
ನವದೆಹಲಿ: ಐಪಿಎಲ್ ಟೂರ್ನಿಯ ಇಂದಿನ 2ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ತಂಡ 163 ರನ್ ಗಳ ಸವಾಲಿನ ಗುರಿ ನೀಡಿದೆ.
ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಆರಂಭವಾಗಿರುವ ಪಂದ್ಯದಲ್ಲಿ ಟಾಸ್ ಗೆದ್ದ ಆರ್ ಸಿಬಿ ನಾಯಕ ರಜತ್ ಪಾಟಿದಾರ್ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡರು.
ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಡೆಲ್ಲಿ ತಂಡ ನಿಗಧಿತ 20 ಓವರ್ ನಲ್ಲಿ 8 ವಿಕೆಟ್ ಕಳೆದುಕೊಂಡು 162 ರನ್ ಕಲೆಹಾಕಿತು.
ಆ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಗೆಲ್ಲಲು 163 ರನ್ ಗಳ ಸವಾಲಿನ ಗುರಿ ನೀಡಿದೆ.
ಕೆಎಲ್ ರಾಹುಲ್, ಸ್ಟಬ್ಸ್ ಹೋರಾಟ
ಇನ್ನು ಮೊದಲು ಬ್ಯಾಟಿಂಗ್ ಆರಂಭಿಸಿದ ಡೆಲ್ಲಿ ತಂಡಕ್ಕೆ ಉತ್ತಮ ಆರಂಭ ದೊರೆಯಿತು. ಡೆಲ್ಲಿ ಪರ ಆರಂಭಿಕರಾಗಿ ಕಣಕ್ಕಿಳಿದ ಅಭಿಷೇಕ್ ಪೊರೆಲ್ (28 ರನ್) ಮತ್ತು ಫಾಫ್ ಡುಪ್ಲೆಸಿಸ್ (22 ರನ್) ಉತ್ತಮ ಆರಂಭ ನೀಡಿದರು. ಮೊದಲ ವಿಕೆಟ್ ಗೆ ಈ ಜೋಡಿ 33 ರನ್ ಗಳ ಜೊತೆಯಾಟ ನೀಡಿತು. ಈ ಹಂತದಲ್ಲಿ 28 ರನ್ ಗಳಿಸಿದ್ದ ಪೊರೆಲ್ ಜಾಶ್ ಹೇಜಲ್ ವುಡ್ ಗೆ ವಿಕೆಟ್ ಒಪ್ಪಿಸಿದರು. ಬಳಿಕ ಕ್ರೀಸ್ ಗೆ ಬಂದ ಕನ್ನಡಿಗ ಕರುಣ್ ನಾಯಕ್ ಕೂಡ 4 ರನ್ ಗಳಿಸಿ ಯಶ್ ದಯಾಳ್ ಗೆ ವಿಕೆಟ್ ಒಪ್ಪಿಸಿ ನಿರಾಶೆ ಮೂಡಿಸಿದರು.
