
ಮುಲ್ಲನ್ಪುರದ ಮಹಾರಾಜ ಯಾದವೀಂದ್ರ ಸಿಂಗ್ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಭಾನುವಾರ ನಡೆದ ಐಪಿಎಲ್ 2025ನೇ ಆವೃತ್ತಿಯ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಪಂಜಾಬ್ ಕಿಂಗ್ಸ್ (PBKS) ವಿರುದ್ಧ 7 ವಿಕೆಟ್ಗಳ ಭರ್ಜರಿ ಗೆಲುವು ಸಾಧಿಸಿದ್ದು, ಆಡಿರುವ 8 ಪಂದ್ಯಗಳಲ್ಲಿ 5ರಲ್ಲಿ ಗೆಲುವು ಸಾಧಿಸುವ ಮೂಲಕ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೇರಿದೆ.
ಭಾನುವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಆರ್ಸಿಬಿ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ಕಿಂಗ್ಸ್ 20 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 157 ರನ್ ಗಳಿಸಿತು. ಪಂಜಾಬ್ ನೀಡಿದ 158 ರನ್ ಗುರಿಯನ್ನು ಬೆನ್ನಟ್ಟಿದ ಆರ್ಸಿಬಿ ಆರಂಭದಲ್ಲೇ ಫಿಲ್ ಸಾಲ್ಟ್ ವಿಕೆಟ್ ಕಳೆದುಕೊಂಡಿತು. ಬಳಿಕ ಜೊತೆಯಾದ ದೇವದತ್ ಪಡಿಕ್ಕಲ್ ಮತ್ತು ವಿರಾಟ್ ಕೊಹ್ಲಿ ತಂಡಕ್ಕೆ ಉತ್ತಮ ಆರಂಭ ನೀಡಿದರು. ಪಡಿಕ್ಕಲ್ 35 ಎಸೆತಗಳಲ್ಲಿ 5 ಬೌಂಡರಿ 4 ಸಿಕ್ಸರ್ ಸಹಿತ 61 ರನ್ ಗಳಿಸಿದರು. ಕೊಹ್ಲಿ 54 ಎಸೆತಗಳಲ್ಲಿ ಅಜೇಯ 73 ರನ್ ಗಳಿಸುವ ಮೂಲಕ ತಂಡದ ಗೆಲುವಿಗೆ ಕಾರಣರಾದರು. ಅದೇ ಎದುರಾಳಿಗಳ ವಿರುದ್ಧ 48 ಗಂಟೆಗಳಲ್ಲೇ ಬೆಂಗಳೂರಿನಲ್ಲಿ ಸೋಲಿನ ಸೇಡು ತೀರಿಸಿಕೊಂಡಿದೆ.
ಪಂದ್ಯದ ನಂತರ ಮಾತನಾಡಿದ ವಿರಾಟ್ ಕೊಹ್ಲಿ, 'ದೇವ್ ಇಂದು ವ್ಯತ್ಯಾಸವನ್ನುಂಟು ಮಾಡಿದ್ದಾರೆಂದು ನಾನು ಭಾವಿಸಿದೆ. ಈ ಪ್ರಶಸ್ತಿ (ಪಂದ್ಯಶ್ರೇಷ್ಠ ಪ್ರಶಸ್ತಿ) ಅವರಿಗೆ ಸಲ್ಲಬೇಕು. ಅವರು ಇದನ್ನು ನನಗೆ ಏಕೆ ನೀಡಿದ್ದಾರೆಂದು ತಿಳಿದಿಲ್ಲ. ನಾನು ವೇಗವನ್ನು ಹೆಚ್ಚಿಸಬಲ್ಲೆ, ಆದರೆ ಇತರ ಆಟಗಾರರ ಸಾಮರ್ಥ್ಯಗಳನ್ನು ನಾನು ಅರ್ಥಮಾಡಿಕೊಳ್ಳಲು ಬಯಸುತ್ತೇನೆ. ಒಂದು ಬದಿಯಲ್ಲಿ ವಿಕೆಟ್ ಕಳೆದುಕೊಳ್ಳದೆ ನಿಲ್ಲುವುದು ಕೂಡ ನಮಗೆ ಕೆಲಸ ಮಾಡುತ್ತದೆ' ಎಂದು ಹೇಳಿದರು.
