ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2026ರಲ್ಲಿ ಕಾಮೆಂಟರಿ ಕರ್ತವ್ಯಗಳನ್ನು ನಿರ್ವಹಿಸುತ್ತಿರುವ ಭಾರತದ ಮಾಜಿ ಕೋಚ್ ರವಿಶಾಸ್ತ್ರಿ, ಪಂದ್ಯದ ಸಮಯದಲ್ಲಿ ಗಾಯಗೊಂಡ ಆಟಗಾರ ಹೇಗೆ ನಡೆದುಕೊಳ್ಳಬೇಕು ಎಂಬುದನ್ನು ಎತ್ತಿ ತೋರಿಸಿದ್ದಾರೆ. ಮಂಗಳವಾರ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್ಕೆ) ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ನಡುವಿನ ಪಂದ್ಯದ ವೇಳೆ ಕಾಮೆಂಟ್ ಮಾಡುವಾಗ, ಗಾಯಗೊಂಡ ವೇಗಿ ಖಲೀಲ್ ಅಹ್ಮದ್ ಫಿಸಿಯೋಗಳನ್ನು ಮೈದಾನಕ್ಕೆ ಕರೆಸಿ ಪಂದ್ಯದ ಅವಧಿಯನ್ನು ವಿಸ್ತರಿಸುವ ಬದಲು ಮೈದಾನ ತೊರೆಯಲು ನಿರ್ಧರಿಸಿದ್ದನ್ನು ನೋಡಿ ಶಾಸ್ತ್ರಿ ಸಂತೋಷಪಟ್ಟರು. ಆದರೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡ ತಮ್ಮ ಹಿಂದಿನ ಪಂದ್ಯದಲ್ಲಿ ನಡೆದುಕೊಂಡ ರೀತಿಗೆ ಅಸಮಾಧಾನ ವ್ಯಕ್ತಪಡಿಸಿದರು.
ನೈಟ್ ರೈಡರ್ಸ್ ವಿರುದ್ಧದ ಪಂದ್ಯದ ಸಮಯದಲ್ಲಿ ಖಲೀಲ್ ಕಾಲಿನಲ್ಲಿ ಅಸ್ವಸ್ಥತೆ ಅನುಭವಿಸಿದರು. ಇದರಿಂದಾಗಿ ಅವರು ಎರಡು ಬಾರಿ ಓಡುವಾಗ ಮಧ್ಯೆಯೇ ನಿಂತರು. ಎಡಗೈ ವೇಗಿ ಪುಶಿಂಗ್ ಮಾಡದಿರಲು ನಿರ್ಧರಿಸಿದರು ಮತ್ತು ಚಿಕಿತ್ಸೆಗಾಗಿ ಮೈದಾನವನ್ನು ತೊರೆದರು. ಬಳಿಕ ಗುರ್ಜಪ್ನೀತ್ ಸಿಂಗ್ ಅವರ ಓವರ್ ಅನ್ನು ಮುಗಿಸಿದರು.
ಈ ಪಂದ್ಯವನ್ನು ಸೂಕ್ಷ್ಮವಾಗಿ ವಿಶ್ಲೇಷಿಸಿದ ಶಾಸ್ತ್ರಿ, ಖಲೀಲ್ ಮತ್ತು ಸಿಎಸ್ಕೆ ಸಮಯ ವ್ಯರ್ಥ ಮಾಡದಿರಲು ನಿರ್ಧರಿಸಿದ್ದನ್ನು ನೋಡಿ ಸಂತೋಷಪಟ್ಟರು. ಇತ್ತೀಚೆಗೆ ಮುಂಬೈ ಇಂಡಿಯನ್ಸ್ (ಎಂಐ) ವಿರುದ್ಧ ನಾಲ್ಕೂವರೆ ಗಂಟೆಗಳ ಕಾಲ ನಡೆದ ಪಂದ್ಯದಲ್ಲಿ ಆರ್ಸಿಬಿ ತಂಡದ ನಡವಳಿಕೆಗೆ ಇದು ವ್ಯತಿರಿಕ್ತವಾಗಿತ್ತು ಎಂದರು.
