
ಭಾನುವಾರ ನಡೆದ ಐಪಿಎಲ್ 2025ರ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ (MI) ತಂಡ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್ಕೆ) ವಿರುದ್ಧ 9 ವಿಕೆಟ್ಗಳ ಭರ್ಜರಿ ಗೆಲುವು ಸಾಧಿಸಿದೆ. ಆರಂಭದಲ್ಲಿ ಸತತ ಸೋಲುಗಳಿಂದ ಕಂಗೆಟ್ಟಿದ್ದ ಮುಂಬೈ ಇಂಡಿಯನ್ಸ್ ತಂಡ ಗೆಲುವಿನ ಲಯಕ್ಕೆ ಮರಳಿದೆ.
ಟಾಸ್ ಗೆದ್ದ ಮುಂಬೈ ಇಂಡಿಯನ್ಸ್ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ ನಿಗದಿತ 20 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 176 ರನ್ ಗಳಿಸಿತು. ಚೆನ್ನೈ ನೀಡಿದ 177 ರನ್ಗಳ ಗುರಿಯನ್ನು ಬೆನ್ನಟ್ಟಿದ ಮುಂಬೈ ಇಂಡಿಯನ್ಸ್ ತಂಡ ಉತ್ತಮ ಆರಂಭ ಪಡೆಯಿತು. ರೋಹಿತ್ ಶರ್ಮಾ ಅವರು 45 ಎಸೆತಗಳಲ್ಲಿ 4 ಬೌಂಡರಿ 6 ಸಿಕ್ಸರ್ ಸಹಿತ ಅಜೇಯ 76 ರನ್ ಗಳಿಸಿದರು. ಸೂರ್ಯಕುಮಾರ್ ಯಾದವ್ 30 ಎಸೆತಗಳಲ್ಲಿ 6 ಬೌಂಡರಿ 5 ಸಿಕ್ಸರ್ ಸಹಿತ ಅಜೇಯ 68 ರನ್ ಗಳಿಸಿ ಮುಂಬೈ ಇಂಡಿಯನ್ಸ್ಗೆ ಗೆಲುವು ತಂದುಕೊಟ್ಟರು. 15.4 ಓವರ್ಗಳಲ್ಲೇ ಗುರಿ ಮುಟ್ಟಿದ ಮುಂಬೈ 9 ವಿಕೆಟ್ಗಳ ಭರ್ಜರಿ ಗೆಲುವು ಸಾಧಿಸಿತು.
ಪಂದ್ಯದ ನಂತರ ಮಾತನಾಡಿದ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್ಕೆ) ನಾಯಕ ಎಂಎಸ್ ಧೋನಿ, ತಮ್ಮ ತಂಡವು ಉತ್ತಮ ಸ್ಕೋರ್ ಗಳಿಸಿತ್ತು. ಇಬ್ಬನಿಯೂ ಪ್ರಮುಖ ಪಾತ್ರ ವಹಿಸುವ ಟ್ರ್ಯಾಕ್ನಲ್ಲಿ 176 ರನ್ಗಳನ್ನು ಡಿಫೆಂಡ್ ಮಾಡುವುದು ಎಂದಿಗೂ ಸುಲಭವಲ್ಲ ಎಂದು ಹೇಳಿದರು.
