

ಭಾರತೀಯ ತಂಡದಲ್ಲಿ ನಿರಂತರವಾಗಿ ಬದಲಾವಣೆ ಮಾಡುತ್ತಿರುವುದು ಹಲವಾರು ಮಾಜಿ ಕ್ರಿಕೆಟಿಗರ ಕೆಂಗಣ್ಣಿಗೆ ಗುರಿಯಾಗಿದೆ. ಈ ವರ್ಷದ ಆರಂಭದಲ್ಲಿ 2026ರ ಟಿ20 ವಿಶ್ವಕಪ್ನಲ್ಲಿ ಭಾರತದ ಗೆಲುವಿಗೆ ಕಾರಣರಾಗಿದ್ದ ಸಂಜು ಸ್ಯಾಮ್ಸನ್ ಅವರನ್ನು ತಂಡದಿಂದ ಕೈಬಿಡಲಾಗಿದ್ದು, ವೈಭವ್ ಸೂರ್ಯವಂಶಿ ಅವರಿಗೆ ಅವಕಾಶ ನೀಡಲಾಗಿದೆ. ಉದಯೋನ್ಮುಖ ತಾರೆಗಳಿಗೆ ಆಟದ ಸಮಯ ಮತ್ತು ಅವಕಾಶಗಳು ಮುಖ್ಯವಾದರೂ, ಹಿರಿಯ ಆಟಗಾರನನ್ನು ಕೈಬಿಡುವುದು ನ್ಯಾಯವಲ್ಲ ಎನ್ನುವ ಮಾತುಗಳು ಕೇಳಿಬರುತ್ತಿವೆ.
ಮಾಜಿ ಕ್ರಿಕೆಟಿಗ ರವಿಚಂದ್ರನ್ ಅಶ್ವಿನ್, ಭಾರತೀಯ ತಂಡದಲ್ಲಿ ಸದ್ಯ ತಾವು ನೋಡುತ್ತಿರುವ ಅಪಾಯಕಾರಿ 'chop-and-change' ಸಂಸ್ಕೃತಿ ಕುರಿತು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ವಿಮಲ್ ಕುಮಾರ್ ಅವರೊಂದಿಗೆ ಮಾತನಾಡಿದ ಅಶ್ವಿನ್, ಜಿಂಬಾಬ್ವೆ ಪ್ರವಾಸದಿಂದ ತಮ್ಮನ್ನು ಕೈಬಿಟ್ಟ ಆಯ್ಕೆದಾರರೊಂದಿಗಿನ ತಮ್ಮ ಸಂಭಾಷಣೆ ಹೇಗಿರುತ್ತದೆ ಎಂದು ವಿವರಿಸಿದರು.
'ನನಗೆ ಯಾವುದೇ ವಿಶ್ರಾಂತಿ ಬೇಡ. ನಾನು ಬಯಸಿದರೆ, ನನ್ನ ತಾಯಿ, ತಂದೆ ಮತ್ತು ಪತ್ನಿಯನ್ನು ನನ್ನೊಂದಿಗೆ ಜಿಂಬಾಬ್ವೆಗೆ ಕರೆದೊಯ್ಯುತ್ತೇನೆ. ನಾನು ಅಲ್ಲಿ ಆಡಲು ಬಯಸುತ್ತೇನೆ. ನಾನು ಇದುವರೆಗೆ ಬುಲವಾಯೊಗೆ ಹೋಗಿಲ್ಲ. ಅವರು ಕ್ರಿಕೆಟ್ನಲ್ಲಿ ಹೆಮ್ಮೆಯ ಇತಿಹಾಸ ಹೊಂದಿರುವ ರಾಷ್ಟ್ರ. 1999ರ ವಿಶ್ವಕಪ್ನಲ್ಲಿ ಜಿಂಬಾಬ್ವೆ ಭಾರತವನ್ನು ಸೋಲಿಸಿದ್ದನ್ನು ನಾನು ನೋಡಿದ್ದೆ. ಅದಕ್ಕೆ ನಾನು ಸೇಡು ತೀರಿಸಿಕೊಳ್ಳಲು ಬಯಸುತ್ತೇನೆ. ದಯವಿಟ್ಟು ನನ್ನನ್ನು ಅಲ್ಲಿಗೆ ಕರೆದೊಯ್ಯಿರಿ, ನನಗೆ ವಿಶ್ರಾಂತಿ ಬೇಡ'
ಸಂಭಾಷಣೆ ಮುಂದುವರಿದಂತೆ ಹೆಚ್ಚು ಗಂಭೀರ ಧ್ವನಿಯಲ್ಲಿ ಮಾತನಾಡಿದ ಅಶ್ವಿನ್, ಇಂಗ್ಲೆಂಡ್ ವಿರುದ್ಧ ಭಾರತ ಸತತ ಎರಡು ಪಂದ್ಯಗಳನ್ನು ಸೋತಿರುವ ಹಿನ್ನೆಲೆಯಲ್ಲಿ, ತಂಡದಿಂದ ಕೈಬಿಡಲ್ಪಡುವ ಮುಂದಿನ ಆಟಗಾರ ಯಾರು ಎಂದು ಪ್ರಶ್ನಿಸಿದರು.