'ಫಿಜಿಯೋಗಳನ್ನು ಕರೆದು ಹತ್ತು ನಿಮಿಷಗಳನ್ನು ವ್ಯರ್ಥ ಮಾಡುವ ಬದಲು, ಅವರು ಮೈದಾನದಿಂದ ಹೊರನಡೆಯಲು ನಿರ್ಧರಿಸಿದರು. ಇದರಿಂದಾಗಿ ಆಟ ಮುಂದುವರಿಯಲು ಅವಕಾಶ ಮಾಡಿಕೊಟ್ಟರು' ಎಂದು ಖಲೀಲ್ ಪಿಚ್ನಿಂದ ಹೊರಬಂದಾಗ ಶಾಸ್ತ್ರಿ ಪ್ರಸಾರದಲ್ಲಿ ಹೇಳಿದರು. ಆರ್ಸಿಬಿ vs ಎಂಐ ಪಂದ್ಯದ ಸಮಯದಲ್ಲಿ, ಆರ್ಸಿಬಿಯ ರಸಿಕ್ ದಾರ್ ಒಂದೇ ಓವರ್ನಲ್ಲಿ ಮೂರು ಬಾರಿ ಮೈದಾನದಲ್ಲಿಯೇ ಚಿಕಿತ್ಸೆ ಪಡೆದರು. ಏಕೆಂದರೆ, ಆರ್ಸಿಬಿ ಮ್ಯಾನೇಜ್ಮೆಂಟ್ ಅವರಿಗೆ ಬದಲಿಯಾಗಿ ಪರಿಹಾರ ಕಂಡುಕೊಳ್ಳದಿರಲು ನಿರ್ಧರಿಸಿತು.
ಆರ್ಸಿಬಿ vs ಎಂಐ ಪಂದ್ಯದ ಬಗ್ಗೆ ಕಾಮೆಂಟ್ ಮಾಡುತ್ತಿದ್ದ ಭಾರತೀಯ ದಂತಕಥೆ ಸುನೀಲ್ ಗವಾಸ್ಕರ್ ಕೂಡ ಸಮಯ ವ್ಯರ್ಥ ಮಾಡಿದ್ದರಿಂದ ಕೋಪಗೊಂಡರು.
'ಮೈದಾನದಿಂದ ಹೊರಗೆ ಹೋಗಿ, ಚಿಕಿತ್ಸೆ ಪಡೆದು, ನಂತರ ಹಿಂತಿರುಗಿ... ಫಿಸಿಯೋ ಬರುತ್ತಿರುವುದು ಇದು ಮೂರನೇ ಬಾರಿ. ನಾವು ಅದೇ ವಿಷಯವನ್ನು ಮತ್ತೆ ಮತ್ತೆ ನೋಡಲಿದ್ದೇವೆಯೇ?' ಎಂದು ಹತಾಶೆಗೊಂಡ ಗವಾಸ್ಕರ್ ಆ ಪಂದ್ಯದ ಸಮಯದಲ್ಲಿ ಪ್ರಸಾರದಲ್ಲಿ ಹೇಳಿದರು. ಖಲೀಲ್ ಮತ್ತು ಸಿಎಸ್ಕೆ ಐಪಿಎಲ್ನಲ್ಲಿ ಗಾಯದ ಸಮಸ್ಯೆಗಳನ್ನು ಹೇಗೆ ನಿರ್ವಹಿಸಬೇಕು ಎಂಬುದನ್ನು ತೋರಿಸಿದಾಗ ಶಾಸ್ತ್ರಿ ಮಂಗಳವಾರ ಗವಾಸ್ಕರ್ ಅವರ ಭಾವನೆಗಳನ್ನು ಪ್ರತಿಧ್ವನಿಸಿದರು.
Advertisement