
ಜೂನ್ 20ರಿಂದ ಇಂಗ್ಲೆಂಡ್ನಲ್ಲಿ ಆರಂಭವಾಗಲಿರುವ ಐದು ಪಂದ್ಯಗಳ ಟೆಸ್ಟ್ ಸರಣಿಯೊಂದಿಗೆ, ಭಾರತದ ಟೆಸ್ಟ್ ತಂಡದ ಹೊಸ ನಾಯಕನಾಗಿ ಶುಭ್ಮನ್ ಗಿಲ್ ಅದೃಷ್ಟ ಪರೀಕ್ಷೆಗೆ ಇಳಿಯಲಿದ್ದು, ತಂಡದಲ್ಲಿ ಉತ್ತಮ ಮನೋಭಾವವನ್ನು ಬೆಳೆಸಲು ಒಂದು ಅಮೂಲ್ಯವಾದ ಅವಕಾಶವಿದೆ ಎಂದು ಭಾರತದ ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ತಿಳಿಸಿದ್ದಾರೆ. ಶುಭಮನ್ ಗಿಲ್ ಅವರಿಗೆ 4–5 ಪ್ರಮುಖ ಆಟಗಾರರನ್ನು ನಿರ್ದಿಷ್ಟವಾಗಿ ಯಶಸ್ವಿ ಜೈಸ್ವಾಲ್, ಕೆಎಲ್ ರಾಹುಲ್, ರಿಷಭ್ ಪಂತ್, ಜಸ್ಪ್ರಿತ್ ಬುಮ್ರಾ ಮತ್ತು ಮೊಹಮ್ಮದ್ ಸಿರಾಜ್ ಅವರನ್ನು ಒಟ್ಟುಗೂಡಿಸುವ ಮೂಲಕ ತಂಡದೊಳಗೆ ಒಗ್ಗಟ್ಟಿನ ಗುಂಪನ್ನು ರೂಪಿಸಬೇಕು. ಇವರನ್ನು ಈಗ ಮಾತ್ರವಲ್ಲದೆ ಭವಿಷ್ಯದಲ್ಲಿಯೂ ತಂಡವನ್ನು ಮುನ್ನಡೆಸಬಲ್ಲ ಸ್ಥಿರ, ದೀರ್ಘಕಾಲೀನ ಆಟಗಾರರನ್ನಾಗಿ ನೋಡಬೇಕು ಎಂದಿದ್ದಾರೆ.
'ಯುವ ತಂಡದೊಂದಿಗೆ, ನಾಯಕನು ಕೂಡ ಬೆಳೆಯುವುದು ಮುಖ್ಯವಾಗುತ್ತದೆ. ಹಿರಿಯರು ಮತ್ತು ಕಿರಿಯರು ಸಾಮಾನ್ಯವಾಗಿ ವಿಭಿನ್ನ ದಿನಚರಿ ಮತ್ತು ಸರ್ಕಲ್ ಅನ್ನು ಹೊಂದಿರುತ್ತಾರೆ. ಆದರೆ, ಈ ಹೊಸ ತಂಡದೊಂದಿಗೆ, ಉತ್ತಮ ಸಂಸ್ಕೃತಿಯನ್ನು ನಿರ್ಮಿಸುವ ಅವಕಾಶವಿದೆ. ಇಡೀ ರಾಷ್ಟ್ರವು ಹೆಮ್ಮೆಪಡುವಂತಹ ಬಾಂಧವ್ಯ ಮತ್ತು ಕಥೆಯನ್ನು ಸೃಷ್ಟಿಸಲು ಇದು ಅಪರೂಪದ ಅವಕಾಶವಾಗಿದೆ' ಎಂದು ಜಿಯೋಹಾಟ್ಸ್ಟಾರ್ನಲ್ಲಿ ಚೋಪ್ರಾ ಹೇಳಿದರು.
ವಿರಾಟ್ ಕೊಹ್ಲಿ ತಮ್ಮ ಟೆಸ್ಟ್ ವೃತ್ತಿಜೀವನದಲ್ಲಿ ಗಳಿಸಿದ ಯಶಸ್ಸಿನಿಂದ ಗಿಲ್ ಸ್ಫೂರ್ತಿ ಪಡೆಯಬೇಕೇ ಎಂದು ಕೇಳಿದಾಗ ಚೋಪ್ರಾ, 'ವಿರಾಟ್ ಕೊಹ್ಲಿ ಅವರ ಯಶಸ್ಸು, ರನ್ಗಳ ಹಸಿವು, ಅವರ ನಾಯಕತ್ವದಿಂದ ನೀವು ಸ್ಫೂರ್ತಿ ಪಡೆಯಬಹುದು. ಆದರೆ, ಅವರ ಬ್ಯಾಟಿಂಗ್ ಕ್ರಮಾಂಕದಿಂದ ಅಲ್ಲ. ಅದು ತುಂಬಾ ವೈಯಕ್ತಿಕ ಆಯ್ಕೆ. ಅದೇ ರೀತಿ, ಶುಭಮನ್ ಅವರು ಉತ್ತಮವಾಗಿ ಕೊಡುಗೆ ನೀಡುವ ಸ್ಥಳದಲ್ಲಿ ಆಡಬೇಕು' ಎಂದು ಹೇಳಿದರು.
