
ಹೈದರಾಬಾದ್: ಐಪಿಎಲ್ ಟೂರ್ನಿಯಲ್ಲಿ ಮತ್ತೊಂದು ದಾಖಲೆಯ ಚೇಸಿಂಗ್ ನಡೆದಿದ್ದು, ಪಂಜಾಬ್ ವಿರುದ್ಧ ಸನ್ ರೈಸರ್ಸ್ ಹೈದರಾಬಾದ್ ತಂಡ ಬೃಹತ್ ಮೊತ್ತವನ್ನು ಯಶಸ್ವಿಯಾಗಿ ಗುರಿ ಮುಟ್ಟಿ ದಾಖಲೆ ಬರೆದಿದೆ.
ನಿನ್ನೆ ಹೈದರಾಬಾದ್ ನ ರಾಜೀವ್ ಗಾಂಧಿ ಕ್ರಿಕೆಟ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ನೀಡಿದ 246 ರನ್ ಗಳ ಬೃಹತ್ ಗುರಿಯನ್ನು ಬೆನ್ನು ಹತ್ತಿದ ಸನ್ ರೈಸರ್ಸ್ ಹೈದರಾಬಾದ್ ತಂಡ 18.3 ಓವರ್ ನಲ್ಲಿ ಕೇವಲ 2 ವಿಕೆಟ್ ಕಳೆದುಕೊಂಡು 247 ರನ್ ಗಳಿಸಿ ಗುರಿ ಮುಟ್ಟಿತು. ಈ ಪಂದ್ಯದಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನದ ಹೊರತಾಗಿಯೂ ಪಂಜಾಬ್ ತಂಡ ನಿರಾಶೆ ಅನುಭವಿಸಿತು.
ಈ ಕಠಿಣ ಗುರಿಯನ್ನು ಬೆನ್ನತ್ತಿದ ಸನ್ರೈಸರ್ಸ್ ಹೈದರಾಬಾದ್ ತಂಡದ ಪರ ಟ್ರಾವಿಸ್ ಹೆಡ್ (66) ಹಾಗೂ ಅಭಿಷೇಕ್ ಶರ್ಮಾ (141) ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಿದರು. ಪರಿಣಾಮ 18.3 ಓವರ್ಗಳಲ್ಲಿ 2 ವಿಕೆಟ್ ಕಳೆದುಕೊಂಡು ಸನ್ರೈಸರ್ಸ್ ಹೈದರಾಬಾದ್ ತಂಡವು 247 ರನ್ ಬಾರಿಸಿ 8 ವಿಕೆಟ್ಗಳ ವಿಜಯ ಸಾಧಿಸಿತು.
ಇದನ್ನೂ ಚೇಸ್ ಮಾಡ್ತಾರೆ ಅನ್ಕೊಂಡಿರ್ಲಿಲ್ಲಾ
ಇನ್ನು ಪಂದ್ಯ ಮುಕ್ತಾಯದ ಬಳಿಕ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಮಾತನಾಡಿದ ಪಂಜಾಬ್ ತಂಡದ ನಾಯಕ ಸನ್ ರೈಸರ್ಸ್ ಹೈದರಾಬಾದ್ ತಂಡದ ಬ್ಯಾಟಿಂಗ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. 'ನಿಜವಾಗಿಯೂ ಹೇಳಬೇಕೆಂದರೆ, ಇದು ಅತ್ಯುತ್ತಮ ಮೊತ್ತವಾಗಿತ್ತು. ಆದರೆ ಸನ್ರೈಸರ್ಸ್ ಹೈದರಾಬಾದ್ ತಂಡವು 2 ಓವರ್ಗಳು ಬಾಕಿ ಇರುವಾಗಲೇ ಚೇಸ್ ಮಾಡಿರುವುದು ನೋಡಿದ್ರೆ ನಿಜಕ್ಕೂ ನನಗೆ ನಗು ಬರುತ್ತಿದೆ ಎಂದರು.
