
ಮೆಲ್ಬೋರ್ನ್: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ 4ನೇ ಟೆಸ್ಟ್ ಪಂದ್ಯದಲ್ಲಿ ಮತ್ತೆ ರಿಷಬ್ ಪಂತ್ ಕಡಿಮೆ ಮೊತ್ತಕ್ಕೆ ಔಟಾಗಿದ್ದು, ಈ ಕುರಿತು ಪಂತ್ ವಿರುದ್ಧ ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ತೀವ್ರ ಕಿಡಿಕಾರಿದ್ದಾರೆ.
ಮೆಲ್ಬೋರ್ನ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 3ನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ ಭಾರತ ತೀವ್ರ ಕುಸಿತದ ನಡುವೆಯೂ ನಿತೀಶ್ ಕುಮಾರ್ ರೆಡ್ಡಿ ಶತಕ ಮತ್ತು ವಾಷಿಂಗ್ಟನ್ ಸುಂದರ್ ಅವರ ಅರ್ಧಶತಕದ ಮೂಲಕ ಗೌರವಯುತ ಸ್ಥಿತಿಯಲ್ಲಿದೆ. ಆದರು ಭಾರತದ ಕೆಲ ಆಟಗಾರರ ಶಾಟ್ ಆಯ್ಕೆ ಕಳಪೆಯಾಗಿದ್ದು, ಇದೇ ತಂಡದ ಹಿನ್ನಡೆಗೆ ಕಾರಣ ಎನ್ನಲಾಗಿದೆ.
ಪ್ರಮುಖವಾಗಿ ರಿಷಬ್ ಪಂತ್ ತಂಡದ ಸ್ಥಿತಿಗತಿಯನ್ನೂ ಮರೆತು ಗ್ಲಾಮರ್ ಶಾಟ್ ಗೆ ವಿಕೆಟ್ ಒಪ್ಪಿಸಿರುವುದು ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಅವರ ಆಕ್ರೋಶಕ್ಕೆ ಕಾರಣವಾಗಿದೆ. ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ ಅವರು ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಔಟಾದ ರೀತಿಯನ್ನು ಮಾಜಿ ಕ್ರಿಕೆಟಿಗ ಸುನೀಲ್ ಗವಾಸ್ಕರ್ ಟೀಕಿಸಿದ್ದು, ಅಗತ್ಯವಿದ್ದ ಸಂದರ್ಭದಲ್ಲಿ ಮೂರ್ಖತನದ ಹೊಡೆತ ಪ್ರಯೋಗಿಸಿ ವಿಕೆಟ್ ಕಳೆದುಕೊಳ್ಳುವ ಮೂಲಕ ತಂಡವನ್ನು ಇನ್ನಷ್ಟು ಕುಸಿಯುವಂತೆ ಮಾಡಿದ್ದೀರಿ ಎಂದು ದೂರಿದ್ದಾರೆ.
ಜವಾಬ್ದಾರಿ ಮರೆತ ಪಂತ್?
ಭಾರತ ತಂಡ ಎರಡನೇ ದಿನದಾಟದ ಅಂತ್ಯಕ್ಕೆ 5 ವಿಕೆಟ್ಗಳನ್ನು ಕಳೆದುಕೊಂಡು 164 ರನ್ ಗಳಿಸಿತ್ತು. ರಿಷಭ್ 6 ರನ್ ಹಾಗೂ ರವೀಂದ್ರ ಜಡೇಜ 4 ರನ್ ಗಳಿಸಿ ಕ್ರೀಸ್ನಲ್ಲಿದ್ದರು. ಮರುದಿನ ಇವರಿಬ್ಬರು ಜವಾಬ್ದಾರಿಯುತ ಇನಿಂಗ್ಸ್ ಕಟ್ಟುವ ಅಗತ್ಯವಿತ್ತು. ಆದರೆ ಇಂದು ರಕ್ಷಣಾತ್ಮಕವಾಗಿ ಆಡಲು ವಿಫಲವಾದ ರಿಷಬ್, ಹಿಂದಿನ ದಿನದ ಮೊತ್ತಕ್ಕೆ 22 ರನ್ ಸೇರಿಸಿ ಔಟಾದರು.
