ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿಯ ಬಳಿಕ ಭಾರತೀಯ ಸಶಸ್ತ್ರ ಪಡೆಗಳು ಆಪರೇಷನ್ ಸಿಂಧೂರ ಹೆಸರಿನಲ್ಲಿ ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿನ ಉಗ್ರ ನೆಲೆಗಳ ಮೇಲೆ ದಾಳಿ ನಡೆಸಿದ್ದು, ಇದೀಗ ಭಾರತ ಮತ್ತು ಪಾಕಿಸ್ತಾನ ನಡುವೆ ಉದ್ವಿಗ್ನತೆ ಹೆಚ್ಚಳವಾಗಿದೆ. ಈ ಹಿನ್ನೆಲೆಯಲ್ಲಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಒಂದು ವಾರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಅನ್ನು ಸ್ಥಗಿತಗೊಳಿಸಿದೆ. ರದ್ದಾದ ಪಂದ್ಯ ಅಥವಾ ಒಂದು ವೇಳೆ ಐಪಿಎಲ್ ನಡೆಯದೇ ಹೋದರೆ ಉಂಟಾಗುವ ನಷ್ಟ ಕೂಡ ಕಡಿಮೆಯಿಲ್ಲ.
ತಂಡದ ಮಾಲೀಕರು ಮತ್ತು ಆಟಗಾರರು, ಪ್ರಸಾರಕರು, ವಿವಿಧ ರೀತಿಯ ಪ್ರಾಯೋಜಕರು - ಪ್ರಮುಖ ಪಾಲುದಾರರು ಮಾತ್ರವಲ್ಲದೆ ಹಲವರಿಗೆ ಭಾರಿ ಹೊಡೆತ ಉಂಟಾಗುತ್ತದೆ. ಐಪಿಎಲ್ ವ್ಯವಸ್ಥೆಯೊಳಗೆ ಮಾತ್ರವಲ್ಲದೆ, ವಿವಿಧ ಕ್ರೀಡಾಂಗಣಗಳ ಒಳಗೆ ಮತ್ತು ಹೊರಗಿನ ಮಾರಾಟಗಾರರು, ಸರಕುಗಳನ್ನು ಮಾರಾಟ ಮಾಡುವವರು, ಕ್ಯಾಬ್ ಮತ್ತು ತ್ರಿಚಕ್ರ ವಾಹನ ನಿರ್ವಾಹಕರು, ರೆಸ್ಟೋರೆಂಟ್ಗಳು ಮತ್ತು ನಗರದಲ್ಲಿ ಪಂದ್ಯ ನಡೆಯುವ ಸ್ಥಳಗಳಲ್ಲಿನ ಅಂಗಡಿಗಳ ಮೇಲೂ ಪರಿಣಾಮ ಬೀರುತ್ತವೆ.
ಸದ್ಯಕ್ಕೆ, ಐಪಿಎಲ್ 2025ನೇ ಆವೃತ್ತಿಯನ್ನು ಒಂದು ವಾರದವರೆಗೆ ಸ್ಥಗಿತಗೊಳಿಸಲಾಗಿದ್ದು, ಪಂದ್ಯಾವಳಿಯ ಆಡಳಿತ ಮಂಡಳಿ ಮತ್ತು ಪಾಲುದಾರರು ಸಮಾಲೋಚನೆ ನಡೆಸಿ, ಭವಿಷ್ಯದ ಕ್ರಮವನ್ನು ನಿರ್ಧರಿಸಲಿದ್ದಾರೆ. ನಾಲ್ಕು ಪ್ಲೇಆಫ್ ಸೇರಿದಂತೆ 16 ಪಂದ್ಯಗಳು ಇದೀಗ ಬಾಕಿ ಉಳಿದಿವೆ. ಒಂದು ವಾರದ ಬಳಿಕ ಈ ಪಂದ್ಯಗಳನ್ನು ಯಾವಾಗ, ಎಲ್ಲಿ ನಡೆಸಬೇಕು ಅಥವಾ ರದ್ದುಗೊಳಿಸುವ ಬಗ್ಗೆ ನಿರ್ಧರಿಸಲಾಗುತ್ತದೆ.
