
ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯದ 3ನೇ ದಿನದಂದು ಟೆಸ್ಟ್ ಕ್ರಿಕೆಟ್ನಲ್ಲಿ ಶುಭಮನ್ ಗಿಲ್ ಅವರ ನಾಯಕತ್ವ ಯೋಜನೆಗಳು ಕ್ಲಿಕ್ ಆಗುವ ಮೊದಲ ಲಕ್ಷಣಗಳು ಕಂಡುಬಂದವು. ಪ್ರಸಿದ್ಧ್ ಕೃಷ್ಣ ಬೌಲಿಂಗ್ನಲ್ಲಿ ಇಂಗ್ಲೆಂಡ್ ವಿಕೆಟ್ ಕೀಪರ್ ಜೇಮೀ ಸ್ಮಿತ್ ಅವರನ್ನು ಔಟ್ ಮಾಡಲು ಗಿಲ್ ತಂತ್ರವೊಂದನ್ನು ಹೆಣೆದಿದ್ದರು. ಸ್ಮಿತ್ಗೆ ಪ್ರಸಿದ್ಧ್ ಕೃಷ್ಣ ಅವರು ಶಾರ್ಟ್ ಬೌಲಿಂಗ್ ಮಾಡುವ ಸ್ಪಷ್ಟ ಯೋಜನೆಯೊಂದಿಗೆ ಗಿಲ್ ಲೆಗ್-ಸೈಡ್ನಲ್ಲಿ ಫೀಲ್ಡ್ ಅನ್ನು ಹೊಂದಿಸಿದ್ದರು. ಸ್ಮಿತ್ ಮೊದಲಿಗೆ ಸಿಕ್ಸ್ ಬಾರಿಸಿದರೂ, ಗಿಲ್ ಫೀಲ್ಡಿಂಗ್ ಅಥವಾ ತಂತ್ರವನ್ನು ಬದಲಿಸಲಿಲ್ಲ. ಈ ವೇಳೆ ಗಿಲ್ ತಮ್ಮ ಅತ್ಯುತ್ತಮ ಫೀಲ್ಡರ್ ರವೀಂದ್ರ ಜಡೇಜಾ ಅವರನ್ನು ಡೀಪ್ ಮಿಡ್-ವಿಕೆಟ್ನಲ್ಲಿ ಇರಿಸಿದ್ದರು. ಲೆಗ್-ಸೈಡ್ ಅನ್ನು ಸಹ ಪ್ಯಾಕ್ ಮಾಡಿದ್ದರು. ಬಿ ಸಾಯಿ ಸುದರ್ಶನ್ ಅವರನ್ನು ಡೀಪ್ ಸ್ಕ್ವೇರ್-ಲೆಗ್ನಲ್ಲಿ ನಿಲ್ಲಿಸಿದ್ದರು.
ಸ್ಮಿತ್ ಮೊದಲಿಗೆ ಸಿಕ್ಸ್ ಬಾರಿಸಿದರು. ಅದಾದ ಸ್ವಲ್ಪ ಸಮಯದ ನಂತರ, ಸ್ಮಿತ್ ಅದೇ ಶಾಟ್ ಅನ್ನು ಆಡಲು ಮುಂದಾದಾಗ ಕೊನೆಗೂ ಅದೇ ಓವರ್ನಲ್ಲಿ ವಿಕೆಟ್ ಒಪ್ಪಿಸಿದರು. ರವೀಂದ್ರ ಜಡೇಜಾ ಆರಂಭದಲ್ಲಿ ಚೆಂಡನ್ನು ಹಿಡಿದರು. ಆದರೆ ಬೌಂಡರಿ ಲೈನ್ ಬಳಿ ನಿಯಂತ್ರಣ ಕಳೆದುಕೊಂಡು ಬಾಲ್ ಅನ್ನು ಎಸೆದರು. ಆಗ ಸಾಯಿ ಸುದರ್ಶನ್ ಆ ಕ್ಯಾಚ್ ಅನ್ನು ಹಿಡಿದು. ತಂಡಕ್ಕೆ ವಿಕೆಟ್ ಸಿಕ್ಕಿತು.
