ್ಡ ಆಘಾತ ಎದುರಾಗಿದ್ದು, ತಂಡದ ಪ್ರಮುಖ ವೇಗಿ ಜಸ್ ಪ್ರೀತ್ ಬುಮ್ರಾ ಗಾಯದ ಸಮಸ್ಯೆಯಿಂದಾಗಿ ಟೂರ್ನಿಯಿಂದಲೇ ಹೊರಗುಳಿದಿದ್ದಾರೆ.
ಬೆನ್ನು ಮೂಳೆ ಬಿರುಕಿನ ಸಮಸ್ಯೆಯಿಂದಾಗಿ ಭಾರತದ ವೇಗಿ ಜಸ್ಪ್ರೀತ್ ಬುಮ್ರಾ ಅವರು ವಿಶ್ವಕಪ್ ಟೂರ್ನಿಯಿಂದಲೇ ಹೊರಗುಳಿಯಬೇಕಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ. ಇದರೊಂದಿಗೆ ವಿಶ್ವಕಪ್ ಗೆಲ್ಲುವ ಫೇವರಿಟ್ ತಂಡಗಳಲ್ಲಿ ಒಂದಾಗಿರುವ ಭಾರತ ತಂಡಕ್ಕೆ ಬಹುದೊಡ್ಡ ಆಘಾತ ಎದುರಾದಂತಾಗಿದೆ.
ಈ ಕುರಿತು ಮಾಹಿತಿ ನೀಡಿರುವ ಬಿಸಿಸಿಐ ಅಧಿಕಾರಿಯೊಬ್ಬರು, ಬುಮ್ರಾ ಮೂಳೆ ಬಿರುಕಿನ ಸಮಸ್ಯೆಗೆ ತುತ್ತಾಗಿದ್ದಾರೆ. ಹೀಗಾಗಿ ಅವರಿಗೆ ತಿಂಗಳುಗಳ ಕಾಲ ವಿಶ್ರಾಂತಿಯ ಅವಶ್ಯಕತೆ ಇದ್ದು, ಹೀಗಾಗಿ ಅವರು ಟೂರ್ನಿಯಿಂದಲೇ ಹೊರಗುಳಿಯಲಿದ್ದಾರೆ ಎಂದು ಹೇಳಿದ್ದಾರೆ.
"ಬುಮ್ರಾ ಅವರು ಟಿ20ವಿಶ್ವಕಪ್ ಟೂರ್ನಿಯನ್ನು ಖಚಿತವಾಗಿ ಆಡಲು ಆಗುವುದಿಲ್ಲ. ಅವರಿಗೆ ಗಂಭೀರ ಮೂಳೆ ನೋವಿದೆ. ಇದು ಸ್ಟ್ರೆಸ್ ಫ್ರಾಕ್ಟರ್ (ಮೂಳೆ ಬಿರುಕು) ಆಗಿದ್ದು, ಅವರು ಆರು ತಿಂಗಳ ಅವಧಿಗೆ ತಂಡದಿಂದ ಹೊರಗುಳಿಯಬಹುದು" ಎಂದು BCCI ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇತ್ತೀಚೆಗೆ ಮುಕ್ತಾಯವಾದ ಆಸ್ಟ್ರೇಲಿಯಾ ವಿರುದ್ಧ ಎರಡು ಟಿ20 ಪಂದ್ಯಗಳನ್ನು ಆಡಿರುವ ಬುಮ್ರಾ, ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯ ಆರಂಭಿಕ ಪಂದ್ಯಕ್ಕಾಗಿ ತಂಡದೊಂದಿಗೆ ತಿರುವನಂತಪುರಕ್ಕೆ ಪ್ರಯಾಣಿಸಿರಲಿಲ್ಲ.
ವಿಶ್ವಕಪ್ ಟೂರ್ನಿಯಿಂದ ಹೊರಗುಳಿದ 2ನೇ ಟೀಂ ಇಂಡಿಯಾ ಆಟಗಾರ
ಇನ್ನು ಬುಮ್ರಾ ವಿಶ್ವಕಪ್ ಟೂರ್ನಿಯಿಂದ ಹೊರಗುಳಿದ 2ನೇ ಟೀಂ ಇಂಡಿಯಾ ಆಟಗಾರರಾಗಿದ್ದು, ಈ ಹಿಂದೆ ಮೊಣಕಾಲು ಶಸ್ತ್ರಚಿಕಿತ್ಸೆಯಿಂದ ಚೇತರಿಸಿಕೊಳ್ಳುತ್ತಿರುವ ರವೀಂದ್ರ ಜಡೇಜಾ ಕೂಡ ಟೂರ್ನಿಗೆ ಅಲಭ್ಯರಾಗಿದ್ದರು. ಇದೀಗ ಟೀಂ ಇಂಡಿಯಾದ ಮತ್ತೋರ್ವ ಹಿರಿಯ ಸ್ಟಾರ್ ಆಟಗಾರ ಟೂರ್ನಿಯಿಂದ ಹೊರ ಬಿದ್ದಿದ್ದಾರೆ.
Advertisement