
ನವದೆಹಲಿ: ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನತೆ ಹೆಚ್ಚುತ್ತಿರುವ ಕಾರಣ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಅನ್ನು ಶುಕ್ರವಾರ ಅನಿರ್ದಿಷ್ಟಾವಧಿಗೆ ಸ್ಥಗಿತಗೊಳಿಸಲಾಗಿದೆ.
ಜಮ್ಮು ಮತ್ತು ಪಠಾಣ್ಕೋಟ್ಗಳಲ್ಲಿ ವಾಯುದಾಳಿ ಎಚ್ಚರಿಕೆಯ ನಂತರ ಧರ್ಮಶಾಲಾದಲ್ಲಿ ಗುರುವಾರ ನಡೆಯುತ್ತಿದ್ದ ಪಂಜಾಬ್ ಕಿಂಗ್ಸ್ ಮತ್ತು ದೆಹಲಿ ಕ್ಯಾಪಿಟಲ್ಸ್ ನಡುವಿನ ಪಂದ್ಯವನ್ನು ಅರ್ಧದಲ್ಲಿಯೇ ರದ್ದುಗೊಳಿಸಲಾಯಿತು. ಆಗಿನಿಂದ ಐಪಿಎಲ್ 2025ನೇ ಆವೃತ್ತಿಯ ಭವಿಷ್ಯದ ಕುರಿತು ಹಲವು ಪ್ರಶ್ನೆಗಳು ಎದ್ದಿದ್ದವು.
'ದೇಶ ಯುದ್ಧದಲ್ಲಿರುವಾಗ ಕ್ರಿಕೆಟ್ ಮುಂದುವರಿಯುವುದು ಒಳ್ಳೆಯದಲ್ಲ' ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಸುದ್ದಿಸಂಸ್ಥೆ ಪಿಟಿಐಗೆ ತಿಳಿಸಿದ್ದು, ಮೇ 25ರಂದು ಕೋಲ್ಕತ್ತಾದಲ್ಲಿ ಮುಕ್ತಾಯಗೊಳ್ಳಬೇಕಿದ್ದ ಲೀಗ್ ಅನ್ನು ಸ್ಥಗಿತಗೊಳಿಸಲಾಗಿದೆ ಎಂದು ದೃಢಪಡಿಸಿದ್ದಾರೆ.
ಏಪ್ರಿಲ್ 22ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಜನರು ಸಾವಿಗೀಡಾದ ಹದಿನೈದು ದಿನಗಳ ನಂತರ ಭಾರತವು ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿನ ಭಯೋತ್ಪಾದಕ ನೆಲೆಗಳ ಮೇಲೆ ಕ್ಷಿಪಣಿ ದಾಳಿ ನಡೆಸಿತು.
ಗುರುವಾರ, ಪಠಾಣ್ಕೋಟ್, ಅಮೃತಸರ, ಜಲಂಧರ್, ಹೋಶಿಯಾರ್ಪುರ, ಪಂಜಾಬ್ನ ಮೊಹಾಲಿ ಮತ್ತು ಕೇಂದ್ರಾಡಳಿತ ಪ್ರದೇಶ ಚಂಡೀಗಢ ಸೇರಿದಂತೆ ಹಲವಾರು ಜಿಲ್ಲೆಗಳಲ್ಲಿ ವಾಯುದಾಳಿಯ ಎಚ್ಚರಿಕೆಗಳು ಮತ್ತು ಜಮ್ಮುವಿನಲ್ಲಿ ಸ್ಫೋಟದಂತಹ ಶಬ್ದಗಳ ವರದಿಗಳ ಹಿನ್ನೆಲೆಯಲ್ಲಿ ಪಂದ್ಯವನ್ನು ಸ್ಥಗಿತಗೊಳಿಸಲಾಯಿತು.
ಪಾಕಿಸ್ತಾನ ಸೂಪರ್ ಲೀಗ್ (ಪಿಎಸ್ಎಲ್) ಅನ್ನು ಸಹ ಯುಎಇಗೆ ಸ್ಥಳಾಂತರಿಸಲಾಗಿದೆ.
ಲೀಗ್ ಮೂಲಗಳ ಪ್ರಕಾರ, ಭಾರತ ಮತ್ತು ಪಾಕಿಸ್ತಾನ ನಡುವಿನ ಮಿಲಿಟರಿ ಮುಖಾಮುಖಿಯು ವಿದೇಶಿ ಆಟಗಾರರಲ್ಲಿ ಗಮನಾರ್ಹ ಆತಂಕವನ್ನು ಉಂಟುಮಾಡಿದೆ ಮತ್ತು ಅವರು ಮುಂದಿನ ಕೆಲವು ದಿನಗಳಲ್ಲಿ ತಮ್ಮ ದೇಶಗಳಿಗೆ ಹಿಂತಿರುಗಲಿದ್ದಾರೆ.
ಕಳೆದ ವರ್ಷ ನಡೆದ ಮೆಗಾ-ಹರಾಜಿನಲ್ಲಿ 10 ಫ್ರಾಂಚೈಸಿಗಳು ಅರವತ್ತೆರಡು ವಿದೇಶಿ ಆಟಗಾರರನ್ನು ಖರೀದಿಸಿದ್ದವು.
ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಪಂಜಾಬ್ ಕಿಂಗ್ಸ್ ತಂಡದ ಆಟಗಾರರು ಸದ್ಯ ಧರ್ಮಶಾಲಾದಿಂದ ರಸ್ತೆ ಮೂಲಕ ರಾಷ್ಟ್ರ ರಾಜಧಾನಿಗೆ ತೆರಳುತ್ತಿದ್ದಾರೆ.
ಶುಕ್ರವಾರ, ಲಕ್ನೋ ಸೂಪರ್ ಜೈಂಟ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರರು ಈಗಾಗಲೇ ಪಂದ್ಯಕ್ಕಾಗಿ ಲಕ್ನೋದಲ್ಲಿದ್ದು, ಆ ಪಂದ್ಯವನ್ನು ಈಗ ಸ್ಥಗಿತಗೊಳಿಸಲಾಗಿದೆ.
ಐಪಿಎಲ್ ಸ್ಥಗಿತಗೊಳಿಸುವ ಸಮಯದಲ್ಲಿ ಹನ್ನೆರಡು ಲೀಗ್ ಪಂದ್ಯಗಳು ಮತ್ತು ಕೋಲ್ಕತ್ತಾದಲ್ಲಿ ನಡೆಯಲಿರುವ ಫೈನಲ್ ಸೇರಿದಂತೆ ನಾಲ್ಕು ನಾಕೌಟ್ ಪಂದ್ಯಗಳು ಬಾಕಿ ಉಳಿದಿವೆ.
Advertisement