

ಭಾನುವಾರ ಕೊಲಂಬೊದಲ್ಲಿ ನಡೆದ ಭಾರತ ಮತ್ತು ಪಾಕಿಸ್ತಾನ ನಡುವಿನ ಟಿ20 ವಿಶ್ವಕಪ್ ಗುಂಪು ಹಂತದ ಪಂದ್ಯದ ವೇಳೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ (PCB) ಅಧ್ಯಕ್ಷ ಮೊಹ್ಸಿನ್ ನಖ್ವಿ ಆರ್ ಪ್ರೇಮದಾಸ ಕ್ರೀಡಾಂಗಣದಲ್ಲಿ ಹಾಜರಿದ್ದರು. ಆದರೆ, ಭಾರತದ ವಿರುದ್ಧ ಪಂದ್ಯ ಸೋಲುವ ಸುಳಿವು ಸಿಕ್ಕ ಕೂಡಲೇ ಅಲ್ಲಿಂದ ಕಾಲ್ಕಿತ್ತಿದ್ದರು. ಇದಕ್ಕೂ ಮೊದಲು ಪಾಕ್ ಸರ್ಕಾರ ಬಾಂಗ್ಲಾದೇಶಕ್ಕೆ ಬೆಂಬಲ ಸೂಚಿಸುವ ಸಲುವಾಗಿ, ಫೆಬ್ರುವರಿ 15 ರಂದು ಭಾರತ ವಿರುದ್ಧದ ಪಂದ್ಯವನ್ನು ಬಹಿಷ್ಕರಿಸುವುದಾಗಿ ಹೇಳಿತ್ತು. ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ (ಬಿಸಿಬಿ) ಮುಖ್ಯಸ್ಥ ಅಮಿನುಲ್ ಇಸ್ಲಾಂ ಬುಲ್ಬುಲ್ ಅವರು ಪಾಕಿಸ್ತಾನವು ಭಾರತ ವಿರುದ್ಧದ ಪಂದ್ಯವನ್ನು ಆಡುವಂತೆ ಒತ್ತಾಯಿಸಿದ್ದರು ಮತ್ತು ಶ್ರೀಲಂಕಾ ಪ್ರಧಾನಿ ಅನುರಾ ಕುಮಾರ ದಿಸ್ಸನಾಯಕೆ ಕೂಡ ಇದೇ ವಿಚಾರವಾಗಿ ಪ್ರಧಾನಿ ಶೆಹಬಾಜ್ ಷರೀಫ್ ಅವರಿಗೆ ಕರೆ ಮಾಡಿದ್ದರು.
ಭಾರತ- ಪಾಕಿಸ್ತಾನ ಪಂದ್ಯದ ನಂತರ ಮೊಹ್ಸಿನ್ ನಖ್ವಿ ಅವರು ಕುಮಾರ ದಿಸ್ಸನಾಯಕೆ ಅವರನ್ನು ಭೇಟಿ ಮಾಡಿ 'ಆಕ್ಚುಯಲ್ ಹೀರೋ' ಎಂದು ಕರೆದರು.
'ಮೊದಲನೆಯದಾಗಿ, ಪಾಕಿಸ್ತಾನದ ರಾಷ್ಟ್ರಪತಿ (ಆಸಿಫ್ ಅಲಿ ಜರ್ದಾರಿ) ಮತ್ತು ಪಾಕಿಸ್ತಾನದ ಪ್ರಧಾನಿ (ಶೆಹಬಾಜ್ ಷರೀಫ್) ಅವರಿಂದ ಆತ್ಮೀಯ ಶುಭಾಶಯಗಳು. ಅವರು ವಿಶೇಷವಾಗಿ ನಿಮಗೆ ತಮ್ಮ ಶುಭಾಶಯಗಳನ್ನು ತಿಳಿಸಲು ನನಗೆ ತಿಳಿಸಿದ್ದಾರೆ. ನಿನ್ನೆ ನಡೆದ ಪಂದ್ಯದಲ್ಲಿ, ನೀವು ನಿಜವಾದ ಹೀರೋ ಆಗಿದ್ದೀರಿ. ಏಕೆಂದರೆ, 2 ಬಿಲಿಯನ್ ಜನರು ನಿಮ್ಮಿಂದಾಗಿ ಮನರಂಜನೆ ಪಡೆದರು. ಆದ್ದರಿಂದ, ನಿಮ್ಮಿಂದಾಗಿಯೇ ನಾವು ಈ ಪಂದ್ಯವನ್ನು ಆಡಿದ್ದೇವೆ' ಎಂದು ಮೊಹ್ಸಿನ್ ನಖ್ವಿ ಶ್ರೀಲಂಕಾ ಅಧ್ಯಕ್ಷ ಅನುರಾ ಕುಮಾರ ದಿಸ್ಸಾನಾಯಕೆ ಅವರೊಂದಿಗಿನ ಸಭೆಯಲ್ಲಿ ಹೇಳಿದರು.
