

ನವದೆಹಲಿ: ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಇಂದಿನ ನಮೀಬಿಯಾ ವಿರುದ್ಧದ ಪಂದ್ಯದ ಬಳಿಕ ಭಾರತದ ಸ್ಟಾರ್ ಆಲ್ರೌಂಡರ್ ಹಾರ್ದಿಕ್ ಪಾಂಡ್ಯಾ ತಂಡದ ಮಾಜಿ ಕೋಚ್ ಗ್ಯಾರಿ ಕರ್ಸ್ಟನ್ ಅವರನ್ನು ಆತ್ಮೀಯವಾಗಿ ಭೇಟಿ ಮಾಡಿದರು.
ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಭಾರತ ನೀಡಿದ್ದ 210 ರನ್ ಗಳ ಬೃಹತ್ ಗುರಿ ಬೆನ್ನು ಹತ್ತಿದ ನಮೀಬಿಯಾ 18.2 ಓವರ್ ನಲ್ಲಿ 116 ರನ್ ಗಳಿಗೆ ಆಲೌಟ್ ಆಗುವ ಮೂಲಕ 93 ರನ್ ಗಳ ಅಂತರದಲ್ಲಿ ಹೀನಾಯ ಸೋಲು ಕಂಡಿತು.
ಈ ಪಂದ್ಯದ ಬಳಿಕ ಭಾರತದ ಸ್ಟಾರ್ ಆಟಗಾರ ಹಾರ್ದಿಕ್ ಪಾಂಡ್ಯಾ ನಮೀಬಿಯಾ ತಂಡದ ಪ್ರಧಾನ ಕೋಚ್ ಗ್ಯಾರಿ ಕರ್ಸ್ಟನ್ ಅವರನ್ನು ಭೇಟಿಯಾಗಿ ಆತ್ಮೀಯವಾಗಿ ಮಾತನಾಡಿದರು.
ಗ್ಯಾರಿ ಕರ್ಸ್ಟನ್ ಪ್ರಸ್ತುತ ನಮೀಬಿಯಾ ತಂಡದ ಕೋಚ್ ಆಗಿದ್ದರೂ ಈ ಹಿಂದೆ ಭಾರತ ತಂಡದ ಪ್ರಧಾನ ಕೋಚ್ ಆಗಿ ಸೇವೆ ಸಲ್ಲಿಸಿದ್ದರು. ಇದೇ ಗ್ಯಾರಿ ಅವಧಿಯಲ್ಲೇ ಭಾರತ ತನ್ನ 2ನೇ ಏಕದಿನ ವಿಶ್ವಕಪ್ ಜಯಿಸಿತ್ತು.
ಅಂದರೆ 2011ರ ವಿಶ್ವಕಪ್ ಟೂರ್ನಿಯಲ್ಲಿ ಭಾರತ ನಾಯಕ ಮಹೇಂದ್ರ ಸಿಂಗ್ ಧೋನಿ ಮತ್ತು ಕೋಚ್ ಗ್ಯಾರಿ ನೇತೃತ್ವದಲ್ಲಿ ವಿಶ್ವಚಾಂಪಿಯನ್ ಆಗಿತ್ತು. ಈ ಟೂರ್ನಿ ಬಳಿಕ ಕೋಚ್ ಗ್ಯಾರಿ ತಮ್ಮ ಸೇವೆ ತೊರೆದಿದ್ದರು.
ಭಾರತಕ್ಕೆ ಕೋಚ್ ಆಗಿದ್ದ ಸಂದರ್ಭದಲ್ಲಿ ಗ್ಯಾರಿ ಕರ್ಸ್ಟನ್ ಸಾಕಷ್ಟು ಪ್ರತಿಭೆಗಳನ್ನು ಪೋಷಿಸಿದ್ದರು.
Advertisement