'ಭದ್ರತಾ ಬೆದರಿಕೆ ಇಲ್ಲ': ಭಾರತದಲ್ಲೂ Hybrid Model ಗೆ ಆಗ್ರಹಿಸಿದ ಪಾಕಿಸ್ತಾನಕ್ಕೆ ಮುಟ್ಟಿ ನೋಡಿಕೊಳ್ಳುವಂತೆ ಉತ್ತರ ಕೊಟ್ಟ BCCI

ಚಾಂಪಿಯನ್ಸ್ ಟ್ರೋಫಿ ವಿಚಾರವಾಗಿ ಪಟ್ಟು ಹಿಡಿದಿದ್ದ ಬಿಸಿಸಿಐ ಯಾವುದೇ ಕಾರಣಕ್ಕೂ ಕ್ರಿಕೆಟ್ ಗಾಗಿ ಪಾಕಿಸ್ತಾನಕ್ಕೆ ತೆರಳುವುದಿಲ್ಲ ಎಂದು ಸ್ಪಷ್ಟಪಡಿಸಿತ್ತು.
BCCI Responds To PCBs Demand
ಭಾರತ ಮತ್ತು ಪಾಕಿಸ್ತಾನ
Updated on

ಮುಂಬೈ: ICC Champions Trophy ವಿಚಾರವಾಗಿ ಭಾರತದ ವಿರುದ್ದ ಕೆಂಡಾಮಂಡಲವಾಗಿರುವ ಪಾಕಿಸ್ತಾನ ಕ್ರಿಕೆಟ್ ಮಂಡಳಿ, ಭಾರತದಲ್ಲಿ ನಡೆಯಲಿರುವ ಐಸಿಸಿ ಟೂರ್ನಿಗಳಿಗೂ Hybrid Model ಅಳವಡಿಸುವಂತೆ ಆಗ್ರಹಿಸಿದ್ದು, ಇದಕ್ಕೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಖಡಕ್ ತಿರುಗೇಟು ನೀಡಿದೆ.

ಹೌದು.. ಚಾಂಪಿಯನ್ಸ್ ಟ್ರೋಫಿ ವಿಚಾರವಾಗಿ ಪಟ್ಟು ಹಿಡಿದಿದ್ದ ಬಿಸಿಸಿಐ ಯಾವುದೇ ಕಾರಣಕ್ಕೂ ಕ್ರಿಕೆಟ್ ಗಾಗಿ ಪಾಕಿಸ್ತಾನಕ್ಕೆ ತೆರಳುವುದಿಲ್ಲ ಎಂದು ಸ್ಪಷ್ಟಪಡಿಸಿತ್ತು. ಭಾರತ ತಂಡದ ಈ ವಾದದಿಂದಾಗಿ ಐಸಿಸಿ ಪಾಕಿಸ್ತಾನದಲ್ಲಿ ಆಯೋಜನೆಯಾಗಿರುವ ಚಾಂಪಿಯನ್ಸ್ ಟ್ರೋಫಿ ಟೂರ್ನಿಗೆ ಹೈಬ್ರಿಡ್ ಮಾದರಿ ಅನ್ವಯಿಸಿದೆ.

ಇದಕ್ಕೆ ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ಕೂಡ ಒಲ್ಲದ ಮನಸ್ಸಿನಿಂದಲೇ ಒಪ್ಪಿದ್ದು, ಕೆಲವು ಷರತ್ತುಗಳೊಂದಿಗೆ ಭಾರತದ ಪಂದ್ಯಗಳು ದುಬೈನಲ್ಲಿ ನಡೆಸುವ ಹೈಬ್ರಿಡ್ ಮಾದರಿಯನ್ನು ಅಳವಡಿಸಿಕೊಳ್ಳಲು ಪಾಕಿಸ್ತಾನದ ಮಂಡಳಿ ಅನುಮೋದನೆ ನೀಡಿದೆ.