'ಭಾರತದೊಂದಿಗೆ ಆಡುವ ಬಗ್ಗೆ ನಮಗೆ ಹಲವಾರು ಸಮಸ್ಯೆಗಳಿದ್ದವು. ಆದರೆ, ಪ್ರಧಾನಿ ನಿಮ್ಮ ಕರೆ ಸ್ವೀಕರಿಸಿದ ತಕ್ಷಣವೇ ನನಗೆ ಕರೆ ಮಾಡಿದರು. ''ಇನ್ನು ಯಾವುದೇ ಸಮಸ್ಯೆ ಇಲ್ಲ... ನಾವು ಪಂದ್ಯವನ್ನು ಆಡಬೇಕು. ಅಷ್ಟೇ.' ಎಂದು ಹೇಳಿದರು. ಇದರಲ್ಲಿ ನೀವು ಬಹಳ ನಿರ್ಣಾಯಕ ಪಾತ್ರ ವಹಿಸಿದ್ದಕ್ಕಾಗಿ ನಾನು ನಿಮಗೆ ತುಂಬಾ ಕೃತಜ್ಞನಾಗಿದ್ದೇನೆ' ಎಂದು ಹೇಳಿದರು.
ಭಾನುವಾರ ಪಾಕಿಸ್ತಾನ ವಿರುದ್ಧ ಭಾರತ 61 ರನ್ಗಳ ಗೆಲುವು ಸಾಧಿಸಿತು. ಈ ಮೂಲಕ ಪಂದ್ಯಾವಳಿಯಲ್ಲಿ ತನ್ನ ಅಜೇಯ ಓಟವನ್ನು ಮುಂದುವರಿಸಿತು. ಇಶಾನ್ ಕಿಶನ್ ಅವರ ಅದ್ಭುತ 77 ರನ್ಗಳ ಬ್ಯಾಟಿಂಗ್ ನೆರವಿನಿಂದ ಭಾರತವು ಬೃಹತ್ ಮೊತ್ತ ಕಲೆಹಾಕಲು ಸಾಧ್ಯವಾಯಿತು.
ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ), ಪಿಸಿಬಿ ಮತ್ತು ಬಿಸಿಬಿ ನಡುವಿನ ಮಾತುಕತೆಗಳ ನಂತರ ಫೆಬ್ರುವರಿ 9 ರಂದು ಬಹಿಷ್ಕಾರ ಬಿಕ್ಕಟ್ಟು ಬಗೆಹರಿಯಿತು. ಭಾರತ ಪ್ರವಾಸ ಕೈಗೊಳ್ಳಲು ನಿರಾಕರಿಸಿದ ನಂತರ ಪಂದ್ಯಾವಳಿಯಿಂದ ಹೊರಗುಳಿದ ಬಾಂಗ್ಲಾದೇಶದೊಂದಿಗೆ ಒಗ್ಗಟ್ಟು ಪ್ರದರ್ಶಿಸುವ ಸಲುವಾಗಿ ಪಾಕಿಸ್ತಾನವು ಭಾರತ ವಿರುದ್ಧದ ಪಂದ್ಯವನ್ನು ಬಹಿಷ್ಕರಿಸುವುದಾಗಿ ಈ ಹಿಂದೆ ಹೇಳಿತ್ತು.
Advertisement