'ನಾವು ತುಂಬಾ ಕೆಳಮಟ್ಟದಲ್ಲಿದ್ದೆವು ಎಂದು ನಾನು ಭಾವಿಸುತ್ತೇನೆ. ಎರಡನೇ ಇನಿಂಗ್ಸ್ನಲ್ಲಿ ಇಬ್ಬನಿ ಬೀಳುತ್ತದೆ ಎಂದು ನಮಗೆಲ್ಲರಿಗೂ ತಿಳಿದಿತ್ತು. ಹೀಗಾಗಿ, ನಾವು ಮಧ್ಯಮ ಓವರ್ಗಳನ್ನು ಬಳಸಿಕೊಳ್ಳುವ ಸ್ಥಿತಿಯಲ್ಲಿದ್ದೆವು. ಆದರೆ, ವಿಶ್ವದ ಅತ್ಯುತ್ತಮ ಡೆತ್ ಬೌಲರ್ಗಳಲ್ಲಿ ಒಬ್ಬರಾಗಿರುವ ಬುಮ್ರಾ ತಮ್ಮ ಡೆತ್ ಬೌಲಿಂಗ್ ಅನ್ನು ಮೊದಲೇ ಪ್ರಾರಂಭಿಸಿದರು. ಹೀಗಾಗಿ, ನಾವು ಮೊದಲೇ ರನ್ ಗಳಿಸುವತ್ತ ನೋಡಬೇಕಿತ್ತು. ಕೆಲವು ಓವರ್ಗಳಲ್ಲಿ ನಾವು ಸ್ವಲ್ಪ ಹೆಚ್ಚು ರನ್ಗಳನ್ನು ಗಳಿಸಬಹುದಿತ್ತು. ಆದರೆ, ಅದು ಸಾಧ್ಯವಾಗಲಿಲ್ಲ. ಇಬ್ಬನಿ ಬೀಳುತ್ತಿರುವಾಗ 175 ರನ್ಗಳು ಉತ್ತಮ ಸ್ಕೋರ್ ಅಲ್ಲ' ಎಂದು ಹೇಳಿದರು.
ಸಿಎಸ್ಕೆ ಸ್ಪಿನ್ನರ್ಗಳ ವಿರುದ್ಧ ಸೂರ್ಯಕುಮಾರ್ ಬ್ಯಾಟಿಂಗ್ ಮಾಡಿದ ರೀತಿಯನ್ನು ಶ್ಲಾಘಿಸಿದ ಧೋನಿ, ಇಬ್ಬನಿ ಬಿದ್ದಿದ್ದು ನಮ್ಮ ಬೌಲರ್ಗಳಿಗೆ ಪರಿಸ್ಥಿತಿಯನ್ನು ಇನ್ನಷ್ಟು ಕಷ್ಟಕರವಾಗಿಸಿತು ಎಂದರು.
'ಪಂದ್ಯ ಇನ್ನೂ ನಮ್ಮ ಹಿಡಿತದಲ್ಲಿತ್ತು ಎಂದು ನಾನು ಭಾವಿಸುತ್ತೇನೆ. ಪವರ್ ಪ್ಲೇ ನಮಗೆ ಅತ್ಯಂತ ಮುಖ್ಯವಾದದ್ದು, ಆ 6 ಓವರ್ಗಳಲ್ಲಿ ಹೆಚ್ಚು ರನ್ ಬಿಟ್ಟುಕೊಟ್ಟರೆ ಅದು ಎದುರಾಳಿಗಳಿಗೆ ಸ್ವಲ್ಪ ಸುಲಭವಾಗುತ್ತದೆ. ಸೂರ್ಯ ಸ್ಪಿನ್ ಬೌಲಿಂಗ್ ಎದುರಿಸುವಲ್ಲಿ ಅದ್ಭುತ ಆಟಗಾರ. ನಾವು ಅರಿತುಕೊಳ್ಳಬೇಕಾದದ್ದು ಏನೆಂದರೆ, ನಾವು ಉತ್ತಮ ಕ್ರಿಕೆಟ್ ಆಡಿದಾಗ ಯಶಸ್ವಿಯಾಗಿದ್ದೇವೆ ಮತ್ತು ಅದೇ ವೇಳೆ ಉತ್ತಮ ಕ್ರಿಕೆಟ್ ಆಡದಿದ್ದಾಗ ಸೋತಿದ್ದೇವೆ. ಇದನ್ನು ಹೆಚ್ಚು ಭಾವನಾತ್ಮಕವಾಗಿ ತೆಗೆದುಕೊಳ್ಳಬಾರದು ಮತ್ತು ಪ್ರಾಯೋಗಿಕವಾಗಿರಬೇಕು. 2020 ನಮಗೆ ಉತ್ತಮವಾಗಿಲ್ಲ ಎಂದು ನಾನು ಭಾವಿಸುವ ಆವೃತ್ತಿಯಾಗಿದೆ. ಆದರೆ, ನಾವು ಸರಿಯಾದ ರೀತಿಯ ಕ್ರಿಕೆಟ್ ಆಡುತ್ತಿದ್ದೇವೆಯೇ, ನಮ್ಮನ್ನು ನಾವು ತೊಡಗಿಸಿಕೊಳ್ಳುತ್ತಿದ್ದೇವೆಯೇ ಎಂಬುದನ್ನು ನೋಡಬೇಕು' ಎಂದು ಅವರು ಹೇಳಿದರು.
