ಕ್ರಿಕೆಟಿಗ ಮಯಾಂಕ್ ಅಗರ್ವಾಲ್ ಆರೋಗ್ಯ ಸ್ಥಿರ, ಪ್ರಾಣಾಪಾಯದಿಂದ ಪಾರು: ವರದಿ

ವಿಮಾನದಲ್ಲಿ ಶೌಚಾಲಯ ಸ್ವಚ್ಛತೆಗೆ ಬಳಕೆ ಮಾಡುವ ರಾಸಾಯನಿಕವನ್ನು ನೀರೆಂದು ಕುಡಿದು ಆಸ್ಪತ್ರೆಗೆ ದಾಖಲಾಗಿದ್ದ ಭಾರತ ತಂಡದ ಕ್ರಿಕೆಟಿಗ ಹಾಗೂ ಕನ್ನಡಿಗ ಮಯಾಂಕ್ ಅಗರ್ವಾಲ್ ಆರೋಗ್ಯದ ಕುರಿತು ಆಸ್ಪತ್ರೆ ಆಡಳಿತ ಮಂಡಳಿ ಮಹತ್ವದ ಹೇಳಿಕೆ ಬಿಡುಗಡೆ ಮಾಡಿದೆ.
ಕ್ರಿಕೆಟಿಗ ಮಯಾಂಕ್ ಅಗರ್ವಾಲ್
ಕ್ರಿಕೆಟಿಗ ಮಯಾಂಕ್ ಅಗರ್ವಾಲ್

ತ್ರಿಪುರಾ: ವಿಮಾನದಲ್ಲಿ ಶೌಚಾಲಯ ಸ್ವಚ್ಛತೆಗೆ ಬಳಕೆ ಮಾಡುವ ರಾಸಾಯನಿಕವನ್ನು ನೀರೆಂದು ಕುಡಿದು ಆಸ್ಪತ್ರೆಗೆ ದಾಖಲಾಗಿದ್ದ ಭಾರತ ತಂಡದ ಕ್ರಿಕೆಟಿಗ ಹಾಗೂ ಕನ್ನಡಿಗ ಮಯಾಂಕ್ ಅಗರ್ವಾಲ್ ಆರೋಗ್ಯದ ಕುರಿತು ಆಸ್ಪತ್ರೆ ಆಡಳಿತ ಮಂಡಳಿ ಮಹತ್ವದ ಹೇಳಿಕೆ ಬಿಡುಗಡೆ ಮಾಡಿದೆ.

ರಣಜಿ ಕ್ರಿಕೆಟ್ ಟೂರ್ನಿಯಲ್ಲಿ ಕರ್ನಾಟಕದ ತಂಡವನ್ನು ಮುನ್ನಡೆಸುತ್ತಿರುವ ಮಯಾಂಕ್ ಅಗರ್ವಾಲ್ (Karnataka Ranji team captain Mayank Agarwal) ಅವರು ತೀವ್ರ ಅಸ್ವಸ್ಥರಾಗಿದ್ದು(critically ill), ಅವರಿಗೆ ಅಗರ್ತಲಾದ ಐಎಲ್‌ಎಸ್ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇದೀಗ ಆಸ್ಪತ್ರೆಯ ಆಡಳಿತ ಮಂಡಳಿ ಅವರ ಆರೋಗ್ಯದ ಕುರಿತು ಬುಲೆಟಿನ್ ಬಿಡುಗಡೆ ಮಾಡಿದ್ದು, "ಮಯಾಂಕ್ ಅಗರ್ವಾಲ್ ಅವರ ಆರೋಗ್ಯ ಪ್ರಾಯೋಗಿಕವಾಗಿ ಸ್ಥಿರವಾಗಿದ್ದು, ನಿರಂತರವಾಗಿ ವೈದ್ಯಕೀಯ ಮೇಲ್ವಿಚಾರಣೆಯಲ್ಲಿದ್ದಾರೆ" ಎಂದು ಹೇಳಿದೆ.

