
ಬೆಂಗಳೂರು: ಐಪಿಎಲ್ ಟೂರ್ನಿಯ ಇಂದಿನ ಪಂದ್ಯದಲ್ಲಿ ಬೆಂಗಳೂರು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ತಂಡ 6 ವಿಕೆಟ್ ಗಳ ಭರ್ಜರಿ ಜಯ ದಾಖಲಿಸಿದೆ.
ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಆರ್ ಸಿಬಿ ನೀಡಿದ 164 ರನ್ ಗಳ ಗುರಿಯನ್ನು ಡೆಲ್ಲಿ ತಂಡ ಕೇವಲ 17.5 ಓವರ್ ನಲ್ಲಿ 4 ವಿಕೆಟ್ ಕಳೆದುಕೊಂಡು 169 ರನ್ ಗಳಿಸಿ 6 ವಿಕೆಟ್ ಅಂತರದಲ್ಲಿ ಜಯ ದಾಖಲಿಸಿತು.
ಡೆಲ್ಲಿ ಪರ ಕನ್ನಡಿಗ ಕೆಎಲ್ ರಾಹುಲ್ ಭರ್ಜರಿ ಬ್ಯಾಟಿಂಗ್ ನಡೆಸಿ ಅಜೇಯ 93 ರನ್ ಗಳಿಸಿದರೆ, ಅವರಿಗೆ ಉತ್ತಮ ಸಾಥ್ ನೀಡಿದ ಸ್ಟಬ್ಸ್ ಅಜೇಯ 38 ರನ್ ಗಳಿಸಿದರು.
ರಾಹುಲ್ ಕ್ಯಾಚ್ ಕೈಚೆಲ್ಲಿ ಪಂದ್ಯ ಸೋತ ಆರ್ಸಿಬಿ
ಇನ್ನು ಈ ಪಂದ್ಯದಲ್ಲಿ ಆರ್ ಸಿಬಿ ಕಡಿಮೆ ಮೊತ್ತದ ಹೊರತಾಗಿಯೂ ಬೌಲಿಂಗ್ ನಲ್ಲಿ ಉತ್ತಮ ಪ್ರದರ್ಶನ ನೀಡಿತ್ತು. 58 ರನ್ ಗಳಿಗೇ ಡೆಲ್ಲಿ ತಂಡದ 4 ವಿಕೆಟ್ ಗಳನ್ನು ಪಡೆದು ಉತ್ತಮ ಲಯದಲ್ಲಿತ್ತು. ಆದರೆ ಡೆಲ್ಲಿ ಪರ ಕೆಎಲ್ ರಾಹುಲ್ ಅಮೋಘ ಪ್ರದರ್ಶನ ನೀಡಿ ಪಂದ್ಯವನ್ನು ಆರ್ ಸಿಬಿ ಕೈಯಿಂದ ಕಸಿದರು.
ಕೆಎಲ್ ರಾಹುಲ್ ಕೇವಲ 53 ಎಸೆತಗಳಲ್ಲಿ 6 ಸಿಕ್ಸರ್ ಮತ್ತು 7 ಬೌಂಡರಿಗಳ ನೆರವಿನಿಂದ ಅಜೇಯ 93 ರನ್ ಗಳಿಸಿದರು.
ಡೆಲ್ಲಿ ಇನ್ನಿಂಗ್ಸ್ ವೇಳೆ 4ನೇ ಓವರ್ ನಲ್ಲಿ ಕೆಎಲ್ ರಾಹುಲ್ ದೊಡ್ಡ ಹೊಡೆತಕ್ಕೆ ಕೈ ಹಾಕಿದ್ದರು. ಯಶ್ ದಯಾಳ್ ಎಸೆದ ಆ ಓವರ್ ನ 2ನೇ ಎಸೆತದಲ್ಲಿ ಕೆಎಲ್ ರಾಹುಲ್ ಎಕ್ಸ್ಟ್ರಾ ಕವರ್ ನತ್ತ ಗಾಳಿಯಲ್ಲಿ ಭಾರಿಸಿದ್ದರು. ಈ ವೇಳೆ ಕವರ್ ನಲ್ಲಿದ್ದ ಆರ್ ಸಿಬಿ ನಾಯಕ ರಜತ್ ಪಾಟಿದಾರ್ ಓಡಿ ಕ್ಯಾಚ್ ಪಡೆಯುವ ಪ್ರಯತ್ನ ಪಟ್ಟರಾದರೂ ಅದು ಸಾಧ್ಯವಾಗಲಿಲ್ಲ. ಹೀಗಾಗಿ ರಾಹುಲ್ ಗೆ ಇಲ್ಲಿ ಜೀವದಾನ ದೊರೆಯಿತು.
ತವರು ಮೈದಾನದಲ್ಲಿ ಪಂದ್ಯ ಶ್ರೇಷ್ಠ ಪ್ರಶಸ್ತಿ
ಇನ್ನು ಇಂದಿನ ಅಮೋಘ ಬ್ಯಾಟಿಂಗ್ ಮೂಲಕ ಡೆಲ್ಲಿ ತಂಡಕ್ಕೆ ಗೆಲುವು ತಂದುಕೊಟ್ಟ ಕೆಎಲ್ ರಾಹುಲ್ ಅರ್ಹವಾಗಿಯೇ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಉಳಿದಂತೆ ಆರ್ ಸಿಬಿ ಪರ ಭುವಿ 2 ವಿಕೆಟ್ ಪಡೆದರೆ, ಯಶ್ ದಯಾಳ್ ಮತ್ತು ಸುಯಾಶ್ ಶರ್ಮಾ ತಲಾ 1 ವಿಕೆಟ್ ಪಡೆದರು.
Advertisement