
ಬುಧವಾರ ಹೈದರಾಬಾದ್ನಲ್ಲಿ ನಡೆದ ಪಂದ್ಯದಲ್ಲಿ ಮುಂಬೈ ವಿರುದ್ಧ 7 ವಿಕೆಟ್ಗಳ ಹೀನಾಯ ಸೋಲು ಕಂಡಿರುವ ಸನ್ರೈಸರ್ಸ್ ಹೈದರಾಬಾದ್ (SRH) ತಂಡ ಈ ಆವೃತ್ತಿಯಲ್ಲಿ ಸತತ ಆರನೇ ಸೋಲು ಕಾಣುವ ಮೂಲಕ ಅಂಕಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದೆ. ಪ್ಯಾಟ್ ಕಮ್ಮಿನ್ಸ್ ಮತ್ತು ಪಡೆ ಸದ್ಯ ಪಂದ್ಯಾವಳಿಯಿಂದಲೇ ಹೊರಗುಳಿಯುವ ಭೀತಿಯನ್ನು ಎದುರಿಸುತ್ತಿದೆ. ಹಿಂದಿನ ಆವೃತ್ತಿಗಳಲ್ಲಿ ಕಳಪೆ ಆರಂಭವನ್ನು ಹೊಂದಿದ್ದರೂ, ಬಳಿಕ ಪುಟಿದೆದ್ದ ಆರ್ಸಿಬಿ ಮತ್ತು ಎಂಐ ತಂಡಗಳಿಂದ SRH ತಂಡವು ಸ್ವಲ್ಪ ಸ್ಫೂರ್ತಿಯನ್ನು ಪಡೆಯಬೇಕಾಗಿದೆ ಎಂದು ಎಸ್ಆರ್ಎಚ್ ತರಬೇತುದಾರ ಡೇನಿಯಲ್ ವೆಟ್ಟೋರಿ ಹೇಳಿದ್ದಾರೆ.
ಪಂದ್ಯದ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವೆಟ್ಟೋರಿ, SRH ಗೆದ್ದ ಎರಡು ಪಂದ್ಯಗಳನ್ನು ಹೊರತುಪಡಿಸಿ ಇಲ್ಲಿಯವರೆಗೆ ಕ್ಲಿನಿಕಲ್ ಪ್ರದರ್ಶನ ನೀಡಲು ಸಾಧ್ಯವಾಗಿಲ್ಲ. 2024ರ ಐಪಿಎಲ್ನಲ್ಲಿ ಆರಂಭದಲ್ಲಿ ಕಳಪೆ ಪ್ರದರ್ಶನ ನೀಡಿದರೂ ಪ್ಲೇಆಫ್ಗೆ ತಲುಪುವಲ್ಲಿ ಯಶಸ್ವಿಯಾದ RCB ತಂಡದಿಂದ ಕಮ್ಮಿನ್ಸ್ ಮತ್ತು ತಂಡವು ಸ್ವಲ್ಪ ಸ್ಫೂರ್ತಿ ಪಡೆಯುವುದು ಮುಖ್ಯ ಎಂದು ಕಿವಿಸ್ ತರಬೇತುದಾರ ಹೇಳಿದ್ದಾರೆ.
'ಐಪಿಎಲ್ ಬಹಳ ಸಮಯದಿಂದ ನಡೆಯುತ್ತಿದೆ. ಬಹಳಷ್ಟು ತಂಡಗಳು ಈ ಪರಿಸ್ಥಿತಿಯಲ್ಲಿ ತಮ್ಮನ್ನು ತಾವು ಕಂಡುಕೊಂಡಿವೆ. ಆ ಆವೃತ್ತಿಯಲ್ಲಿ ತಮ್ಮನ್ನು ತಾವು ಪುನರುಜ್ಜೀವನಗೊಳಿಸಲು ಸಾಧ್ಯವಾದ ತಂಡಗಳು ಕಡಿಮೆ. ಕಳೆದ ವರ್ಷ ಕಠಿಣ ಆರಂಭದ ಹೊರತಾಗಿಯೂ ಆರ್ಸಿಬಿ ಹೇಗೆ ಪುಟಿದೆತ್ತಿತು ಎಂಬುದನ್ನು ನೋಡಿರುವಿರಿ. ಅಂತಹ ತಂಡದಿಂದ ನಾವು ಸ್ವಲ್ಪ ಸ್ಫೂರ್ತಿ ಪಡೆಯಬಹುದು' ಎಂದು ವೆಟ್ಟೋರಿ ಹೇಳಿದರು.
ಹೆನ್ರಿಕ್ ಕ್ಲಾಸೆನ್ ಅವರ 44 ಎಸೆತಗಳಲ್ಲಿ 71 ರನ್ ಮತ್ತು ಅಭಿನವ್ ಮನೋಹರ್ ಅವರ 37 ಎಸೆತಗಳಲ್ಲಿ 43 ರನ್ ನೆರವಿನಿಂದ ಸನ್ರೈಸರ್ಸ್ ಹೈದರಾಬಾದ್ ತಂಡ 8 ವಿಕೆಟ್ ನಷ್ಟಕ್ಕೆ 143 ರನ್ ಗಳಿಸಲು ನೆರವಾಯಿತು. SRH ತಂಡವು ಮೊದಲ ಐದು ಓವರ್ಗಳಲ್ಲಿ ನಾಲ್ಕು ವಿಕೆಟ್ಗಳನ್ನು ಕಳೆದುಕೊಂಡಿತು. ತಂಡದ ಟಾಪ್ 4 ಬ್ಯಾಟರ್ಗಳು ತರಗೆಲೆಯಂತೆ ವಿಕೆಟ್ ಚೆಲ್ಲಿದರು.
ಈ ಸಾಧಾರಣ ಮೊತ್ತವನ್ನು ಬೆನ್ನತ್ತಿದ ಮುಂಬೈ ಇಂಡಿಯನ್ಸ್ ತಂಡವು ಸುಲಭ ಜಯ ಸಾಧಿಸಿತು. ರೋಹಿತ್ ಶರ್ಮಾ ಅವರ 46 ಎಸೆತಗಳಲ್ಲಿ 70 ರನ್ ಮತ್ತು ಸೂರ್ಯಕುಮಾರ್ ಯಾದವ್ ಅವರ 19 ಎಸೆತಗಳಲ್ಲಿ 40 ರನ್ ಗಳಿಸಿದ್ದು ತಂಡಕ್ಕೆ 7 ವಿಕೆಟ್ಗಳ ಜಯಕ್ಕೆ ಕಾರಣವಾಯಿತು.
Advertisement