ಪಾಕಿಸ್ತಾನದ ಈ ನಿರ್ಧಾರದ ಹಿಂದೆ ಐಸಿಸಿ ಚಾಂಪಿಯನ್ಸ್ ಟ್ರೋಫಿ ಆಯೋಜನೆ ಅವಕಾಶ ಕೈ ತಪ್ಪುವ ಭೀತಿ ಕೂಡ ಇದೆ. ಆದಾಗ್ಯೂ ಬಿದ್ದರೂ ಮೀಸೆ ಮಣ್ಣಾಗಿಲ್ಲ ಎಂಬಂತೆ ವರ್ತಿಸುತ್ತಿರುವ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಇದೀಗ ಭಾರತದಲ್ಲಿ ನಡೆಯುವ ಐಸಿಸಿ ಟೂರ್ನಿಗಳಿಗೂ ಅದೇ 'ಹೈಬ್ರಿಡ್ ಮಾದರಿ'ಯನ್ನು ಅಳವಡಿಸುವಂತೆ ಐಸಿಸಿಗೆ ಆಗ್ರಹಿಸಿದೆ. ಪಾಕಿಸ್ತಾನಕ್ಕೆ ನೀಡಿದಂತೆ ಭಾರತಕ್ಕೂ ಹೈಬ್ರಿಡ್ ಮಾದರಿ ಅಳವಡಿಸಬೇಕು ಎಂದು ಪಿಸಿಬಿ ಆಗ್ರಹಿಸಿದೆ. ಆದರೆ ಪಿಸಿಬಿ ಮನವಿಯನ್ನು ಭಾರತ ತಿರಸ್ಕರಿಸಿದ್ದು ಮಾತ್ರವಲ್ಲದೇ ತನ್ನದೇ ಧಾಟಿಯಲ್ಲಿ ಖಡಕ್ ತಿರುಗೇಟು ನೀಡಿದೆ.

BCCI Responds To PCBs Demand
Ramakant Achrekar’s Memorial: ಸಚಿನ್ ತೆಂಡೂಲ್ಕರ್ ತಬ್ಬಿ ಭಾವುಕರಾದ ವಿನೋದ್ ಕಾಂಬ್ಳಿ; Video

ಅರಾಜಕತೆ.. ಭದ್ರತಾ ಬೆದರಿಕೆ ಇಲ್ಲ: ಬಿಸಿಸಿಐ

ಪಿಸಿಬಿ ಒತ್ತಾಯಕ್ಕೆ ಖಡಕ್ಕಾಗಿಯೇ ತಿರುಗೇಟು ನೀಡಿರುವ ಬಿಸಿಸಿಐ, 'ಭಾರತ ಕ್ರಿಕೆಟ್ ತಂಡವನ್ನು ಪಾಕಿಸ್ತಾನಕ್ಕೆ ಕಳುಹಿಸದಿರುವ ಪ್ರಮುಖ ಕಾರಣವೆಂದರೆ ಅದು ಭದ್ರತೆ.. ಪಾಕಿಸ್ತಾನದಲ್ಲಿ ರಾಜಕೀಯ ಅಸ್ತಿರತೆ ಇದ್ದು, ಭದ್ರತಾ ಬೆದರಿಕೆ ಕಾರಣಗಳಿಂದಾಗಿ ತಂಡವನ್ನು ಆ ದೇಶಕ್ಕೆ ಕಳುಹಿಸಲು ಸಾಧ್ಯವಿಲ್ಲ.. ಇದನ್ನೇ ನಾವು ಐಸಿಸಿಗೂ ಮನವರಿಕೆ ಮಾಡಿಕೊಟ್ಟಿದ್ದೇವೆ ಎಂದಿದೆ.

ಅಂತೆಯೇ ಪಾಕಿಸ್ತಾನದಲ್ಲಿರುವಂತೆ ಭಾರತದಲ್ಲಿ ಯಾವುದೇ ರಾಜಕೀಯ ಅಸ್ತಿರತೆ ಇಲ್ಲ.. ಭದ್ರತಾ ಬೆದರಿಕೆಗಳಿಲ್ಲ.. ದೇಶದಲ್ಲಿ ಯಾವುದೇ 'ಭದ್ರತಾ ಬೆದರಿಕೆ' ಇಲ್ಲದ ಕಾರಣ ಭಾರತದಲ್ಲಿ ನಡೆಯುವ ಐಸಿಸಿ ಕಾರ್ಯಕ್ರಮಗಳಿಗೆ ಹೈಬ್ರಿಡ್ ಮಾದರಿಯನ್ನು ಅಳವಡಿಸಿಕೊಳ್ಳಲಾಗುವುದಿಲ್ಲ ಎಂದೂ ಖಡಕ್ ಉತ್ತರ ನೀಡಿದೆ. ಅಂತೆಯೇ ಇದೇ ಉತ್ತರದ ಮೂಲಕ ಐಸಿಸಿಗೂ ಬಿಸಿಸಿಐ ಪಾಕಿಸ್ತಾನದ ಒತ್ತಾಯಕ್ಕೆ ಸೊಪ್ಪು ಹಾಕದಂತೆ ಸ್ಪಷ್ಟ ಸಂದೇಶ ರವಾನಿಸಿದೆ.

