
ಚಂಡೀಗಢ: ಐಪಿಎಲ್ ಟೂರ್ನಿಯ ಇಂದಿನ ಮಹತ್ವದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪಂಜಾಬ್ ಕಿಂಗ್ಸ್ ವಿರುದ್ಧ 7 ವಿಕೆಟ್ ಅಂತರದ ಭರ್ಜರಿ ಜಯ ದಾಖಲಿಸಿದ್ದು, ಈ ಪಂದ್ಯದಲ್ಲಿ ಪಂಜಾಬ್ ನಾಯಕ ಶ್ರೇಯಸ್ ಅಯ್ಯರ್ ರನ್ನು ವಿರಾಟ್ ಕೊಹ್ಲಿ ಮೈದಾನದಲ್ಲೇ ಚೇಡಿಸಿದ ಘಟನೆ ನಡೆದಿದೆ.
ಚಂಡೀಗಢದ ಮುಲ್ಲನ್ಪುರ್ ನಲ್ಲಿರುವ ಮಹಾರಾಜ ಯಾದವೀಂದ್ರ ಸಿಂಗ್ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಈ ಪಂದ್ಯ ನಡೆದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ನೀಡಿದ್ದ 158 ರನ್ ಗುರಿಯನ್ನು ಬೆನ್ನು ಹತ್ತಿದ ಆರ್ ಸಿಬಿ ತಂಡ 18.5 ಓವರ್ ನಲ್ಲೇ ಕೇವಲ 3 ವಿಕೆಟ್ ಕಳೆದುಕೊಂಡು 159 ರನ್ ಗಳಿಸಿ ಜಯಭೇರಿ ಭಾರಿಸಿತು. ಆರ್ ಸಿಬಿ ಪರ ವಿರಾಟ್ ಕೊಹ್ಲಿ ಭರ್ಜರಿ ಬ್ಯಾಟಿಂಗ್ ಮಾಡಿದರು.
ವಿರಾಟ್ ಕೊಹ್ಲಿ 54 ಎಸೆತಗಳಲ್ಲಿ 1 ಸಿಕ್ಸರ್ ಮತ್ತು 7 ಬೌಂಡರಿಗಳ ನೆರವಿನಿಂದ ಅಜೇಯ 73 ರನ್ ಗಳಿಸಿದರು. ಕೊಹ್ಲಿ ಉತ್ತಮ ಸಾಥ್ ನೀಡಿದ ದೇವದತ್ ಪಡಿಕ್ಕಲ್ 35 ಎಸೆತಗಳಲ್ಲಿ 4 ಸಿಕ್ಸರ್ ಮತ್ತು 5 ಬೌಂಡರಿಗಳ ನೆರವಿನಿಂದ 61 ರನ್ ಕಲೆಹಾಕಿದರು. ಬಳಿಕ ಕ್ರೀಸ್ ಗೆ ಬಂದ ನಾಯಕ ರಜತ್ ಪಟಿದಾರ್ 12 ರನ್ ಗಳಿಸಿದ್ದ ವೇಳೆ ಚಹಲ್ ಬೌಲಿಂಗ್ ನಲ್ಲಿ ದೊಡ್ಡ ಹೊಡೆತಕ್ಕೆ ಕೈಹಾಕಿ ವಿಕೆಟ್ ಕೈಚೆಲ್ಲಿದರು. ನಂತರ ಜಿತೇಶ್ ಶರ್ಮಾ ವಿರಾಟ್ ಕೊಹ್ಲಿ ಜೊತೆಗೂಡಿ ಅಜೇಯ 11 ರನ್ ಗಳಿಸಿ ಗೆಲುವಿನ ಔಪಚಾರಿಕತೆ ಮುಗಿಸಿದರು.
ಮೈದಾನದಲ್ಲೇ Shreyas Iyer ಸಿನಿಮಾ ತೋರಿಸಿದ Virat Kohli
ಇನ್ನು ಈ ಪಂದ್ಯದಲ್ಲಿ ಜಿತೇಶ್ ಶರ್ಮಾ ವಿನ್ನಿಂಗ್ ಶಾಟ್ ಭಾರಿಸುತ್ತಲೇ ಮೈದಾನದಲ್ಲೇ ವಿರಾಟ್ ಕೊಹ್ಲಿ ಪಂಜಾಬ್ ಕಿಂಗ್ಸ್ ನಾಯಕ ಶ್ರೇಯಸ್ ಅಯ್ಯರ್ ನೋಡುತ್ತಾ ಅಗ್ರೆಸ್ಸಿವ್ ಆಗಿ ಸಂಭ್ರಮಾಚರಣೆ ಮಾಡಿದರು.
ಕೊಹ್ಲಿ ಅವರ ಸಂಭ್ರಮಾಚರಣೆ ಹೇಗಿತ್ತು ಎಂದರೆ ಈ ಹಿಂದಿನ ಪಂದ್ಯದಲ್ಲಿ ಆರ್ ಸಿಬಿ ವಿರುದ್ಧ ಗೆದ್ದು ಅಭಿಮಾನಿಗಳನ್ನು ವ್ಯಂಗ್ಯ ಮಾಡಿದ್ದ ಶ್ರೇಯಸ್ ಅಯರ್ ಇದೀಗ ಸೋಲನ್ನೂ ಹಾಗೇ ಸ್ವೀಕರಿಸು ಎನ್ನುವ ಧಾಟಿಯಲ್ಲಿ ಸಂಭ್ರಮಿಸಿದರು.
