
ಐಪಿಎಲ್ 2025 ಟೂರ್ನಿಯ ಆರಂಭದಿಂದಲೂ ಲಕ್ನೋ ಸೂಪರ್ ಜೈಂಟ್ಸ್ (LSG) ತಂಡದ ನಾಯಕ ರಿಷಭ್ ಪಂತ್ ಕಳಪೆ ಫಾರ್ಮ್ನಿಂದ ಬಳಲುತ್ತಿದ್ದಾರೆ. ಭಾನುವಾರ ಪಂಜಾಬ್ ಕಿಂಗ್ಸ್ (PBKS) ವಿರುದ್ಧದ ಪಂದ್ಯದಲ್ಲಿ ಎಲ್ಎಸ್ಜಿ ನಾಯಕ ಬ್ಯಾಟಿಂಗ್ನಲ್ಲಿ ಮತ್ತೊಮ್ಮೆ ವೈಫಲ್ಯ ಅನುಭವಿಸಿದ ನಂತರ, ತಮ್ಮ ಅಪ್ರೋಚ್ ಅನ್ನು ಬದಲಿಸಿಕೊಳ್ಳಲು ಪಂತ್ ಸಿದ್ಧರಿಲ್ಲ ಎಂದು ಭಾರತದ ಮಾಜಿ ಕ್ರಿಕೆಟಿಗ ಅಂಬಟಿ ರಾಯುಡು ಅಭಿಪ್ರಾಯಪಟ್ಟಿದ್ದಾರೆ. ಇಲ್ಲಿಯವರೆಗೆ, ಪಂತ್ ಆಡಿರುವ 10 ಇನಿಂಗ್ಸ್ಗಳಿಂದ ಕೇವಲ 128 ರನ್ ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಇಎಸ್ಪಿಎನ್ಕ್ರಿಕ್ಇನ್ಫೋ ಜೊತೆ ಮಾತನಾಡಿದ ರಾಯುಡು, ಪಂತ್ ಅವರು ನಿಜವಾಗಿಯೂ ಹಠಮಾರಿ ಸ್ವಭಾವದವರು ಮತ್ತು ಆಟದ ಶೈಲಿ ಅಥವಾ ತನ್ನ ಬ್ಯಾಟಿಂಗ್ ಅಪ್ರೋಚ್ ಅನ್ನು ಬದಲಿಸಿಕೊಳ್ಳಲು ಅವರಿಗೆ ಇಷ್ಟವಿಲ್ಲ. ಅದಕ್ಕಾಗಿ ಪಂತ್ ಬಗ್ಗೆ ನನಗೆ ವಿಷಾಧವಿದೆ. ಪ್ರತಿಯೊಬ್ಬ ಆಟಗಾರನು ಈ ರೀತಿಯ ಸವಾಲುಗಳನ್ನು ಎದುರಿಸುತ್ತಾನೆ. ಆದರೆ, ಪಂತ್ ಇನ್ನಷ್ಟು ಹಠಮಾರಿಯಾಗುವುದಿಲ್ಲ ಎಂದು ಆಶಿಸುತ್ತೇನೆ. ಪಂತ್ ಇದಕ್ಕೆ ಹೊಂದಿಕೊಳ್ಳದಿದ್ದರೆ, ಪರಿಸ್ಥಿತಿ ಇನ್ನಷ್ಟು ಹದಗೆಡಬಹುದು. ಪಂತ್ ಮಧ್ಯಮ ಕ್ರಮಾಂಕದಲ್ಲಿ ಆಡಲು ಕೌಶಲ್ಯ ಹೊಂದಿರಬಹುದು. ಆದರೆ, ಅದನ್ನು ಕಾರ್ಯಗತಗೊಳಿಸುವ ಮನಸ್ಥಿತಿ ಹೊಂದಿಲ್ಲ ಎಂದು ಅಭಿಪ್ರಾಯಪಟ್ಟರು.