ಐಸಿಸಿ ಚಾಂಪಿಯನ್ಸ್ ಟ್ರೋಫಿ ಆಯೋಜನೆ ಬಿಕ್ಕಟ್ಟನ್ನು ಕೊನೆಗೊಳಿಸಲು ಎಲ್ಲಾ ಸಂಬಂಧಿತ ಕ್ರಿಕೆಟ್ ಮಂಡಳಿಗಳು ಸೌಹಾರ್ದಯುತ ಪರಿಹಾರವನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ಐಸಿಸಿ ಕಾರ್ಯನಿರ್ವಹಿಸುತ್ತಿದೆ. ಮುಂದಿನ ಕೆಲವು ದಿನಗಳಲ್ಲಿ ಐಸಿಸಿ ಮಂಡಳಿಯು ಮತ್ತೆ ಸಭೆ ಸೇರಲಿದೆ ಎಂದು ತಿಳಿದುಬಂದಿದೆ.

BCCI Responds To PCBs Demand
SMAT 2024: IPL ಹರಾಜಿನಲ್ಲಿ ಖರೀದಿಯಾಗದಿದ್ರೂ ವೇಗದ ಶತಕ ಸಿಡಿಸಿ ತಮ್ಮ ಖದರ್ ತೋರಿಸಿದ ಉರ್ವಿಲ್ ಪಟೇಲ್

ಅಂತೆಯೇ ಈ ವಿಷಯದಲ್ಲಿ ತನ್ನ ಹಠಮಾರಿ ನಿಲುವು ಮುಂದುವರಿದರೆ ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ಮುಂದಿನ ವರ್ಷ ಚಾಂಪಿಯನ್ಸ್ ಟ್ರೋಫಿಯ ಆತಿಥ್ಯದ ಹಕ್ಕುಗಳನ್ನು ಕಳೆದುಕೊಳ್ಳುವ ಅಪಾಯವೂ ಇದ್ದು, ಐಸಿಸಿ ಪಂದ್ಯಾವಳಿಯನ್ನು ಬೇರೆ ದೇಶಕ್ಕೆ ಸ್ಥಳಾಂತರಿಸಲು ನಿರ್ಧರಿಸಿದರೆ ಚಾಂಪಿಯನ್ಸ್ ಟ್ರೋಫಿಯಿಂದ ಹಿಂದೆ ಸರಿಯುವುದಾಗಿ ಮಂಡಳಿಯು ಈ ಹಿಂದೆ ಬೆದರಿಕೆ ಹಾಕಿತ್ತು.

ಇನ್ನು ಭಾರತದಲ್ಲಿ ಮುಂದಿನ ವರ್ಷದಿಂದ ಸಾಕಷ್ಟು ಐಸಿಸಿ ಟೂರ್ನಿಗಳು ನಡೆಯಲಿದ್ದು, 2025ರಲ್ಲಿ ಮಹಿಳಾ ಏಕದಿನ ವಿಶ್ವಕಪ್, 2026ರಲ್ಲಿ T20 ವಿಶ್ವಕಪ್ ಸೇರಿದಂತೆ ಶ್ರೀಲಂಕಾದೊಂದಿಗೆ ಜಂಟಿಯಾಗಿ ಅನೇಕ ICC ಟೂರ್ನಿಗಳು ಆಯೋಜಿಸುತ್ತಿದೆ. 2029ರ ಚಾಂಪಿಯನ್ಸ್ ಟ್ರೋಫಿ ಮತ್ತು 2031ರ ಏಕದಿನ ವಿಶ್ವಕಪ್ ಕೂಡ ಭಾರತದಲ್ಲೇ ನಡೆಯಲಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com