'ಬ್ಯಾಟಿಂಗ್ ಕ್ರಮಾಂಕದ ವಿಚಾರದಲ್ಲಿ ಯಾರನ್ನೂ ಅನುಸರಿಸಬಾರದು. ನೀವು ತಂಡದಲ್ಲಿ ಎಲ್ಲಿ ಹೊಂದಿಕೊಳ್ಳುತ್ತೀರಿ ಮತ್ತು ಅದು ತಂಡಕ್ಕೆ ಹೇಗೆ ಪ್ರಯೋಜನವಾಗುತ್ತದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಕೊಹ್ಲಿಯ ಮನಸ್ಥಿತಿಯಿಂದ ಕಲಿಯಿರಿ. ವೈಯಕ್ತಿಕ ಆದ್ಯತೆಗಳಿಗಿಂತ ತಂಡದ ಅಗತ್ಯಗಳಿಗೆ ಆದ್ಯತೆ ನೀಡಬೇಕು. ಬೇಕಿದ್ದರೆ, ಹೆಚ್ಚುವರಿ ಬ್ಯಾಟರ್ ಬದಲಿಗೆ ಹೆಚ್ಚುವರಿ ಬೌಲರ್ ಅನ್ನು ತಂಡಕ್ಕೆ ಸೇರಿಸಿಕೊಳ್ಳಲು ಆಯ್ಕೆ ಮಾಡಬಹುದು. ನಿಜವಾದ ನಾಯಕರು ತಂಡಕ್ಕಾಗಿ ತ್ಯಾಗಗಳನ್ನು ಮಾಡುತ್ತಾರೆ' ಎಂದರು.
ಗಿಲ್ ನೇತೃತ್ವದ ಭಾರತ ತಂಡ ಮತ್ತು ಗೌತಮ್ ಗಂಭೀರ್ ನೇತೃತ್ವದ ಸಹಾಯಕ ಸಿಬ್ಬಂದಿ ಇಂಗ್ಲೆಂಡ್ನಲ್ಲಿ ಎದುರಿಸಲಿರುವ ಒತ್ತಡದ ಬಗ್ಗೆ ಚೋಪ್ರಾ, ಸರಣಿಯಲ್ಲಿ ಒಟ್ಟು 20 ವಿಕೆಟ್ಗಳನ್ನು ಪಡೆಯುವ ಸಾಮರ್ಥ್ಯವಿರುವ ಬೌಲರ್ಗಳನ್ನು ಆಯ್ಕೆ ಮಾಡಬೇಕಾಗಿದೆ. 'ಒತ್ತಡ ಇರಬೇಕು ಮತ್ತು ಅದು ಕೆಲಸದ ಭಾಗವಾಗಿದೆ. ನೀವು ಭಾರತವನ್ನು ಪ್ರತಿನಿಧಿಸುತ್ತಿರುವಾಗ ಮತ್ತು 1.4 ಶತಕೋಟಿ ಜನರ ಭರವಸೆಯನ್ನು ಹೊತ್ತಿರುವಾಗ, ಅದು ಅಪಾರ ಪ್ರೀತಿಯೊಂದಿಗೆ, ನಿಮ್ಮನ್ನು ಎಂದಿಗೂ ನೋಡದಿದ್ದರೂ, ನಿಮ್ಮ ಯಶಸ್ಸಿಗಾಗಿ ಪ್ರಾರ್ಥಿಸುವ ಜನರಿಂದಲೂ ಸಹ ನಿರೀಕ್ಷೆಗಳು ಬರುತ್ತದೆ. ಇದರಿಂದ ಜವಾಬ್ದಾರಿ ಬರುತ್ತದೆ ಮತ್ತು ಈ ಜವಾಬ್ದಾರಿಯೊಂದಿಗೆ ಒತ್ತಡ ಬರುತ್ತದೆ' ಎಂದರು.
'20 ವಿಕೆಟ್ ತೆಗೆದುಕೊಳ್ಳುವುದು ಮುಖ್ಯ ಎಂದ ಗೌತಮ್ ಗಂಭೀರ್ ಅವರ ಹೇಳಿಕೆಯನ್ನು ನಾನು ಒಪ್ಪುತ್ತೇನೆ. ತಂಡವು ಅದನ್ನು ನೆನಪಿಸಿಕೊಳ್ಳುತ್ತದೆ ಎಂದು ನಾನು ಭಾವಿಸುತ್ತೇನೆ. ಕಳೆದ ಬಾರಿ, ಆ ರೀತಿಯ ಮನಸ್ಥಿತಿಯೊಂದಿಗೆ ಬೌಲಿಂಗ್ ಘಟಕವನ್ನು ಆಯ್ಕೆ ಮಾಡಿರಲಿಲ್ಲ ಎಂದು ನಾನು ಭಾವಿಸುತ್ತೇನೆ. ಆದರೆ, ನಾವು ಆ ತಪ್ಪನ್ನು ಪುನರಾವರ್ತಿಸಬಾರದು. ಯಾವಾಗಲೂ ಪ್ರಲೋಭನೆ ಇರುತ್ತದೆ. ನೀವು ಬೇಗನೆ ಬೌಲ್ಡ್ ಆದರೆ, ನೀವು ಹೆಚ್ಚುವರಿ ಬ್ಯಾಟ್ಸ್ಮನ್ ಅನ್ನು ಆಡಿಸಲು ಬಯಸುತ್ತೀರಿ. ಆದರೆ, ಅದೊಂದು ಬಲೆಯಾಗಿರುತ್ತದೆ. ನೀವು ನಿಮ್ಮ ಬೌಲಿಂಗ್ ಬಲವನ್ನು ರಾಜಿ ಮಾಡಿಕೊಳ್ಳುತ್ತೀರಿ. ಮತ್ತೆ ಆ ಬಲೆಗೆ ಬೀಳಬಾರದು' ಎಂದು ಚೋಪ್ರಾ ಸಲಹೆ ನೀಡಿದರು.
Advertisement