ಕೊನೆಯಲ್ಲಿ, ಧೋನಿ ಸಿಎಸ್ಕೆ ತಂಡದ ಮುಂದಿನ ವರ್ಷದ ಯೋಜನೆಗಳ ಬಗ್ಗೆ ಒಂದು ದೊಡ್ಡ ಸುಳಿವನ್ನು ನೀಡಿದರು. ತಂಡವು ಈ ಆವೃತ್ತಿಯಲ್ಲಿ ಪ್ಲೇಆಫ್ಗೆ ಅರ್ಹತೆ ಪಡೆಯಲು ಬಯಸುತ್ತದೆ. ಇಲ್ಲದಿದ್ದರೆ, ಮುಂದಿನ ವರ್ಷಕ್ಕೆ ಯೋಜನೆಗಳನ್ನು ಸಿದ್ಧಪಡಿಸುವುದು ಗುರಿಯಾಗಿದೆ ಎಂದು ಹೇಳಿದರು.
'ಉತ್ತಮ ಫೀಲ್ಡಿಂಗ್ನತ್ತ ನಾವು ಗಮನಹರಿಸಬೇಕಿದೆ. ಕ್ಯಾಚ್ಗಳನ್ನು ಬಿಡುವುದರಿಂದ ಪಂದ್ಯದ ಫಲಿತಾಂಶದ ಮೇಲೆ ಪರಿಣಾಮ ಬೀರುತ್ತದೆ. ತಂಡ ಎದುರಿಸುತ್ತಿರುವ ಸವಾಲುಗಳನ್ನು ಸರಿಪಡಿಸಲು ಪ್ರಯತ್ನಿಸಲಾಗುವುದು. ಪಂದ್ಯಾವಳಿಯಲ್ಲಿ ಮುಂಬರುವ ಎಲ್ಲ ಪಂದ್ಯಗಳನ್ನು ಗೆಲ್ಲಬೇಕಾಗಿದೆ. ಓಂದು ವೇಳೆ ಕೆಲವು ಪಂದ್ಯಗಳಲ್ಲಿ ಸೋತರೆ, ಮುಂದಿನ ವರ್ಷ ಉತ್ತಮ ತಂಡವನ್ನು ಕಟ್ಟುವತ್ತ ಗಮನಹರಿಸುವುದು ನಮಗೆ ಮುಖ್ಯವಾಗುತ್ತದೆ' ಎಂದರು.
ಈ ಸೋಲಿನಿಂದಾಗಿ ಸಿಎಸ್ಕೆ ಕೊನೆಯ ಸ್ಥಾನದಲ್ಲಿಯೇ ಉಳಿದರೆ, ಮುಂಬೈ ತಂಡ ಸತತ ಮೂರನೇ ಜಯ ದಾಖಲಿಸುವ ಮೂಲಕ ಆರನೇ ಸ್ಥಾನಕ್ಕೆ ಏರಿದೆ.
Advertisement