
ಮುಂಬೈ: ಭಾರತೀಯ ಕ್ರಿಕೆಟ್ ತಂಡದ ಜೆರ್ಸಿ ಸ್ಪಾನ್ಸರ್ಶಿಪ್ಗಾಗಿ ಬಿಸಿಸಿಐ ಹೊಸ ಅರ್ಜಿಗಳನ್ನು ಆಹ್ವಾನಿಸಿದ್ದು, ಡ್ರೀಮ್ 11 ಜೊತೆಗಿನ ಒಪ್ಪಂದ ರದ್ದಾದ ನಂತರ ಈ ಹೊಸ ಹುಡುಕಾಟ ಆರಂಭವಾಗಿದೆ.
ಹೌದು.. ಭಾರತ ರಾಷ್ಟ್ರೀಯ ಕ್ರಿಕೆಟ್ ತಂಡ (indian Cricket team)ದ ಜೆರ್ಸಿ ಸ್ಪಾನ್ಸರ್ಗೆ 'ಗೌರವಾನ್ವಿತ ಸಂಸ್ಥೆ'ಗಳಿಂದ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಇಂದು ಅಧಿಕೃತವಾಗಿ ಅರ್ಜಿ ಆಹ್ವಾನಿಸಿದೆ.
ಭಾರತ ಕ್ರಿಕೆಟ್ ತಂಡದ ಆಟಗಾರರಿಗೆ ಜೆರ್ಸಿ ಸ್ಪಾನ್ಸರ್ ನೀಡುವ ಆಸಕ್ತ ಹಾಗೂ ಪ್ರತಿಷ್ಠಿತ ಸಂಸ್ಥೆಗಳು ಸೆಪ್ಟೆಂಬರ್ 02ರಿಂದಲೇ ಅರ್ಜಿ ಪಡೆದುಕೊಂಡು ಸೆಪ್ಟೆಂಬರ್ 16ರೊಳಗೆ ಬಿಡ್ ಸಲ್ಲಿಸಲು ದಿನಾಂಕ ಗಡುವು ನೀಡಿದೆ.
ಕೆಲದಿನಗಳ ಹಿಂದಷ್ಟೇ ಭಾರತ ಕ್ರಿಕೆಟ್ ತಂಡದ ಜೆರ್ಸಿ ಪ್ರಾಯೋಜಕರಾಗಿದ್ದ ಆನ್ಲೈನ್ ಗೇಮಿಂಗ್ ಆ್ಯಪ್ ಡ್ರೀಮ್ 11 ಜೊತೆಗಿನ ಒಪ್ಪಂದವನ್ನು ಬಿಸಿಸಿಐ ಅಧಿಕೃತವಾಗಿ ರದ್ದುಗೊಳಿಸಿತ್ತು. ಹಣದಾಟದ ಆನ್ಲೈನ್ ಗೇಮಿಂಗ್ ನಿಷೇಧ ಕಾಯ್ದೆಯನ್ನು ಸಂಸತ್ತು ಅಂಗೀಕರಿಸಿದ ಬೆನ್ನಲ್ಲೇ ಬಿಸಿಸಿಐ ಜತೆಗಿನ ಡ್ರೀಮ್11 ಒಪ್ಪಂದ ಅಧಿಕೃತವಾಗಿ ಕೊನೆಗೊಂಡಿತ್ತು.
ಇನ್ನು ಡ್ರೀಮ್ 11 ಒಪ್ಪಂದ ರದ್ದಾದ ಹಿನ್ನಲೆಯಲ್ಲಿ ಇದೇ ಸೆಪ್ಟೆಂಬರ್ 09ರಿಂದ ಆರಂಭವಾಗಲಿರುವ ಏಷ್ಯಾಕಪ್ ಟೂರ್ನಿಯಲ್ಲಿ ಭಾರತ ಕ್ರಿಕೆಟ್ ತಂಡವು ಯಾವುದೇ ಮೇಜರ್ ಜೆರ್ಸಿ ಸ್ಪಾನ್ಸರ್ಗಳಿಲ್ಲದೇ ಕಣಕ್ಕಿಳಿಯಲಿದೆ ಎಂದು ವರದಿಯಾಗಿತ್ತು.
