

ಗಾಲೆಯಲ್ಲಿ ನಡೆಯುತ್ತಿರುವ ಶ್ರೀಲಂಕಾ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ, ಸಾಯಿ ಸುದರ್ಶನ್ ತಂಡಕ್ಕೆ ಮರಳಿದರೂ ಎಡಗೈ ಬ್ಯಾಟರ್ ದೇವದತ್ತ ಪಡಿಕ್ಕಲ್ ಅವರನ್ನೇ ಮೂರನೇ ಕ್ರಮಾಂಕದಲ್ಲಿ ಮುಂದುವರಿಸುವಂತೆ ಭಾರತೀಯ ತಂಡದ ಆಡಳಿತ ಮಂಡಳಿಯನ್ನು ಮಾಜಿ ಬ್ಯಾಟರ್ ಸಂಜಯ್ ಮಂಜ್ರೇಕರ್ ಒತ್ತಾಯಿಸಿದ್ದಾರೆ. ಗಾಯದ ಕಾರಣದಿಂದ ಸಾಯಿ ಸುದರ್ಶನ್ ಸರಣಿಯಿಂದ ಹೊರಗುಳಿದಿದ್ದರಿಂದ ಆಡುವ ಹನ್ನೊಂದರ ಬಳಗಕ್ಕೆ ಸೇರ್ಪಡೆಗೊಂಡ ಪಡಿಕ್ಕಲ್, ಪಂದ್ಯದ ಮೊದಲ ದಿನ ಭಾರತದ ಇನಿಂಗ್ಸ್ಗೆ ಭದ್ರ ಬುನಾದಿ ಹಾಕಿಕೊಟ್ಟರು. 26 ವರ್ಷದ ಪಡಿಕ್ಕಲ್ ತಮ್ಮ ಚೊಚ್ಚಲ ಟೆಸ್ಟ್ ಶತಕ ಸಿಡಿಸಿ, ಮೊದಲ ದಿನದ ಆಟದ ಅಂತ್ಯಕ್ಕೆ 131 ರನ್ಗಳೊಂದಿಗೆ ಅಜೇಯರಾಗಿ ಉಳಿದರು.
'ಎಕ್ಸ್' ಖಾತೆಯಲ್ಲಿ ಪ್ರತಿಕ್ರಿಯಿಸಿದ ಮಂಜ್ರೇಕರ್, ವಿಶೇಷವಾಗಿ ಸ್ಪಿನ್ನರ್ಗಳ ವಿರುದ್ಧ ಪಡಿಕ್ಕಲ್ ಪ್ರದರ್ಶಿಸಿದ ಬ್ಯಾಟಿಂಗ್ ತಂತ್ರಗಾರಿಕೆಯನ್ನು ಶ್ಲಾಘಿಸಿದರು.
'ಸ್ಪಿನ್ನರ್ಗಳ ವಿರುದ್ಧ ಭಾರತಕ್ಕೆ ದೇವದತ್ ಪಡಿಕ್ಕಲ್ ಒಂದು ವರದಾನವಿದ್ದಂತೆ. ರಕ್ಷಣೆ ಮತ್ತು ಆಕ್ರಮಣ - ಎರಡರಲ್ಲೂ ಅವರ ತಂತ್ರ ಅತ್ಯುತ್ತಮವಾಗಿದೆ' ಎಂದು ಮಂಜ್ರೇಕರ್ ಬರೆದಿದ್ದಾರೆ.
'ಭಾರತ ತಂಡದಲ್ಲಿ ಕಂಡುಬಂದ ಪ್ರಮುಖ ಬದಲಾವಣೆ ಎಂದರೆ ದೇವದತ್ ಪಡಿಕ್ಕಲ್. ಆಯ್ಕೆ ಪ್ರಕ್ರಿಯೆ ಎಷ್ಟು ಉತ್ತಮವಾಗಿದೆ ಎಂದರೆ, ಪಡಿಕ್ಕಲ್ ಕ್ರೀಸ್ಗೆ ಬಂದು ಸ್ಪಿನ್ ಬೌಲಿಂಗ್ ಅನ್ನು ಅತ್ಯಂತ ಸಹಜವಾಗಿ ಎದುರಿಸುವುದನ್ನು ನೋಡಬಹುದು; ಅವರು ಸ್ಪಿನ್ ವಿರುದ್ಧ ಉತ್ತಮ ರಕ್ಷಣಾತ್ಮಕ ಆಟವಾಡಬಲ್ಲರು, ಫೀಲ್ಡರ್ಗಳು ದೂರವಿದ್ದಾಗ ಸುಲಭವಾಗಿ 1 ಮತ್ತು 2 ರನ್ಗಳನ್ನು ಗಳಿಸಬಲ್ಲರು ಹಾಗೂ ನಿಧಾನಗತಿಯ ಮತ್ತು ಚೆಂಡು ತಿರುಗುವ ಪಿಚ್ಗಳಲ್ಲೂ 'ಬ್ಯಾಕ್ ಫೂಟ್'ನಿಂದ ಆಕ್ರಮಣಕಾರಿ ಹೊಡೆತಗಳನ್ನು ಬಾರಿಸಬಲ್ಲರು' ಎಂದು ಮಂಜ್ರೇಕರ್ ಸೋನಿ ಸ್ಪೋರ್ಟ್ಸ್ನಲ್ಲಿ ಹೇಳಿದರು.