ಪ್ರಾಣಾಪಾಯದಿಂದ ಪಾರು: ವರದಿ
ಆಸ್ಪತ್ರೆ ಮೂಲಗಳ ಪ್ರಕಾರ ಕ್ರಿಕೆಟಿಗ ಮಯಾಂಕ್ ಅಗರ್ವಾಲ್ ಅವರು ಪ್ರಸ್ತುತ ಪ್ರಾಣಾಪಾಯದಿಂದ ಪಾರಾಗಿದ್ದು, ಅವರಿಗೆ ಚಿಕಿತ್ಸೆ ಮುಂದುವರೆದಿದೆ. ಅವರು ಶೀಘ್ರ ಆಸ್ಪತ್ರೆಯಿಂದ ಬಿಡುಗಡೆಯಾಗುವ ನಿರೀಕ್ಷೆ ಇದೆ ಎಂದು ಹೇಳಲಾಗಿದೆ.

ಇದೇ ವಿಚಾರವಾಗಿ ಮಾತನಾಡಿರುವ ತ್ರಿಪುರಾ ಆರೋಗ್ಯ ಕಾರ್ಯದರ್ಶಿ ಕಿರಣ್ ಗಿಟ್ಟೆ ಅವರು, 'ಕರ್ನಾಟಕ ರಣಜಿ ತಂಡದ ಸದಸ್ಯ ಮಯಾಂಕ್ ಅಗರ್ವಾಲ್ ವಿಮಾನದಲ್ಲಿ ಪ್ರಯಾಣಿಸುವಾಗ ಆಕಸ್ಮಿಕವಾಗಿ ನೀರಿನ ಬಾಟಲಿ ಎಂದು ಭಾವಿಸಿ ರಾಸಾಯನಿಕ ಸೇವಿಸಿದ್ದಾರೆ. ತಕ್ಷಣವೇ ಅವರಿಗೆ ಗಂಟಲು ಮತ್ತು ಬಾಯಲ್ಲಿ ಉರಿಯ ಅನುಭವವಾಗಿದ್ದು, ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಪ್ರಸ್ತುತ ಅವರ ಸ್ಥಿತಿ ಸ್ಥಿರವಾಗಿದೆ. ಇದರಿಂದ ಬಹುಬೇಗ ಹೊರಬರಲಿ ಎಂದು ಹಾರೈಸುತ್ತೇವೆ. ಅಂತೆಯೇ ಪ್ರಕರಣದ ಕುರಿತು ತನಿಖೆ ನಡೆಯುತ್ತಿದೆ' ಎಂದು ಹೇಳಿದ್ದಾರೆ.

ಪ್ರಾಣಾಪಾಯವಿಲ್ಲ: ತ್ರಿಪುರಾ ಕ್ರಿಕೆಟ್ ಅಸೋಸಿಯೇಷನ್ ಅಧಿಕಾರಿ
ಇನ್ನು ಮಯಾಂಕ್ ಅವರ ಆರೋಗ್ಯ ಸ್ಥಿರವಾಗಿದ್ದು, ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ವೈದ್ಯರು ಮಯಾಂಕ್ ಅವರಿಗೆ ಹಲವು ಆರೋಗ್ಯ ಪರೀಕ್ಷೆಗಳನ್ನು ನಡೆಸಿದ್ದು,  ಪ್ರಸ್ತುತ ಅವರು ಅಪಾಯದಿಂದ ಪಾರಾಗಿದ್ದಾರೆ ಎಂದು ತ್ರಿಪುರಾ ಕ್ರಿಕೆಟ್ ಅಸೋಸಿಯೇಷನ್ ಅಧಿಕಾರಿಯ ಹೇಳಿಕೆ ಉಲ್ಲೇಖಿಸಿ ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.

