
ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿ ಸೋಲಿನ ಬಳಿಕ ಟೀಂ ಇಂಡಿಯಾದ ಸ್ಟಾರ್ ಆಟಗಾರರು ಬಿಸಿಸಿಐ ಕಟ್ಟಪ್ಪಣೆ ಮೇರೆಗೆ ರಣಜಿ ಟ್ರೋಫಿ ಪಂದ್ಯವನ್ನು ಆಡುತ್ತಿದ್ದು, ನಾಯಕ ರೋಹಿತ್ ಶರ್ಮಾ ಕೂಡ ಮುಂಬೈ ತಂಡದಲ್ಲಿ ಆಡುತ್ತಿದ್ದಾರೆ. ರೋಹಿತ್ ಶರ್ಮಾ ಮತ್ತು ಯಶಸ್ವಿ ಜೈಲ್ವಾಲ್ ಅವರಂತಹ ಭಾರತೀಯ ಕ್ರಿಕೆಟ್ ತಾರೆಗಳು ರಣಜಿ ಟ್ರೋಫಿಗೆ ಮರಳಿದ್ದರಿಂದ ಕಳೆದ ಪಂದ್ಯದಲ್ಲಿ ಶತಕ ಗಳಿಸಿದ್ದ 17 ವರ್ಷದ ಆಯುಷ್ ಮ್ಹಾತ್ರೆ ಪ್ಲೇಯಿಂಗ್ ಇಲೆವೆನ್ನಿಂದ ಬೆಂಚ್ನಲ್ಲಿ ಕುಳಿತುಕೊಳ್ಳುವಂತಾಯಿತು.
ಮ್ಹಾತ್ರೆ ತಾವು ಆಡಿರುವ 6 ಪಂದ್ಯಗಳಲ್ಲಿ 40.09 ಸರಾಸರಿಯಲ್ಲಿ 441 ರನ್ ಗಳಿಸಿದ್ದಾರೆ. ಜಮ್ಮು ಮತ್ತು ಕಾಶ್ಮೀರ ವಿರುದ್ಧದ ರಣಜಿ ಟ್ರೋಫಿ ಪಂದ್ಯದಲ್ಲಿ ರೋಹಿತ್ ಮತ್ತೊಮ್ಮೆ ವೈಫಲ್ಯ ಕಂಡಿದ್ದು, ಮುಂಬೈ ತಂಡದಲ್ಲಿ ಮ್ಹಾತ್ರೆ ಅವರನ್ನು ಬೆಂಚ್ನಲ್ಲಿ ಕೂರಿಸಿದ್ದಕ್ಕಾಗಿ ಸಾಮಾಜಿಕ ಮಾಧ್ಯಮದಲ್ಲಿ ಅಭಿಮಾನಿಗಳು ಟ್ರೋಲ್ ಮಾಡುತ್ತಿದ್ದಾರೆ. ಆದರೆ, ಯುವ ಬ್ಯಾಟರ್ ಮ್ಹಾತ್ರೆ ಕೂಡ ರೋಹಿತ್ ಬಗ್ಗೆ ಒಂದಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ.
'ನಾನು ಆರಾಧಿಸುವ ವ್ಯಕ್ತಿಯೊಂದಿಗೆ ಡ್ರೆಸ್ಸಿಂಗ್ ರೂಂ ಅನ್ನು ಹಂಚಿಕೊಳ್ಳುತ್ತಿರುವುದು ನಂಬಲು ಅಸಾಧ್ಯವಾದಂತ ಕ್ಷಣವಾಗಿದೆ. ದೂರದರ್ಶನದಲ್ಲಿ ಅವರು ಬ್ಯಾಟ್ ಮಾಡುವುದನ್ನು ನೋಡುತ್ತಾ ಬೆಳೆದು ನಾನು ಕ್ರಿಕೆಟ್ ಆಡಲು ಪ್ರಾರಂಭಿಸಿದೆ. ಮುಂದೆ ಕಲಿಯುವುದು ಬಹಳಷ್ಟು ಇದೆ' ಎಂದು ಹಿಟ್ಮ್ಯಾನ್ನೊಂದಿಗೆ ತೆಗೆಸಿಕೊಂಡಿರುವ ಚಿತ್ರವನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಮ್ಹಾತ್ರೆ ಬರೆದಿದ್ದಾರೆ.
ಮುಂಬೈನ ಕೊನೆಯ ರಣಜಿ ಟ್ರೋಫಿ ಪಂದ್ಯದಲ್ಲಿ, ಸರ್ವಿಸಸ್ ವಿರುದ್ಧ ಮ್ಹಾತ್ರೆ 116 ರನ್ ಗಳಿಸಿದ್ದರು. ಅವರು ವೈಟ್-ಬಾಲ್ ಕ್ರಿಕೆಟ್ನಲ್ಲಿಯೂ ಉತ್ತಮ ಪ್ರದರ್ಶನ ನೀಡುತ್ತಿದ್ದು, ತಮ್ಮ ಲಿಸ್ಟ್ ಎ ಚೊಚ್ಚಲ ಪಂದ್ಯದಲ್ಲಿ 65.42 ಸರಾಸರಿಯಲ್ಲಿ 458 ರನ್ ಗಳಿಸಿದ್ದಾರೆ.
ರೋಹಿತ್ ಶರ್ಮಾ ಮಾತ್ರವಲ್ಲದೆ ರಣಜಿ ಟ್ರೋಫಿಯಲ್ಲಿ ಮುಂಬೈ ಪರ ಆಡುತ್ತಿರುವ ಭಾರತದ ಇತರ ಹಿರಿಯ ಆಟಗಾರರೂ ವೈಫಲ್ಯ ಕಂಡಿದ್ದಾರೆ. ಯಶಸ್ವಿ ಜೈಸ್ವಾಲ್, ಶ್ರೇಯಸ್ ಅಯ್ಯರ್, ಶಿವಂ ದುಬೆ ಹಾಗೂ ಸದ್ಯ ರಾಷ್ಟ್ರೀಯ ತಂಡದ ಭಾಗವಾಗಿಲ್ಲದ ನಾಯಕ ಅಜಿಂಕ್ಯ ರಹಾನೆ ಕೂಡ ರನ್ ಗಳಿಸುವಲ್ಲಿ ತಡಕಾಡಿದ್ದಾರೆ. ಈ ಪಂದ್ಯದಲ್ಲಿ ಶತಕ ಗಳಿಸಿದ ಶಾರ್ದೂಲ್ ಠಾಕೂರ್ ಜಮ್ಮು ಮತ್ತು ಕಾಶ್ಮೀರದ ವಿರುದ್ಧ ಮುಂಬೈ ತಂಡಕ್ಕೆ ನೆರವಾಗಿದ್ದಾರೆ.
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ತನ್ನ ಹೊಸ 10-ಪಾಯಿಂಟ್ ಆದೇಶದಲ್ಲಿ ಟೀಂ ಇಂಡಿಯಾದ ಆಟಗಾರರಿಗೆ ದೇಶೀಯ ಕ್ರಿಕೆಟ್ ಆಡುವುದನ್ನು ಕಡ್ಡಾಯಗೊಳಿಸಿದೆ. ಭಾರತ ಕ್ರಿಕೆಟ್ ತಂಡದ ದಿಗ್ಗಜ ವಿರಾಟ್ ಕೊಹ್ಲಿ ಕೂಡ ಮುಂದಿನ ಪಂದ್ಯದಲ್ಲಿ ರಣಜಿ ಟ್ರೋಫಿ ಆಡಲಿದ್ದಾರೆ ಎನ್ನಲಾಗಿದೆ.
Advertisement