Asia Cup 2025: 'ದಯವಿಟ್ಟು ಪಾಕಿಸ್ತಾನ ವಿರುದ್ಧ ಆಡಬೇಡಿ.. ಗೆಲುವಿಗೆ ಅರ್ಹರಲ್ಲ.. ಹೀನಾಯವಾಗಿ ಸೋಲ್ತಾರೆ'; ಭಾರತಕ್ಕೆ ಮನವಿ!

2025 ರ ಏಷ್ಯಾಕಪ್ ಟೂರ್ನಿಯ ವೇಳಾಪಟ್ಟಿ ಪ್ರಕಟವಾಗಿದ್ದು, ಪಂದ್ಯಾವಳಿಯ ಹೈವೋಲ್ಟೇಜ್ ಪಂದ್ಯ ಸೆಪ್ಟೆಂಬರ್ 14 ರಂದು ಭಾರತ ಮತ್ತು ಪಾಕಿಸ್ತಾನ (India vs Pakistan) ನಡುವೆ ನಡೆಯಲಿದೆ.
Basit Ali prays India boycott Pakistan match in upcoming Asia Cup 2025
ಭಾರತ vs ಪಾಕಿಸ್ತಾನ ಪಂದ್ಯ (ಸಂಗ್ರಹ ಚಿತ್ರ)
Updated on

ಇಸ್ಲಾಮಾಬಾದ್: ಏಷ್ಯಾಕಪ್ 2025 ಕ್ರಿಕೆಟ್ ಟೂರ್ನಿ ಅನಿಶ್ಚಿತತೆ ಮುಂದುವರೆದಿರುವಂತೆಯೇ ಪಾಕಿಸ್ತಾನ ವಿರುದ್ಧ ಆಡದಂತೆ ಪಾಕ್ ಮಾಜಿ ಕ್ರಿಕೆಟಿಗರೊಬ್ಬರು ಟೀಂ ಇಂಡಿಯಾಗೆ ಮನವಿ ಮಾಡಿದ್ದಾರೆ.

2025 ರ ಏಷ್ಯಾಕಪ್ (Asia Cup 2025) ಆರಂಭಕ್ಕೆ ಸುಮಾರು ಒಂದು ತಿಂಗಳು ಬಾಕಿ ಇದೆ. ಈಗಾಗಲೇ ಈ ಟೂರ್ನಿಯ ವೇಳಾಪಟ್ಟಿ ಪ್ರಕಟವಾಗಿದ್ದು, ಪಂದ್ಯಾವಳಿಯ ಹೈವೋಲ್ಟೇಜ್ ಪಂದ್ಯ ಸೆಪ್ಟೆಂಬರ್ 14 ರಂದು ಭಾರತ ಮತ್ತು ಪಾಕಿಸ್ತಾನ (India vs Pakistan) ನಡುವೆ ನಡೆಯಲಿದೆ.

ಆದರೆ ಈ ಪಂದ್ಯ ನಡೆಯುವ ಬಗ್ಗೆ ಈಗಲೂ ಯಾವುದೇ ಸ್ಪಷ್ಟತೆ ಸಿಕ್ಕಿಲ್ಲ. ಒಂದೆಡೆ, ಭಾರತೀಯ ಅಭಿಮಾನಿಗಳು ಭಾರತ, ಪಾಕಿಸ್ತಾನ ವಿರುದ್ಧ ಪಂದ್ಯವನ್ನು ಆಡಬಾರದು ಎನ್ನುತ್ತಿದ್ದಾರೆ. ಮತ್ತೊಂದೆಡೆ, ಪಾಕಿಸ್ತಾನದ ಮಾಜಿ ಬ್ಯಾಟ್ಸ್‌ಮನ್ ಟೀಂ ಇಂಡಿಯಾ ನಮ್ಮ ತಂಡದ ವಿರುದ್ಧದ ಪಂದ್ಯವನ್ನು ನಿರಾಕರಿಸುವಂತೆ ಮನವಿ ಮಾಡಿದ್ದಾರೆ.

ಅಚ್ಚರಿಯಾದರೂ ಸತ್ಯ.. ಏಷ್ಯಾಕಪ್ ವಿಚಾರವಾಗಿ ಬಿಸಿಸಿಐ ವಿರುದ್ಧ ತೊಡೆ ತಟ್ಟಿ ನಿಂತಿರುವ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಶತಾಯಗತಾಯ ಭಾರತ ಪಾಕಿಸ್ತಾನ ತಂಡಗಳ ನಡುವೆ ಪಂದ್ಯ ನಡೆಯಲೇಬೇಕು ಎಂದು ಪಟ್ಟು ಹಿಡಿಯುತ್ತಿದ್ದರೆ, ಅದರದ್ದೇ ಮಾಜಿ ಕ್ರಿಕೆಟಿಗರೊಬ್ಬರು ಮಾತ್ರ ಪಾಕಿಸ್ತಾನ ವಿರುದ್ಧ ಪಂದ್ಯ ಆಡದಂತೆ ಭಾರತ ಕ್ರಿಕೆಟ್ ತಂಡಕ್ಕೆ ಮನವಿ ಮಾಡಿದ್ದಾರೆ.