ಆದರೆ ಇದೀಗ ಬಿಸಿಸಿಐ ಸ್ಪಾನ್ಸರ್ ಶಿಪ್ ಗಾಗಿ ಅಧಿಕೃತ ಆಹ್ವಾನ ನೀಡಿದ್ದು, ಭಾರತ ತಂಡಕ್ಕೆ ಹೊಸ ಸ್ಪಾನ್ಸರ್ಸ್ ಸಿಗುವ ಸಾಧ್ಯತೆ ಇದೆ. ಈಗಾಗಲೇ ಟೊಯೋಟಾ ಸೇರಿದಂತೆ ಹಲವು ದೊಡ್ಡ ಕಂಪನಿಗಳು ಈಗಾಗಲೇ ಪ್ರಾಯೋಜಕತ್ವದ ಆಸಕ್ತಿ ತೋರಿಸಿವೆ ಎಂದು ವರದಿಯಾಗಿದೆ.
ಏಕದಿನ ವಿಶ್ವಕಪ್ ವರೆಗೂ ಸ್ಪಾನ್ಸರ್ ಶಿಪ್?
ವರದಿಗಳ ಪ್ರಕಾರ ಬಿಸಿಸಿಐ 2027ರ ಪುರುಷರ ಏಕದಿನ ವಿಶ್ವಕಪ್ ಟೂರ್ನಿಯ ವರೆಗೆ ಹೊಸ ಜೆರ್ಸಿ ಸ್ಪಾನ್ಸರ್ ಜತೆಗೆ ಒಪ್ಪಂದ ಮಾಡಿಕೊಳ್ಳಲು ಚಿಂತನೆ ನಡೆಸಿದೆ ಎಂದು ವರದಿಯಾಗಿದೆ. ಸದ್ಯ ಬಿಸಿಸಿಐ ಹಂಗಾಮಿ ಅಧ್ಯಕ್ಷ ರಾಜೀವ್ ಶುಕ್ಲಾ ನೇತೃತ್ವದಲ್ಲಿ ಕಳೆದ ಆಗಸ್ಟ್ 28ರಂದು ನಡೆದ ಅಪೆಕ್ಸ್ ಕೌನ್ಸಿಲ್ ಮೀಟಿಂಗ್ನಲ್ಲಿ ಹೊಸ ಸ್ಪಾನ್ಸರ್ ಹುಡುಕಾಟದ ವಿಚಾರದಲ್ಲಿ ಯಾವುದೇ ಅವಸರ ಮಾಡಬಾರದು ಎಂದು ತೀರ್ಮಾನಿಸಲಾಗಿದೆ ಎಂದು ವರದಿಯಾಗಿತ್ತು.
ಈ ಮೊದಲು ಬಿಸಿಸಿಐ, 2023ರಿಂದ 2026ರ ಅವಧಿಗೆ ಬರೋಬ್ಬರಿ 358 ಕೋಟಿ ರುಪಾಯಿಗೆ ಟೈಟಲ್ ಸ್ಪಾನ್ಸರ್ ಹಾಗೂ ಜೆರ್ಸಿ ಸ್ಪಾನ್ಸರ್ ಮಾಡಿಕೊಂಡಿತ್ತು. ಐಪಿಎಲ್ನಲ್ಲೂ ಡ್ರೀಮ್ 11 ಪ್ರಮುಖ ಪ್ರಾಯೋಜಕರಾಗಿದ್ದರು. ರೋಹಿತ್ ಶರ್ಮ, ರಿಷಭ್ ಪಂತ್, ಜಸ್ಪ್ರೀತ್ ಬುಮ್ರಾ, ಧೋನಿ, ಹಾರ್ದಿಕ್ ಪಾಂಡ್ಯ ಸೇರಿದಂತೆ ಹಲವು ಆಟಗಾರರು ಡ್ರೀಮ್ 11ರ ಬ್ರ್ಯಾಂಡ್ ಅಂಬಾಸಿಡರ್ಗಳಾಗಿದ್ದರು. ಆದರೆ ಇದೀಗ ಕೇಂದ್ರ ಸರ್ಕಾರದ ಆನ್ಲೈನ್ ಗೇಮಿಂಗ್ ಆ್ಯಕ್ಟ್ 2025 ಅನ್ವಯ ರಿಯಲ್ ಮನಿ ಗೇಮಿಂಗ್ ಆ್ಯಪ್ಗಳನ್ನು ನಿಷೇಧಿಸಿತ್ತು.
