
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿಕೆಟ್ ಕೀಪರ್-ಬ್ಯಾಟರ್ ಜಿತೇಶ್ ಶರ್ಮಾ, ಐಪಿಎಲ್ 2025ರ ಆವೃತ್ತಿಯಲ್ಲಿ ತನ್ನ ಸಾಮರ್ಥ್ಯವನ್ನು ಹೊರಗೆಳೆದ ಮಾರ್ಗದರ್ಶಕ ಮತ್ತು ಬ್ಯಾಟಿಂಗ್ ಕೋಚ್ ದಿನೇಶ್ ಕಾರ್ತಿಕ್ ಅವರನ್ನು ಶ್ಲಾಘಿಸಿದ್ದಾರೆ. ಕಳೆದ ಮೂರು ಆವೃತ್ತಿಗಳಲ್ಲಿ ಪಂಜಾಬ್ ಕಿಂಗ್ಸ್ ಪರ ಜಿತೇಶ್ ನೀಡಿದ ವೀರೋಚಿತ ಪ್ರದರ್ಶನದ ನಂತರ ಕಳೆದ ವರ್ಷದ ಮೆಗಾ ಹರಾಜಿನಲ್ಲಿ ಆರ್ಸಿಬಿ ಅವರನ್ನು 11 ಕೋಟಿ ರೂ.ಗೆ ಖರೀದಿಸಿತು. ಡೆತ್ ಓವರ್ಗಳಲ್ಲಿ ಬ್ಯಾಟ್ಸ್ಮನ್ ಉತ್ತಮ ಪ್ರದರ್ಶನ ನೀಡುತ್ತಿರುವುದರಿಂದ ಅವರ ಸೇರ್ಪಡೆ ಈ ಆವೃತ್ತಿಯಲ್ಲಿ ಆರ್ಸಿಬಿಯ ಬ್ಯಾಟಿಂಗ್ಗೆ ಮತ್ತಷ್ಟು ಬಲ ನೀಡಿದೆ. ತಮ್ಮ ಬ್ಯಾಟಿಂಗ್ ಫಾರ್ಮ್ಗೆ ಭಾರತದ ಮಾಜಿ ವಿಕೆಟ್ ಕೀಪರ್ ನೀಡಿದ ಕೊಡುಗೆಯನ್ನು ಜಿತೇಶ್ ಸ್ಮರಿಸಿದ್ದಾರೆ.
'ಡಿಕೆ ನನ್ನನ್ನು ನನ್ನ ಕಂಫರ್ಟ್ ಝೋನ್ನಿಂದ ಹೊರಗೆಳೆದು, ನಾನು ಈವರೆಗೆ ಇಲ್ಲದ ಹೊಸ ಜಾಗಕ್ಕೆ ಕರೆದೊಯ್ದಿದ್ದಾರೆ. ನನ್ನ ಸಾಮರ್ಥ್ಯ ಏನೆಂಬುದನ್ನು ನಾನೇ ನಂಬಿರಲಿಲ್ಲ. ಹಿಂದಿನ ತರಬೇತುದಾರರು 'ನೇರವಾಗಿ ಹೋಗು, ಈ ರೀತಿ ಆಡು, ಆ ರೀತಿ ಆಡು' ಎಂದಷ್ಟೇ ಹೇಳುತ್ತಿದ್ದರಿಂದ ನಾನು ನನ್ನಲ್ಲಿನ ವಿಶೇಷ ಸಾಮರ್ಥ್ಯವನ್ನು ಗಮನಿಸಿಯೇ ಇರಲಿಲ್ಲ. 'ವಿ'ಯಲ್ಲಿ ಸಿಕ್ಸರ್ ಹೊಡೆಯುವುದು ನನ್ನ ಶಕ್ತಿ ಎಂಬುದು ನಿಜ. ಆದರೆ, ನಾನು ಯಾವಾಗಲೂ ಇನ್ನಷ್ಟು ಕಲಿಯಲು ಬಯಸುತ್ತೇನೆ. ಯಾರಾದರೂ ಕಲಿಸುತ್ತಿದ್ದರೆ ಮತ್ತು ನಾನು ಹೊಸ ಕೌಶಲ್ಯವನ್ನು ಕಲಿಯುತ್ತಾ ಸಾಗುವುದು ನನ್ನ ಮನಸ್ಥಿತಿ. ಡಿಕೆ ನನಗೆ ನೈಸರ್ಗಿಕ ಕೈ ಚಲನೆಯನ್ನು ಬಳಸಲು ಹೇಳಿದರು ಮತ್ತು ಅದನ್ನು ಪ್ರಯತ್ನಿಸಲು ನನ್ನನ್ನು ಪ್ರೋತ್ಸಾಹಿಸಿದರು. ಈಗ ವಿಷಯಗಳು ವಿಕಸನಗೊಳ್ಳುತ್ತಿವೆ. ಇದು ಕೇವಲ ಆರಂಭ' ಎಂದು ಅವರು ಜಿಯೋಹಾಟ್ಸ್ಟಾರ್ನ "ಜೆನ್ ಬೋಲ್ಡ್" ಸರಣಿಯಲ್ಲಿ ಹೇಳಿದರು.
