

ಭಾರತೀಯ ಕ್ರಿಕೆಟ್ ತಂಡದ ಮಾಜಿ ಬ್ಯಾಟರ್ ಅಜಿಂಕ್ಯ ರಹಾನೆ ತಮ್ಮ ವೃತ್ತಿಜೀವನದ ಅತ್ಯಂತ ಕಠಿಣ ಹಂತಗಳಲ್ಲಿ ಒಂದರ ಬಗ್ಗೆ ಮಾತನಾಡಿದ್ದು, ರಾಷ್ಟ್ರೀಯ ತಂಡದೊಂದಿಗೆ ಪ್ರವಾಸ ಕೈಗೊಂಡರೂ ಒಂದೇ ಒಂದು ಪಂದ್ಯವನ್ನೂ ಆಡಲು ಸಿಗದಿದ್ದಾಗ ಅನುಭವಿಸಿದ ಹತಾಶೆಯನ್ನು ನೆನಪಿಸಿಕೊಂಡಿದ್ದಾರೆ. ರಹಾನೆ 2011ರಲ್ಲಿ ಸೀಮಿತ ಓವರ್ಗಳ (ವೈಟ್-ಬಾಲ್) ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದರೂ, ತಮ್ಮ ಮೊದಲ ಟೆಸ್ಟ್ ಪಂದ್ಯವನ್ನು ಆಡಲು ಎರಡು ವರ್ಷಗಳ ಕಾಲ ಕಾಯಬೇಕಾಯಿತು. ಅವರು ಹಲವು ಬಾರಿ ತಂಡದಲ್ಲಿದ್ದರೂ, ದೀರ್ಘಕಾಲದವರೆಗೆ '12ನೇ ಆಟಗಾರ'ನಾಗಿಯೇ ಉಳಿಯಬೇಕಾಯಿತು. ಅಂತಿಮವಾಗಿ 2013ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಅವರು ಟೆಸ್ಟ್ ಕ್ರಿಕೆಟ್ಗೆ ಪದಾರ್ಪಣೆ ಮಾಡಿದರು. ಆ ಎರಡು ವರ್ಷಗಳ ಅವಧಿಯು ತಮಗೆ ಅತ್ಯಂತ ಕಷ್ಟಕರವಾಗಿತ್ತು. ಕಾಲಕ್ರಮೇಣ ಅದನ್ನು ಸ್ವೀಕರಿಸಿದೆ ಎಂದು ರಹಾನೆ ತಿಳಿಸಿದರು.
'2011ರಲ್ಲಿ ನಾನು ಮೊದಲ ಬಾರಿಗೆ ತಂಡಕ್ಕೆ ಆಯ್ಕೆಯಾದಾಗ, ಆರಂಭದ ಎರಡು ವರ್ಷಗಳು ಸವಾಲಿನಿಂದ ಕೂಡಿದ್ದವು. ಟೆಸ್ಟ್ ಪದಾರ್ಪಣೆಗಾಗಿ ನಾನು 20 ಪಂದ್ಯಗಳವರೆಗೆ ಕಾಯಬೇಕಾಯಿತು ಮತ್ತು ಆ ಎರಡು ವರ್ಷ '12ನೇ ಆಟಗಾರ'ನಾಗಿ (ಬೆಂಚ್ನಲ್ಲಿ ಕೂರುವ) ತಂಡದಲ್ಲಿದ್ದೆ. ಅದು ಕಠಿಣ ಹಂತವಾಗಿದ್ದರೂ, ಅದರಿಂದ ನಾನು ಬಹಳಷ್ಟು ಕಲಿತೆ. ನನ್ನ ಮುಂದೆ ಎರಡು ಆಯ್ಕೆಗಳಿದ್ದವು: ಸಿಂಪಥಿ ಪಡೆಯುವುದು ಅಥವಾ ನನ್ನನ್ನು ನಾನು ಸುಧಾರಿಸಿಕೊಳ್ಳಲು ಪ್ರಯತ್ನಿಸುವುದು' ಎಂದರು.