'ತಂಡದಲ್ಲಿ ನಾವು ಉತ್ತಮವಾಗಿ ಹೊಂದಿಸಿಕೊಂಡಿದ್ದೇವೆ. ದೇವದತ್ ಪಡಿಕ್ಕಲ್ ಮತ್ತ ನನ್ನ ಪಾಲುದಾರಿಕೆ ಉತ್ತಮವಾಗಿದೆ. ರಜತ್ ಪಾಟೀದಾರ್ ಜೊತೆಗೂ ಆಡಬಹುದು. ಅದೇ ರೀತಿ ಮುಂದುವರಿಯುವ ಆಲೋಚನೆ ಯಾವಾಗಲೂ ಇರುತ್ತದೆ. ಟಿ20 ಕ್ರಿಕೆಟ್ನಲ್ಲಿ ರನ್ ಚೇಸ್ ಮಾಡುವಾಗ ಒಂದು ಪಾಲುದಾರಿಕೆ ಸಾಕು ಎಂದು ನಮಗೆ ತಿಳಿದಿದೆ. ಅಗತ್ಯವಿದ್ದರೆ, ನಾನು ವೇಗವನ್ನು ಹೆಚ್ಚಿಸಬಹುದು' ಎಂದರು.
ವಿರಾಟ್ ಕೊಹ್ಲಿ ಅವರು ಐಪಿಎಲ್ನಲ್ಲಿ 8,326 ರನ್ಗಳನ್ನು ಮತ್ತು ಈ ಆವೃತ್ತಿಯಲ್ಲಿ ಎಂಟು ಪಂದ್ಯಗಳಿಂದ 322 ರನ್ಗಳನ್ನು ಗಳಿಸಿದ್ದಾರೆ.
'ಇದು ನಮಗೆ ಬಹಳ ಮುಖ್ಯವಾದ ಪಂದ್ಯವಾಗಿತ್ತು. ನೀವು 8 ಪಾಯಿಂಟ್ಗಳಿಂದ 10ಕ್ಕೆ ಹೋದಾಗ, ಅದು ಭಾರಿ ವ್ಯತ್ಯಾಸವನ್ನುಂಟು ಮಾಡುತ್ತದೆ. ನಾವು ತವರಿನಿಂದ ಹೊರಗೆ ಕೆಲವು ಅದ್ಭುತ ಕ್ರಿಕೆಟ್ ಆಡಿದ್ದೇವೆ. ಪ್ರತಿ ಪಂದ್ಯದಲ್ಲೂ 2 ಅಂಕಗಳನ್ನು ಪಡೆಯಬೇಕೆಂಬ ಮನಸ್ಥಿತಿ ಇರಬೇಕು. ಈ ಆವೃತ್ತಿಯಲ್ಲಿ ಐಪಿಎಲ್ ಹರಾಜು ತಂಡಕ್ಕೆ ಸಾಕಷ್ಟು ಸಮತೋಲನವನ್ನು ನೀಡಿದೆ. ಅದು ಉತ್ತಮ ಪ್ರದರ್ಶನವಾಗಿ ಪರಿಣಮಿಸುತ್ತಿದೆ ' ಎಂದು ಕೊಹ್ಲಿ ಹೇಳಿದರು.
'ಮೆಗಾ ಹರಾಜು ತುಂಬಾ ಉತ್ತಮವಾಗಿದೆ. ನಾವು ಬಯಸಿದ ತಂಡವನ್ನು ಪಡೆದುಕೊಂಡಿದ್ದೇವೆ. ಅವರಿಗೆ (ಫ್ರಾಂಚೈಸಿ ಮಾಲೀಕರು) ತಂಡಕ್ಕೆ ಯಾರೆಲ್ಲ ಬೇಕು ಎಂಬುದು ನಿಖರವಾಗಿ ತಿಳಿದಿತ್ತು. ಅದರ ಫಲಿತಾಂಶ ಈಗ ಕಾಣಿಸುತ್ತಿದೆ. ಇತರ ಎಲ್ಲ ಆವೃತ್ತಿಗಳಲ್ಲಿ ಅದು ಕಾಣೆಯಾಗಿತ್ತು. ನೀವು ಆ ತೀವ್ರತೆ ಮತ್ತು ಉತ್ಸಾಹವನ್ನು ನೋಡಬಹುದು' ಎಂದು ಹಲವಾರು ವರ್ಷಗಳ ಕಾಲ ಆರ್ಸಿಬಿ ನಾಯಕರಾಗಿದ್ದ ಕೊಹ್ಲಿ ಹೇಳಿದರು.
Advertisement