ದಿನೇಶ್ ಕಾರ್ತಿಕ್ ಜೊತೆ ಇರುವುದು ತಂಡದಲ್ಲಿ ಆರಾಮದಾಯಕ ಭಾವನೆ ಮೂಡಿಸುತ್ತದೆ. ಏಕೆಂದರೆ, ಅವರು ನನ್ನನ್ನು ಚೆನ್ನಾಗಿ ಅರ್ಥಮಾಡಿಕೊಂಡಿದ್ದಾರೆ ಮತ್ತು ಇಬ್ಬರೂ ಒಂದೇ ರೀತಿ ಯೋಚಿಸುತ್ತೇವೆ ಎಂದು ಜಿತೇಶ್ ಹೇಳಿದರು.
'ನಾನು ನಿಜವಾಗಿಯೂ ಉತ್ತಮ ವ್ಯಕ್ತಿಯನ್ನು ಕಂಡುಕೊಂಡಿದ್ದೇನೆ ಎಂದು ನಾನು ಭಾವಿಸುತ್ತೇನೆ. ಅವರಿಂದ ಕಲಿಯಬಹುದು. ನನ್ನ ಯೋಚನಾ ಲಹರಿಗೆ ಅವರು ಹೊಂದಿಕೊಳ್ಳುತ್ತಾರೆ. ಅವರು ಭಾರತೀಯ ತಂಡಕ್ಕೆ ಮತ್ತು ಐಪಿಎಲ್ನಲ್ಲಿಯೂ ಅದೇ ಪಾತ್ರವನ್ನು ನಿರ್ವಹಿಸಿದ್ದಾರೆ. ನಾನು ಅವರೊಂದಿಗೆ ಮಾತನಾಡಲು ತುಂಬಾ ಕಂಫರ್ಟ್ ಆಗಿದ್ದೇನೆ. ಅವರು ನನ್ನ ಭಾವನೆಗಳು ಮತ್ತು ಆಟವನ್ನು ಅರ್ಥಮಾಡಿಕೊಳ್ಳುತ್ತಾರೆ. ಅವರು ಒತ್ತಡದ ಸಂದರ್ಭಗಳಲ್ಲಿ ಆಡಿದ್ದಾರೆ ಮತ್ತು ಆಗ ಯಾವ ರೀತಿಯ ಅಪಾಯಗಳು ಒಳಗೊಂಡಿರುತ್ತವೆ ಎಂಬುದನ್ನು ತಿಳಿದಿದ್ದಾರೆ' ಎಂದು ಆರ್ಸಿಬಿ ವಿಕೆಟ್ಕೀಪರ್ ಹೇಳಿದರು.
