
ಸುಮಾರು ಎಂಟು ವರ್ಷಗಳ ವಿರಾಮದ ನಂತರ ರೆಡ್-ಬಾಲ್ ಕ್ರಿಕೆಟ್ಗೆ ಮರಳಿರುವ ಕನ್ನಡಿದ ಕರುಣ್ ನಾಯರ್, ಜೂನ್ 20ರಂದು ಪ್ರಾರಂಭವಾಗುವ ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಲು ಉತ್ಸುಕರಾಗಿದ್ದಾರೆ. ಸದ್ಯ ಕರುಣ್ ನಾಯರ್ ಅದ್ಭುತ ಫಾರ್ಮ್ನಲ್ಲಿದ್ದಾರೆ ಮತ್ತು ಕ್ಯಾಂಟರ್ಬರಿಯಲ್ಲಿ ನಡೆದ ಇಂಗ್ಲೆಂಡ್ ಲಯನ್ಸ್ ವಿರುದ್ಧದ ಮೊದಲ ಟೆಸ್ಟ್ನಲ್ಲಿ ಕರುಣ್ ದ್ವಿಶತಕ ಗಳಿಸಿದ್ದಾರೆ. ಇಚೆಗೆ ಮುಕ್ತಾಯಗೊಂಡ ಐಪಿಎಲ್ 2025ರ ಆವೃತ್ತಿಯಲ್ಲಿ, ದೆಹಲಿ ಕ್ಯಾಪಿಟಲ್ಸ್ ಪರ ಆಡಿದ ಎಂಟು ಪಂದ್ಯಗಳಲ್ಲಿ ಅರ್ಧಶತಕ ಸೇರಿದಂತೆ 198 ರನ್ಗಳನ್ನು ಗಳಿಸಿದ್ದಾರೆ.
33 ವರ್ಷದ ಅವರು 2016ರಲ್ಲಿ ಮೊಹಾಲಿಯಲ್ಲಿ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಟೆಸ್ಟ್ ಕ್ರಿಕೆಟ್ಗೆ ಪದಾರ್ಪಣೆ ಮಾಡಿದರು ಮತ್ತು ಚೆನ್ನೈನಲ್ಲಿ ನಡೆದ ಮೂರನೇ ಟೆಸ್ಟ್ನಲ್ಲಿ ಅಜೇಯ 303 ರನ್ ಗಳಿಸಿ ಎಲ್ಲರ ಗಮನ ಸೆಳೆದರು. ಆ ಐತಿಹಾಸಿಕ ಬ್ಯಾಟಿಂಗ್ ನಂತರ 2017ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಕೇವಲ ಮೂರು ಪಂದ್ಯಗಳನ್ನು ಆಡಿದರು ಮತ್ತು ನಂತರ ಅವರನ್ನು ತಂಡದಿಂದ ಕೈಬಿಡಲಾಯಿತು.
2023ರಲ್ಲಿ ಕರ್ನಾಟಕದಿಂದ ವಿದರ್ಭಕ್ಕೆ ತಮ್ಮ ನೆಲೆಯನ್ನು ಬದಲಾಯಿಸಿದ ನಂತರ, ಅವರು 10 ಪಂದ್ಯಗಳಲ್ಲಿ 690 ರನ್ಗಳನ್ನು ಗಳಿಸಿದರು ಮತ್ತು 2024ರಲ್ಲಿ ಒಂಬತ್ತು ರಣಜಿ ಟ್ರೋಫಿ ಪಂದ್ಯಗಳಲ್ಲಿ 863 ರನ್ಗಳನ್ನು ಗಳಿಸಿದರು. ಇದರಲ್ಲಿ ಫೈನಲ್ನಲ್ಲಿ ಒಂದು ಶತಕವೂ ಸೇರಿದೆ. ಇದು ವಿದರ್ಭ ಟ್ರೋಫಿಯನ್ನು ಎತ್ತಿಹಿಡಿಯಲು ದಾರಿ ಮಾಡಿಕೊಟ್ಟಿತು.
