
ಇತ್ತೀಚೆಗಷ್ಟೇ ಟೀಂ ಇಂಡಿಯಾದ ಸ್ಟಾರ್ ಆಟಗಾರರಾದ ರವಿಚಂದ್ರನ್ ಅಶ್ವಿನ್, ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದು, ಇದೀಗ ಟೀಂ ಇಂಡಿಯಾದ ಟೆಸ್ಟ್ ಕ್ರಿಕೆಟ್ ತಂಡಕ್ಕೆ ಹೊಸ ಆಟಗಾರರನ್ನು ಆಯ್ಕೆ ಮಾಡುವ ಸವಾಲು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ)ಗೆ ಎದುರಾಗಿದೆ. ಟೆಸ್ಟ್ ಕ್ರಿಕೆಟ್ಗೆ ನಾಯಕತ್ವ ವಹಿಸುವ ಪಟ್ಟಿಯಲ್ಲಿ ಇದೀಗ ಶುಭಮನ್ ಗಿಲ್ ಹೆಸರು ಅಗ್ರಸ್ಥಾನದಲ್ಲಿದೆ. ಆದರೂ, ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ಕ್ರಿಸ್ ಶ್ರೀಕಾಂತ್ ಅವರು ಅಗ್ರ ಕ್ರಮಾಂಕದ ಬ್ಯಾಟ್ಸ್ಮನ್ ಆದ ಗಿಲ್ ಅವರು ನಾಯಕನ ಸ್ಥಾನಕ್ಕೆ ಸರಿಯಾದ ಆಯ್ಕೆಯಲ್ಲ ಎಂದಿದ್ದಾರೆ.
1983ರ ವಿಶ್ವಕಪ್ ವಿಜೇತ ತಂಡದಲ್ಲಿದ್ದ ಶ್ರೀಕಾಂತ್, ಭಾರತದ ಟೆಸ್ಟ್ XI ನಲ್ಲಿ ಗಿಲ್ ಖಚಿತವಾದ ಆರಂಭಿಕ ಆಟಗಾರನಲ್ಲ. ಆದ್ದರಿಂದ ಅವರಿಗೆ ನಾಯಕತ್ವದ ಜವಾಬ್ದಾರಿ ನೀಡುವುದು ಸೂಕ್ತವಲ್ಲ. ವೇಗಿ ಜಸ್ಪ್ರೀತ್ ಬುಮ್ರಾ ಅವರಿಗೆ ನಾಯಕತ್ವದ ಜವಾಬ್ದಾರಿಯನ್ನು ನೀಡಬೇಕು ಎಂದಿದ್ದಾರೆ.
'ಈಗ ನಾಯಕನಾಗುವ ಅಭ್ಯರ್ಥಿ ಯಾರು? ಶುಭಮನ್ ಗಿಲ್? ಅವರು ಇನ್ನೂ XI ನಲ್ಲಿ ಇರುತ್ತಾರೆ ಎಂಬ ಬಗ್ಗೆ ಖಚಿತವಾಗಿಲ್ಲ. ನೀವು ಕೆಎಲ್ ರಾಹುಲ್ ಅಥವಾ ರಿಷಭ್ ಪಂತ್ ಅವರಿಗೆ ನಾಯಕತ್ವ ನೀಡುತ್ತಿಲ್ಲ. ಹೀಗಾಗಿ, ಜಸ್ಪ್ರೀತ್ ಬುಮ್ರಾ ಅವರಿಗೆ ನೀಡುತ್ತೀರಿ. ನಿಮ್ಮ ಮುಂದಿರುವ ಇನ್ನೊಂದು ಆಯ್ಕೆ ಬುಮ್ರಾ. ಅವರು ಟೆಸ್ಟ್ ಪಂದ್ಯದಲ್ಲಿ ಆಡದಿದ್ದಾಗ, ನೀವು ಕೆಎಲ್ ರಾಹುಲ್ ಅವರಿಗೆ ತಾತ್ಕಾಲಿಕವಾಗಿ ಈ ಜವಾಬ್ದಾರಿಯನ್ನು ನೀಡಬಹುದು' ಎಂದು ಇಂಡಿಯಾ ಟುಡೇಗೆ ತಿಳಿಸಿದ್ದಾರೆ.
