
ಮುಂಬೈ: ಹಾಲಿ ಐಪಿಎಲ್ ಟೂರ್ನಿಯಲ್ಲಿ ಕೆಲ ನಿಯಮಗಳು ಪದೇ ಪದೇ ವಿವಾದಕ್ಕೀಡಾಗುತ್ತಿದ್ದು, ಈ ಹಿಂದೆ LSG ವಿರುದ್ಧದ ಪಂದ್ಯದಲ್ಲಿ ಮುಂಬೈನ ತಿಲಕ್ ವರ್ಮಾ ವಿವಾದಾಸ್ಪದ ರೀತಿಯಲ್ಲಿ ಮೈದಾನ ತೊರೆದಿದ್ದರು. ಇದೀಗ ಅಂತಹುದೇ ಮತ್ತೊಂದು ಘಟನೆ ಪಂಜಾಬ್ ಕಿಂಗ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಪಂದ್ಯದಲ್ಲೂ ನಡೆದಿದೆ.
ಮಂಗಳವಾರ ನಡೆದ ಐಪಿಎಲ್ 2025ರ ಪಂದ್ಯದ ವೇಳೆ, ಪಂಜಾಬ್ ಕಿಂಗ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಪಂದ್ಯದ ವೇಳೆ, ಸಿಎಸ್ಕೆ ಆರಂಭಿಕ ಆಟಗಾರ ಡೆವೊನ್ ಕಾನ್ವೇ ಅವರನ್ನು ನಿವೃತ್ತಿ (Retire Out)ಗೊಳಿಸುವ ನಿರ್ಧಾರ ತೆಗೆದುಕೊಂಡಿತು. 49 ಎಸೆತಗಳಲ್ಲಿ 69 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದ ಕಾನ್ವೇ 18 ನೇ ಓವರ್ನಲ್ಲಿ ತಂಡದ ಕ್ರೀಸ್ ತೊರೆದರು, ಅವರ ಬದಲಿಗೆ ರವೀಂದ್ರ ಜಡೇಜಾ ಅವರು ಕ್ರೀಸ್ ಗೆ ಬಂದರು.
ಪಂದ್ಯ ನಿರ್ಣಾಯರ ಘಟ್ಟದಲ್ಲಿದ್ದ ವೇಳೆ ಚೆನ್ನೈ ತಂಡದ ಈ ನಿರ್ಧಾರ ಅಭಿಮಾನಿಗಳಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿತ್ತು. ಆ ಸಂದರ್ಭದಲ್ಲಿ ಚೆನ್ನೈಗೆ ಗೆಲ್ಲಲು 13 ಎಸೆತಗಳಲ್ಲಿ 49 ರನ್ಗಳು ಬೇಕಾಗಿದ್ದವು. ಈ ಹಂತದಲ್ಲಿ ಚೆನ್ನೈ ಸ್ಫೋಟಕ ಬ್ಯಾಟಿಂಗ್ ಮಾಡುವ ಬ್ಯಾಟರ್ ಬೇಕಾಗಿತ್ತು ಎಂದು ಜಡೇಜಾರನ್ನು ತಂದರೂ ಆ ಪಂದ್ಯದಲ್ಲಿ ಸಿಎಸ್ ಕೆ 18 ರನ್ ಗಳ ಅಂತರದಿಂದ ಸೋಲು ಕಂಡಿತು.
ಅಭಿಮಾನಿಗಳ ಆಕ್ರೋಶ
ಇನ್ನು ಚೆನ್ನೈ ತಂಡದ ಈ ನಿರ್ಧಾರ ಚೆನ್ನೈ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ. 49 ಎಸೆತಗಳಲ್ಲಿ 69 ರನ್ ಗಳಿಸಿ ಅದ್ಧುತ ಬ್ಯಾಟಿಂಗ್ ಮಾಡುತ್ತಿದ್ದ ಕಾನ್ವೆರನ್ನು ಬಿಟ್ಟು ರವೀಂದ್ರ ಜಡೇಜಾರನ್ನು ಕಣಕ್ಕಿಳಿಸಿದ್ದ ತಪ್ಪು. ಕಾನ್ವೆ ಇದ್ದಿದ್ದರೆ ಬಹುಶಃ ಪರಿಸ್ಥಿತಿ ಬೇರೆ ಇರುತ್ತಿತ್ತು ಎಂದು ತಂಡದ ನಿರ್ಧಾರದ ವಿರುದ್ಧ ಅಸಮಾಧಾನ ಹೊರ ಹಾಕುತ್ತಿದ್ದಾರೆ.
