

ನವದೆಹಲಿ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಆಸ್ಟ್ರೇಲಿಯಾ ಅಂಡರ್-19 ತಂಡದ ವಿರುದ್ಧ ಭಾರತದ ಅಂಡರ್-19 ತಂಡವನ್ನು ಪ್ರಕಟಸಿದ್ದು, ಬ್ಯಾಟಿಂಗ್ ಸೆನ್ಸೇಷನ್ ವೈಭವ್ ಸೂರ್ಯವಂಶಿ ಅವರನ್ನು ಕೈಬಿಟ್ಟಿದೆ.
ಕ್ರಿಕೆಟ್ ಜಗತ್ತೇ ಕೊಂಡಾಡುತ್ತಿರುವ ವಂಡರ್ಕಿಡ್, 15 ವರ್ಷದ ವೈಭವ್ ಸೂರ್ಯವಂಶಿ, ಆಸ್ಟ್ರೇಲಿಯಾ ವಿರುದ್ಧದ 15 ಸದಸ್ಯರ ಭಾರತ ಅಂಡರ್-19 ತಂಡದಲ್ಲಿ ಯಾಕಿಲ್ಲ? ಎಂಬ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ.
ಯಾಕಂದ್ರೆ, ಇದೇ ತಂಡದಲ್ಲಿ ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್ ಪುತ್ರ ಆರ್ಯವೀರ್ ಸೆಹ್ವಾಗ್ ಮತ್ತು ಭಾರತದ ದಿಗ್ಗಜ ರಾಹುಲ್ ದ್ರಾವಿಡ್ ಅವರ ಪುತ್ರ ಅನ್ವಯ್ ದ್ರಾವಿಡ್ ಇಬ್ಬರೂ ಸ್ಥಾನ ಪಡೆದಿದ್ದಾರೆ. ಆದರೆ ವೈಭವ್ಗೆ ಮಾತ್ರ ಇಲ್ಲಿ ಅವಕಾಶ ಕೊಟ್ಟಿಲ್ಲ.
ವೈಭವ್ ಕೈಬಿಟ್ಟಿದ್ದೇಕೆ?
ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಭಾರಿ ಭರವಸೆಯನ್ನು ಮೂಡಿಸಿರುವ ವೈಭವ್ ಸೂರ್ಯವಂಶಿಗೆ ಈ ತಂಡದಲ್ಲಿ ಸ್ಥಾನ ನೀಡಲು ಬಿಸಿಸಿಐ ಹಿಂದೇಟು ಹಾಕಿದೆ. ಇದಕ್ಕೆ ಒಂದು ಬಲವಾದ ಕಾರಣವೂ ಇದೆ.
ಟೀಮ್ ಇಂಡಿಯಾದ ಹಿರಿಯ ಕ್ರಿಕೆಟ್ನಲ್ಲಿ ತನ್ನನ್ನು ತಾನು ಗುರುತಿಸಿಕೊಂಡು ವೇಗದಲ್ಲಿ ಮಿಂಚುತ್ತಿರುವ ವೈಭವ್, ಜೂನಿಯರ್ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ವಿಫಲವಾದ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ಕ್ರಿಕೆಟ್ ಪ್ರಿಯರ ಚರ್ಚೆ ಜೋರಾಗಿದೆ.
ವಯಸ್ಸಿನ ಪ್ರಕಾರ ಅರ್ಹತೆ ಹೊಂದಿದ್ದರೂ ಸಹ ಆಟಗಾರರು ಅಂಡರ್-19 ವಿಶ್ವಕಪ್ನಲ್ಲಿ ಒಮ್ಮೆ ಮಾತ್ರ ಆಡಲು ಅವಕಾಶವಿದೆ ಎಂಬುದು ಬಿಸಿಸಿಐ ಮೂಲ ನಿಯಮ. ಇದನ್ನು ಮಂಡಳಿ 2016ರಲ್ಲೇ ಜಾರಿಗೆ ತಂದಿತು. ಸೂರ್ಯವಂಶಿ 2026ರ ಅಂಡರ್-19 ವಿಶ್ವಕಪ್ನಲ್ಲಿ ಆಡಿದ್ದು ಹಾಗೂ ದಾಖಲೆ ಬರೆದಿದ್ದು ಕ್ರಿಕೆಟ್ ಪ್ರೇಮಿಗಳಿಗೆ ಸೇರಿ ಬಹುತೇಕರಿಗೆ ಗೊತ್ತೇ ಇದೆ. ಹೀಗಾಗಿಯೇ, ನಿಯಮವನ್ನು ಗಮನದಲ್ಲಿರಿಸಿ ಮತ್ತೊಂದು ಆವೃತ್ತಿಯಲ್ಲಿ ಭಾಗವಹಿಸಲು ಎರಡನೇ ಅವಕಾಶ ಕೊಡುವುದು ಬೇಡ ಎಂದು ಬಿಸಿಸಿಐ ನಿರ್ಧರಿಸಿದೆ.
ಭಾರತ ಅಂಡರ್-19 ಏಕದಿನ ತಂಡ
ಲಕ್ಷ್ಯ ರಾಚಂದಾನಿ (ನಾಯಕ), ಯಶ್ಬರ್ಧನ್ ಚೌಹಾಣ್ (ಉಪನಾಯಕ), ರಜತ್ ಭಾಗೇಲ್ (ವಿಕೆಟ್ ಕೀಪರ್), ಆರ್ಯವೀರ್ ಸೆಹ್ವಾಗ್, ವಿ.ಕೆ. ವಿನೀತ್, ಕುಶಾಗ್ರ ಓಜಾ, ಅರ್ಜುನ್ ರಜಪೂತ್, ಮನಲ್ ಚೌಹಾಣ್, ಅನ್ವಯ್ ದ್ರಾವಿಡ್ (ವಿಕೆಟ್ ಕೀಪರ್), ವಿ. ಯಶ್ವೀರ್, ರೋಹಿತ್ ಯಾದವ್, ಶಾವಿನ್ ವಿನೋದ್, ಮೋಹಿತ್ ಉಲ್ವಾ, ಚಿಗುರುಪತಿ ವೆಂಕಟ್, ಕಾವ್ಯ ಪಟೇಲ್.