ಮೊಹಮ್ಮದ್ ಸಿರಾಜ್
ಮೊಹಮ್ಮದ್ ಸಿರಾಜ್

IPL 2025: ಸಿರಾಜ್‌ ಬೌಲಿಂಗ್ ಉತ್ತಮವಾಗಿತ್ತು; ಆದರೆ, RCB ಯಿಂದ ಕೈಬಿಟ್ಟಿದ್ದಕ್ಕೆ ಬೇಸರವಿಲ್ಲ ಎಂದ ಕೋಚ್ ಆಂಡಿ ಫ್ಲವರ್

ಆರ್‌ಸಿಬಿ ವಿರುದ್ಧ ನಡೆದ ಪಂದ್ಯದ ನಂತರ ಮಾತನಾಡಿದ ಸಿರಾಜ್, ಆರಂಭದಲ್ಲಿ ಸ್ವಲ್ಪ ಸಮಯದವರೆಗೆ ಭಾವುಕನಾಗಿದ್ದೆ ಎಂದು ಬಹಿರಂಗಪಡಿಸಿದರು. ಮೊಹಮ್ಮದ್ ಸಿರಾಜ್ ಆರ್‌ಸಿಬಿ ತಂಡದಲ್ಲಿ 7 ವರ್ಷ ಇದ್ದರು.
Published on

ಐಪಿಎಲ್ 2025ನೇ ಆವೃತ್ತಿಯ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ವಿರುದ್ಧ ಗುಜರಾತ್ ಟೈಟಾನ್ಸ್ (ಜಿಟಿ) 8 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದ್ದು, ಜಿಟಿ ಪರ ಉತ್ತಮ ಪ್ರದರ್ಶನ ನೀಡಿದ ಮೊಹಮ್ಮದ್ ಸಿರಾಜ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದಿದ್ದಾರೆ. ಕಳೆದ ಆವೃತ್ತಿಯಲ್ಲಿ ಸಿರಾಜ್ ಆರ್‌ಸಿಬಿ ಪರ ಆಡಿದ್ದರು. ಆದರೆ, ಮೆಗಾ ಹರಾಜಿಗೂ ಮುನ್ನ ಅವರನ್ನು ತಂಡದಿಂದ ಕೈಬಿಡಲಾಗಿತ್ತು. ಆರ್‌ಸಿಬಿ ತಂಡದಿಂದ ಬಿಡುಗಡೆಯಾದ ನಂತರ ಹೈದರಾಬಾದ್‌ನ ವೇಗಿ ಎಂ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಮೊದಲ ಬಾರಿಗೆ ಬಂದಿದ್ದು, ಉತ್ತಮ ಪ್ರದರ್ಶನ ನೀಡಿದ್ದಾರೆ.

ಆರ್‌ಸಿಬಿ ತರಬೇತುದಾರ ಆಂಡಿ ಫ್ಲವರ್ ವೇಗಿ ಮೊಹಮ್ಮದ್ ಸಿರಾಜ್ ಅವರನ್ನು ಶ್ಲಾಘಿಸಿದ್ದಾರೆ. ಸಿರಾಜ್ ಅವರ ಲೈನ್ ಮತ್ತು ಲೆಂತ್‌ ಅದ್ಭುತವಾಗಿತ್ತು ಎಂದು ಫ್ಲವರ್ ಮೆಚ್ಚುಗೆ ಸೂಚಿಸಿದ್ದಾರೆ.

ಪಂದ್ಯದ ನಂತರದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಆರ್‌ಸಿಬಿ ಕೋಚ್, ಸಿರಾಜ್ ಅವರನ್ನು ಬಿಡುಗಡೆ ಮಾಡಿದರೂ, ತಂಡವು ಅವರ ಉತ್ತಮ ಪ್ರದರ್ಶನಕ್ಕೆ ಮೆಚ್ಚುಗೆ ಸೂಚಿಸುತ್ತದೆ. ಮೆಗಾ ಹರಾಜಿನಲ್ಲಿ ಆರ್‌ಸಿಬಿ ಉತ್ತಮ ಆಟಗಾರರನ್ನು ಆಯ್ದುಕೊಂಡಿದೆ ಮತ್ತು ಈಗ ಹೊಂದಿರುವ ತಂಡದಿಂದ ಸಂತೋಷವಾಗಿದೆ ಎಂದು ಹೇಳಿದರು.