'ಈಗ, ಬುಮ್ರಾ ನಾಯಕನಾಗಿರಬೇಕು ಎಂದು ನಾನು ಭಾವಿಸುತ್ತೇನೆ. ನಾನು ಆಯ್ಕೆದಾರರ ಅಧ್ಯಕ್ಷನಾಗಿದ್ದರೆ, ನಾನು ಬುಮ್ರಾ ಅವರನ್ನು ನಾಯಕನನ್ನಾಗಿ ಮಾಡುತ್ತೇನೆ. ನೀವು ಬಯಸುವ ಯಾವುದೇ ಪಂದ್ಯಗಳನ್ನು ಆಡಿ ಎಂದು ಬುಮ್ರಾ ಅವರಿಗೆ ಹೇಳುತ್ತೇನೆ. ನಂತರ ನಾನು ಕೆಎಲ್ ರಾಹುಲ್ ಅಥವಾ ರಿಷಭ್ ಪಂತ್ ಅವರನ್ನು ಉಪನಾಯಕರನ್ನಾಗಿ ನೇಮಿಸುತ್ತೇನೆ. ಏಕೆಂದರೆ, ಇವರಿಬ್ಬರ ಹೆಸರು XI ನಲ್ಲಿ ಇರುತ್ತದೆ' ಎಂದು ಅವರು ಹೇಳಿದರು.
ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿಯು ಗಿಲ್ ಅವರನ್ನು ನಾಯಕನ ಪಾತ್ರಕ್ಕೆ 'ಸಮಯಕ್ಕೆ ಅನುಗುಣವಾಗಿ' ಬಡ್ತಿ ನೀಡುತ್ತಿದೆ. ಅವರಿಗೆ, ಬಲಗೈ ಬ್ಯಾಟ್ಸ್ಮನ್ ಮೊದಲು ಸವಾಲಿನ ಪರಿಸ್ಥಿತಿಗಳಲ್ಲಿ ರನ್ ಗಳಿಸುವ ಮೂಲಕ ತಂಡದಲ್ಲಿ ತನ್ನನ್ನು ತಾನು ಸ್ಥಾಪಿಸಿಕೊಳ್ಳುವುದು ಮುಖ್ಯವಾಗಿದೆ. ಅದರಲ್ಲಿ ಯಾವುದೇ ತಪ್ಪಿಲ್ಲ. ನೀವು ಕೇವಲ ಸಮಯದ ಅನುಗುಣವಾಗಿ ಯಾರನ್ನಾದರೂ ನಾಯಕನನ್ನಾಗಿ ನೇಮಿಸಲು ಸಾಧ್ಯವಿಲ್ಲ. ಆಯ್ಕೆದಾರರು ಏನು ಯೋಚಿಸುತ್ತಿದ್ದಾರೆಂದು ನನಗೆ ತಿಳಿದಿಲ್ಲ. ಆದರೆ ಇದು ನನ್ನ ಅಭಿಪ್ರಾಯ' ಎಂದು ಅವರು ಹೇಳಿದರು.
'ಶುಬ್ಮನ್ ಗಿಲ್ ಬಗ್ಗೆ ಬಹಳಷ್ಟು ಹೇಳಲಾಗುತ್ತಿದೆ. ಆದರೆ ಅವರು ಇನ್ನೂ ದೊಡ್ಡ ರನ್ ಗಳಿಸಿಲ್ಲ. ಇಂಗ್ಲೆಂಡ್, ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾದಲ್ಲಿ ಅವರು ಎಂದಿಗೂ ರನ್ ಗಳಿಸಿಲ್ಲ. ಅಂದರೆ ನೀವು ಎಲ್ಲವನ್ನೂ ಅವರ ಮೇಲೆ ಹೇರುತ್ತಿದ್ದೀರಿ. ಶುಭ್ಮನ್ ಗಿಲ್ ಟೆಸ್ಟ್ ಕ್ರಿಕೆಟ್ನಲ್ಲಿ ಮೊದಲು ತಮ್ಮನ್ನು ತಾವು ಸ್ಥಾಪಿಸಿಕೊಳ್ಳಲಿ. ತವರು ಪರಿಸ್ಥಿತಿಯಲ್ಲಿ ಆಡುವಾಗ ಅವರು ರಾಜನಾಗಿದ್ದಾರೆ' ಎಂದರು.