ಇನಿಂಗ್ಸ್ನ 56ನೇ ಓವರ್ನಲ್ಲಿ ಸ್ಕಾಟ್ ಬೊಲ್ಯಾಂಡ್ ಹಾಕಿದ 4ನೇ ಎಸೆತವನ್ನು ಲ್ಯಾಪ್/ಸ್ಕೂಪ್ ಹೊಡೆತ ಪ್ರಯೋಗಿಸಲು ಹೋಗಿ ಪಂತ್ ವಿಕೆಟ್ ಕೈಚೆಲ್ಲಿದರು. ಬ್ಯಾಟ್ ಅಂಚಿಗೆ ಬಡಿದು ಮೇಲಕ್ಕೆ ಚಿಮ್ಮಿದ ಚೆಂಡನ್ನು ವಿಕೆಟ್ ಕೀಪರ್ ಹಿಂದೆ ಬೌಂಡರಿ ಗೆರೆ ಬಳಿ ಇದ್ದ ನೇಥನ್ ಲಯನ್ ಹಿಡಿದರು. ಹಿಂದಿನ ಎಸೆತದಲ್ಲೂ ಇಂಥದೇ ಪ್ರಯತ್ನ ಮಾಡಿದ್ದರು. ಆದರೆ, ಚೆಂಡು ಅವರ ಹೊಟ್ಟೆಗೆ ಬಡಿದಿತ್ತು. ಆದರೆ ಎಚ್ಚೆತ್ತುಕೊಳ್ಳದ ಪಂತ್ ಮತ್ತೆ ಅದೇ ಶಾಟ್ ಗೆ ಮುಂದಾಗಿ ಅನಗತ್ಯವಾಗಿ ವಿಕೆಟ್ ಕೈಚೆಲ್ಲಿದರು.
ಗವಾಸ್ಕರ್ ಆಕ್ರೋಶ
ರಿಷಬ್ ಔಟಾದ ರೀತಿಯನ್ನು ವೀಕ್ಷಕ ವಿವರಣೆ ವೇಳೆ ಟೀಕಿಸಿರುವ ಗವಾಸ್ಕರ್, 'ಮೂರ್ಖ, ಮೂರ್ಖ, ಮೂರ್ಖ. ಇಬ್ಬರು ಫೀಲ್ಡರ್ಗಳಿದ್ದರೂ, ಅಂಥದೇ ಹೊಡೆತಕ್ಕೆ ಮುಂದಾದಿರಿ. ಹಿಂದಿನ ಎಸೆತದಲ್ಲೂ ಅಂಥದೇ ಪ್ರಯತ್ನ ಮಾಡಿ ವಿಫಲವಾಗಿದ್ದಿರಿ. ನೀವು ಸಿಕ್ಕಿಬಿದ್ದದ್ದು ಎಲ್ಲಿ ಎಂದು ನೋಡಿ. ಡೀಪ್ ಥರ್ಡ್ ಮ್ಯಾನ್ ನಿಮ್ಮ ಕ್ಯಾಚ್ ಪಡೆದಿದ್ದಾರೆ. ಹಾಗಾಗಿ, ವಿಕೆಟ್ ಕೈಚೆಲ್ಲಿದ್ದೀರಿ. ನೀವು ಅಂತಹ ಹೊಡೆತಕ್ಕೆ ಮುಂದಾಗುವ ಸ್ಥಿತಿಯಲ್ಲಿ ಭಾರತ ಇರಲಿಲ್ಲ. ಅದನ್ನು ಅರ್ಥ ಮಾಡಿಕೊಳ್ಳಬೇಕಿತ್ತು. ನೀವು, ನನ್ನ ಆಟ ಇರುವುದೇ ಹಾಗೆ ಎನ್ನಲು ಸಾಧ್ಯವಿಲ್ಲ. ನಿಮ್ಮ ಸ್ವಾಭಾವಿಕ ಆಟ ಅದಲ್ಲ. ಮೂರ್ಖತನದ ಆ ಹೊಡೆತ, ತಂಡವನ್ನು ಕೆಟ್ಟದಾಗಿ ಕುಸಿಯುವಂತೆ ಮಾಡಿತು' ಎಂದು ಕಿಡಿಕಾರಿದ್ದಾರೆ.
ಈ ವೇಳೆ ಭಾರತ ಕ್ರಿಕೆಟ್ ತಂಡದ ಮಾಜಿ ಕೋಚ್ ರವಿಶಾಸ್ತ್ರಿ ಅವರು ಕೂಡ 'ಅದು ಅಪಾಯಕಾರಿ ಹೊಡೆತ' ಎಂದು ಹೇಳಿದ್ದಾರೆ.
ಅಂದಹಾಗೆ ಬಾರ್ಡರ್–ಗವಾಸ್ಕರ್ ಟೆಸ್ಟ್ ಕ್ರಿಕೆಟ್ ಸರಣಿಯ ನಾಲ್ಕನೇ ಪಂದ್ಯವು ಮೆಲ್ಬರ್ನ್ನಲ್ಲಿ ನಡೆಯುತ್ತಿದ್ದು, ಆಸ್ಟ್ರೇಲಿಯಾ ಮೊದಲ ಇನಿಂಗ್ಸ್ನಲ್ಲಿ ಗಳಿಸಿರುವ 474 ರನ್ಗಳಿಗೆ ಪ್ರತಿಯಾಗಿ ಭಾರತ, ಮೂರನೇ ದಿನದಾಟದ ಅಂತ್ಯಕ್ಕೆ 358 ರನ್ ಗಳಿಸಿದೆ. 21 ವರ್ಷದ ಬ್ಯಾಟರ್ ನಿತೀಶ್ ಕುಮಾರ್ ರೆಡ್ಡಿ ಅಜೇಯ ಶತಕ ಸಿಡಿಸುವ ಮೂಲಕ ನೆರವಾಗಿದ್ದಾರೆ.
Advertisement