ಫೆಬ್ರುವರಿ 26 ರಂದು ನಡೆಯಲಿರುವ ಭಾರತ vs ಜಿಂಬಾಬ್ವೆ ಪಂದ್ಯಕ್ಕೂ ಮುನ್ನ ಭಾರತ ಕ್ರಿಕೆಟ್ ತಂಡದ ಬ್ಯಾಟ್ಸ್ಮನ್ ರಿಂಕು ಸಿಂಗ್ ತವರಿಗೆ ಮರಳಿದ್ದಾರೆ. ಪಂದ್ಯಕ್ಕಾಗಿ ಅಭ್ಯಾಸ ಮಾಡಲು ಟೀಂ ಇಂಡಿಯಾ ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಸೇರಿದೆ.
ಟೀಂ ಇಂಡಿಯಾ ಸಂಜೆ 5.30ಕ್ಕೆ ಅಭ್ಯಾಸ ಆರಂಭಿಸಬೇಕಿತ್ತು. ಆದರೆ, ರಿಂಕು ಎಲ್ಲಿಯೂ ಕಾಣಿಸಲಿಲ್ಲ. ತರಬೇತಿ ಅವಧಿಯ ಅರ್ಧಭಾಗದ ನಂತರ, ರಿಂಕು ಕುಟುಂಬದ ತುರ್ತು ಪರಿಸ್ಥಿತಿಯಿಂದಾಗಿ ಮನೆಗೆ ಮರಳಿದ್ದಾರೆ ಎಂದು ತಿಳಿದುಬಂದಿದೆ. ರಿಂಕು ಅವರ ತಂದೆ ಖಾಂಚಂದ್ ಸಿಂಗ್ ಅವರ ಅನಾರೋಗ್ಯದಿಂದಾಗಿ ಮನೆಗೆ ಮರಳದ್ದಾರೆ ಎನ್ನಲಾಗಿದೆ. ಸ್ಟಾರ್ ಬ್ಯಾಟ್ಸ್ಮನ್ ತಂದೆ ಒಂದು ವರ್ಷದಿಂದ ಲಿವರ್ ಕ್ಯಾನ್ಸರ್ನಿಂದ ಬಳಲುತ್ತಿದ್ದಾರೆ ಮತ್ತು ಚಿಕಿತ್ಸೆ ಪಡೆಯುತ್ತಿದ್ದಾರೆ. ಕಳೆದ ಎರಡು ದಿನಗಳಿಂದ ಅವರ ಸ್ಥಿತಿ ಹದಗೆಟ್ಟಿದೆ ಮತ್ತು ಅದಕ್ಕಾಗಿಯೇ ರಿಂಕು ನೋಯ್ಡಾಗೆ ತೆರಳಿದ್ದಾರೆ.
'ಸುಮಾರು ಒಂದು ವರ್ಷದ ಹಿಂದೆ ಲಿವರ್ ಕ್ಯಾನ್ಸರ್ ಇರುವುದು ಪತ್ತೆಯಾಗಿತ್ತು. ನಂತರ ರಿಂಕು ಅವರ ಒತ್ತಾಯದ ಮೇರೆಗೆ ಅವರು ಎಲ್ಪಿಜಿ ಸಿಲಿಂಡರ್ಗಳನ್ನು ಡೆಲಿವರಿ ಮಾಡುವ ಕೆಲಸ ತೊರೆದಿದ್ದರು. ಅಂದಿನಿಂದ, ಅವರು ನೋಯ್ಡಾ ಆಸ್ಪತ್ರೆಯ ವೈದ್ಯರ ಮಾರ್ಗದರ್ಶನದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರಿಗೆ ದುಬಾರಿ ಇಂಜೆಕ್ಷನ್ಗಳನ್ನು ಸಹ ನೀಡುತ್ತಿದ್ದರು' ಎಂದು ಮೂಲವೊಂದು ನ್ಯೂ ಇಂಡಿಯನ್ ಎಕ್ಸ್ಪ್ರೆಸ್ಗೆ ತಿಳಿಸಿದೆ. 'ಅವರ ತಂದೆಯ ಸ್ಥಿತಿ ಹದಗೆಟ್ಟಿತು, ನಂತರ ಅವರನ್ನು ವೆಂಟಿಲೇಟರ್ನಲ್ಲಿ ಇರಿಸಲಾಯಿತು. ರಿಂಕು ಸಿಂಗ್ಗೆ ಈ ಬಗ್ಗೆ ತಿಳಿಸಲಾಯಿತು' ಎಂದು ಮೂಲಗಳು ತಿಳಿಸಿವೆ.
ಜಿಂಬಾಬ್ವೆ ವಿರುದ್ಧದ ಪಂದ್ಯಕ್ಕೆ ಅಲಭ್ಯ?
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಈ ವಿಷಯದ ಬಗ್ಗೆ ಇನ್ನೂ ಯಾವುದೇ ಮಾಹಿತಿ ನೀಡಿಲ್ಲ. ಭಾರತ ಮತ್ತು ಜಿಂಬಾಬ್ವೆ ನಡುವಿನ ಪಂದ್ಯಕ್ಕೆ ರಿಂಕು ಲಭ್ಯರಿರುತ್ತಾರೆಯೇ ಎಂಬುದು ತಿಳಿದಿಲ್ಲ. ಅವರು ತಂಡಕ್ಕೆ ಮರಳಲು ಇನ್ನೂ 2 ದಿನಗಳಿವೆ.
ಸೂಪರ್ 8 ಅರ್ಹತೆಯ ಹಂತದಲ್ಲಿರುವುದರಿಂದ, ಆಯ್ಕೆ ಸಮಿತಿ ಮತ್ತು ತಂಡದ ಆಡಳಿತ ಮಂಡಳಿ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ. ಬಹುಶಃ ಅವರು ರಿಂಕು ಜೊತೆಯೇ ಮುಂದುವರಿಯಬಹುದು ಅಥವಾ ಬೇರೆ ಆಟಗಾರನಿಗೆ ಸ್ಥಾನ ನೀಡಬಹುದು.
Advertisement