‘RCB ಯಲ್ಲಿ ಶಿವಂ ದುಬೆ ಕಂಫರ್ಟ್ ಆಗಿರಲಿಲ್ಲ; ಅವರ ಯಶಸ್ಸಿಗೆ ಎಂಎಸ್ ಧೋನಿ ಕಾರಣ: ಎಬಿ ಡಿವಿಲಿಯರ್ಸ್

ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದಲ್ಲಿದ್ದಾಗ ಶಿವಂ ದುಬೆ ಅವರು ಎಂದಿಗೂ ನಿರಾಳವಾಗಿರಲಿಲ್ಲ. ದುಬೆ ಅವರು ಚೆನ್ನೈ ಸೂಪರ್ ಕಿಂಗ್ಸ್‌ ತಂಡಕ್ಕೆ ಸೇರಿದ ಬಳಿಕವೇ ತನ್ನ ನಿಜವಾದ ಸಾಮರ್ಥ್ಯವನ್ನು ಅರಿತುಕೊಂಡರು ಎಂದು ಆರ್‌ಸಿಬಿ ಆಟಗಾರ, ದಕ್ಷಿಣ ಆಫ್ರಿಕಾದ ದಿಗ್ಗಜ ಕ್ರಿಕೆಟಿಗ ಎಬಿ ಡಿವಿಲಿಯರ್ಸ್ ಹೇಳಿದ್ದಾರೆ.
ಶಿವಂ ದುಬೆ
ಶಿವಂ ದುಬೆ
Updated on

ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದಲ್ಲಿದ್ದಾಗ ಶಿವಂ ದುಬೆ ಅವರು ಎಂದಿಗೂ ನಿರಾಳವಾಗಿರಲಿಲ್ಲ. ದುಬೆ ಅವರು ಚೆನ್ನೈ ಸೂಪರ್ ಕಿಂಗ್ಸ್‌ ತಂಡಕ್ಕೆ ಸೇರಿದ ಬಳಿಕವೇ ತನ್ನ ನಿಜವಾದ ಸಾಮರ್ಥ್ಯವನ್ನು ಅರಿತುಕೊಂಡರು ಎಂದು ಆರ್‌ಸಿಬಿ ಆಟಗಾರ, ದಕ್ಷಿಣ ಆಫ್ರಿಕಾದ ದಿಗ್ಗಜ ಕ್ರಿಕೆಟಿಗ ಎಬಿ ಡಿವಿಲಿಯರ್ಸ್ ಹೇಳಿದ್ದಾರೆ.

ದುಬೆ 2019ರಲ್ಲಿ ಆರ್‌ಸಿಬಿಯೊಂದಿಗೆ ತಮ್ಮ ಐಪಿಎಲ್ ವೃತ್ತಿಜೀವನವನ್ನು ಪ್ರಾರಂಭಿಸಿದರು. ವಿರಾಟ್ ಕೊಹ್ಲಿ ನಾಯಕರಾಗಿದ್ದ ತಂಡಕ್ಕಾಗಿ ಎರಡು ಆವೃತ್ತಿಗಳಲ್ಲಿ ಆಡಿದರು. ಆದರೆ, ಒಟ್ಟು 15 ಪಂದ್ಯಗಳಿಂದ ಅವರು 122 ಸ್ಟ್ರೈಕ್ ರೇಟ್‌ನಲ್ಲಿ ಕೇವಲ 169 ರನ್ ಗಳಿಸಿದ್ದರು.

ಬಳಿಕ ಅವರನ್ನು ಐಪಿಎಲ್ 2021ಕ್ಕೂ ಮೊದಲು ಆರ್‌ಸಿಬಿ ಬಿಡುಗಡೆ ಮಾಡಿತು. ನಂತರ ದುಬೆ ಅವರು ರಾಜಸ್ಥಾನ ರಾಯಲ್ಸ್‌ ತಂಡದ ಪಾಲಾದರು. ಆದರೆ, ಯಶಸ್ಸು ಅವರಿಗೆ ಅಲ್ಲೂ ಸಿಗಲಿಲ್ಲ. ಅವರು 9 ಪಂದ್ಯಗಳಲ್ಲಿ 230 ರನ್ ಗಳಿಸಿದರೂ, ಸ್ಟ್ರೈಕ್ ರೇಟ್ 119 ಸಮಸ್ಯೆಯಾಗಿ ಪರಿಣಮಿಸಿತು. ಅವರ ಬೌಲಿಂಗ್ ಕೂಡ ಅಷ್ಟೇನು ಪರಿಣಾಮಕಾರಿಯಾಗಿರಲಿಲ್ಲ. ಮತ್ತೆ ದುಬೆ ಅವರನ್ನು ಆ ತಂಡದಿಂದಲೂ ಕೈಬಿಡಲಾಯಿತು.

