
ಭಾನುವಾರ ನಡೆದ ಐಪಿಎಲ್ 2025ನೇ ಆವೃತ್ತಿಯ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಆರು ರನ್ಗಳ ರೋಚಕ ಸೋಲು ಕಂಡಿದ್ದು, ಕಳಪೆ ಆರಂಭ ಮತ್ತು ಫೀಲ್ಡಿಂಗ್ ವೈಫಲ್ಯವೇ ಸೋಲಿಗೆ ಪ್ರಮುಖ ಕಾರಣ ಎಂದು ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ರುತುರಾಜ್ ಗಾಯಕ್ವಾಡ್ ಆರೋಪಿಸಿದ್ದಾರೆ. ಆಡಿರುವ ಮೂರು ಪಂದ್ಯಗಳಲ್ಲಿ ಸಿಎಸ್ಕೆ ಒಂದರಲ್ಲಿ ಮಾತ್ರ ಗೆಲುವು ಕಂಡಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯಗಳಲ್ಲಿ ಸೋಲು ಕಂಡಿದೆ.
ಬರ್ಸಾಪರ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ 36 ಎಸೆತಗಳಲ್ಲಿ 81 ರನ್ ಗಳಿಸಿದ ನಿತೀಶ್ ರಾಣಾ ಮತ್ತು ನಾಲ್ಕು ವಿಕೆಟ್ ಕಬಳಿಸಿದ ವನಿಂದು ಹಸರಂಗ ಅವರ ಅತ್ಯುತ್ತಮ ಪ್ರದರ್ಶನದಿಂದಾಗಿ ರಾಜಸ್ಥಾನ್ ರಾಯಲ್ಸ್ ತಂಡವು ಸಿಎಸ್ಕೆ ಎದುರು ಭರ್ಜರಿ ಸಾಧಿಸಿದೆ. 17 ವರ್ಷಗಳಲ್ಲಿ ಮೊದಲ ಬಾರಿಗೆ ಸಿಎಸ್ಕೆ ತನ್ನ ತವರಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಸೋಲು ಕಂಡಿದೆ.
'ನಮಗೆ ಉತ್ತಮ ಆರಂಭ ಸಿಗುತ್ತಿಲ್ಲ. ಆದರೆ, ಒಮ್ಮೆ ನಾವು ಉತ್ತಮ ಆರಂಭ ಪಡೆದರೆ, ಪರಿಸ್ಥಿತಿ ವಿಭಿನ್ನವಾಗಿರುತ್ತದೆ. ನಾವು ಮಿಸ್ಫೀಲ್ಡ್ಗಳ ಮೂಲಕ 8-10 ಹೆಚ್ಚುವರಿ ರನ್ಗಳನ್ನು ಬಿಟ್ಟುಕೊಟ್ಟಿದ್ದೇವೆ ಮತ್ತು ಅದನ್ನು ನಾವು ಸುಧಾರಿಸಬೇಕಾಗಿದೆ' ಎಂದು ತಿಳಿಸಿದರು.
3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಬಗ್ಗೆ ಮಾತನಾಡಿದ ನಾಯಕ, 'ಇದು ಪೂರ್ವ ಯೋಜಿತ ತಂತ್ರವಾಗಿತ್ತು. ಕೆಲವು ವರ್ಷಗಳಿಂದ ಅಜಿಂಕ್ಯ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುತ್ತಿದ್ದರು. ಆದರೆ, ರಾಯುಡು ಮಧ್ಯಮ ಓವರ್ಗಳನ್ನು ನಿರ್ವಹಿಸುತ್ತಿದ್ದರು. ಪರಿಸ್ಥಿತಿಯನ್ನು ಸ್ಥಿರಗೊಳಿಸಲು ನಾನು ನಂತರ ಬಂದರೆ ಉತ್ತಮ. ಆದರೆ, ತ್ರಿಪಾಠಿ ಮುಂಚೂಣಿಯಲ್ಲಿ ದಾಳಿ ಮಾಡಬಹುದು ಎಂದು ನಾವು ಭಾವಿಸಿದ್ದೆವು' ಎಂದರು.
'ಇದನ್ನು ಹರಾಜಿನ ವೇಳೆಯಲ್ಲಿ ನಿರ್ಧರಿಸಲಾಯಿತು. ನನಗೆ ಅದರಲ್ಲಿ ಯಾವುದೇ ಸಮಸ್ಯೆ ಇಲ್ಲ. ಹೇಗಾದರೂ, ನಾನು ಪ್ರತಿ ಪಂದ್ಯದಲ್ಲೂ ಬೇಗನೆ ಬ್ಯಾಟಿಂಗ್ ಮಾಡಲು ಪ್ರಾರಂಭಿಸುತ್ತಿದ್ದೇನೆ' ಎಂದು ಅವರು ನಗುತ್ತಾ ಹೇಳಿದರು.
ಈಮಧ್ಯೆ, ಮೊದಲನೇ ಗೆಲುವು ಸಾಧಿಸಿರುವ ರಾಜಸ್ಥಾನ್ ರಾಯಲ್ಸ್ ತಂಡದ ನಾಯಕ ರಿಯಾನ್ ಪರಾಗ್ ಮಾತನಾಡಿ, 'ನಮಗೆ 20 ರನ್ ಕಡಿಮೆ ಇದೆ ಎಂದು ಅನಿಸಿತು. ಮಧ್ಯಮ ಓವರ್ಗಳಲ್ಲಿ ನಾವು ಚೆನ್ನಾಗಿ ಆಡುತ್ತಿದ್ದೆವು. ಆದರೆ, ಒಂದೆರಡು ವಿಕೆಟ್ಗಳನ್ನು ಬೇಗನೆ ಕಳೆದುಕೊಂಡೆವು. ಆದಾಗ್ಯೂ, ನಮ್ಮ ಬೌಲರ್ಗಳು ನಮ್ಮ ಯೋಜನೆಗಳನ್ನು ಚೆನ್ನಾಗಿ ಕಾರ್ಯಗತಗೊಳಿಸಿದರು' ಎಂದು ಹೇಳಿದರು.
'ನಾವು ಎರಡು ಕಠಿಣ ಪಂದ್ಯಗಳನ್ನು ಆಡಿದ್ದೇವೆ. ಒಂದು ಪಂದ್ಯದಲ್ಲಿ ನಾವು 280 ರನ್ ಬಿಟ್ಟುಕೊಟ್ಟೆವು ಮತ್ತು ಇನ್ನೊಂದು ಪಂದ್ಯದಲ್ಲಿ ನಾವು 180 ರನ್ಗಳನ್ನು ಡಿಫೆಂಡ್ ಮಾಡಿಕೊಳ್ಳಲು ಸಾಧ್ಯವಾಗಲಿಲ್ಲ. ಈ ಗೆಲುವು ತುಂಬಾ ಅಗತ್ಯವಾಗಿತ್ತು' ಎಂದು ಅವರು ಹೇಳಿದರು.
Advertisement