ಟಿ20 ವಿಶ್ವಕಪ್ ಪಂದ್ಯಾವಳಿಯಲ್ಲಿ ಯುಎಸ್ಎ ವಿರುದ್ಧ ಗೆಲುವು ಸಾಧಿಸುವ ಮೂಲಕ ಶುಭಾರಂಭ ಮಾಡಿರುವ ಟೀಂ ಇಂಡಿಯಾ ಆಟಗಾರರು ಮತ್ತು ಸಹಾಯಕ ಸಿಬ್ಬಂದಿಗೆ ಮುಖ್ಯ ಕೋಚ್ ಗೌತಮ್ ಗಂಭೀರ್ ಅವರು ದೆಹಲಿಯಲ್ಲಿರುವ ತಮ್ಮ ನಿವಾಸದಲ್ಲಿ ವಿಶೇಷ ಭೋಜನಕೂಟ ಆಯೋಜಿಸಿದ್ದರು. 2026ರ ಟಿ20 ವಿಶ್ವಕಪ್ ಹಾಲಿ ಚಾಂಪಿಯನ್ಗಳು ಇದೀಗ ಮುಂದಿನ ಪಂದ್ಯಕ್ಕಾಗಿ ರಾಷ್ಟ್ರ ರಾಜಧಾನಿಗೆ ಸ್ಥಳಾಂತರಗೊಂಡಿರುವುದರಿಂದ, ಗಂಭೀರ್ ತಮ್ಮ ನಿವಾಸದಲ್ಲಿ ಭೋಜನಕೂಟ ಏರ್ಪಡಿಸಿದ್ದರು. ಫೆಬ್ರುವರಿ 12 ರಂದು ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಮೀಬಿಯಾ ವಿರುದ್ಧದ ತಮ್ಮ ಮುಂದಿನ ಗುಂಪು ಪಂದ್ಯಕ್ಕೆ ಭಾರತ ಸಿದ್ಧತೆ ನಡೆಸುತ್ತಿದೆ.
ANI ಹಂಚಿಕೊಂಡ ವಿಡಿಯೋಗಳಲ್ಲಿ ತಮ್ಮ ಮನೆಗೆ ಬರುತ್ತಿದ್ದ ಗಂಭೀರ್ ಅವರನ್ನು ಭಾರತ ತಂಡದ ಸದಸ್ಯರು ಮತ್ತು ಸಹಾಯಕ ಸಿಬ್ಬಂದಿ ಹಿಂಬಾಲಿಸುವ ದೃಶ್ಯ ಕಂಡುಬಂತು. ಬ್ಯಾಟಿಂಗ್ ಕೋಚ್ ಸೀತಾಂಶು ಕೊಟಕ್, ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ಕೂಡ ಈ ವೇಳೆ ಇದ್ದರು. ಗಂಭೀರ್ ಅವರ ಓಲ್ಡ್ ರಾಜಿಂದರ್ ನಗರದಲ್ಲಿರುವ ಬಹುಕೋಟಿ ಮೌಲ್ಯದ, ನಾಲ್ಕು ಅಂತಸ್ತಿನ ನಿವಾಸದಲ್ಲಿ ಎಲ್ಲರೂ ಒಂದೆಡೆ ಸೇರಿದ್ದರು.
ಗಂಭೀರ್ ದೆಹಲಿಯಲ್ಲಿ ಭಾರತೀಯ ತಂಡಕ್ಕೆ ಆತಿಥ್ಯ ವಹಿಸುತ್ತಿರುವುದು ಇದೇ ಮೊದಲಲ್ಲ. ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಗಾಗಿ ಭಾರತ ತಂಡವು ಈ ಹಿಂದೆ ನಗರಕ್ಕೆ ಭೇಟಿ ನೀಡಿದ್ದಾಗಲೂ, ಭಾರತದ ಮಾಜಿ ಆರಂಭಿಕ ಆಟಗಾರ ಇದೇ ರೀತಿಯ ಆತಿಥ್ಯ ವಹಿಸಿದ್ದರು. ಕ್ರಿಕೆಟ್ನಿಂದ ದೂರವಿದ್ದು ಆಟಗಾರರು ಒಟ್ಟಿಗೆ ಸಮಯ ಕಳೆಯಲು ಅವಕಾಶ ನೀಡುವುದು ಇದರ ಉದ್ದೇಶವಾಗಿದೆ.
ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಭಾರತ ತಂಡವು ಅಮೆರಿಕ ವಿರುದ್ಧ 29 ರನ್ಗಳ ಜಯದೊಂದಿಗೆ ತನ್ನ ಟಿ20 ವಿಶ್ವಕಪ್ ಅಭಿಯಾನವನ್ನು ಆರಂಭಿಸಿತು. ಆದಾಗ್ಯೂ, ಪಂದ್ಯವು ಸರಳವಾಗಿರಲಿಲ್ಲ. ಭಾರತ ತಂಡವು ಆರಂಭದಲ್ಲಿಯೇ ಅಗ್ರ ಕ್ರಮಾಂಕದ ಬ್ಯಾಟ್ಸ್ಮನ್ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದಾಗ ನಾಯಕ ಸೂರ್ಯಕುಮಾರ್ ಯಾದವ್ (49 ಎಸೆತಗಳಲ್ಲಿ ಅಜೇಯ 84) ತಂಡಕ್ಕೆ ಆಸರೆಯಾದರು. ಆರಂಭದಲ್ಲಿ ಭಾರತ ಆರು ವಿಕೆಟ್ ನಷ್ಟಕ್ಕೆ ಕೇವಲ 77 ರನ್ ಗಳಿಸಿತ್ತು. ಅವರ ಇನಿಂಗ್ಸ್ ಸಹಾಯದಿಂದ ಭಾರತವು ಅಂತಿಮವಾಗಿ ಒಂಬತ್ತು ವಿಕೆಟ್ ನಷ್ಟಕ್ಕೆ 161 ರನ್ ಗಳಿಸಿತು.
ಜಸ್ಪ್ರೀತ್ ಬುಮ್ರಾ ಅವರ ಬದಲಿಯಾಗಿ ಕೊನೆ ಕ್ಷಣದಲ್ಲಿ ತಂಡ ಸೇರಿಕೊಂಡಿದ್ದ ಮೊಹಮ್ಮದ್ ಸಿರಾಜ್ ಉತ್ತಮ ಪ್ರದರ್ಶನ ನೀಡಿದರು. ಸಿರಾಜ್ ಮೂರು ವಿಕೆಟ್ ಪಡೆದು ಯುಎಸ್ಎ ತಂಡಕ್ಕೆ ದುಃಸ್ವಪ್ನವಾದರು. ಯುಎಸ್ಎ ವಿರುದ್ಧ ಭಾರತವು ಒಂದು ಘಟಕವಾಗಿ ಅತ್ಯುತ್ತಮವಾಗಿ ಬೌಲಿಂಗ್ ಮಾಡಿತು ಮತ್ತು ಆತಿಥೇಯರಿಗೆ ಎರಡು ನಿರ್ಣಾಯಕ ಅಂಕಗಳನ್ನು ತಂದುಕೊಟ್ಟಿತು.
Advertisement