ವಿಜಯ್ ಹಜಾರೆ ಟ್ರೋಫಿಯಲ್ಲಿ ನಾಯರ್ ಪವರ್-ಹಿಟ್ಟಿಂಗ್ ಮಾಡಿದರು. ಕೇವಲ ಎಂಟು ಇನಿಂಗ್ಸ್ಗಳಲ್ಲಿ ಐದು ಶತಕಗಳು ಸೇರಿದಂತೆ 779 ರನ್ಗಳನ್ನು ಗಳಿಸಿದರು. ಇದರಿಂದಾಗಿ ಡೆಲ್ಲಿ ಕ್ಯಾಪಿಟಲ್ಸ್ ಅವರನ್ನು 2024ರ ಐಪಿಎಲ್ ಮೆಗಾ ಹರಾಜಿನಲ್ಲಿ 50 ಲಕ್ಷ ರೂ.ಗೆ ಖರೀದಿಸಿತು.
'ಈ ಅವಕಾಶವನ್ನು ಮತ್ತೆ ಪಡೆಯಲು ಸಾಧ್ಯವಾಗುತ್ತಿರುವುದು ನಿಜಕ್ಕೂ ವಿಶೇಷ. ಇದಕ್ಕಾಗಿ ತುಂಬಾ ಕೃತಜ್ಞತೆ ಮತ್ತು ಅದೃಷ್ಟಶಾಲಿ ಎಂದು ಭಾವಿಸುತ್ತೇನೆ. ಈ ಅವಕಾಶವನ್ನು ಎರಡೂ ಕೈಗಳಿಂದ ಬಾಚಿಕೊಳ್ಳಲು ನಿಜವಾಗಿಯೂ ಎದುರು ನೋಡುತ್ತಿದ್ದೇನೆ ಮತ್ತು ಉತ್ಸುಕನಾಗಿದ್ದೇನೆ' ಎಂದು ಸಾಮಾಜಿಕ ಮಾಧ್ಯಮದಲ್ಲಿ ಬಿಸಿಸಿಐ ಪೋಸ್ಟ್ ಮಾಡಿರುವ ವಿಡಿಯೋದಲ್ಲಿ ಕರುಣ್ ನಾಯರ್ ಹೇಳಿದರು.
'ಈ ಭಾವನೆಯನ್ನು ಹೇಗೆ ವ್ಯಕ್ತಪಡಿಸಬೇಕು ಎಂಬುದು ತಿಳಿಯುತ್ತಿಲ್ಲ. ಇದನ್ನು ನಾನೇ ಅನುಭವಿಸಬೇಕು ಮತ್ತು ಅಲ್ಲಿಗೆ ಹೋಗಿ ಅದನ್ನು ನನಗಾಗಿ ಅನುಭವಿಸಬೇಕು. ಬಹಳಷ್ಟು ಭಾವನೆಗಳಿವೆ. ನಾನು ಈಗ ವ್ಯಕ್ತಪಡಿಸಲು ಸಾಧ್ಯವಾಗದ ಮತ್ತು ಅದು ವಿಶೇಷ ಭಾವನೆಯಾಗಿರುತ್ತದೆ' ಎಂದು ಅವರು ಹೇಳಿದರು.
ಅಭ್ಯಾಸ ಅವಧಿಗೂ ಮುನ್ನ ಮುಖ್ಯ ಕೋಚ್ ಗೌತಮ್ ಗಂಭೀರ್, ಎಂಟು ವರ್ಷಗಳ ನಂತರ ಟೆಸ್ಟ್ ತಂಡಕ್ಕೆ ಕರುಣ್ ನಾಯರ್ ಅವರ ಪುನರಾಗಮನವನ್ನು ಶ್ಲಾಘಿಸಿದರು ಮತ್ತು 'ಪುನರಾಗಮನ ಎಂದಿಗೂ ಸುಲಭವಲ್ಲ. ಏಳೆಂಟು ವರ್ಷಗಳ ನಂತರ ಪುನರಾಗಮನ ಮಾಡಿದ ವ್ಯಕ್ತಿ ಕಳೆದ ವರ್ಷ ಅದ್ಭುತ ಪ್ರದರ್ಶನ ನೀಡಿದರು. ಕಳೆದ ವರ್ಷ, ನೀವು ಗಳಿಸಿದ ರನ್ಗಳು ಮತ್ತು ಮುಖ್ಯವಾಗಿ, ಆ ಎಂದಿಗೂ ಸಾಯದ ಮನೋಭಾವ, ಎಂದಿಗೂ ಬಿಟ್ಟುಕೊಡದ ಮನೋಭಾವ, ಅದು ನಿಮ್ಮನ್ನು ಮತ್ತೆ ತಂಡಕ್ಕೆ ಸೇರಿಸಿದೆ. ಅದು ಈ ಇಡೀ ಜಗತ್ತಿಗೆ ಸ್ಪೂರ್ತಿದಾಯಕವಾದ ವಿಷಯ. ಸ್ವಾಗತ, ಕರುಣ್' ಎಂದಿದ್ದರು.
ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್ನಿಂದ ನಿವೃತ್ತರಾದ ನಂತರ, ನಾರ್ಥಾಂಪ್ಟನ್ಶೈರ್ ಜೊತೆಗಿನ ಕೌಂಟಿ ಅನುಭವದಿಂದಾಗಿ ನಾಯರ್ ಮಧ್ಯಮ ಕ್ರಮಾಂಕದಲ್ಲಿ ಅವಕಾಶ ಪಡೆಯುವ ಸಾಧ್ಯತೆಯಿದೆ. ಅಲ್ಲಿ ಅವರು ಏಳು ಪಂದ್ಯಗಳಲ್ಲಿ 48.70 ಸರಾಸರಿಯಲ್ಲಿ 487 ರನ್ ಗಳಿಸಿದ್ದಾರೆ. ಇದರಲ್ಲಿ ಒಂದು ದ್ವಿಶತಕವೂ ಸೇರಿದೆ.
ಕರ್ನಾಟಕ ತಂಡದ ಮಾಜಿ ಸಹ ಆಟಗಾರ ಮತ್ತು ಅನುಭವಿ ಬ್ಯಾಟ್ಸ್ಮನ್ ಕೆಎಲ್ ರಾಹುಲ್ ಅವರು ಕರುಣ್ ನಾಯರ್ ಟೀಂ ಇಂಡಿಯಾಗೆ ಮರಳಿದ್ದಕ್ಕೆ ಹರ್ಷ ವ್ಯಕ್ತಪಡಿಸಿದರು.
'ಯುಕೆಯಲ್ಲಿ ಅವರು ಕ್ರಿಕೆಟ್ ಆಡುವಾಗ ಅವರಿಗೆ ಸವಾಲಿನ ಮತ್ತು ಒಂಟಿತನವಿತ್ತು. ಆ ತೊಂದರೆಗಳ ಹೊರತಾಗಿಯೂ, ಅವರು ಪರಿಶ್ರಮದಿಂದ ಭಾರತೀಯ ತಂಡಕ್ಕೆ ಮರಳುವಲ್ಲಿ ಯಶಸ್ವಿಯಾದರು. ಈ ಸಾಧನೆಯನ್ನು ಅವರಿಗೆ ಮಾತ್ರವಲ್ಲ, ಅವರ ಕುಟುಂಬ ಮತ್ತು ಅವರ ಹೋರಾಟಗಳು ಮತ್ತು ಪ್ರಯಾಣವನ್ನು ವೀಕ್ಷಿಸಿದ ಆಪ್ತ ಸ್ನೇಹಿತರಿಗೂ ವಿಶೇಷವಾಗಿದೆ. ಇದು ತುಂಬಾ ಸ್ಪೂರ್ತಿದಾಯಕವಾಗಿದೆ. ಇಲ್ಲಿ ಕೌಂಟಿ ಕ್ರಿಕೆಟ್ ಆಡುವುದರಿಂದ ಅವರ ಅನುಭವ ಮತ್ತು ಕಲಿಕೆಗಳು ಅವರು ಇಲ್ಲಿ ಟೆಸ್ಟ್ ಪಂದ್ಯಗಳನ್ನು ಆಡುವಾಗ ಅವರನ್ನು ಉತ್ತಮ ಸ್ಥಾನದಲ್ಲಿರಿಸುತ್ತದೆ' ಎಂದು ವಿಡಿಯೋದಲ್ಲಿ ತಿಳಿಸಿದ್ದಾರೆ.
Advertisement