ತ್ರಿಪುರಾಗೆ ಪ್ರಯಾಣಿಸುತ್ತಿದ್ದ ಮಯಾಂಕ್
ತ್ರಿಪುರಾ ವಿರುದ್ಧ ರಣಜಿ ಪಂದ್ಯವನ್ನು ಗೆದ್ದಿರುವ ಕರ್ನಾಟಕ ತಂಡವು ತನ್ನ ಮುಂದಿನ ಪಂದ್ಯವನ್ನು ಫೆಬ್ರವರಿ 2ರಿಂದ ಗುಜರಾತ್‌ನ ಸೂರತ್‌ನಲ್ಲಿ ಆಡಬೇಕಿತ್ತು. ಈ ಹಿನ್ನೆಲೆಯಲ್ಲಿ ಕರ್ನಾಟಕ ತಂಡವು ಸೋಮವಾರ ತ್ರಿಪುರಾದ ಅಗರ್ತಲಾದಿಂದ ವಿಮಾನದಲ್ಲಿ ಪ್ರಯಾಣ ಬೆಳೆಸಿತ್ತು. ಮೂಲಗಳ ಪ್ರಕಾರ ರಣಜಿ ಪಂದ್ಯಕ್ಕಾಗಿ ತ್ರಿಪುರಾದಲ್ಲಿದ್ದ ಅವರು, ವಿಮಾನದಲ್ಲಿ ವಾಪಸ್ ಆಗುತ್ತಿದ್ದಾಗ ತೀವ್ರವಾಗಿ ಅಸ್ವಸ್ಥರಾಗಿದ್ದು, ಪ್ರಯಾಣದ ವೇಳೆ ಮಯಾಂಕ್ ಅಗರ್ವಾಲ್ ಅವರು ವಿಮಾನದ ಮುಂಭಾಗದಲ್ಲಿಡಲಾಗಿದ್ದ ನೀರಿನ ಬಾಟಲಿಯಿಂದ ನೀರು ಕುಡಿದಿದ್ದಾರೆ. 

ತಕ್ಷಣವೇ ಅವರಿಗೆ ಅಸ್ವಸ್ಥ ಕಾಡಲಾರಂಭಿಸಿದೆ. ಬಾಯಿ ಮತ್ತು ಗಂಟಲಿನಲ್ಲಿ ವಿಪರೀತ ಉರಿಯುಂಟಾಗಿದ್ದು, ನೀರು ಕುಡಿಯುತ್ತಿದ್ದಂತೆ ಅವರ ಗಂಟಲಿನಲ್ಲಿ ಉರಿ ಶುರುವಾಗಿದೆ. ಬಾಯಿ ಮತ್ತು ನಾಲಿಗೆಗೆ ಕೂಡ ಸುಟ್ಟಂತ ಅನುಭವಾಗಿದೆ. ಅವರಿಗೆ ಮಾತನಾಡಲು ಸಾಧ್ಯವಾಗಿಲ್ಲ. ವಿಮಾನದಲ್ಲಿ ಕುಳಿತು ಒಂದೆರಡು ಬಾರಿ ವಾಂತಿ ಮಾಡಿದರು. ತೀವ್ರ ಅಸ್ವಸ್ಥಗೊಂಡ ಅವರನ್ನು ಕೂಡಲೇ ಅಗರ್ತಲಾದ ಎಎಲ್ಎಸ್ ಆಸ್ಪತ್ರೆಗೆ ದಾಖಲಿಸಲಾಗಿದೆ ಮತ್ತು ಅವರಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎನ್ನಲಾಗಿದೆ.

ನೀರೆಂದು ಆ್ಯಸಿಡ್ ಕುಡಿದರೇ ಮಯಾಂಕ್ ಅಗರ್ವಾಲ್?
ಇತ್ತೀಚಿನ ಮಾಹಿತಿಗಳ ಪ್ರಕಾರ, ಸ್ಟೋರೇಜ್ ಏರಿಯಾದಲ್ಲಿ ವಿಮಾನದ ಸಿಬ್ಬಂದಿಯು ವಾಟರ್ ಬಾಟಲ್‌ನಲ್ಲಿ ಆ್ಯಸಿಡ್ ಇಟ್ಟಿದ್ದರು ಎನ್ನಲಾಗಿದೆ. ಮಯಾಂಕ್ ಅಗರ್ವಾಲ್ ಅವರು ನೀರೆಂದು ತಪ್ಪಾಗಿ ಭಾವಿಸಿ ಆ್ಯಸಿಡ್ ಕುಡಿದಿದ್ದಾರೆ. ಆ್ಯಸಿಡ್ ಕುಡಿದ ಮರುಕ್ಷಣವೇ ಅವರು ಎಲ್ಲವನ್ನು ಉಗುಳಿದ್ದಾರೆ. ಹಾಗಾಗಿ ಆ್ಯಸಿಡ್ ಅವರ ಹೊಟ್ಟೆಯನ್ನು ತಲುಪಿರುವ ಸಾಧ್ಯತೆ ಕ್ಷೀಣವಾಗಿದೆ. ವೈದ್ಯರು ಅವರ ಆರೋಗ್ಯದ ಬಗ್ಗೆ ಹೆಚ್ಚಿನ ನಿಗಾ ವಹಿಸಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com