ಮೆಲ್ಬೋರ್ನ್: ಕಳೆದ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಪಾಕ್ ವಿರುದ್ಧ ಭಾರತ ಸೋಲು ಕಂಡಿದ್ದು ಅಭಿಮಾನಿಗಳಿಗೆ ತೀವ್ರ ನಿರಾಸೆ ಮೂಡಿತ್ತು. ಇನ್ನು ಪ್ರಸ್ತತ ಟಿ20 ವಿಶ್ವಕಪ್ ಟೂರ್ನಿಯಲ್ಲಿನ ಸಾಂಪ್ರದಾಯಿಕ ಎದುರಾಳಿ ಪಾಕ್ ವಿರುದ್ಧ ಭಾರತ ವಿರೋಚಿತ ಗೆಲುವು ಸಾಧಿಸಿ ಹಳೆಯ ಅವಮಾನಕ್ಕೆ ಸೇಡು ತೀರಿಸಿಕೊಂಡಿದೆ.
ಪಾಕಿಸ್ತಾನ ನೀಡಿದ 160 ರನ್ ಗಳ ಗುರಿ ಬೆನ್ನಟ್ಟಿದ ಟೀಂ ಇಂಡಿಯಾಗೆ ಆರಂಭಿಕ ಆಘಾತ ಎದುರಾಗಿತ್ತು. 31 ರನ್ ಗಳಿಗೆ ಪ್ರಮುಖ ನಾಲ್ಕು ವಿಕೆಟ್ ಕಳೆದುಕೊಂಡಿತ್ತು. ಈ ವೇಳೆ ವಿರಾಟ್ ಕೊಹ್ಲಿ, ಹಾರ್ದಿಕ್ ಪಾಂಡ್ಯ ಜೊತೆಗೂಡಿ ಐದನೇ ವಿಕೆಟ್ಗೆ 113 ರನ್ಗಳ ಶತಕದ ಜೊತೆಯಾಟವಾಡಿ ತಂಡಕ್ಕೆ ಗೆಲುವು ತಂದುಕೊಟ್ಟರು.
ಇನ್ನು ಹಾರ್ದಿಕ್ ಪಾಂಡ್ಯ 40 ರನ್ ಗಳಿಸಿ ಔಟಾದರು. ಈ ವೇಳೆ ಮತ್ತೆ ಪಂದ್ಯ ತಂಡದ ಕೈಚಾರಿತ್ತು ಎಂದು ಭಾಸವಾಗಿತ್ತು. ಆದರೆ ಕೊಹ್ಲಿ ತಾಳ್ಮೆಯ ಆಟವಾಡಿ 53 ಎಸೆತಗಳಲ್ಲಿ 4 ಸಿಕ್ಸರ್ ಹಾಗೂ 6 ಬೌಂಡರಿಗಳ ನೆರವಿನಿಂದ ಅಜೇಯ 82 ರನ್ ಗಳಿಸಿ ತಂಡಕ್ಕೆ ಜಯ ತಂದುಕೊಟ್ಟರು.
ಭಾರತ ಗೆಲುವು ಸಾಧಿಸುತ್ತಿದ್ದಂತೆ ಮೈದಾನದಲ್ಲಿದ್ದ ಆರ್ ಅಶ್ವಿನ್ ಹಾಗೂ ವಿರಾಟ್ ಕೊಹ್ಲಿ ಸಂಭ್ರಮಾಚರಣೆ ಮಾಡಿದರು. ಅಲ್ಲದೆ ಈ ವೇಳೆ ಕೊಹ್ಲಿ ಖುಷಿಯ ಕಣ್ಣೀರು ಹಾಕಿದರು. ತಂಡದ ಗೆಲುವಿನ ನಂತರ ನಾಯಕ ರೋಹಿತ್ ಶರ್ಮಾ ಮೈದಾನಕ್ಕೆ ಬಂದು ವಿರಾಟ್ ಕೊಹ್ಲಿಯನ್ನು ಭುಜದ ಮೇಲೆ ಎತ್ತಿ ತಿರುಗಿದರು.
ಪಂದ್ಯ ಮುಗಿದ ನಂತರ, ಹಾರ್ದಿಕ್ ಪಾಂಡ್ಯ ಆಂಕರ್ ಇರ್ಫಾನ್ ಪಠಾಣ್ ಅವರೊಂದಿಗೆ ಮಾತನಾಡುವಾಗ, ಅವರ ಕಣ್ಣುಗಳಿಂದ ನೀರು ಬರಲು ಪ್ರಾರಂಭಿಸಿತು. ಈ ಪ್ರೀತಿ ಮತ್ತು ಗೌರವಕ್ಕಾಗಿ ಮಾತ್ರ ನಾವು ಆಡುತ್ತೇವೆ ಎಂದು ಹೇಳಿದರು. ಮುಂದೆಯೂ ಈ ಗೆಲುವಿನ ಓಟವನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತೇವೆ ಎಂದು ಹೇಳಿದರು.
Advertisement