CSK ನಾಯಕ ಹೇಳಿದ್ದೇನು?
ಪಂದ್ಯದ ನಂತರ ಪ್ರಶಸ್ತಿ ಸಮಾರಂಭದ ವೇಳೆ ಮಾತನಾಡಿದ ಸಿಎಸ್ ಕೆ ನಾಯಕ ರುತುರಾಜ್ ಗಾಯಕ್ವಾಡ್, 'ಜಡೇಜಾ ಅವರು ಫಿನಿಶಿಂಗ್ ಕೆಲಸವನ್ನು ಉತ್ತಮವಾಗಿ ಮಾಡಬಹುದಿತ್ತು ಎಂದು ಮ್ಯಾನೇಜ್ಮೆಂಟ್ ಭಾವಿಸಿತ್ತು. ಕಾನ್ವೆ ಬ್ಯಾಟಿಂಗ್ ನಲ್ಲಿ ನಮಗೆ ಅನುಮಾನವೇ ಇಲ್ಲ... ಅವರು ಚೆಂಡಿನ ಮೇಲೆ ಹೆಚ್ಚು ಸಮಯ ತೆಗೆದುಕೊಳ್ಳುತ್ತಾರೆ. ಕ್ರಮಾಂಕದಲ್ಲಿ ತುಂಬಾ ಉಪಯುಕ್ತರು, ಆದರೆ ಖಂಡಿತವಾಗಿಯೂ, ಜಡ್ಡು (ಜಡೇಜಾ) ಇದ್ದಾಗ, ಅವರ ಪಾತ್ರ ಸಂಪೂರ್ಣವಾಗಿ ವಿಭಿನ್ನವಾಗಿರುತ್ತದೆ ಮತ್ತು ಅವರು ವಿಶೇಷವಾಗಿ ಆ ಪಾತ್ರಕ್ಕೆ ಹೆಸರುವಾಸಿಯಾಗಿದ್ದಾರೆ. ಆದ್ದರಿಂದ ಬ್ಯಾಟ್ಸ್ಮನ್ ಕಷ್ಟಪಡುತ್ತಿದ್ದಾರೆಂದು ನಿಮಗೆ ತಿಳಿದಾಗ ಆ ಬದಲಾವಣೆ ಸಂಭವಿಸುತ್ತದೆ. ನಾವು ಕೂಡ ಈ ನಿರ್ಧಾರಕ್ಕೂ ಮುನ್ನ ತುಂಬಾ ಕಾದೆವು. ಆದರೆ ನಿರೀಕ್ಷಿತ ಫಲಿತಾಂಶ ಬಾರದ ಕಾರಣ ಅನಿವಾರ್ಯವಾಗಿ ಈ ಕಠಿಣ ನಿರ್ಧಾರ ತೆಗೆದುಕೊಳ್ಳಬೇಕಾಯಿತು ಎಂದು ಹೇಳಿದರು.
2ನೇ ನಿದರ್ಶನ
ಇನ್ನು ಈ ರಿಟೈರ್ ಔಟ್ ಹಾಲಿ ಟೂರ್ನಿಯಲ್ಲಿ ಇದೇ ಮೊದಲೇನಲ್ಲ.. ಈ ಹಿಂದೆ LSG ವಿರುದ್ಧದ ಪಂದ್ಯದಲ್ಲಿ ಮುಂಬೈನ ತಿಲಕ್ ವರ್ಮಾ ಇದೇ ರೀತಿಯ ಮೈದಾನ ತೊರೆದಿದ್ದರು. ಅಂದಿನ ಪಂದ್ಯದಲ್ಲಿ ಮುಂಬೈ ತಂಡ ನಿರ್ಣಾಯಕ ಘಟ್ಟದಲ್ಲಿರುವಾಗ 23 ಎಸೆತಗಳಲ್ಲಿ 25 ರನ್ ಗಳಿಸಿದ್ದರು. ಈ ವೇಳೆ ಮುಂಬೈ ಇಂಡಿಯನ್ಸ್ ತಂಡ 19 ಓವರ್ ನಲ್ಲಿ 5 ವಿಕೆಟ್ ನಷ್ಟಕ್ಕೆ 182 ರನ್ ಕಲೆಹಾಕಿತ್ತು.