ಇದಾದ ಬಳಿಕ ಅವರು ಭಾರತ ತಂಡದಲ್ಲಿಯೂ ಸ್ಥಾನ ಕಳೆದುಕೊಂಡರು. ಪ್ರತಿಭಾವಂತ ಮುಂಬೈ ಕ್ರಿಕೆಟಿಗನಿಗೆ ಯಶಸ್ಸೆಂಬುದು ಕಬ್ಬಿಣದ ಕಡಲೆಯಂತಾದಾಗ ಎಂಎಸ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಅವರನ್ನು 2022ರ ಮೆಗಾ ಹರಾಜಿನಲ್ಲಿ ತಂಡಕ್ಕೆ ಖರೀದಿಸಿತು. ಅಂದಿನಿಂದ ದುಬೆ ಅವರಿಗೆ ಯಶಸ್ಸು ಒಲಿಯಿತು. ಅವರು 156 ಸ್ಟ್ರೈಕ್ ರೇಟ್‌ನಲ್ಲಿ 289 ರನ್ ಗಳಿಸಿದರು.

ಶಿವಂ ದುಬೆ
IPL 2024: ಗುಜರಾತ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ಗೆ 63 ರನ್ ಭರ್ಜರಿ ಜಯ!

ಆರ್‌ಸಿಬಿಯಲ್ಲಿ ದುಬೆ ಅವರೊಂದಿಗೆ ಡ್ರೆಸ್ಸಿಂಗ್ ರೂಮ್ ಹಂಚಿಕೊಂಡಿದ್ದ ಡಿವಿಲಿಯರ್ಸ್, ಆರ್‌ಸಿಬಿ ತಂಡದಲ್ಲಿದ್ದಾಗ ಆಲ್‌ರೌಂಡರ್ ದುಬೆ ಎಂದಿಗೂ ನಿರಾಳರಾಗಿರಲು ಸಾಧ್ಯವೇ ಆಗಲಿಲ್ಲ. ಎಂಎಸ್ ಧೋನಿ ಮತ್ತು ಸ್ಟೀಫನ್ ಫ್ಲೆಮಿಂಗ್ ಅಡಿಯಲ್ಲಿ ಅವರು ಅಂತಿಮವಾಗಿ ಉತ್ತಮ ಫಾರ್ಮ್‌ಗೆ ಬಂದಿದ್ದು, ತಂಡದಲ್ಲಿ ನೆಲೆ ಕಂಡುಕೊಂಡಿದ್ದಾರೆ ಎಂದು ಹೇಳಿದ್ದಾರೆ.