'ಐರ್ಲೆಂಡ್ನಲ್ಲಿನ ಆ ಎರಡು ಸೋಲುಗಳು ಮತ್ತು ಫಾರ್ಮ್ ಕಳೆದುಕೊಂಡ ನಂತರ, ಅವರು ಸಂಜು ಸ್ಯಾಮ್ಸನ್ ಅವರನ್ನು ಹೊರಗಿಟ್ಟಿದ್ದಾರೆ. ಈಗ, ನಾವು ಇಂಗ್ಲೆಂಡ್ನಲ್ಲಿ ಎರಡು ಸೋಲುಗಳನ್ನು ಹೊಂದಿದ್ದೇವೆ. ಹಾಗಾದರೆ, ಮುಂದಿನ ಆಟಗಾರ ಯಾರು? ಇದು ನಿಜವಾಗಿಯೂ ತಪ್ಪು. ಭಾರತೀಯ ಕ್ರಿಕೆಟಿಗರು ಅಸುರಕ್ಷಿತ ಸ್ಥಳದಲ್ಲಿ ಇರಲು ಬಯಸುವುದಿಲ್ಲ ಎಂದು ನಾನು ನಿಜವಾಗಿಯೂ ಭಾವಿಸುತ್ತೇನೆ. ಸೂರ್ಯಕುಮಾರ್ ಯಾದವ್ ಬಗ್ಗೆ ನಾನು ಈ ಹಿಂದೆ ಮಾತನಾಡಿದ್ದೆ. ಆಟಗಾರರು ಒಂಟಿಯಾಗುತ್ತಾರೆ; ಅವರು ತಂಡಕ್ಕಿಂತ ತಮ್ಮ ಬಗ್ಗೆ ಹೆಚ್ಚು ಯೋಚಿಸಲು ಪ್ರಾರಂಭಿಸುತ್ತಾರೆ. ಟಿ20 ಕ್ರಿಕೆಟ್ನಲ್ಲಿ, ಅದು ಹಾನಿಕಾರಕ. ಬ್ಯಾಟ್ಸ್ಮನ್ಗಳು 'ನಾನು ರನ್ ಗಳಿಸದಿದ್ದರೆ, ನನ್ನನ್ನು ಬೆಂಚ್ನಲ್ಲಿ ಇರಿಸಬಹುದು' ಎಂದು ಯೋಚಿಸಲು ಪ್ರಾರಂಭಿಸಿದರೆ, ಅವರು ತಮ್ಮ ಸ್ಥಾನಗಳಿಗಾಗಿ ಆಡಲು ಪ್ರಾರಂಭಿಸುತ್ತಾರೆ. ಅದು ಅತ್ಯಂತ ಅಪಾಯಕಾರಿ' ಎಂದರು.