ಇದು ಔಟ್ಫೀಲ್ಡ್ನಲ್ಲಿ ಮಾತ್ರವಲ್ಲದೆ, ಯೋಜನೆಗೆ ಅನುಗುಣವಾಗಿ ಬೌಲಿಂಗ್ ಮಾಡುವ ವಿಷಯದಲ್ಲೂ ಅದ್ಭುತ ಕ್ಷಣವಾಗಿತ್ತು. ಭಾರತದ ಈ ಯೋಜನೆಯನ್ನು ಇಂಗ್ಲೆಂಡ್ನ ಮಾಜಿ ನಾಯಕರಾದ ನಾಸೀರ್ ಹುಸೇನ್ ಮತ್ತು ಮೈಕೆಲ್ ಅಥರ್ಟನ್ ಅವರು ಕಾಮೆಂಟರಿ ಬಾಕ್ಸ್ನಿಂದ ಪ್ರಶಂಸಿಸಿದರು.
'ಈ ತಂತ್ರ ಭಾರತಕ್ಕೆ ಕೆಲಸ ಮಾಡಿದೆ' ಎಂದು ಮೈಕೆಲ್ ಅಥರ್ಟನ್ ಹೇಳಿದರು.
'ಎಚ್ಚರಿಕೆಯಿಂದ ಯೋಚಿಸಿದ ತಂತ್ರವು ಸಂಪೂರ್ಣವಾಗಿ ಕೆಲಸ ಮಾಡಿದಾಗ ನೀವು ಅದನ್ನು ಇಷ್ಟಪಡುವುದಿಲ್ಲವೇ' ಎಂದು ನಾಸೀರ್ ಹೇಳಿದರು.
ಪ್ರಸಿದ್ಧ್ ಕೃಷ್ಣ ಅವರು ಶಾರ್ಟ್ ಬಾಲ್ ಎಸೆಯುವ ಮೂಲಕ ಜೇಮೀ ಸ್ಮಿತ್ (52 ಎಸೆತಗಳಲ್ಲಿ 40) ಮತ್ತು ಬ್ರೂಕ್ (112 ಎಸೆತಗಳಲ್ಲಿ 99) ಅವರನ್ನು ಔಟ್ ಮಾಡಿದರು. ಆದರೆ, ಅದೇ ವೇಳೆ ಹೆಚ್ಚು ರನ್ ಗಳನ್ನು ಸೋರಿಕೆ ಮಾಡಿದರು. 20 ಓವರ್ಗಳಲ್ಲಿ 128 ರನ್ಗಳನ್ನು ಬಿಟ್ಟುಕೊಟ್ಟರು. ಒಟ್ಟು ಮೂರು ವಿಕೆಟ್ಗಳನ್ನು ಕಬಳಿಸಿದರು.
ಭಾನುವಾರ ನಡೆದ ಮೊದಲ ಟೆಸ್ಟ್ ಪಂದ್ಯದ ಮೂರನೇ ದಿನದಾಟದ ಮಧ್ಯಾಹ್ನದ ಅವಧಿಯಲ್ಲಿ ಭಾರತವು ಇಂಗ್ಲೆಂಡ್ ಅನ್ನು 465 ರನ್ಗಳಿಗೆ ಆಲೌಟ್ ಮಾಡಿತು. ಜಸ್ಪ್ರೀತ್ ಬುಮ್ರಾ ಐದು ವಿಕೆಟ್ಗಳನ್ನು ಗೊಂಚಲು ಪಡೆದು ಭಾರತಕ್ಕೆ ಆರು ರನ್ಗಳ ಮುನ್ನಡೆ ತಂದುಕೊಟ್ಟರು. ಆದರೆ, ಹ್ಯಾರಿ ಬ್ರೂಕ್ 99 ರನ್ ಗಳಿಸಿ ಶತಕವಂಚಿತರಾದರು.
Advertisement