ಭವಿಷ್ಯದಲ್ಲಿ ಇಂತಹ ಸಂಸ್ಥೆಗಳ ಜೊತೆ ಒಪ್ಪಂದ ಮಾಡಿಕೊಳ್ಳುವುದಿಲ್ಲ ಎಂದು ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ತಿಳಿಸಿದ್ದಾರೆ. ಹಣವಿಟ್ಟು ಆಡುವ ಎಲ್ಲಾ ಆನ್ಲೈನ್ ಗೇಮ್ಗಳನ್ನು ಕೇಂದ್ರ ಸರ್ಕಾರ ನಿಷೇಧಿಸಿದ ಬೆನ್ನಲ್ಲೇ, ಮನಿ ಗೇಮಿಂಗ್ ಸಂಸ್ಥೆಯಾಗಿರುವ ಡ್ರೀಮ್ 11 ಭಾರತೀಯ ಕ್ರಿಕೆಟ್ ತಂಡದ ಪ್ರಾಯೋಜಕತ್ವದಿಂದ ಹಿಂದೆ ಸರಿದಿದೆ.
ಅರ್ಹತೆ ಏನು?
ಇನ್ನು ಭಾರತೀಯ ಕ್ರಿಕೆಟ್ ತಂಡದ ಜೆರ್ಸಿ ಸ್ಪಾನ್ಸರ್ಶಿಪ್ಗಾಗಿ ಹೊಸ ಅರ್ಜಿಗಳನ್ನು ಆಹ್ವಾನಿಸಿರುವ ಬಿಸಿಸಿಐ, ಇದಕ್ಕೆ ಕೆಲ ಮಾನದಂಡಗಳನ್ನು ನಿಗದಿಪಡಿಸಿದೆ. ಅದರಂತೆ 'ಯೋಗ್ಯ ಮತ್ತು ಸೂಕ್ತ ವ್ಯಕ್ತಿ' ಮಾನದಂಡದ ಅಡಿಯಲ್ಲಿ ಬಿಡ್ ದಾರರು ಕಡ್ಡಾಯವಾಗಿ ಈ ಕೆಳಗಿನ ಮಾನದಂಡಗಳನ್ನು ಪಾಲಿಸಲೇ ಬೇಕು.
ಬಿಡ್ದಾರರು ಕ್ರಿಮಿನಲ್ ಅಪರಾಧ ಅಥವಾ ನೈತಿಕ ಅಶಾಂತಿ, ಆರ್ಥಿಕ ಅಪರಾಧ ಅಥವಾ ವಂಚನೆಯನ್ನು ಒಳಗೊಂಡಿರುವ ಅಪರಾಧಗಳಲ್ಲಿ ನ್ಯಾಯಾಲಯದಿಂದ ಶಿಕ್ಷೆಗೊಳಗಾಗಿರ ಬಾರದು.
ಬಿಸಿಸಿಐ ಹಿತಾಸಕ್ತಿ ಸಂಘರ್ಷ ನಿಯಮಗಳ ಪ್ರಕಾರ ಯಾವುದೇ ಹಿತಾಸಕ್ತಿ ಸಂಘರ್ಷವನ್ನು ಹೊಂದಿರಬಾರದು.
ಯಾವುದೇ ನ್ಯಾಯವ್ಯಾಪ್ತಿಯಲ್ಲಿ 2 (ಎರಡು) ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಅವಧಿಗೆ ಜೈಲು ಶಿಕ್ಷೆಗೆ ಗುರಿಯಾಗಬಹುದಾದ ಯಾವುದೇ ಅಪರಾಧಕ್ಕೆ ಶಿಕ್ಷೆಗೆ ಒಳಪಟ್ಟಿರಬಾರದು.
ಭಾರತೀಯ ರಿಸರ್ವ್ ಬ್ಯಾಂಕ್ನಿಂದ ಉದ್ದೇಶಪೂರ್ವಕ ಡೀಫಾಲ್ಟರ್ ಎಂದು ವರ್ಗೀಕರಿಸದಿರಬೇಕು.
ಸಮಗ್ರತೆ ಮತ್ತು ಖ್ಯಾತಿಯನ್ನು ಹೊಂದಿರುವ ವ್ಯಕ್ತಿ ಅಥವಾ ಸಂಸ್ಥೆಯನ್ನು ಬಿಡ್ ಸಲ್ಲಿಸಲು 'ಯೋಗ್ಯ ಮತ್ತು ಸೂಕ್ತ ವ್ಯಕ್ತಿ' ಎಂದು ಪರಿಗಣಿಸಲಾಗುತ್ತದೆ.
Advertisement