ಭಾರತ ತಂಡದಲ್ಲಿ ಸ್ಥಾಪಿಸಲಾಗಿರುವ ಸಂಸ್ಕೃತಿ ನಿಜವಾಗಿಯೂ ಅಪಾಯಕಾರಿ. ಏಕೆಂದರೆ, ಇದು ತಂಡವು ಮುಂದುವರಿಯುವ ಬದಲು ಆಟಗಾರರು ತಮಗಾಗಿ ಆಡಲು ಪ್ರಾರಂಭಿಸುವಂತೆ ಪ್ರೇರೇಪಿಸುತ್ತದೆ. ಅಂತಹ ವಿಧಾನವು T20I ಗಳಲ್ಲಿ ಹಾನಿಕಾರಕವಾಗಬಹುದು ಎಂದರು.
'ಈ ಪರಿಸ್ಥಿತಿಯನ್ನು ಊಹಿಸಿ. ಸಂಜು ಸ್ಯಾಮ್ಸನ್ಗೆ ಮತ್ತೆ ಅವಕಾಶ ನೀಡಲಾಗಿದೆ ಎಂದುಕೊಳ್ಳೋಣ. ಆಗ ಅವರು ತಮ್ಮ ಬಗ್ಗೆ ಯೋಚಿಸಲು ಪ್ರಾರಂಭಿಸಬಹುದು. ಆಗ ನೀವು ಅದು ತಪ್ಪು ಎಂದು ನೀವು ಹೇಳಲೂ ಸಾಧ್ಯವಿಲ್ಲ. ಅವರು ಇದಕ್ಕೆ ಒಂದು ಪರಿಹಾರವನ್ನು ಕಂಡುಕೊಳ್ಳುತ್ತಾರೆ ಎಂದು ನಾನು ನಿಜವಾಗಿಯೂ ಭಾವಿಸುತ್ತೇನೆ' ಎಂದು ತಿಳಿಸಿದರು.
ಭಾರತ ತಂಡದ ಮುಖ್ಯ ಕೋಚ್ ಗೌತಮ್ ಗಂಭೀರ್, 'ಸಂಜು ವಿಷಯದಲ್ಲಿ ನಮಗೆ ಸ್ಪಷ್ಟತೆಯಿದೆ; ಭಾರತಕ್ಕಾಗಿ ಅವರು ಅದ್ಭುತ ಪ್ರದರ್ಶನ ನೀಡಿದ್ದಾರೆ. ಆದರೆ, ಕೆಲವೊಮ್ಮೆ ಆಟಗಾರನ ಸದ್ಯದ ಫಾರ್ಮ್ ಅನ್ನು ಗಮನಿಸಬೇಕಾಗುತ್ತದೆ. ಈ ಸರಣಿಯಲ್ಲಿ ಅವರು ತಂಡಕ್ಕೆ ಮರಳಲು ಸಾಧ್ಯವೇ ಇಲ್ಲ ಎಂಬಂತಹ ಯಾವುದೇ ಕಠಿಣ ನಿಯಮವೇನೂ ಇಲ್ಲ' ಎಂದರು.
ಭಾರತದ ಟೆಸ್ಟ್ ತಂಡದಲ್ಲಿ ಸಾಯಿ ಸುದರ್ಶನ್ ಅವರಿಗೆ ಮೂರನೇ ಕ್ರಮಾಂಕದಲ್ಲಿ ದೀರ್ಘಕಾಲ ಆಡುವ ಅವಕಾಶ ನೀಡುವ ಕುರಿತು ಗಂಭೀರ್ ಆಡಿದ್ದ ಮಾತುಗಳನ್ನು ಅಶ್ವಿನ್ ಈ ಸಂದರ್ಭದಲ್ಲಿ ನೆನಪಿಸಿಕೊಂಡರು. ಕೇವಲ ಕಳೆದ ಮೂರು-ನಾಲ್ಕು ಪಂದ್ಯಗಳಲ್ಲಿ ರನ್ ಗಳಿಸಲು ವಿಫಲರಾಗಿರುವ ಸ್ಯಾಮ್ಸನ್ ವಿಷಯದಲ್ಲಿ ಮಾತ್ರ ಈ ಧೋರಣೆ ಏಕೆ ಎಂದು ಅಶ್ವಿನ್ ಪ್ರಶ್ನಿಸಿದರು.