'ಈ ಹಿಂದೆ, ನಾನು ಯಾರೊಂದಿಗೂ ಈ ರೀತಿಯ ಸಂಭಾಷಣೆ ನಡೆಸಿಲ್ಲ. ಏಕೆಂದರೆ, 6ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವಾಗ ಹೆಚ್ಚಿನವರು ಯಶಸ್ವಿಯಾಗಿಲ್ಲ. ಯಶಸ್ವಿಯಾಗಿರುವಂತವರು ಚೆನ್ನೈ ಸೂಪರ್ ಕಿಂಗ್ಸ್ ಅಥವಾ ಇತರ ಫ್ರಾಂಚೈಸಿಗಳಿಗೆ ಆಡುತ್ತಿದ್ದಾರೆ. ಆದರೆ ಈಗ, ನಾನು ಪ್ರತಿದಿನ ಡಿಕೆ ಜೊತೆ ಮಾತುಕತೆ ನಡೆಸುತ್ತೇನೆ. ವಿಕೆಟ್ ಕೀಪರ್-ಬ್ಯಾಟರ್ ಆಗಿರುವುದರಿಂದ, ಅವರು ನನ್ನನ್ನು ಅರ್ಥಮಾಡಿಕೊಳ್ಳುತ್ತಾರೆ ಮತ್ತು ಅವರು ಏನನ್ನು ನಿರೀಕ್ಷಿಸುತ್ತಾರೆಂದು ನನಗೆ ಅರ್ಥವಾಗಿದೆ. ನನಗೆ ಇಲ್ಲಿ ಹೆಚ್ಚಿನ ಸ್ವಾತಂತ್ರ್ಯ ಸಿಕ್ಕಿದೆ. ನನ್ನ ಹಿಂದಿನ ತಂಡದಲ್ಲೂ ನನಗೆ ಅದು ಸಿಕ್ಕಿತ್ತು. ಆದರೆ, ಈಗ ನಾನು ಹೊಸ ವಿಷಯಗಳನ್ನು ಕಲಿಯುತ್ತಿದ್ದೇನೆ ಮತ್ತು ನಾನು ಮೊದಲು ಇಲ್ಲದ ಒಳನೋಟಗಳನ್ನು ಪಡೆಯುತ್ತಿದ್ದೇನೆ' ಎಂದು ಅವರು ಹೇಳಿದರು.
'ರಜತ್ ತುಂಬಾ ಸರಳ ವ್ಯಕ್ತಿ. ಅವರೊಂದಿಗೆ ಮಾತನಾಡುವುದು ಸುಲಭ. ಡ್ರೆಸ್ಸಿಂಗ್ ರೂಂನಲ್ಲಿ ಅವರು ಕಾಣಿಸುವುದೇ ಇಲ್ಲ. ನಾವು ಮೈದಾನಕ್ಕೆ ಕಾಲಿಟ್ಟಾಗ ಮಾತ್ರ ಅವರು ನಾಯಕ ಎಂದು ನಿಮಗೆ ಅರಿವಾಗುತ್ತದೆ. ಅದು ಅವರ ವ್ಯಕ್ತಿತ್ವ. ಒತ್ತಡದಲ್ಲಿಯೂ ಶಾಂತ ಮತ್ತು ಸಂಯಮದಿಂದ ಇರುತ್ತಾರೆ. ವಿಕೆಟ್ ಕೀಪರ್ ಆಗಿ, ನಾನು ಸಲಹೆಗಳೊಂದಿಗೆ ಅವರ ಬಳಿಗೆ ಹೋದಾಗಲೆಲ್ಲಾ, ಅವರು ತಕ್ಷಣವೇ 'ಇದು ಸಂಭವಿಸಿದಲ್ಲಿ ನಾವು ಏನು ಮಾಡಬಹುದು?' ಎಂಬಂತಹ ಪ್ರಶ್ನೆಗಳನ್ನು ಕೇಳುತ್ತಾರೆ. ಇದು ಅವರು ಎಷ್ಟು ಶಾಂತ ಮತ್ತು ನಿಯಂತ್ರಣದಲ್ಲಿದ್ದಾರೆ ಎಂಬುದನ್ನು ತೋರಿಸುತ್ತದೆ. ಇದುವೇ ಅವರ ಯಶಸ್ಸಿನ ಹಿಂದಿನ ದೊಡ್ಡ ಕಾರಣ. ಅವರ ಮುಂದೆ ಇನ್ನೂ ಒಂದು ದೊಡ್ಡ ಸವಾಲು ಇದೆ. ಈ ಆವೃತ್ತಿಯಲ್ಲಿ ಚಿನ್ನಸ್ವಾಮಿಯಲ್ಲಿ ಮೊದಲ ಗೆಲುವು ಸಾಧಿಸುವುದು. ತಂಡದಲ್ಲಿ ನಂಬಿಕೆ ಬಲವಾಗಿದೆ' ಎಂದು ಅವರು ಹೇಳಿದರು.
ಗುರುವಾರ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯದಲ್ಲಿ ಆರ್ಸಿಬಿ ರಾಜಸ್ಥಾನ್ ರಾಯಲ್ಸ್ ತಂಡವನ್ನು ಎದುರಿಸಲಿದ್ದು, ತವರಿನಲ್ಲಿ ಪಂದ್ಯವನ್ನು ಗೆಲ್ಲುವ ತವಕದಲ್ಲಿದೆ. ತಂಡವು ತವರಿನಲ್ಲಿ ಇದುವರೆಗೆ ಮೂರು ಪಂದ್ಯಗಳನ್ನು ಸೋತಿದೆ.
Advertisement