ನಾವು ಬೃಹತ್ ಮೊತ್ತ ಪೇರಿಸಿದಾಗ, 230 ರನ್ಗಳು ಉತ್ತಮ ಟಾರ್ಗೆಟ್ ಎಂದು ಭಾವಿಸಿದ್ದೆವು. ಆದರೆ ಸನ್ರೈಸರ್ಸ್ ಹೈದರಾಬಾದ್ ಆರಂಭಿಕರು ಬ್ಯಾಟಿಂಗ್ ಮಾಡಿದ ರೀತಿ ಅದ್ಭುತವಾಗಿತ್ತು. ಅದರಲ್ಲೂ ಅಭಿಷೇಕ್ ಶರ್ಮಾ ಇನಿಂಗ್ಸ್ ನಾನು ನೋಡಿದ ಅತ್ಯುತ್ತಮ ಇನ್ನಿಂಗ್ಸ್ಗಳಲ್ಲಿ ಒಂದಾಗಿದೆ ಎಂದರು.
ಅಭಿಷೇಕ್ ಶರ್ಮಾ ಬಗ್ಗೆ ಮೆಚ್ಚುಗೆ
ಅಂತೆಯೇ ಶತಕ ವೀರ ಅಭಿಷೇಕ್ ಶರ್ಮಾ ಬಗ್ಗೆ ಮಾತನಾಡಿದ ಅಯ್ಯರ್, 'ಒಂದು ವೇಳೆ ನಾವು ಕೆಲ ಕ್ಯಾಚ್ಗಳನ್ನು ಹಿಡಿದಿದ್ದರೆ ಪಂದ್ಯದಲ್ಲಿ ಕಂಬ್ಯಾಕ್ ಮಾಡಬಹುದಿತ್ತು. ಆದರೆ ಅಭಿಷೇಕ್ ಶರ್ಮಾ ಅದೃಷ್ಟವಂತ. ಹೀಗೆ ಸಿಕ್ಕ ಜೀವದಾನಗಳನ್ನು ಬಳಸಿಕೊಂಡ ಅಭಿಷೇಕ್ ಅತ್ಯುತ್ತಮ ಇನಿಂಗ್ಸ್ ಆಡಿದರು. ಅಭಿಷೇಕ್ ಮತ್ತು ಹೆಡ್ ನಡುವಿನ ಆರಂಭಿಕ ಪಾಲುದಾರಿಕೆ ಅದ್ಭುತವಾಗಿತ್ತು ಎಂದರು.
ಸಾಕಷ್ಟು ತಪ್ಪುಗಳಿವೆ
ನಾವು ನಿರೀಕ್ಷೆಗಳಿಗೆ ತಕ್ಕಂತೆ ಬೌಲಿಂಗ್ ಮಾಡಲಿಲ್ಲ ಎಂಬುದೇ ಸತ್ಯ. ನಾವು ಡ್ರಾಯಿಂಗ್ ಬೋರ್ಡ್ಗೆ ಹೋಗಿ ತಪ್ಪುಗಳನ್ನು ಸರಿಪಡಿಸಿಕೊಳ್ಳಬೇಕಾಗಿತ್ತು. ಸನ್ರೈಸರ್ಸ್ ಹೈದರಾಬಾದ್ ಓಪನರ್ಗಳು ನಮಗೆ ಹೆಚ್ಚಿನ ಅವಕಾಶವನ್ನೇ ನೀಡಲಿಲ್ಲ. ಇದರ ನಡುವೆ ಲಾಕಿ ಫರ್ಗುಸನ್ ಗಾಯಗೊಂಡು ಹೊರನಡೆದಿದ್ದು ಕೂಡ ನಮ್ಮ ಪಾಲಿಗೆ ಮುಳುವಾಯಿತು. ಒಂದು ವೇಳೆ ಅವರಿದ್ದಿದ್ದರೆ ಒಂದೆರಡು ವಿಕೆಟ್ಗಳು ಲಭಿಸುತ್ತಿದ್ದವು. ಇದೀಗ ನಾವು ಸೋತಿದ್ದೇವೆ. ಈ ಸೋಲಿನೊಂದಿಗೆ ಪಾಠ ಕಲಿತಿದ್ದೇವೆ. ಹೀಗಾಗಿ ಮುಂದಿನ ಪಂದ್ಯದಲ್ಲಿ ಕಂಬ್ಯಾಕ್ ಮಾಡುವ ವಿಶ್ವಾಸವಿದೆ ಎಂದು ಶ್ರೇಯಸ್ ಅಯ್ಯರ್ ಹೇಳಿದ್ದಾರೆ.
Advertisement