
ನವದೆಹಲಿ: ಭಾರತ ತಂಡದ ಮಾಜಿ ಆರಂಭಿಕ ಆಟಗಾರ ಗೌತಮ್ ಗಂಭೀರ್ ಅವರನ್ನು ಮಂಗಳವಾರ ಬಿಸಿಸಿಐನ ಕ್ರಿಕೆಟ್ ಸಲಹಾ ಸಮಿತಿ (ಸಿಎಸಿ) ರಾಷ್ಟ್ರೀಯ ತಂಡದ ಮುಖ್ಯ ಕೋಚ್ ಹುದ್ದೆಗಾಗಿ ಸಂದರ್ಶನ ಮಾಡಿದೆ.
ಗಂಭೀರ್ ವರ್ಚುಯಲ್ ಆಗಿ ಹಾಜರಾಗುವುದರೊಂದಿಗೆ ಜೂಮ್ ಕರೆಯಲ್ಲಿ ಸಿಎಸಿ ಅಧ್ಯಕ್ಷ ಅಶೋಕ್ ಮಲ್ಹೋತ್ರಾ ಅವರೊಂದಿಗೆ ಸಂದರ್ಶನ ನಡೆಯಿತು.
'ಹೌದು, ಗಂಭೀರ್ ಸಿಎಸಿ ಸಂದರ್ಶನಕ್ಕೆ ಹಾಜರಾಗಿದ್ದರು. ಇಂದು ಒಂದು ಸುತ್ತಿನ ಚರ್ಚೆ ನಡೆದಿದೆ. ನಾಳೆ ಇನ್ನೊಂದು ಸುತ್ತಿನ ಚರ್ಚೆ ನಡೆಯುವ ನಿರೀಕ್ಷೆಯಿದೆ' ಎಂದು ಬಿಸಿಸಿಐ ಮೂಲಗಳು ಸುದ್ದಿಸಂಸ್ಥೆ ಪಿಟಿಐಗೆ ತಿಳಿಸಿವೆ.
ಟೀಂ ಇಂಡಿಯಾದ ಮುಖ್ಯ ಕೋಚ್ ಹುದ್ದೆಗೆ ಗಂಭೀರ್ ಸ್ಪರ್ಧೆಯಲ್ಲಿರುವ ಏಕೈಕ ಅಭ್ಯರ್ಥಿ ಎಂದು ಹೇಳಲಾಗಿದ್ದು, ಅವರ ಹೆಸರನ್ನು ಘೋಷಣೆ ಮಾಡುವುದು ಕೇವಲ ಔಪಚಾರಿಕತೆಯಾಗಿದ್ದು ಅದು ಮುಂದಿನ 48 ಗಂಟೆಗಳಲ್ಲಿ ಸಂಭವಿಸಬಹುದು ಎಂದು ಮೂಲಗಳು ತಿಳಿಸಿವೆ.
ಸಿಎಸಿ ಅಧ್ಯಕ್ಷ ಅಶೋಕ್ ಮಲ್ಹೋತ್ರಾ ಮತ್ತು ಅವರ ಸಹೋದ್ಯೋಗಿಗಳಾದ ಜತಿನ್ ಪರಂಜ್ಪೆ ಮತ್ತು ಸುಲಕ್ಷಣಾ ನಾಯಕ್ ಅವರೊಂದಿಗಿನ ಗಂಭೀರ್ ಸಂವಾದದ ಬಗ್ಗೆ ಸದ್ಯ ವಿವರವಾದ ಮಾಹಿತಿ ಲಭ್ಯವಾಗಿಲ್ಲ.
ಮುಂದಿನ ಮೂರು ವರ್ಷಗಳವರೆಗೆ ಮುಖ್ಯ ಕೋಚ್ ಆಗಿ ಮುಂದುವರಿಯುವ ವಿಚಾರವಾಗಿ ಮಾರ್ಗಸೂಚಿ ಆಧಾರದ ಮೇಲೆ ಈ ಚರ್ಚೆಯು ಕೇಂದ್ರೀಕೃತವಾಗಿದೆ ಎಂದು ನಂಬಲಾಗಿದೆ. ಮುಂಬರುವ ಐಸಿಸಿ ಪಂದ್ಯಾವಳಿಗಳನ್ನು ಗಮನದಲ್ಲಿಟ್ಟುಕೊಂಡು ಗಂಭೀರ್ ಅವರ ಆಯ್ಕೆಗೆ ಬಿಸಿಸಿಐ ಒಲವು ತೋರಿಸಿದೆ ಎನ್ನಲಾಗುತ್ತಿದೆ.
ಗಂಭೀರ್ ಮಾರ್ಗದರ್ಶನದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡ ಎರಡು ವರ್ಷ ಪ್ಲೇಆಫ್ ತಲುಪುವಲ್ಲಿ ಯಶಸ್ವಿಯಾಗಿತ್ತು. ಬಳಿಕ ಐಪಿಎಲ್ 2024ರ ಆವೃತ್ತಿಯಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಮಾರ್ಗದರ್ಶಕರಾಗಿ ಮರಳಿದ 42 ವರ್ಷದ ಗಂಭೀರ್ ಅವರು 10 ವರ್ಷಗಳ ಬಳಿಕ ತಂಡವನ್ನು ಚಾಂಪಿಯನ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಸದ್ಯ ಭಾರತ ತಂಡದ ಕೋಚ್ ರಾಹುಲ್ ದ್ರಾವಿಡ್ ಅವರು ವೆಸ್ಟ್ ಇಂಡೀಸ್ನಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್ 2024 ನಂತರ ಮುಖ್ಯ ಕೋಚ್ ಹುದ್ದೆಯಿಂದ ಕೆಳಗಿಳಿಯಲಿದ್ದಾರೆ.
Advertisement