'ಇದು ಗಮನಾರ್ಹವಾದ ವಿಷಯ. ನಿಧಾನಗತಿಯ ಹಾಗೂ ಚೆಂಡು ತಿರುಗುವ ಪಿಚ್ಗಳಲ್ಲಿ, ನೇರ ಬ್ಯಾಟ್ನೊಂದಿಗೆ 'ಬ್ಯಾಕ್ ಫೂಟ್'ನಿಂದ ಹೊಡೆತಗಳನ್ನು ಬಾರಿಸುವುದು ಮತ್ತು 'ಪುಲ್ ಶಾಟ್' ಆಡುವುದು, ಆ ಆಟಗಾರನು 'ಬ್ಯಾಕ್ ಫೂಟ್' ಆಟಕ್ಕೆ ಆದ್ಯತೆ ನೀಡುವವರು ಎಂಬುದನ್ನು ಸೂಚಿಸುತ್ತದೆ. ಅಲ್ಲದೆ, ನಿಧಾನಗತಿಯ ಮತ್ತು ಚೆಂಡು ತಿರುಗುವ ಪಿಚ್ನಲ್ಲಿ ಸ್ಪಿನ್ ಬೌಲಿಂಗ್ ಅನ್ನು ಎದುರಿಸಲು ಅತ್ಯುತ್ತಮ ಮಾರ್ಗವೆಂದರೆ, ಹೆಚ್ಚಿನ ಎಸೆತಗಳನ್ನು 'ಬ್ಯಾಕ್ ಫೂಟ್'ನಿಂದಲೇ ಆಡುವುದು' ಎಂದರು.
'ಅಲ್ಲದೆ, ಪಿಚ್ನತ್ತ ಮುನ್ನಗ್ಗಿ ಬಂದು 'ಸೈಟ್ ಸ್ಕ್ರೀನ್'ನ ಮೇಲಿಂದ ಚೆಂಡನ್ನು ಬಾರಿಸುವ ವಿಶೇಷ ಕೌಶಲವೂ ಅವರಿಗಿದೆ. ಹೀಗಾಗಿ, ಸ್ಪಿನ್ ಬೌಲಿಂಗ್ಗೆ ಹೆಚ್ಚಿನ ನೆರವು ಸಿಗುವ ಪಿಚ್ಗಳಲ್ಲಿ, ಸಾಯಿ ಸುದರ್ಶನ್ ತಂಡಕ್ಕೆ ಮರಳಿದರೂ ಭಾರತವು ದೇವದತ್ತ ಪಡಿಕ್ಕಲ್ ಅವರನ್ನೇ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಕಳುಹಿಸಬೇಕು; ಏಕೆಂದರೆ ಸ್ಪಿನ್ ಬೌಲಿಂಗ್ ಎದುರಿಸುವಲ್ಲಿ ಅವರು ಅತ್ಯಂತ ಪ್ರಬಲ ಆಟಗಾರನಾಗಿ ಕಾಣುತ್ತಾರೆ. ಅವರಲ್ಲಿರುವ ಸ್ಪಿನ್ ಆಡುವ ಸಾಮರ್ಥ್ಯವನ್ನು ಗಮನಿಸಿದರೆ, ಮೂರನೇ ಕ್ರಮಾಂಕದಲ್ಲಿ ದೇವದತ್ತ ಪಡಿಕ್ಕಲ್ ಲಭ್ಯವಿರುವುದು ಭಾರತಕ್ಕೆ ದೇವರಿತ್ತ ವರದಾನವಿದ್ದಂತೆ ಎಂದು ನಾನು ಭಾವಿಸುತ್ತೇನೆ' ಎಂದು ತಿಳಿಸಿದರು.