ಈ ಹಂತದಲ್ಲಿ ಡುಪ್ಲೆಸಿಸ್ ಜೊತೆಗೂಡಿದ ಮತ್ತೋರ್ನ ಕನ್ನಡಿಗ ಕೆಎಲ್ ರಾಹುಲ್ ರಕ್ಷಣಾತ್ಮಕ ಆಟವಾಡಿದರು. 4ನೇ ವಿಕೆಟ್ ಗೆ ಈ ಜೋಡಿ 28 ರನ್ ಗಳ ಜೊತೆಯಾಟವಾಡಿತು. ಈ ಹಂತದಲ್ಲಿ 22 ರನ್ ಗಳಿಸಿದ್ದ ಡುಪ್ಲೆಸಿಸ್ ಕೃನಾಲ್ ಪಾಂಡ್ಯಾ ಬೌಲಿಂಗ್ ನಲ್ಲಿ ಔಟಾದರು. ಬಳಿಕ ಕ್ರೀಸ್ ಗೆ ಬಂದ ನಾಯಕ ಅಕ್ಸರ್ ಪಟೇಲ್ ಬಂದಷ್ಟೇ ವೇಗವಾಗಿ 15 ರನ್ ಗಳಿಸಿ ಹೇಜಲ್ ವುಡ್ ಬೌಲಿಂಗ್ ನಲ್ಲಿ ಕ್ಲೀನ್ ಬೌಲ್ಡ್ ಆದರು. ಬಳಿಕ 41 ರನ್ ಗಳಿಸಿ ಅರ್ಧಶತಕದ ಹೊಸ್ತಿಲಲ್ಲಿದ್ದ ಕೆಎಲ್ ರಾಹುಲ್ ಕೂಡ ನಿರ್ಣಾಯಕ ಹಂತದಲ್ಲಿ ಭುವನೇಶ್ವರ್ ಕುಮಾರ್ ಬೌಲಿಂಗ್ ನಲ್ಲಿ ದೊಡ್ಡ ಹೊಡೆತಕ್ಕೆ ಕೈಹಾಕಿ ವಿಕೆಟ್ ಒಪ್ಪಿಸಿದರು.
ಈ ಹಂತದಲ್ಲಿ ಡೆಲ್ಲಿ ತಂಡ ಅಲ್ಪ ಮೊತ್ತಕ್ಕೇ ಕುಸಿಯುವ ಸಾಧ್ಯತೆ ಇತ್ತು. ಆದರೆ ಈ ಹಂತದಲ್ಲಿ ಕ್ರೀಸ್ ಗೆ ಬಂದ ಟ್ರಿಸ್ಟಾನ್ ಸ್ಟಬ್ಸ್ ಕೇವಲ 18 ಎಸೆತಗಳಲ್ಲಿ 1 ಸಿಕ್ಸರ್ ಮತ್ತು 5 ಬೌಂಡರಿಗಳ ಸಹಿತ 34 ರನ್ ಸಿಡಿಸಿ ಡೆಲ್ಲಿ ತಂಡದ ಮೊತ್ತ 150ರ ಗಡಿ ದಾಟಲು ಕಾರಣರಾದರು. ಅಂತಿಮವಾಗಿ ಡೆಲ್ಲಿ ತಂಡ ನಿಗಧಿತ 20 ಓವರ್ ನಲ್ಲಿ 8 ವಿಕೆಟ್ ಕಳೆದುಕೊಂಡು 162 ರನ್ ಕಲೆಹಾಕಿತು.
ಆರ್ ಸಿಬಿ ಬೌಲಿಂಗ್
ಇನ್ನು ಇಂದಿನ ಪಂದ್ಯದಲ್ಲಿ ಆರ್ ಸಿಬಿ ಬೌಲರ್ ಗಳು ಉತ್ತಮ ಬೌಲಿಂಗ್ ಪ್ರದರ್ಶನ ನೀಡಿದರು. ಭುವಿ 4 ಓವರ್ ನಲ್ಲಿ 33 ರನ್ ನೀಡಿ 3 ವಿಕೆಟ್ ಪಡೆದರೆ, ಯಶ್ ದಯಾಳ್ 4 ಓವರ್ ನಲ್ಲಿ 42 ರನ್ ನೀಡಿ ಕೇವಲ 1 ವಿಕೆಟ್ ಪಡೆದರು. ಜಾಶ್ ಹೇಜಲ್ ವುಡ್ ಕೂಡ 4 ಓವರ್ ನಲ್ಲಿ 36 ರನ್ ನೀಡಿ 2 ವಿಕೆಟ್ ಕಬಳಿಸಿದರು. ಸುಯಾಶ್ ಶರ್ಮಾ 4 ಓವರ್ ನಲ್ಲಿ ಕೇವಲ 22 ರನ್ ನೀಡಿದರೆ, ಕೃನಾಲ್ ಪಾಂಡ್ಯಾ ಕೂಡ 4 ಓವರ್ ನಲ್ಲಿ 28ರನ್ ನೀಡಿ 1 ವಿಕೆಟ್ ಪಡೆದರು.
Advertisement