'ತಂಡದಲ್ಲಿ 12ನೇ ಆಟಗಾರನಾಗಿರುವುದು, ನೀರು ಸರಬರಾಜು ಮಾಡುವುದು ಅಥವಾ ಸಹ ಆಟಗಾರರಿಗೆ ಸಹಾಯ ಮಾಡುವುದರಲ್ಲಿ ತಪ್ಪೇನೂ ಇಲ್ಲ. ನಾನು ಅದನ್ನು ಸಕಾರಾತ್ಮಕವಾಗಿ ಸ್ವೀಕರಿಸಿದೆ. ನಾನು ಎಲ್ಲವನ್ನೂ ಗಮನಿಸುತ್ತಿದ್ದೆ ಮತ್ತು ಆ ಅಭ್ಯಾಸವೇ ನನಗೆ ದೀರ್ಘಕಾಲದವರೆಗೆ ಆಡಲು ನೆರವಾಯಿತು. ಹೀಗೆ ಸೂಕ್ಷ್ಮವಾಗಿ ಗಮನಿಸುವುದು ನನ್ನ ಮನೋಭಾವ ಮತ್ತು ಚಿಂತನೆಯನ್ನು ಉತ್ತಮಪಡಿಸಲು ಸಹಾಯ ಮಾಡಿತು. ಸಿಂಪಥಿ ಪಡೆಯುವುದು ಸುಲಭವಾಗಿತ್ತಾದರೂ, ನಾನು ಅದನ್ನು ಎಂದಿಗೂ ಬಯಸಲಿಲ್ಲ' ಎಂದು ಅವರು ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ಹೇಳಿದರು.
ರಹಾನೆ ತಮ್ಮ ಪಯಣದಲ್ಲಿ ತಾಳ್ಮೆ ಹೇಗೆ ಪ್ರಮುಖ ಪಾತ್ರ ವಹಿಸಿತು ಎಂಬುದನ್ನು ವಿವರಿಸಿದರು. ಆದರೆ, ತಾಳ್ಮೆ ತಮಗೆ ಸಹಜವಾಗಿಯೇ ಬಂದ ಗುಣವಾಗಿರಲಿಲ್ಲ ಎಂಬುದನ್ನೂ ಅವರು ಒಪ್ಪಿಕೊಂಡರು. ಆದಾಗ್ಯೂ, ಅನುಭವವು ಅವರ ದೃಷ್ಟಿಕೋನವನ್ನು ರೂಪಿಸಲು ನೆರವಾಯಿತು ಮತ್ತು ಹಿರಿಯ ಆಟಗಾರರು ತಮಗೆ ಎಷ್ಟು ಸಹಾಯ ಮಾಡಿದರು ಎಂಬುದನ್ನು ಅವರು ತಿಳಿಸಿದರು.
'ಅದು ಮೊದಲಿನಿಂದಲೂ ಇತ್ತು. ಆದರೆ, ನಾನು ಆಡುತ್ತಾ ಹೋದಂತೆ ಮತ್ತು ಅನುಭವ ಗಳಿಸಿದಂತೆ ಅದು ಮತ್ತಷ್ಟು ವೃದ್ಧಿಸಿತು. ಆರಂಭದಿಂದಲೇ ನನ್ನಲ್ಲಿ ಅಷ್ಟೊಂದು ತಾಳ್ಮೆ ಇತ್ತು ಎಂದು ನಾನು ಹೇಳಲಾರೆ. ಮುಂಬೈನ ಲೋಕಲ್ ರೈಲಿನಲ್ಲಿ ಪ್ರಯಾಣಿಸುವುದೇ ಒಂದು ಸವಾಲು; ಹಾಗಾಗಿ, ತಾಳ್ಮೆ ಎನ್ನುವುದು ಅಲ್ಲಿಂದಲೇ ಬೆಳೆಯುತ್ತದೆ. ನಾನು ದೇಶೀಯ ಕ್ರಿಕೆಟ್ ಆಡಲು ಪ್ರಾರಂಭಿಸಿ ನಿರಂತರವಾಗಿ ರನ್ ಗಳಿಸುತ್ತಿದ್ದಾಗ, ಭಾರತ ತಂಡಕ್ಕೆ ನನ್ನ ಹೆಸರು ಆಯ್ಕೆಯಾಗಬೇಕು ಎಂದು ಸಹಜವಾಗಿಯೇ ಅನಿಸುತ್ತದೆ. ನನಗೂ ಹಾಗೆಯೇ ಅನ್ನಿಸಿತ್ತು. ಆದರೆ ಹಿರಿಯ ಆಟಗಾರರೊಂದಿಗೆ ಮಾತನಾಡಿದ ನಂತರ ಮತ್ತು ಕಾಲಕ್ರಮೇಣ, ಸರಿಯಾದ ಸಮಯ ಬಂದಾಗ ಅದು ಸಂಭವಿಸುತ್ತದೆ ಎಂಬ ಅರಿವು ನನಗಾಯಿತು. ನಿಮ್ಮ ಕೈಯಲ್ಲಿರುವುದನ್ನು ನೀವು ಮಾಡಿ ಅಷ್ಟೇ. ದೀರ್ಘಕಾಲ ಆಡಬೇಕೆಂದರೆ ತಾಳ್ಮೆ ಬಹಳ ಮುಖ್ಯ' ಎಂದು ಅವರು ಹೇಳಿದರು.