
ಹೈದರಾಬಾದ್: ಸನ್ರೈಸರ್ಸ್ ಹೈದರಾಬಾದ್ (SRH)ಮುಖ್ಯ ಕೋಚ್ ಡೇನಿಯಲ್ ವೆಟ್ಟೋರಿ, ಎಡಗೈ ಸ್ಪಿನ್ನರ್ ಆರ್ ಸಾಯಿ ಕಿಶೋರ್ ಅವರನ್ನು ಶ್ಲಾಘಿಸಿದ್ದಾರೆ. ಆಟಗಾರರ ಹರಾಜಿನಲ್ಲಿ ಆತ ನಮ್ಮ ತಂಡದ ಭಾಗವಾಗಬೇಕಿತ್ತು. ಆದರೆ ಅದು ಸಾಧ್ಯವಾಗಲಿಲ್ಲ ಎಂದು ಹೇಳಿದ್ದಾರೆ.
ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಮೂರನೇ ಗೆಲುವು ಸಾಧಿಸಿದ ನಂತರ ನಡೆದ ಸುದ್ದಿಗೋಷ್ಛಿಯಲ್ಲಿ ಹೆಚ್ಚು ಪ್ರಭಾವ ಬೀರಿದ ಎಡಗೈ ಸ್ಪಿನ್ನರ್ ಯಾರೆಂಬ ಬಗ್ಗೆ ಮಾತನಾಡಿದ ವೆಟ್ಟೋರಿ, ಸಾಯಿ ಕಿಶೋರ್ ಎಂದರು.
ನಾನು ಯೋಚಿಸಿದಂತೆ ಮುಂಬೈಗೆ ಮಿಚೆಲ್ ಸ್ಯಾಂಟ್ನರ್ ನಿಸ್ಸಂಶಯವಾಗಿ ಅದ್ಬುತ ಸ್ಪಿನ್ನರಾಗಿದ್ದಾರೆ. ಸಿಎಸ್ ಕೆಗೆ ರವೀಂದ್ರ ಜಡೇಜಾ, ಹರ್ಪ್ರೀತ್ ಬ್ರಾರ್ ಪಂಜಾಬ್ ನಲ್ಲಿ ಕೆಲವು ಅವಕಾಶ ಪಡೆದಿದ್ದಾರೆ. ಉಳಿದವರು ಯಾರು ಎಂದು ನನಗೆ ನೆನಪಿಸಿ? ಎಂದು ಕೇಳಿದ ವೆಟ್ಟೋರಿ, ಸಾಯಿ ಕಿಶೋರ್ ಅತ್ಯುತ್ತಮ ಬೌಲರ್. ಅವರೊಬ್ಬ ಅದ್ಬುತ ಆಟಗಾರ ಎಂದು ಶ್ಲಾಘಿಸಿದರು.
ಆಟಗಾರರ ಹರಾಜಿನಲ್ಲಿ ಆತನಿಗೆ ಬಿಡ್ ಮಾಡಲು ಪ್ರಯತ್ನಿಸಿದ್ದೇವು. ಆತ ತಂಡದಲ್ಲಿ ಇರಬೇಕಾಗಿತ್ತು. ಅವರು ಉತ್ತಮ ಸೀಮಿತ-ಓವರ್ಗಳ ಬೌಲರ್ನ ಎಲ್ಲಾ ಗುಣಲಕ್ಷಣಗಳನ್ನು ಹೊಂದಿದ್ದು, ತುಂಬಾ ಧೈರ್ಯಶಾಲಿಯಾಗಿದ್ದಾರೆ, ಅವರು ಚೆಂಡನ್ನು ತಿರುಗಿಸುವ ಸಾಮರ್ಥ್ಯ ಹೊಂದಿದ್ದಾರೆ, ವೇಗವನ್ನು ಬದಲಾಯಿಸುತ್ತಾರೆ. ಉತ್ತಮವಾಗಿ ಬ್ಯಾಟಿಂಗ್ ಕೂಡಾ ಮಾಡುತ್ತಾರೆ ಎಂದು ವೆಟ್ಟೋರಿ ಹೇಳಿದರು.
ಸನ್ ರೈಸರ್ಸ್ ಹೈದರಾಬಾದ್ ಸಾಯಿ ಕಿಶೋರ್ ನನ್ನು ಮೂಲ ಬೆಲೆಗೆ ಅಥವಾ ಇನ್ನೂ ಹೆಚ್ಚಿನ ಬೆಲೆಗೆ ಖರೀದಿಸಲು ಬಯಸಿದ್ದರು. ಪಂಜಾಬ್ ಕಿಂಗ್ಸ್ ಕಿಶೋರ್ ಗೆ ರೂ.90 ಲಕ್ಷಕ್ಕೆ ಬಿಡ್ ಮಾಡಿತ್ತು. ತದನಂತರ ರೂ. 2 ಕೋಟಿಗೆ ಗುಜರಾತ್ ಟೈಟನ್ಸ್ ಅವರನ್ನು ಖರೀದಿಸಿತ್ತು. ಈ ಬಾರಿಯ ಟೂರ್ನಿಯಲ್ಲಿ 12 ವಿಕೆಟ್ ಪಡೆಯುವುದರೊಂದಿಗೆ ಅತಿ ಹೆಚ್ಚು ವಿಕೆಟ್ ಪಡೆದವರ ಟಾಪ್ ಹತ್ತರ ಪಟ್ಟಿಯಲ್ಲಿ ಸಾಯಿ ಕಿಶೋರ್ 6ನೇ ಸ್ಥಾನದಲ್ಲಿದ್ದಾರೆ.
Advertisement