'ನಾವೆಲ್ಲರೂ ಸಿರಾಜ್ ಅವರನ್ನು ತುಂಬಾ ಮೆಚ್ಚುತ್ತೇವೆ ಮತ್ತು ಅವರು ನಮಗೆ ತುಂಬಾ ಇಷ್ಟ. ನಾವು ಉತ್ತಮ ಹರಾಜನ್ನು ನಡೆಸಿದ್ದೇವೆ ಎಂದು ನಾನು ಭಾವಿಸುತ್ತೇನೆ. ಅವರಿಗೆ (ಸಿರಾಜ್) ಜಗತ್ತಿನಲ್ಲಿ ಎಲ್ಲ ರೀತಿಯ ಯಶಸ್ಸು ಸಿಗಲಿ ಎಂದು ನಾನು ಬಯಸುತ್ತೇನೆ. ನಾವು ಈಗ ಹೊಂದಿರುವ ತಂಡದಿಂದ ನಾವು ಸಂತೋಷವಾಗಿದ್ದೇವೆ' ಎಂದು ಫ್ಲವರ್ ಹೇಳಿದರು.

ಮೊಹಮ್ಮದ್ ಸಿರಾಜ್ ಆರ್‌ಸಿಬಿ ವಿರುದ್ಧ ನಾಲ್ಕು ಓವರ್‌ಗಳಲ್ಲಿ 19 ರನ್ ನೀಡಿ ಪ್ರಮುಖ 3 ವಿಕೆಟ್ ಕಬಳಿಸಿದರು. ಫಿಲ್ ಸಾಲ್ಟ್, ಲಿಯಾಮ್ ಲಿವಿಂಗ್‌ಸ್ಟೋನ್ ಮತ್ತು ದೇವದತ್ ಪಡಿಕ್ಕಲ್ ಅವರ ವಿಕೆಟ್‌ಗಳನ್ನು ಪಡೆಯುವ ಮೂಲಕ ಗುಜರಾತ್ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

ಮೊಹಮ್ಮದ್ ಸಿರಾಜ್
'ನನಗೆ ಬೆಂಬಲ ಕೊಟ್ಟಿದ್ದು ವಿರಾಟ್ ಕೊಹ್ಲಿ...': ಆರ್‌ಸಿಬಿ ವಿರುದ್ಧದ ಪಂದ್ಯಕ್ಕೂ ಮುನ್ನ ಮೊಹಮ್ಮದ್ ಸಿರಾಜ್ ಭಾವುಕ

'ಸಿರಾಜ್ ತುಂಬಾ ಚೆನ್ನಾಗಿ ಬೌಲಿಂಗ್ ಮಾಡಿದರು ಅಲ್ಲವೇ? ಅವರು ಇಲ್ಲಿಗೆ ಬಂದು ಹಾಗೆ ಮಾಡಿದ್ದು ತುಂಬಾ ಚೆನ್ನಾಗಿದೆ. ಹೊಸ ಚೆಂಡಿನೊಂದಿಗೆ ಅವರು ಅತ್ಯುತ್ತಮ ಸ್ಪೆಲ್ ಮಾಡಿದ್ದಾರೆ. ಅವರ ಲೈನ್‌ಗಳು ಬಿಗಿಯಾಗಿದ್ದವು ಮತ್ತು ಲೆಂತ್‌ಗಳು ಉತ್ತಮವಾಗಿದ್ದವು. ಅವರು ಸ್ಟಂಪ್‌ ಗುರಿಯಾಗಿಸಿಕೊಂಡು ಬೌಲ್ ಮಾಡಿದರು' ಎಂದು ಹೇಳಿದರು.

ಪಂದ್ಯದ ನಂತರದ ಮಾತನಾಡಿದ ಸಿರಾಜ್, 'ನಾನು ಆರಂಭದಲ್ಲಿ ಸ್ವಲ್ಪ ಭಾವುಕನಾಗಿದ್ದೆ. ನಾನು 7 ವರ್ಷಗಳ ಕಾಲ ತಂಡದಲ್ಲಿದ್ದೆ. ಹೀಗಾಗಿ, ನಾನು ಸ್ವಲ್ಪ ಭಾವುಕನಾಗಿದ್ದೆ, ನಂತರ ನಾನು ಸರಿಹೋದೆ. ನಾನು ಸ್ಥಿರವಾಗಿ ಆಡುತ್ತಿದ್ದೆ. ಆದರೆ, ವಿರಾಮದ ಸಮಯದಲ್ಲಿ ನನ್ನ ತಪ್ಪುಗಳನ್ನು ಸರಿಪಡಿಸಿಕೊಂಡು ನನ್ನ ಫಿಟ್‌ನೆಸ್‌ ಕುರಿತು ಕೆಲಸ ಮಾಡಿದೆ' ಎಂದು ಸಿರಾಜ್ ಹೇಳಿದರು.

ಮೊಹಮ್ಮದ್ ಸಿರಾಜ್
IPL: ಐಪಿಎಲ್ ಇತಿಹಾಸದಲ್ಲಿ ಪವರ್‌ಪ್ಲೇನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದವರು: ಅಗ್ರಸ್ಥಾನದಲ್ಲಿ ಆರ್‌ಸಿಬಿ ಬೌಲರ್‌

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com