ಕೊಹ್ಲಿ ಆಟವನ್ನು ಪ್ರಶ್ನಿಸುತ್ತೀರಾ? ಕ್ರಿಕೆಟ್ ತಜ್ಞರಿಗೆ ರೋಹಿತ್ ಶರ್ಮಾ ತಿರುಗೇಟು!
ಟೀಂ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ಪ್ರದರ್ಶನದ ಬಗ್ಗೆ ಟೀಂ ಇಂಡಿಯಾದ ದಿಗ್ಗಜ ಕಪಿಲ್ ದೇವ್ ಸೇರಿದಂತೆ ಹಲವು ತಜ್ಞರು ಟೀಕೆ ಮಾಡುತ್ತಿದ್ದು ಇದರ ನಡುವೆ ತಂಡದೊಳಗೆ ಏನು ನಡೆಯುತ್ತಿದೆ ಎಂಬುದು ತಜ್ಞರಿಗೆ ತಿಳಿದಿಲ್ಲ ಎಂದು ನಾಯಕ ರೋಹಿತ್ ಶರ್ಮಾ ಹೇಳಿದ್ದಾರೆ.
Published: 11th July 2022 08:56 PM | Last Updated: 12th July 2022 12:54 PM | A+A A-

ರೋಹಿತ್ ಶರ್ಮಾ-ವಿರಾಟ್ ಕೊಹ್ಲಿ
ನವದೆಹಲಿ: ಟೀಂ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ಪ್ರದರ್ಶನದ ಬಗ್ಗೆ ಟೀಂ ಇಂಡಿಯಾದ ದಿಗ್ಗಜ ಕಪಿಲ್ ದೇವ್ ಸೇರಿದಂತೆ ಹಲವು ತಜ್ಞರು ಟೀಕೆ ಮಾಡುತ್ತಿದ್ದು ಇದರ ನಡುವೆ ತಂಡದೊಳಗೆ ಏನು ನಡೆಯುತ್ತಿದೆ ಎಂಬುದು ತಜ್ಞರಿಗೆ ತಿಳಿದಿಲ್ಲ ಎಂದು ನಾಯಕ ರೋಹಿತ್ ಶರ್ಮಾ ಹೇಳಿದ್ದಾರೆ.
ಭಾರತ ತಂಡದ ನಾಯಕ ರೋಹಿತ್ ಶರ್ಮಾ ಅವರು ಟಿ20 ತಂಡದಲ್ಲಿ ವಿರಾಟ್ ಕೊಹ್ಲಿಯ ಸ್ಥಾನವನ್ನು ಪ್ರಶ್ನಿಸುತ್ತಿರುವ ತಜ್ಞರಿಗೆ ತಿರುಗೇಟು ನೀಡಿದ್ದಾರೆ. ಖ್ಯಾತ ಬ್ಯಾಟ್ಸ್ಮನ್ ಕೊಹ್ಲಿಯ ಗುಣಮಟ್ಟದ ಆಟದ ಬಗ್ಗೆ ಯಾವುದೇ ಅನುಮಾನವಿಲ್ಲ. ತಂಡದ ಆಡಳಿತವು ಅವರಿಗೆ ಬೆಂಬಲವನ್ನು ಮುಂದುವರಿಸುತ್ತದೆ ಎಂದು ಹೇಳಿದರು.