ಕೊಹ್ಲಿ ನಿವೃತ್ತಿಯ ಬಗ್ಗೆ ಪ್ರತಿಕ್ರಿಯಿಸಿದ ಶ್ರೀಕಾಂತ್, ನಿವೃತ್ತಿ ವೈಯಕ್ತಿಕ ನಿರ್ಧಾರ ಎಂದು ಹೇಳುತ್ತಿದ್ದರೂ, ಕೊಹ್ಲಿ ಅವರ ಮನಸ್ಸನ್ನು ಬದಲಾಯಿಸಲು ಬಿಸಿಸಿಐ ತನ್ನಿಂದ ಸಾಧ್ಯವಿರುವ ಎಲ್ಲವನ್ನೂ ಮಾಡಬೇಕಾಗಿತ್ತು ಎಂದರು.
ಇದು ವೈಯಕ್ತಿಕ ಆಯ್ಕೆ (ನಿವೃತ್ತಿ). ಆದರೆ ನಾನು ಆಯ್ಕೆ ಸಮಿತಿಯ ಅಧ್ಯಕ್ಷನಾಗಿದ್ದರೆ, ನಾನು ಅವರನ್ನು ವೈಯಕ್ತಿಕವಾಗಿ ವಿನಂತಿಸುತ್ತಿದ್ದೆ: 'ಬಾಸ್, ನೀವು ಸ್ವಲ್ಪ ಸಮಯದವರೆಗೆ ಭಾರತ ತಂಡದ ನಾಯಕತ್ವ ವಹಿಸಬೇಕೆಂದು ನಾನು ಬಯಸುತ್ತೇನೆ' ಎಂದು ಹೇಳುತ್ತಿದ್ದೆ. ಈಗ ರೋಹಿತ್ ಕೂಡ ಇಲ್ಲದಿರುವುದರಿಂದ, ನಾಯಕತ್ವದ ವಿಷಯಕ್ಕೆ ಬಂದಾಗ ಇದ್ದಕ್ಕಿದ್ದಂತೆ ಒಂದು ಶೂನ್ಯ ಉಂಟಾಗಿದೆ. ಅವರು ನಿವೃತ್ತಿ ಘೋಷಣೆಗೂ ಮುನ್ನ ನಾನು ಅವರೊಂದಿಗೆ ಮಾತನಾಡುತ್ತಿದ್ದೆ. ನಾನು ಅವರಿಗೆ ಹೇಳುತ್ತಿದ್ದೆ: 'ಮುಂದಿನ ಆರು ತಿಂಗಳು ಅಥವಾ ಒಂದು ವರ್ಷದ ಅವಧಿಗೆ ನೀವು ನಾಯಕರಾಗಬೇಕೆಂದು ನಾನು ಬಯಸುತ್ತೇನೆ. ನೀವು ಎಷ್ಟು ಸಮಯ ಬೇಕಾದರೂ ಕೆಲಸ ಮಾಡಿ ನಂತರ ನಿವೃತ್ತಿ ಹೊಂದಿ' ಎಂದು ಹೇಳುತ್ತಿದ್ದೆ'. ಕೊಹ್ಲಿ ಭಾರತದ ಅತ್ಯುತ್ತಮ ಟೆಸ್ಟ್ ನಾಯಕ' ಎಂದು ಶ್ರೀಕಾಂತ್ ಹೇಳಿದರು.
Advertisement