ಪಾಕಿಸ್ತಾನದ ಮಾಜಿ ಬ್ಯಾಟ್ಸ್‌ಮನ್ ಬಸಿತ್ ಅಲಿ ಈ ವಿಲಕ್ಷಣ ಮನವಿ ಮಾಡಿದ್ದು, ಭಾರತ ತಮ್ಮ ತಂಡದ ವಿರುದ್ಧ ಆಡದಿರಲು ಕೇಳಿಕೊಂಡಿದ್ದಾರೆ.

Basit Ali prays India boycott Pakistan match in upcoming Asia Cup 2025
'ಟೀಂ ಇಂಡಿಯಾ ಕೋಚ್ ಆಗಿದ್ದಾಗ ತಾವು ತರಬೇತಿ ನೀಡಿದ ಅತ್ಯುತ್ತಮ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ': ರವಿ ಶಾಸ್ತ್ರಿ

ಇಷ್ಟಕ್ಕೂ ಬಸಿತ್ ಹೇಳಿದ್ದೇನು?

ಭಾರತದ ವಿರುದ್ಧದ ಏಷ್ಯಾಕಪ್ ಪಂದ್ಯದಲ್ಲಿ ಪಾಕಿಸ್ತಾನದ ಸೋಲು ಖಚಿತ ಎಂದು ಹೇಳಿರುವ ಬಸಿತ್, ಪಾಕಿಸ್ತಾನದ ವಿರುದ್ಧ ಆಡಲು ಭಾರತ ನಿರಾಕರಿಸಲಿ ಎಂದು ನಾನು ಪ್ರಾರ್ಥಿಸುತ್ತೇನೆ ಎಂದಿದ್ದಾರೆ.

ದಿ ಗೇಮ್ ಪ್ಲಾನ್ (ಯೂಟ್ಯೂಬ್ ಚಾನೆಲ್) ನಲ್ಲಿ ಮಾತನಾಡಿದ ಬಸಿತ್ ಅಲಿ, ‘ವಿಶ್ವ ಚಾಂಪಿಯನ್‌ಶಿಪ್ ಆಫ್ ಲೆಜೆಂಡ್ಸ್‌ನಲ್ಲಿ ಮಾಡಿದಂತೆ ಏಷ್ಯಾಕಪ್‌ನಲ್ಲಿ ಪಾಕಿಸ್ತಾನದ ವಿರುದ್ಧ ಆಡಲು ಭಾರತ ನಿರಾಕರಿಸಲಿ ಎಂದು ನಾನು ಪ್ರಾರ್ಥಿಸುತ್ತೇನೆ. ಏಕೆಂದರೆ ಭಾರತ ತಂಡ ನಮ್ಮ ಪಾಕಿಸ್ತಾನ ತಂಡವನ್ನು ಊಹಿಸಲೂ ಸಾಧ್ಯವಾಗದಷ್ಟು ಕೆಟ್ಟದಾಗಿ ಸೋಲಿಸುತ್ತಾರೆ. ಹೀಗಾಗಿ ಹೀನಾಯ ಸೋಲಿನ ಅವಮಾನಕ್ಕೆ ಒಳಗಾಗುವ ಬದಲು ಟೀಂ ಇಂಡಿಯಾವೇ ನಮ್ಮ ತಂಡದ ವಿರುದ್ಧ ಆಡುವುದನ್ನು ನಿರಾಕರಿಸಬೇಕು’ ಎಂದು ಮನವಿ ಮಾಡಿದ್ದಾರೆ.

ಬಸಿತ್ ಕೋಪಕ್ಕೆ ಕಾರಣವೇನು?

ವಾಸ್ತವವಾಗಿ ಇತ್ತೀಚೆಗಷ್ಟೇ ವೆಸ್ಟ್ ಇಂಡೀಸ್ ಹಾಗೂ ಪಾಕಿಸ್ತಾನದ ನಡುವೆ ಮೂರು ಪಂದ್ಯಗಳ ಏಕದಿನ ಸರಣಿ ನಡೆಯಿತು. ಈ ಸರಣಿಯನ್ನು ಆತಿಥೇಯ ವೆಸ್ಟ್ ಇಂಡೀಸ್ ಭರ್ಜರಿಯಾಗಿ ಗೆದ್ದುಕೊಂಡಿತು. ಮೊಹಮ್ಮದ್ ರಿಜ್ವಾನ್ ನೇತೃತ್ವದ ಪಾಕ್ ತಂಡ ಏಕದಿನ ಸರಣಿಯಲ್ಲಿ 1- 2 ಅಂತರದಿಂದ ಹೀನಾಯ ಸೋಲು ಕಂಡಿತು.

