ನವದೆಹಲಿ: ಬಹು ನಿರೀಕ್ಷಿತ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಗೆ ಇನ್ನೂ ಕೇವಲ ನಾಲ್ಕು ದಿನಗಳು ಬಾಕಿ ಇರುವಂತೆಯೇ ಭಾರತದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಸ್ವದೇಶಕ್ಕೆ ಅನಿರೀಕ್ಷಿತವಾಗಿ ವಾಪಸ್ಸಾಗಿದ್ದಾರೆ.
ವೈಯಕ್ತಿಕ ಕಾರಣಗಳಿಂದ ಕೊಹ್ಲಿ ತೆಗೆದುಕೊಂಡಿರುವ ಈ ನಿರ್ಧಾರ ಅಭಿಮಾನಿಗಳು ಮತ್ತು ಕ್ರಿಕೆಟ್ ಪ್ರೇಮಿಗಳಲ್ಲಿ ಊಹಾಪೋಹವನ್ನುಂಟು ಮಾಡಿದೆ. ಪ್ರಸ್ತುತ ಪ್ರಿಟೋರಿಯಾದಲ್ಲಿ ಭಾರತೀಯ ಆಟಗಾರರು ಭಾಗಿಯಾಗಿರುವ ಮೂರು ದಿನಗಳ ಅಭ್ಯಾಸ ಪಂದ್ಯ ಬಿಟ್ಟು ಬರಲು ತಂಡದ ಮ್ಯಾನೇಜ್ ಮೆಂಟ್ ಮತ್ತು ಬಿಸಿಸಿಐ ಅನುಮತಿ ಪಡೆದ ನಂತರ ಕೊಹ್ಲಿ ಮುಂಬೈಗೆ ತೆರಳಿದ್ದಾರೆ.
ಕೊಹ್ಲಿ ಅಲ್ಲಿಂದ ತೆರಳಿರುವುದಾಗಿ ಬಿಸಿಸಿಐ ಅಧಿಕಾರಿಯೊಬ್ಬರು ದೃಢಪಡಿಸಿರುವುದಾಗಿ Cricbuzz ತಿಳಿಸಿದೆ. ಆದರೆ ಕುಟುಂಬದ ತುರ್ತು ಪರಿಸ್ಥಿತಿಯ ಬಗ್ಗೆ ಹೆಚ್ಚಿನ ವಿವರಗಳನ್ನು ಒದಗಿಸಿಲ್ಲ. ಡಿಸೆಂಬರ್ 26 ರಿಂದ ಸೆಂಚುರಿಯನ್ನಲ್ಲಿ ನಡೆಯಲಿರುವ ಮೊದಲ ಟೆಸ್ಟ್ಗೆ ಮುಂಚಿತವಾಗಿ ಕೊಹ್ಲಿ ಜೋಹಾನ್ಸ್ಬರ್ಗ್ನಲ್ಲಿ ತಮ್ಮ ಸಹ ಆಟಗಾರರನ್ನು ಸೇರಿಕೊಳ್ಳಲಿದ್ದಾರೆ ಎಂದು ವರದಿ ತಿಳಿಸಿದೆ.
ಈ ಮಧ್ಯೆ ಆರಂಭಿಕ ಬ್ಯಾಟರ್ ರುತುರಾಜ್ ಗಾಯಕ್ವಾಡ್ ಪ್ರೋಟೀಸ್ ತಂಡದ ವಿರುದ್ಧದ ಎರಡು ಟೆಸ್ಟ್ಗಳ ಸರಣಿಗೆ ಹೊರಗುಳಿದಿದ್ದಾರೆ. ಡಿಸೆಂಬರ್ 19 ರಂದು ನಡೆದ ಮೂರು ಪಂದ್ಯಗಳ ಸರಣಿಯ ಎರಡನೇ ಏಕದಿನ ಪಂದ್ಯದ ಸಂದರ್ಭದಲ್ಲಿ ಗಾಯಕ್ವಾಡ್ ಬೆರಳಿಗೆ ಗಾಯ ಮಾಡಿಕೊಂಡರು. ಇದೀಗ, ಗಾಯಕ್ವಾಡ್ ಸದ್ಯ ಚೇತರಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಭಾರತೀಯ ಕ್ರಿಕೆಟ್ ಮಂಡಳಿ ಖಚಿತಪಡಿಸಿದ್ದು, ತಂಡದಿಂದ ಕೈಬಿಡಲಾಗಿದೆ.
Advertisement