ಬಳಿಕ ಕೊಹ್ಲಿ ಬಳಿ ಹೋದ ಅಯ್ಯರ್ ಅಗ್ರೆಸ್ಸಿವ್ ಸಂಭ್ರಮಾಚರಣೆ ಕುರಿತು ಮಾತನಾಡಿದ್ದು ಈ ವೇಳೆ ಕೊಹ್ಲಿ ಕೂಡ ಕಳೆದ ಪಂದ್ಯದ ಘಟನೆಯನ್ನು ನೆನಪಿಸಿದ್ದಾರೆ ಎನ್ನಲಾಗಿದೆ. ಬಳಿಕ ಉಭಯ ಆಟಗಾರರು ತಬ್ಬಿಕೊಂಡು ಪೆವಿಲಿಯನ್ ನತ್ತ ಹೆಜ್ಜೆ ಹಾಕಿದ್ದಾರೆ.
'ಸೌಂಡೇ ಬರ್ತಿಲ್ಲ': ಆರ್ ಸಿಬಿ ಅಭಿಮಾನಿಗಳ ಕೆಣಕಿದ್ದ Shreyas Iyer
ಇನ್ನು ಈ ಹಿಂದಿನ ಪಂದ್ಯದಲ್ಲಿ ಅಂದರೆ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದಿದ್ದ ಪಂದ್ಯದಲ್ಲಿ ಆರ್ ಸಿಬಿ ತಂಡವನ್ನು ಪಂಜಾಬ್ ಕಿಂಗ್ಸ್ ತಂಡ 5 ವಿಕೆಟ್ ಅಂತರದಲ್ಲಿ ಗೆಲುವು ಸಾಧಿಸಿತ್ತು. ಈ ಪಂದ್ಯದ ಬಳಿಕ ಮೈದಾನಕ್ಕೆ ಬಂದಿದ್ದ ಶ್ರೇಯಸ್ ಅಯ್ಯರ್ ಆರ್ ಸಿಬಿ ಅಭಿಮಾನಿಗಳನ್ನು ಗುರಿಯಾಗಿಸಿಕೊಂಡು 'ಸೌಂಡೇ ಬರ್ತಿಲ್ಲ' ಎನ್ನುವ ಧಾಟಿಯಲ್ಲಿ ಸನ್ಹೆ ಮಾಡಿದ್ದರು. ಇದು ಆರ್ ಸಿಬಿ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿತ್ತು. ಅಲ್ಲದೆ ಶ್ರೇಯಸ್ ಅಯ್ಯರ್ ವಿಡಿಯೋ ವ್ಯಾಪಕ ವೈರಲ್ ಕೂಡ ಆಗಿತ್ತು. ಇದೀಗ ಇದೇ ಸಂಭ್ರಮಕ್ಕೆ ವಿರಾಟ್ ಕೊಹ್ಲಿ ಠಕ್ಕರ್ ನೀಡಿದ್ದಾರೆ.
ಮೊದಲೇ ವಾರ್ನಿಂಗ್ ಮಾಡಿದ್ದ ಕೊಹ್ಲಿ
ಇನ್ನು ತಮ್ಮ ಅಗ್ರೆಸ್ಸಿವ್ ಸಂಭ್ರಮಾಚರಣೆ ಕುರಿತು ಸಂದರ್ಶನವೊಂದರಲ್ಲಿ ಮಾತನಾಡಿದ್ದ ವಿರಾಟ್ ಕೊಹ್ಲಿ, ನನ್ನ ಅಗ್ರೆಸಿವ್ ಸಂಭ್ರಮ ಎಲ್ಲರಿಗೂ ಚರ್ಚೆಯ ವಿಷಯವಾಗಿದೆ. ಆದರೆ ನಾನು ಹೇಳುವುದು ಒಂದೇ.. ನೀವು ಕೊಟ್ಟ ಮೇಲೆ ಅದನ್ನು ವಾಪಸ್ ಪಡೆಯಲು ಸಿದ್ದರಾಗಿರಬೇಕು. ಇಲ್ಲವಾದಲ್ಲಿ ಯಾರಿಗೊ ಕೊಡಲು ಹೋಗಬಾರದು.. ನೀವು ಆಗ್ರೆಸ್ಸಿವ್ ಆದಾಗ ಬೇರೆಯವರೂ ಅಗ್ರೆಸಿವ್ ಆಗುತ್ತಾರೆ. ಅದನ್ನು ಸ್ವೀಕರಿಸಲು ನೀವು ಸಿದ್ದರಿರಬೇಕು ಎನ್ನುವ ಅರ್ಥದಲ್ಲಿ ಹೇಳಿದ್ದರು.
Advertisement