ಈ ಮೂಲಕ ವಿಂಡೀಸ್ ತಂಡ 33 ವರ್ಷಗಳ ನಂತರ ಪಾಕಿಸ್ತಾನದ ವಿರುದ್ಧ ಏಕದಿನ ಸರಣಿ ಗೆದ್ದ ಸಾಧನೆ ಮಾಡಿತು. ಅದರಲ್ಲೂ ಸರಣಿಯ ಕೊನೆಯ ಪಂದ್ಯದಲ್ಲಿ ಪಾಕಿಸ್ತಾನ ನೀಡಿದ ಪ್ರದರ್ಶನ ತೀರ ಕಳಪೆಯಾಗಿತ್ತು. 294 ರನ್​ಗಳ ಗುರಿ ಬೆನ್ನಟ್ಟಿದ ಪಾಕ್ ತಂಡ ಕೇವಲ 92 ರನ್​ಗಳಿಗೆ ಆಲೌಟ್ ಆಗುವ ಮೂಲಕ 202 ರನ್​ಗಳ ಸೋಲುಂಡಿತ್ತು.

ಆ ಮೂಲಕ ವಿಂಡೀಸ್ ಪಾಕಿಸ್ತಾನ ವಿರುದ್ಧ ಬರೊಬ್ಬರಿ 33 ವರ್ಷಗಳ ಬಳಿಕ ಏಕದಿನ ಸರಣಿ ಗೆದ್ದು ಇತಿಹಾಸ ನಿರ್ಮಿಸಿದೆ. ಇದುವೇ ಬಸಿತ್ ಕೋಪಕ್ಕೆ ಕಾರಣ ಎನ್ನಲಾಗಿದೆ.

ಏಷ್ಯಾಕಪ್ ನಲ್ಲಿ ಭಾರತ ಪಾಕ್ ಮುಖಾಮುಖಿ

ಪ್ರಸ್ತುತ ಪ್ರಕಟವಾಗಿರುವ ಏಷ್ಯಾಕಪ್ ವೇಳಾಪಟ್ಟಿಯ ಪ್ರಕಾರ ಭಾರತ ಹಾಗೂ ಪಾಕಿಸ್ತಾನ ಒಂದೇ ಗುಂಪಿನಲ್ಲಿ ಸ್ಥಾನ ಪಡೆದಿವೆ. ಇದರರ್ಥ ಲೀಗ್ ಹಂತದಲ್ಲಿ ಉಭಯ ತಂಡಗಳ ನಡುವೆ ಒಂದು ಪಂದ್ಯ ನಡೆಯಲಿದೆ. ಆ ಬಳಿಕ ಈ ಎರಡೂ ತಂಡಗಳು ಸೂಪರ್ ಫೋರ್ ಸುತ್ತಿಗೆ ಎಂಟ್ರಿಕೊಟ್ಟರೆ ಅಲ್ಲೂ ಸಹ ಎದುರುಬದುರಾಗಲಿವೆ. ಆ ಬಳಿಕ ಫೈನಲ್​ಗೇರಿದರೆ, ಅಲ್ಲಿ ಪ್ರಶಸ್ತಿಗಾಗಿಯೇ ಸೆಣಸಾಡಲಿವೆ. ಅಂದರೆ ಈ ಟೂರ್ನಿಯಲ್ಲಿ ಭಾರತ- ಪಾಕ್ ನಡುವೆ ಮೂರು ಪಂದ್ಯಗಳು ನಡೆಯುವ ಸಾಧ್ಯತೆಗಳಿವೆ.

ಪಾಕಿಸ್ತಾನದ ವಿರುದ್ಧ ಭಾರತದ ಪ್ರಾಬಲ್ಯ

ಟಿ20 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಪಾಕಿಸ್ತಾನದ ವಿರುದ್ಧ ಭಾರತ ಪ್ರಾಬಲ್ಯ ಸಾಧಿಸಿದೆ. ಉಭಯ ತಂಡಗಳ ನಡುವೆ ನಡೆದಿರುವ 13 ಪಂದ್ಯಗಳಲ್ಲಿ ಭಾರತ 10 ಪಂದ್ಯಗಳನ್ನು ಗೆದ್ದಿದೆ. 2024 ರ ಟಿ20 ವಿಶ್ವಕಪ್‌ನಲ್ಲಿ ಉಭಯ ತಂಡಗಳ ನಡುವೆ ನಡೆದಿದ್ದ ಕೊನೆಯ ಪಂದ್ಯದಲ್ಲಿ, ಪಾಕಿಸ್ತಾನ 120 ರನ್‌ಗಳ ಗುರಿ ಬೆನ್ನಟ್ಟಲು ಸಾಧ್ಯವಾಗದೆ ಆರು ರನ್‌ಗಳಿಂದ ಸೋತಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com