

ನವದೆಹಲಿ: ಕೊಲಂಬೋದಲ್ಲಿ ಭಾನುವಾರ ನಡೆದ ಟಿ-20 ವಿಶ್ವಕಪ್ ಟೂರ್ನಿಯ ಹೈವೋಲ್ಜೇಜ್ ಪಂದ್ಯದ ನಂತರ ಪಾಕಿಸ್ತಾನದ ಕ್ರಿಕೆಟ್ ದಿಗ್ಗಜ ವಾಸೀಂ ಅಕ್ರಂ ಹಾಗೂ ಭಾರತದ ಏಕದಿನ ನಾಯಕ ರೋಹಿತ್ ಶರ್ಮಾ ಅವರ ಅಪ್ಪುಗೆ ಇದೀಗ ವಿವಾದಕ್ಕೆ ಕಾರಣವಾಗಿದೆ.
ಭಾರತ- ಪಾಕ್ ಪಂದ್ಯದ ಮುಗಿದ ನಂತರ ಬೌಂಡರಿ ಬಳಿ ವಾಸಿಂ ಆಕ್ರಮ್ ಹಾಗೂ ರೋಹಿತ್ ಶರ್ಮಾ ಸ್ವಲ್ಪ ಮಾತುಕತೆ ನಂತರ ಪರಸ್ಪರ ನೀಡಿ, ಹಸ್ತಲಾಘವ ಮಾಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಕೆಲವು ಅಭಿಮಾನಿಗಳು ಸೌಹಾರ್ದತೆಯ ಸಂಕೇತ ಎಂದು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದರೆ, ಮತ್ತೆ ಕೆಲವರು ಪ್ರಶ್ನಿಸುತ್ತಿದ್ದಾರೆ.
ಕೊಲೊಂಬೋದ ಆರ್. ಪ್ರೇಮದಾಸ ಕ್ರೀಡಾಂಗಣದಲ್ಲಿ ಪಂದ್ಯ ಆರಂಭಕ್ಕೂ ಮುನ್ನವೇ ಪರಿಸ್ಥಿತಿ ಬಿಗಡಾಯಿಸಿತ್ತು. ಟಾಸ್ ವೇಳೆಯಲ್ಲಿ ಭಾರತದ ಟಿ-20 ನಾಯಕ ಸೂರ್ಯ ಕುಮಾರ್ ಯಾದವ್, ಪಾಕಿಸ್ತಾನದ ನಾಯಕ ಸಲ್ಮಾನ್ ಆಲಿ ಆಘಾ ಅವರಿಗೆ ಹಸ್ತಲಾಘವ ಮಾಡಿರಲಿಲ್ಲ. ಪಂದ್ಯ ಮುಗಿದ ನಂತರವೂ ಉಭಯ ದೇಶಗಳ ಆಟಗಾರರು ಹಾಗೂ ಸಹಾಯಕ ಸಿಬ್ಬಂದಿಗಳ ನಡುವೆ ಯಾವುದೇ ಹ್ಯಾಂಡ್ ಶೇಕ್ ಇರಲಿಲ್ಲ.
ಆದಾಗ್ಯೂ ರೋಹಿತ್ ಶರ್ಮಾ ಹಾಗೂ ವಾಸೀಂ ಅಕ್ರಂ ಪರಸ್ಪರ ಅಪ್ಪುಗೆ ನೀಡಿ ಹಸ್ತಲಾಘವ ಮಾಡಿದ್ದಾರೆ. ಮೈದಾನದಲ್ಲಿ ಉಭಯ ರಾಷ್ಟ್ರಗಳ ಆಟಗಾರರ ನಡುವೆ ಯಾವುದೇ ಹ್ಯಾಂಡ್ ಶೇಕ್ ಇಲ್ಲದೆ ಬೌಂಡರಿ ಹೊರಗಡೆಯ ಇಂತಹ ಅಪ್ಪುಗೆ ಬಗ್ಗೆ ಪಾಕಿಸ್ತಾನ ಟಿವಿ ಚರ್ಚೆಗಳಲ್ಲಿ ಟೀಕಿಸಲಾಗುತ್ತಿದೆ.
ಯು ಟ್ಯೂಬ್ ಚಾನೆಲ್ ನಲ್ಲಿ ಈ ವಿಚಾರ ಕುರಿತು ಮಾತನಾಡಿದ ಪಾಕಿಸ್ತಾನದ ಮಾಜಿ ಆರಂಭಿಕ ಆಟಗಾರ ಅಹ್ಮದ್ ಶೆಹಜಾದ್, ಅಕ್ರಂ ಅವರ ಕ್ರೀಡಾಸ್ಫೂರ್ತಿಯನ್ನು ತಪ್ಪಾಗಿ ಅರ್ಥೈಸಿಕೊಳ್ಳಬಾರದು ಎಂದು ಸಲಹೆ ನೀಡಿದ್ದಾರೆ. ಲೆಜೆಂಡರಿ ವೇಗಿ ಯಾವಾಗಲೂ ಕ್ರಿಕೆಟ್ ಶಿಷ್ಟಾಚಾರವನ್ನು ಎತ್ತಿಹಿಡಿದಿದ್ದಾರೆ ಮತ್ತು ಅನಗತ್ಯ ಟೀಕೆಗಳಿಗೆ ಯಾವುದೇ ಕಾರಣವಿಲ್ಲ ಎಂದಿದ್ದಾರೆ. ಮಾಜಿ ವೇಗಿ ಮೊಹಮ್ಮದ್ ಅಮೀರ್ ಕೂಡ ಇದೇ ರೀತಿಯ ಮಾತುಗಳನ್ನಾಡಿದ್ದಾರೆ.
ರೋಹಿತ್ ಶರ್ಮಾ ಐಸಿಸಿ-ಟಿ-20 ವಿಶ್ವಕಪ್ ಟೂರ್ನಿಯ ಬ್ರಾಂಡ್ ಅಂಬಾಸಿಡರ್ ಆಗಿ ಕೊಲಂಬೊದಲ್ಲಿ ಉಪಸ್ಥಿತರಿದ್ದರು. ಪಂದ್ಯಕ್ಕೂ ಮುನ್ನ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ಸಿಇಒ ಸಂಜೋಗ್ ಗುಪ್ತಾ ಹಾಗೂ ವಾಸೀಂ ಅಕ್ರಂ ಜೊತೆಗೆ ಟ್ರೋಫಿಯನ್ನು ಮೈದಾನಕ್ಕೆ ತಂದರು. ಉಭಯ ದೇಶಗಳ ಆಟಗಾರರ ನಡುವಿನ ಅಸಮಾಧಾನದ ನಡುವೆಯೂ ಈ ಜೋಡಿ ಸೌಹಾರ್ದತೆಯ ಸಂಕೇತವಾಗಿ ಕಾಣುವ ಮೂಲಕ ವೈಯಕ್ತಿಕ ಗೌರವವನ್ನು ಸಾರಿ ಹೇಳಿದರು.
Advertisement