ಭಾರತ ಮತ್ತು ಪಾಕಿಸ್ತಾನದ ನಡುವಿನ ಹೆಚ್ಚುತ್ತಿರುವ ಉದ್ವಿಗ್ನತೆಯಿಂದಾಗಿ ಐಪಿಎಲ್ ಸ್ಥಗಿತಗೊಳಿಸಲಾಗಿದೆ. ಆದರೆ, ರದ್ದಾದ ಪ್ರತಿಯೊಂದು ಪಂದ್ಯಕ್ಕೂ ಭಾರಿ ನಷ್ಟ ಉಂಟಾಗುತ್ತದೆ ಎಂದು ತಿಳಿದುಬಂದಿದೆ. ಪ್ರತಿ ಪಂದ್ಯದಿಂದ ಉಂಟಾಗುವ ನಷ್ಟವು ₹100 ರಿಂದ ₹125 ಕೋಟಿಗಳವರೆಗೆ ಇರುತ್ತದೆ ಎಂದು ಅಂದಾಜಿಸಲಾಗಿದೆ. ವಿಮೆಯಿಂದಾಗಿ ನಷ್ಟದ ಒಂದು ಭಾಗವನ್ನು ಸರಿದೂಗಿಸಿದರೂ, ಪ್ರಸಾರ, ಪ್ರಾಯೋಜಕತ್ವ ಮತ್ತು ಇತರ ಪಂದ್ಯ-ಸಂಬಂಧಿತ ಆದಾಯಗಳನ್ನು ಪರಿಗಣಿಸಿದಾಗ ಆ ನಷ್ಟವು ಅರ್ಧದಷ್ಟು ಇರುತ್ತದೆ.
ಪಂದ್ಯಾವಳಿಯನ್ನು ಶೀಘ್ರವಾಗಿ ಪುನರಾರಂಭಿಸಲು ಫ್ರಾಂಚೈಸಿಗಳು ಸಿದ್ಧರಾಗಿರುವಂತೆ ಐಪಿಎಲ್ ಆಡಳಿತ ಮಂಡಳಿ ತಿಳಿಸಿದೆ. ಆದರೆ, ಆತಂಕಕ್ಕೆ ಒಳಗಾಗಿರುವ ವಿದೇಶಿ ಆಟಗಾರರು ಇದೀಗ ತಮ್ಮ ತಮ್ಮ ತವರು ರಾಷ್ಟ್ರಗಳಿಗೆ ಮರಳಿದ್ದಾರೆ. ಆದರೆ, ಮತ್ತೆ ಐಪಿಎಲ್ ಪ್ರಾರಂಭವಾದರೆ ಅವರಲ್ಲಿ ಬಹುಪಾಲು ಆಟಗಾರರು ಹಿಂತಿರುಗುತ್ತಾರೆ. ಒಂದು ವೇಳೆ ಈಗ ಪರಿಸ್ಥಿತಿ ಸೂಕ್ತವಾಗಿಲ್ಲದಿದ್ದರೆ, ಆಗಸ್ಟ್-ಸೆಪ್ಟೆಂಬರ್ ವೇಳೆಗೆ ಉಳಿದ ಪಂದ್ಯಗಳನ್ನು ನಡೆಸಬಹುದಾಗಿದೆ.