ಟೆಸ್ಟ್ ಕ್ರಿಕೆಟ್ನಲ್ಲಿ ಸಾಯಿ ಸುದರ್ಶನ್ ಅವರಿಗೆ ಸಾಕಷ್ಟು ಅವಕಾಶಗಳನ್ನು ನೀಡುವ ಬಗ್ಗೆ ತಂಡದ ಆಡಳಿತ ಮಂಡಳಿ, 'ಕೇವಲ ನಾಲ್ಕು ಪಂದ್ಯಗಳನ್ನು ನೋಡಿ ಒಬ್ಬ ಆಟಗಾರನನ್ನು ನಿರ್ಣಯಿಸಲು ಸಾಧ್ಯವಿಲ್ಲ' ಎಂದು ಅವರು ಹೇಳಿದ್ದರು. ಆ ಮಾತುಗಳನ್ನಾಡಿ ಇನ್ನೂ ಒಂದು ತಿಂಗಳೂ ಕಳೆದಿಲ್ಲ. ಆಶ್ಚರ್ಯಕರ ಸಂಗತಿಯಿದು. ಆದರೆ ಸಂಜು ಸ್ಯಾಮ್ಸನ್ ವಿಷಯದಲ್ಲಿ ಪರಿಸ್ಥಿತಿ ಏನಾಗಿದೆ? ಹೌದು, ಎಲ್ಲ ಆಟಗಾರರನ್ನು ಒಂದೇ ರೀತಿಯಲ್ಲಿ ಪರಿಗಣಿಸಲು ಸಾಧ್ಯವಿಲ್ಲ. ಆದರೆ, ಕನಿಷ್ಠಪಕ್ಷ ಅವರಿಗೆ ಇನ್ನೂ ಎರಡು ಅವಕಾಶಗಳನ್ನಾದರೂ ನೀಡಬಹುದಿತ್ತು. ತಂಡದಲ್ಲಿ ಈ ರೀತಿಯ ಅನಿಶ್ಚಿತತೆಯ ಭಾವನೆ ಹರಡದಿರಲಿ ಎಂದು ನಾನು ಆಶಿಸುತ್ತೇನೆ ಎಂದರು.
'ವಿಶ್ರಾಂತಿ ಎಂದರೆ ಅರ್ಥವೇನು? ಇಂತಹ ಪ್ರವಾಸಗಳಲ್ಲಿ ಅವಕಾಶಗಳನ್ನೇ ನೀಡಬೇಕು ಎಂಬ ಏನಾದರೂ ಲಿಖಿತ ನಿಯಮ ಇದೆಯೇ? ಸಂಜು ಸ್ಯಾಮ್ಸನ್ ಯಾವ ಮಾದರಿಯ ಕ್ರಿಕೆಟ್ ಆಡುತ್ತಾರೆ? ಅವರು ಕೇವಲ ಟಿ20 (T20I) ಪಂದ್ಯಗಳನ್ನು ಆಡುತ್ತಾರೆ. ಟೆಸ್ಟ್ ಅಥವಾ ಏಕದಿನ ಪಂದ್ಯಗಳನ್ನಲ್ಲ. ಅವರಿಗೆ ವಿಶ್ರಾಂತಿ ನೀಡುವ ಅಗತ್ಯವಾದರೂ ಏನು? ಜಿಂಬಾಬ್ವೆ ಪ್ರವಾಸದ ನಂತರ ಅವರು ವಿಶ್ರಾಂತಿ ಪಡೆಯಬಹುದು. ತಿರುವನಂತಪುರದಲ್ಲಿ ಅವರಿಗೆ ಉತ್ತಮವಾದ ಮನೆಯಿದೆ. ಅವರು ಏಕೆ ವಿಶ್ರಾಂತಿ ಪಡೆಯಬೇಕು? ಅವರು ಆಡುವುದು ಕೇವಲ ಟಿ20 ಪಂದ್ಯಗಳನ್ನು ಮಾತ್ರ. ಅವರಿಗೆ ವಿಶ್ರಾಂತಿ ಪಡೆಯುವ ಆಸಕ್ತಿ ಏಕೆ ಇರಬೇಕು? ನಾನೇನು ಹೇಳಲಿ? ಇದು ಅನ್ಯಾಯ. ಆದರೆ ಪರಿಸ್ಥಿತಿ ಹೀಗಿದೆ' ಎಂದು ತಿಳಿಸಿದರು.