

ಮೊಹಾಲಿಯ ಪಿಸಿಎ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಕೊನೆಯ ರಣಜಿ ಟ್ರೋಫಿ ಗ್ರೂಪ್ ಟೈನಲ್ಲಿ ಕರ್ನಾಟಕ ತಂಡ ನಾಯಕ ದೇವದತ್ ಪಡಿಕ್ಕಲ್ ಕೇವಲ 85 ಎಸೆತಗಳಲ್ಲಿ ಅಜೇಯ 120 ರನ್ ಬಾರಿಸಿದ್ದು ಪಂಜಾಬ್ ವಿರುದ್ಧ ಐದು ವಿಕೆಟ್ಗಳ ಅದ್ಭುತ ಗೆಲುವಿಗೆ ಕಾರಣವಾಯಿತು. ಗೆಲ್ಲಲೇಬೇಕಾದ ಪಂದ್ಯದಲ್ಲಿ, ಕರ್ನಾಟಕ ರಣಜಿ ಟ್ರೋಫಿಯ ಕ್ವಾರ್ಟರ್ ಫೈನಲ್ಗೆ ತಲುಪಲು 250 ರನ್ಗಳ ಅಗತ್ಯವಿತ್ತು. ಟೀ ವಿರಾಮಕ್ಕೆ ಇನ್ನೂ 198 ರನ್ ಬೇಕಿದ್ದಾಗ ಹಿರಿಯ ಬ್ಯಾಟ್ಸ್ಮನ್ ಕೆ.ಎಲ್ ರಾಹುಲ್ ಔಟಾಗಿದ್ದು ತಂಡ ಸಂಕಷ್ಟಕ್ಕೆ ಸಿಲುಕಿತು.
ಆದಾಗ್ಯೂ, ಪಡಿಕ್ಕಲ್ ಮತ್ತು ಮಯಾಂಕ್ ಅಗರ್ವಾಲ್ ಕೇವಲ 76 ಎಸೆತಗಳಲ್ಲಿ 113 ರನ್ಗಳ ಜೊತೆಯಾಟ ಕರ್ನಾಟಕ ಕೇವಲ 27.5 ಓವರ್ಗಳಲ್ಲಿ 252 ರನ್ ಗುರಿ ಮುಟ್ಟಲು ಸಾಧ್ಯವಾಯಿತು. ಪಂಜಾಬ್ ತಂಡ ಅನೀಶ್ ಕೆ ವಿ ಮತ್ತು ಸ್ಮರನ್ ರವಿಚಂದ್ರನ್ ಅವರನ್ನು ಬೇಗನೆ ಔಟ್ ಮಾಡುವ ಮೂಲಕ ಪ್ರತಿದಾಳಿ ನಡೆಸಿತು. ಆದರೆ ಪಡಿಕ್ಕಲ್, ಶ್ರೇಯಸ್ ಗೋಪಾಲ್ ಜೊತೆ ಸೇರಿ 43 ಎಸೆತಗಳಲ್ಲಿ 67 ರನ್ ಗಳ ಜೊತೆಯಾಟ ನೀಡಿದ್ದು ಕರ್ನಾಟಕವನ್ನು ಗುರಿಯತ್ತ ಹತ್ತಿರ ತಂದಿತು. ಪಡಿಕ್ಕಲ್ ಅವರ ಅಜೇಯ ಬ್ಯಾಟಿಂಗ್ನಲ್ಲಿ ಆರು ಬೌಂಡರಿಗಳು ಮತ್ತು ಐದು ಸಿಕ್ಸರ್ಗಳು ಸೇರಿವೆ.
ಕರ್ನಾಟಕ ತಂಡದ ಸ್ಫೋಟಕ ಬ್ಯಾಟಿಂಗ್ ನಿಂದಾಗಿ ಸೋಲಿನ ಭೀತಿಗೆ ಸಿಲುಕಿದ ಪಂಜಾಬ್ ಆಟಗಾರರು ಪಂದ್ಯವನ್ನು 'ಡ್ರಾ' ಮಾಡಿಕೊಳ್ಳುವ ಉದ್ದೇಶದಿಂದ ಸಮಯ ವ್ಯರ್ಥ ಮಾಡುವ ತಂತ್ರಗಳನ್ನು ಅನುಸರಿಸಿದರು. ಬೇಕಂತಲೇ ಓವರ್ಗಳ ನಡುವೆ ಅನಗತ್ಯವಾಗಿ ಚರ್ಚೆ ನಡೆಸುವ ಮೂಲಕ ಪಂದ್ಯದ ವೇಗವನ್ನು ಕಡಿಮೆ ಮಾಡುತ್ತಿದ್ದರು. ಪ್ರತಿ ಎಸೆತಕ್ಕೂ ಮುನ್ನ ಫೀಲ್ಡಿಂಗ್ ಪ್ಲೇಸ್ಮೆಂಟ್ ಬದಲಾಯಿಸುವ ನೆಪದಲ್ಲಿ ಸಮಯ ವ್ಯರ್ಥ ಮಾಡುತ್ತಿದ್ದರು. ಆದರೆ ಇದ್ಯಾವುದಕ್ಕೂ ಬಗ್ಗದ ಪಡಿಕ್ಕಲ್ ಸ್ಫೋಟಕ ಬ್ಯಾಟಿಂಗ್ ಮುಂದುವರೆಸಿ ಗೆಲುವು ತಂದುಕೊಟ್ಟರು.
Advertisement