2019ರ ನವೆಂಬರ್ ನಿಂದ ಎಲ್ಲಾ ಮಾದರಿಗಳಲ್ಲಿ ಶತಕ ಗಳಿಸದ ಕೊಹ್ಲಿ ಇದೀಗ ಇಂಗ್ಲೆಂಡ್ ವಿರುದ್ಧದ ಟಿ20 ಕ್ರಿಕೆಟ್ ನಲ್ಲೂ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದಾರೆ. ಹೀಗಾಗಿ ವಿಶ್ವಕಪ್ ವಿಜೇತ ನಾಯಕ ಕಪಿಲ್ ದೇವ್ ಮತ್ತು ಇಂಗ್ಲೆಂಡ್ ಮಾಜಿ ನಾಯಕ ಮೈಕೆಲ್ ವಾನ್ ಸೇರಿದಂತೆ ತಜ್ಞರು ಕೊಹ್ಲಿಗೆ ಸಿಗುತ್ತಿರುವ ಹೆಚ್ಚು ಅವಕಾಶಗಳ ಬಗ್ಗೆ ಮಾತನಾಡಿದ್ದರು. ಖ್ಯಾತಿಯ ಆಧಾರದ ಮೇಲೆ ಆಟಗಾರರನ್ನು ಆಯ್ಕೆ ಮಾಡಲಾಗುವುದಿಲ್ಲ. ಪ್ರಸ್ತುತ ಪ್ರದರ್ಶನದ ಅನುಗುಣವಾಗಿರುತ್ತದೆ ಎಂದು ಕಪಿಲ್ ಹೇಳಿದರೆ, ಕೊಹ್ಲಿಗೆ ಆಟದಿಂದ ಮೂರು ತಿಂಗಳ ವಿಶ್ರಾಂತಿ ನೀಡಬೇಕು ಎಂದು ವಾನ್ ಭಾವಿಸುತ್ತಾರೆ.
ಇದನ್ನೂ ಓದಿ: ಟಿ-20: ಪವರ್ ಪ್ಲೇನಲ್ಲಿ 500 ಡಾಟ್ ಬಾಲ್ ಬೌಲ್ ಮಾಡಿದ ಮೊದಲ ಬೌಲರ್ ಭುವನೇಶ್ವರ್ ಕುಮಾರ್!
ದೀಪಕ್ ಹೂಡಾರಂತ ಕಿರಿಯ ಆಟಗಾರರು ಕೊಹ್ಲಿ ಅನುಪಸ್ಥಿತಿಯಲ್ಲಿ ಸಿಕ್ಕ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡಿದ್ದರು. ಆದಾಗ್ಯೂ, ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದರೂ ಐರ್ಲೆಂಡ್ ವಿರುದ್ದ ಸರಣಿಯ ಆಡುವ ಹನ್ನೊಂದರರಲ್ಲಿ ಸ್ಥಾನ ಸಿಕ್ಕಿಲ್ಲ ಎಂದು ತಜ್ಞರು ಪ್ರಶ್ನಿಸಿದ್ದರು.
ಇನ್ನು ಮೂರನೇ ಟಿ20 ಅಂತಾರಾಷ್ಟ್ರೀಯ ಪಂದ್ಯದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ರೋಹಿತ್, ತಂಡದೊಳಗೆ ಏನಾಗುತ್ತಿದೆ ಎಂಬುದು ತಜ್ಞರಿಗೆ ತಿಳಿದಿಲ್ಲ. ನಮಗೆ ಹೊರಗಿನ ಮಾತುಗಳು ಕೇಳದ ಕಾರಣ ನಮಗೆ ಅದರಿಂದಾಗುವ ನಷ್ಟವೇನಿಲ್ಲ. ಅಲ್ಲದೆ, ಈ ತಜ್ಞರು ಯಾರು ಮತ್ತು ಅವರನ್ನು ಏಕೆ ತಜ್ಞರು ಎಂದು ಕರೆಯುತ್ತಾರೆ ಎಂಬುದು ನನಗೆ ತಿಳಿದಿಲ್ಲ. ಇನ್ನು ಕೊಹ್ಲಿಯ ಪ್ರದರ್ಶನದ ಬಗ್ಗೆ ತಂಡವು ಹೇಗೆ ನೋಡುತ್ತಿದೆ ಎಂಬುದರ ಕುರಿತು ತಜ್ಞರ ಆಲೋಚನೆಗಳೇನು ಎಂದು ಪ್ರಶ್ನಿಸಿದ್ದಾರೆ.