'ಶಿವಂ ದುಬೆ ಅವರನ್ನು ಈ ರೀತಿ ನೋಡುವುದು ಅದ್ಭುತವಾಗಿದೆ. ಅವರು ಆರ್‌ಸಿಬಿ ಚೇಂಜಿಂಗ್ ರೂಮ್‌ನಲ್ಲಿ ನಿಜವಾಗಿಯೂ ಹೀಗಿರಲಿಲ್ಲ. ಅವರು ತುಂಬಾ ನಾಚಿಕೆ ಸ್ವಭಾವದ ವ್ಯಕ್ತಿ, ನಿಜವಾಗಿಯೂ ಕಷ್ಟಪಟ್ಟು ಕೆಲಸ ಮಾಡುತ್ತಿದ್ದರು. ಆದರೂ, ಯಶಸ್ಸು ಕಾಣಲು ಸಾಧ್ಯವಾಗಿರಲಿಲ್ಲ. ಅಲ್ಲಿ ಅವರು ಸ್ವಲ್ಪ ಕಲಿತಿದ್ದರು. ಆದರೆ ಮುಕ್ತವಾಗಿರಲು ಸಾಧ್ಯವಾಗಿರಲಿಲ್ಲ ಎಂದು ನಾನು ಭಾವಿಸುತ್ತೇನೆ. ಇದೀಗ ಅವರು ಸಿಎಸ್‌ಕೆ ತಂಡದಲ್ಲಿ ಮುಕ್ತವಾಗಿದ್ದು, ಎಂಎಸ್ ಧೋನಿ, ರುತುರಾಜ್ ಗಾಯಕ್‌ವಾಡ್, ಸ್ಟೀಫನ್ ಫ್ಲೆಮಿಂಗ್ ಮತ್ತು ಹಿಂದಿನ ಎಲ್ಲಾ ವ್ಯಕ್ತಿಗಳು ಅಲ್ಲಿ ಸ್ಥಾಪಿಸಿದ ಮ್ಯಾಜಿಕ್‌ನ ಪ್ರಭಾವ ಇದಾಗಿದೆ. ಇದು ಪ್ರತಿ ಬಾರಿಯೂ, ಪ್ರತಿ ಆವೃತ್ತಿಯಲ್ಲಿಯೂ, ಹೊಸ ಆಟಗಾರರೊಂದಿಗೆ ಆ ಫ್ರಾಂಚೈಸಿಯ ಕಾರ್ಯವಿಧಾನವಾಗಿದೆ' ಎಂದು ಡಿವಿಲಿಯರ್ಸ್ ಜಿಯೋ ಸಿನಿಮಾದಲ್ಲಿ ಹೇಳಿದ್ದಾರೆ.

ದುಬೆ ಕಳೆದ ವರ್ಷದ ಆವೃತ್ತಿಯಲ್ಲಿ 35 ಸಿಕ್ಸರ್‌ಗಳನ್ನು ಬಾರಿಸಿದ್ದರು. ಅವರು ಸ್ಪಿನ್ನರ್‌ಗಳ ವಿರುದ್ಧ ಅತ್ಯುತ್ತಮ ಪ್ರದರ್ಶನ ನೀಡಿದರು. ಆದರೆ, ಶಾರ್ಟ್ ಬಾಲ್‌ಗಳನ್ನು ಎದುರಿಸುವಲ್ಲಿ ಸಮಸ್ಯೆ ಹಾಗೆಯೇ ಉಳಿದಿತ್ತು. ಬಳಿಕ ಅವರು ಆ ನಿಟ್ಟಿನಲ್ಲಿ ಪರಿಶ್ರಮ ಪಟ್ಟರು ಮತ್ತು ಅತ್ಯುತ್ತಮ ಫಾರ್ಮ್‌ನಲ್ಲಿ ಮರಳಿದರು. ಇದು ಅವರಿಗೆ ಭಾರತದ ಟಿ20I ತಂಡದಲ್ಲಿ ಮತ್ತೆ ಸ್ಥಾನ ಸಿಗುವಂತೆ ಮಾಡಿತು.

ಶಿವಂ ದುಬೆ
ಭಾರತ ಪರ ಆಡಬೇಕೆಂಬುದು ನನ್ನ ಕನಸಾಗಿತ್ತು- ಶಿವಂ ದುಬೆ 

ಮಂಗಳವಾರ ಗುಜರಾತ್ ಟೈಟಾನ್ಸ್ ವಿರುದ್ಧದ ಸಿಎಸ್‌ಕೆ ಪಂದ್ಯದಲ್ಲಿ ಶಾರ್ಟ್ ಬಾಲ್‌ಗಳ ವಿರುದ್ಧವೂ ದುಬೆ ಅವರು ತಮ್ಮ ಬ್ಯಾಟಿಂಗ್ ಪ್ರದರ್ಶನ ತೋರಿಸಿದರು. ಅವರು 23 ಎಸೆತಗಳಲ್ಲಿ ಐದು ಸಿಕ್ಸರ್‌ಗಳೊಂದಿಗೆ 52 ರನ್ ಗಳಿಸಿದರು. ಗುಜರಾತ್ ಟೈಟಾನ್ಸ್ ತಂಡದ ಆಸ್ಟ್ರೇಲಿಯನ್ ವೇಗಿ ಸ್ಪೆನ್ಸರ್ ಜಾನ್ಸನ್ ಅವರನ್ನು ತರಾಟೆಗೆ ತೆಗೆದುಕೊಂಡರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com