ಗೆಲ್ಲಲು 6 ಎಸೆತಗಳಲ್ಲಿ 22 ರನ್ ಬೇಕಿತ್ತು. ಆಗ ತಿಲಕ್ ವರ್ಮಾರನ್ನು ಮುಂಬೈ ತಂಡ ರಿಟೈರ್ ಔಟ್ ಮಾಡಿ ವಾಪಸ್ ಕರೆಸಿಕೊಂಡಿತ್ತು. ಅಂದಿನ ಪಂದ್ಯವನ್ನೂ ಕೂಡ ಮುಂಬೈ ತಂಡ 12 ರನ್ ಗಳ ಅಂತರದದಲ್ಲಿ ಸೋತಿತ್ತು. ಮುಂಬೈ ಬಳಸಿದ ಅದೇ ತಂತ್ರಗಾರಿಕೆಯನ್ನು ಬಳಸಿ ಚೆನ್ನೈ ಸೂಪರ್ ಕಿಂಗ್ಸ್ ಕೂಡ ಈಗ ಕೈ ಸುಟ್ಟುಕೊಂಡಿದೆ.
ಐಪಿಎಲ್ ಇತಿಹಾಸದ 5ನೇ ಆಟಗಾರ
ಇನ್ನು ಪಂದ್ಯ ನಡೆಯುತ್ತಿರುವಾಗಲೇ ಮೈದಾನ ತೊರೆದ ತಿಲಕ್ ವರ್ಮಾ ಐಪಿಎಲ್ ಇತಿಹಾಸದಲ್ಲಿ ಅಪರೂಪದ ದಾಖಲೆಗೆ ಪಾತ್ರರಾದರು. ಪಂದ್ಯದ ನಡುವೆ ಮೈದಾನ ತೊರೆಯುವ ಮೂಲಕ ಈ ರೀತಿ ಮೈದಾನ ತೊರೆದ 4ನೇ ಆಟಗಾರ ಎಂಬ ದಾಖಲೆ ಬರೆದರು. ಈ ಹಿಂದೆ 2022ರಲ್ಲಿ ವಾಂಖೆಡೆ ಕ್ರೀಡಾಂಗಣದಲ್ಲಿ ಇದೇ ಎಲ್ ಎಸ್ ಜಿ ತಂಡದ ವಿರುದ್ಧ ಆರ್ ಅಶ್ವಿನ್ ಮೈದಾನ ತೊರೆದಿದ್ದರು.
ಬಳಿಕ 2023ರ ಆವೃತ್ತಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ವಿರುದ್ಧ ಅಥರ್ವಾ ಟೈದ್ ಕೂಡ ಮೈದಾನ ತೊರೆದಿದ್ದರು. ಇದೇ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಸಾಯಿ ಸುದರ್ಶನ್ ಕೂಡ ಮೈದಾನ ತೊರೆದಿದ್ದರು. ಇದೀಗ ಈ ಪಟ್ಟಿಗೆ ತಿಲಕ್ ವರ್ಮಾ ಕೂಡ ಸೇರಿದ್ದಾರೆ.
Retired out in the IPL
R Ashwin vs LSG, Wankhede, 2022
Atharva Taide vs DC, Dharamshala, 2023
Sai Sudharsan vs MI, Ahmedabad, 2023
Tilak Varma vs LSG, Lucknow, 2025*
Devon Conway vs PBKS, Chandigarh, 2025*
Advertisement