T20 ವಿಶ್ವಕಪ್: ಭಾರತ ವಿರುದ್ಧದ ಪಂದ್ಯ ಆಡಲು ಪಾಕ್ ನಕಾರ, ಸೂರ್ಯ ಕುಮಾರ್ ಯಾದವ್ ಸ್ಪಷ್ಟ ನಿಲುವು!
ಮುಂಬೈ: ಮುಂಬರುವ ಟಿ-20 ವಿಶ್ವಕಪ್ ನಲ್ಲಿ ಭಾರತ ವಿರುದ್ಧದ ಗುಂಪು ಹಂತದ ಪಂದ್ಯವನ್ನು ಪಾಕಿಸ್ತಾನ ಬಹಿಷ್ಕರಿಸಿದ್ದರೂ ನಾವು ಆಡಲು ರೆಡಿ ಇದ್ದೇವೆ ಎಂದು ಭಾರತ ತಂಡದ ನಾಯಕ ಸೂರ್ಯ ಕುಮಾರ್ ಯಾದವ್ ಗುರುವಾರ ಹೇಳಿದ್ದಾರೆ.
ವಿಶ್ವಕಪ್ ನಲ್ಲಿ ಆಡ್ತೀವಿ. ಆದರೆ ಫೆಬ್ರವರಿ 15 ರಂದು ನಡೆಯಲಿರುವ ಭಾರತ ವಿರುದ್ಧದ ಪಂದ್ಯವನ್ನು ಆಡಲ್ಲ ಎಂದು ಪಾಕಿಸ್ತಾನ ಘೋಷಿಸಿದೆ. ಪಾಕ್ ಪ್ರಧಾನಿ ಶೆಹಬಾಜ್ ಷರೀಪ್ ತನ್ನ ನಿಲುವನ್ನು ಮತ್ತೊಮ್ಮೆ ಖಚಿತಪಡಿಸಿದ್ದು, ಸರ್ಕಾರದ ನಿರ್ದೇಶನವನ್ನು ಪಾಲಿಸುವುದಾಗಿ ಪಾಕ್ ನಾಯಕ ಸಲ್ಮಾನ್ ಅಲಿ ಆಘಾ ಹೇಳಿದ್ದಾರೆ.
ಆದರೆ, 2026 ರ ಟಿ 20 ವಿಶ್ವಕಪ್ 2026 ರ ಕ್ಯಾಪ್ಟನ್ಸ್ ಡೇ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸೂರ್ಯಕುಮಾರ್, ಬಹಿಷ್ಕಾರದ ಮಾತುಗಳು ಭಾರತದ ಕಡೆಯಿಂದ ಬಂದಿಲ್ಲ. ನಮ್ಮ ತಂಡವು ಫೆಬ್ರವರಿ 15 ರಂದು ಕೊಲಂಬೊದಲ್ಲಿ ಹಾಜರಾಗಲಿದೆ ಎಂದು ಖಚಿತಪಡಿಸಿದರು.
ಮನಸ್ಥಿತಿ ಬಹಳ ಸ್ಪಷ್ಪವಾಗಿದೆ. ನಾವು ಪಂದ್ಯ ಆಡುವುದಿಲ್ಲ ಎಂದು ಹೇಳಿಲ್ಲ. ಪಾಕಿಸ್ತಾನದವರೇ ಆ ರೀತಿ ಹೇಳಿದ್ದಾರೆ. ICC ಅಧಿಕೃತ ಪಂದ್ಯಗಳನ್ನು ನೀಡಿದೆ. BCCI ಮತ್ತು ಸರ್ಕಾರ ICC ಜೊತೆಗೆ ತಟಸ್ಥ ಸ್ಥಳವನ್ನು ನಿರ್ಧರಿಸಿದೆ. ಈಗಾಗಲೇ ನಮ್ಮ ವಿಮಾನದ ಟಿಕೆಟ್ ಬುಕ್ ಆಗಿದೆ. ಹಾಗಾಗೀ ಕೊಲೊಂಬೊಕ್ಕೆ ಪ್ರಯಾಣಿಸುತ್ತೇವೆ ಎಂದು ತಿಳಿಸಿದರು.
ಫೆಬ್ರವರಿ 7 ರಂದು ಮೊದಲ ಪಂದ್ಯ ನಡೆಯಲಿದೆ. ಫೆಬ್ರವರಿ 15 ರಂದು ಕೊಲಂಬೊಕ್ಕೆ ತೆರಳುತ್ತೇವೆ. ಅವಕಾಶ ಸಿಕ್ಕರೆ ಆಡಬೇಕು ಎಂದು ನಮಗೆ ತಿಳಿಸಲಾಗಿದೆ. ನನಗೆ ತಿಳಿದಂತೆ ಇದು ಪಾಕಿಸ್ತಾನ ಆಟಗಾರರಿಗೆ ಕಷ್ಟಕರ ಸಮಯ ಎಂದು ಸೂರ್ಯ ಕುಮಾರ್ ಯಾದವ್ ತಿಳಿಸಿದರು.
ಈ ಮಧ್ಯೆ ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ, ಐಸಿಸಿ ತೀರ್ಮಾನದಂತೆ ಬಿಸಿಸಿಐ ನಿರ್ಧಾರ ಕೈಗೊಳ್ಳಲಿದೆ ಎಂದು ತಿಳಿಸಿದರು.