ಪಂದ್ಯಾವಳಿಯನ್ನು ರದ್ದುಗೊಳಿಸಿದರೆ, ಪಂದ್ಯಾವಳಿಯ ಸಮಯದಲ್ಲಿ ಜಾಹೀರಾತುಗಳಿಂದ ₹5,500 ಕೋಟಿ ಗಳಿಸಲು ಯೋಜಿಸಿದ್ದ ಪ್ರಸಾರಕರು ಆದಾಯದಲ್ಲಿ ಮೂರನೇ ಒಂದು ಭಾಗವನ್ನು ಕಳೆದುಕೊಳ್ಳುತ್ತಾರೆ. ಎಲ್ಲ ಹತ್ತು ಫ್ರಾಂಚೈಸಿಗಳ ಮೇಲೂ ಒಂದಲ್ಲ ಒಂದು ರೀತಿಯಲ್ಲಿ ಪರಿಣಾಮ ಬೀರುತ್ತದೆ. ಪ್ರಸಾರ ಮತ್ತು ಪ್ರಾಯೋಜಕತ್ವದ ಹಕ್ಕುಗಳನ್ನು ಒಳಗೊಂಡಂತೆ ಐಪಿಎಲ್ ಕೇಂದ್ರೀಯ ನಿಧಿಯಿಂದ ಬರುವ ಆದಾಯವನ್ನೇ ಹೆಚ್ಚು ಅವಲಂಬಿಸಿರುವ ಫ್ರಾಂಚೈಸಿಗಳು ಇತರರಿಗಿಂತ ಹೆಚ್ಚು ತೊಂದರೆಗೆ ಸಿಲುಕುತ್ತವೆ. ಟಿಕೆಟ್ ಮೂಲಕ ಬರುವ ಆದಾಯಕ್ಕೂ ಹೊಡೆತ ಬೀಳುತ್ತದೆ. ಪ್ಲೇಆಫ್ ಪಂದ್ಯಗಳು ಐಪಿಎಲ್/ಬಿಸಿಸಿಐಗೆ ಸೇರಿದ್ದಾದರೂ, ಲೀಗ್ ಹಂತದ 'ಹೋಮ್' ಪಂದ್ಯಗಳಿಂದ ಬರುವ ಟಿಕೆಟ್ ಆದಾಯ ಕೂಡ ಫ್ರಾಂಚೈಸಿಗಳ ಕೈತಪ್ಪುತ್ತದೆ.
ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಇನ್ನೂ ಎರಡು ಪಂದ್ಯಗಳು ಬಾಕಿ ಉಳಿದಿವೆ. ಐಪಿಎಲ್ನಲ್ಲಿ ಆಡುವ ಎಲ್ಲ ಫ್ರಾಂಚೈಸಿಗಳಿಗಿಂತ ಆರ್ಸಿಬಿ ಪಂದ್ಯದ ಟಿಕೆಟ್ ಮೌಲ್ಯ ಹೆಚ್ಚು ದುಬಾರಿಯಾಗಿವೆ. ಹೀಗಾಗಿ, ಆರ್ಥಿಕ ನಷ್ಟ ಮಾತ್ರವಲ್ಲದೆ, ಆರ್ಸಿಬಿ ಇದೀಗ ಆಡಿರುವ 11 ಪಂದ್ಯಗಳಲ್ಲಿ 8ರಲ್ಲಿ ಗೆಲುವು ಸಾಧಿಸಿದ್ದು, ಮೊಮೆಂಟಂ ಮೇಲೂ ಈ ವಿರಾಮ ಪರಿಣಾಮ ಬೀರುತ್ತದೆ.
ಆದರೆ, ಆಟಗಾರರ ಮೇಲೆ ಹೆಚ್ಚಿನ ಪರಿಣಾಮ ಬೀರುವುದಿಲ್ಲ. ಪಂದ್ಯದ ದಿನಗಳಲ್ಲಿ ಕ್ರೀಡಾಂಗಣಗಳ ಹೊರಗೆ ಫ್ರಾಂಚೈಸಿಗಳ 'ಸರಕು'ಗಳ ಮಾರಾಟ ಮಾಡುವವರಿಗೆ ಅಥವಾ ಆಟದ ಸಮಯದಲ್ಲಿ ಮೈದಾನಗಳಲ್ಲಿ ಅಡುಗೆ ಮತ್ತು ಇತರ ಸೇವೆಗಳ ಹಕ್ಕುಗಳನ್ನು ಪಡೆಯಲು ಹಣವನ್ನು ಖರ್ಚು ಮಾಡಿದವರಿಗೆ ಹೊಡೆತ ಬೀಳುತ್ತದೆ.
Advertisement