
ಬೆಂಗಳೂರು: ನಗರದ ಎಂ. ಚಿನ್ನಸ್ವಾಮಿ ಕ್ರೀಡಾಂಗಣ ಈ ಹಿಂದೆ ಬ್ಯಾಟಿಂಗ್ ಪಿಚ್ ನಿಂದ ಹೆಸರಾಗಿತ್ತು. ಆದರೆ ಈಗ ಆಗಿಲ್ಲ ಎಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವೇಗಿ ಭುವನೇಶ್ವರ್ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ.
ನಾಳೆ ನಡೆಯಲಿರುವ ಪಂಜಾಬ್ ಕಿಂಗ್ಸ್ ವಿರುದ್ಧದ ಐಪಿಎಲ್ ಕಾದಾಟದ ಹಿನ್ನೆಲೆಯಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಬಾರಿ ಬೆಂಗಳೂರು ಪಿಚ್ ನಲ್ಲಿ ಸ್ಥಿರತೆ ಇದ್ದಂತಿಲ್ಲ. ತವರು ಮೈದಾನವಾದರೂ ಆರ್ ಸಿಬಿ ಕೂಡಾ ತಲೆ ಕೆಡಿಸಿಕೊಳ್ಳುವಂತಾಗಿದೆ ಎಂದರು.
"ಎಂದಿನಂತೆ ತಯಾರಿ ನಡೆದಿದೆ. ಯಾವುದೇ ವ್ಯತ್ಯಾಸವಿಲ್ಲ. ಇತರ ಬೇರೆ ಯಾವುದೇ ಕ್ರೀಡಾಂಗಣದಲ್ಲಿ ಎದುರಾಳಿಗಳಿಗೆ ಏನು ಮಾಡುತ್ತೇವೊ ಅದೇ ರೀತಿಯಲ್ಲಿ ಸಿದ್ಧತೆ ನಡೆದಿದೆ. ಚಿನ್ನಸ್ವಾಮಿ ಕ್ರೀಡಾಂಗಣ ಬ್ಯಾಟಿಂಗ್ ಪಿಚ್ ಗೆ ಹೆಸರುವಾಸಿ ಎಂಬುದು ಗೊತ್ತಿದೆ. ಆದರೆ ಈಗ ನೋಡಿದರೆ ಅದು ಹಿಂದಿನಂತೆ ಇಲ್ಲ ಅನಿಸುತ್ತದೆ. ಕಾರಣ ನನಗೆ ಗೊತ್ತಿಲ್ಲ ಎಂದು ಹೇಳಿದರು.
ನಾವು ಮೊದಲು ಬ್ಯಾಟಿಂಗ್ ಅಥವಾ ಬೌಲಿಂಗ್ ಮಾಡಿದ್ರೆ, ಮೊದಲಿನ ಕೆಲವು ಓವರ್ ಗಳನ್ನು ನೋಡಬೇಕಾಗುತ್ತದೆ. ನಂತರ ವಿಕೆಟ್ ಹೇಗೆ ಬೀಳಿಸಬಹುದು ಅಥವಾ ಕಾಪಾಡಿಕೊಳ್ಳಬಹುದು ಎಂದು ತಿಳಿಯಲಿದೆ. ನಂತರ ಹೇಗೆ ಆಡಬೇಕು ಎಂಬುದನ್ನು ನಿರ್ಧರಿಸುತ್ತೇವೆ ಎಂದರು.
ಆರ್ ಸಿಬಿ ಆಡಿರುವ ಆರು ಪಂದ್ಯಗಳಲ್ಲಿ ನಾಲ್ಕರಲ್ಲಿ ಗೆದ್ದಿದ್ದು, ಎರಡರಲ್ಲಿ ಸೋತಿದೆ. ಅದರಲ್ಲೂ ಗುಜರಾತ್ ಟೈಟನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ತವರಿನಲ್ಲಿ ಸೋಲು ಆರ್ ಸಿಬಿಗೆ ಒಂದು ರೀತಿಯ ಮುಖಭಂಗವಾಗಿದೆ. ಎರಡು ಪಂದ್ಯಗಳಲ್ಲಿಯೂ ಮೊದಲ ಇನ್ನಿಂಗ್ಸ್ ಸ್ಕೋರ್ 170 ರನ್ ಗಳಿಗಿಂತ ಕಡಿಮೆ ಇತ್ತು. ಎದುರಾಳಿ ತಂಡಗಳ ಬೌಲರ್ ಗಳು ಆರ್ ಸಿಬಿ ವಿರುದ್ಧ ಉತ್ತಮವಾದ ದಾಳಿ ನಡೆಸಿದರು. ಆದರೂ ಹೇಜಲ್ ವುಡ್ ಆರು ಪಂದ್ಯಗಳಲ್ಲಿ 9 ವಿಕೆಟ್ ಪಡೆದುಕೊಂಡಿದ್ದಾರೆ.
ಹೇಜಲ್ ವುಡ್ ಮತ್ತು ನಾನು ಇಬ್ಬರೂ ಹೊಸ ಚೆಂಡಿನಲ್ಲಿ ಬೌಲ್ ಮಾಡಿದ್ದೇವೆ. ಇದರಿಂದ ಸಾಕಷ್ಟು ನಮಗೆ ತಿಳಿದಿದೆ. ಆದರೆ ಇದು ಪಂದ್ಯದಿಂದ ಪಂದ್ಯಕ್ಕೆ ಬದಲಾಗುತ್ತಲೇ ಇರುತ್ತದೆ. ಇದು ಮೊದಲ ಓವರ್ ಗಳಲ್ಲಿ ನಾವು ಹೇಗೆ ಬೌಲ್ ಮಾಡುತ್ತೇವೆ , ತಂಡ ಹೇಗೆ ಬ್ಯಾಟಿಂಗ್ ಮಾಡುತ್ತಿದೆ ಎಂಬುದನ್ನು ಅವಲಂಬಿಸಿರುತ್ತದೆ ಎಂದು ಭುವನೇಶ್ವರ್, ಹೇಜಲ್ ವುಡ್ ತುಂಬಾ ಒಳ್ಳೆಯವರು. ಅವರು ಶಾಂತತೆ ಮನೋಭಾವ ಉತ್ತಮ ವಿಷಯ. ಅದು ನಮಗೆ ಅಗತ್ಯವಾಗಿದೆ. ಪಂದ್ಯವನ್ನು ಸೋತಾಗ ಗಾಬರಿಯಾಗುವುದು ಸುಲಭ. ಆದರೆ ಅವರು ಹಾಗೆ ಮಾಡಲಿಲ್ಲ. ನಾವು ಎರಡು ಪಂದ್ಯಗಳನ್ನು ಸೋತಿದ್ದೇವೆ, ಆದರೂ ನಾವು ಗೆದ್ದರೂ ಸೋತರೂ ಹೇಜಲ್ ವುಡ್ ಒಂದೇ ತರಹ ಇರುತ್ತಾರೆ ಎಂದು ಹೊಗಳಿದರು.
Advertisement