ಪಂತ್ ಅವರು ತಮ್ಮ ಬ್ಯಾಟಿಂಗ್ ಕ್ರಮಾಂಕ ಅಥವಾ ಆಡುವ ವಿಧಾನವನ್ನು ಬದಲಿಸಿಕೊಳ್ಳುತ್ತಿಲ್ಲವಾದ್ದರಿಂದ ಅವರ ಬಗ್ಗೆ ನನಗೆ ವಿಷಾದವಿದೆ. ಪಂತ್ ಹಠಮಾರಿಯಾಗಿದ್ದು, ಬ್ಯಾಟಿಂಗ್ ವಿಧಾನದಲ್ಲಿ ಬದಲಾವಣೆಗೆ ಮನಸ್ಸು ಮಾಡುತ್ತಿಲ್ಲ. ಈ ಮೊಂಡುತನ ಮತ್ತು ಹೊಂದಿಕೊಳ್ಳಲು ನಿರಾಕರಿಸುವುದು ಪಂತ್ ಅವರ ಪರವಾಗಿ ಕೆಲಸ ಮಾಡುತ್ತಿಲ್ಲ ಎಂದು ರಾಯುಡು ಹೇಳಿದ್ದಾರೆ.
ಪಂತ್ಗೆ ಸೆಹ್ವಾಗ್ ಸಲಹೆ
ಈಮಧ್ಯೆ, ಪಂತ್ ಅವರು ಬ್ಯಾಟಿಂಗ್ ಮಾಡುವ ತಮ್ಮದೇ ಹಳೆಯ ವಿಡಿಯೋಗಳನ್ನು ನೋಡಬೇಕು ಮತ್ತು ರನ್ ಗಳಿಸಬೇಕು. ಗಾಯದ ನಂತರ ಎಲ್ಎಸ್ಜಿ ನಾಯಕ ಬದಲಾಗಿದ್ದಾರೆ. ಇದಲ್ಲದೆ, ಧೋನಿ ಅವರನ್ನು ಮಾದರಿ ಎಂದು ಪರಿಗಣಿಸಿದರೆ ಅವರಿಗೆ ಫೋನ್ ಮಾಡಿ ಮಾತನಾಡಬೇಕು ಎಂದು ವಿರೇಂದ್ರ ಸೆಹ್ವಾಗ್ ಕ್ರಿಕ್ಬಜ್ಗೆ ತಿಳಿಸಿದರು.
'ಅವರ ಬಳಿ ಫೋನ್ ಇದೆ. ಅವರು ಅದನ್ನು ಎತ್ತಿಕೊಂಡು ಯಾರಿಗಾದರೂ ಕರೆ ಮಾಡಬಹುದು. ಸರಿಯಾಗಿ ಯೋಚಿಸುತ್ತಿಲ್ಲ ಎಂದು ಅವರಿಗೆ ಅನಿಸಿದರೆ, ಅವರಿಗೆ ಸಹಾಯ ಮಾಡುವ ಹಲವು ಕ್ರಿಕೆಟಿಗರಿದ್ದಾರೆ. ಅವರು ಧೋನಿಯನ್ನು ತಮ್ಮ ಆದರ್ಶ ವ್ಯಕ್ತಿ ಎಂದು ಪರಿಗಣಿಸಿದರೆ, ಅವರು ಅವರೊಂದಿಗೆ ಮಾತನಾಡಬೇಕು' ಎಂದು ಹೇಳಿದರು.
ಪಿಬಿಕೆಎಸ್ ವಿರುದ್ಧ ಎಲ್ಎಸ್ಜಿಯ ರನ್ ಚೇಸ್ನಲ್ಲಿ ಪಂತ್ 17 ಎಸೆತಗಳಲ್ಲಿ ಕೇವಲ 18 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಪಂದ್ಯದ ನಂತರ ಮಾತನಾಡಿದ ಅವರು, ಸೋಲಿಗೆ ತಮ್ಮ ತಂಡದ ಕಳಪೆ ಫೀಲ್ಡಿಂಗ್ ಕಾರಣ ಎಂದರು.
Advertisement